ಬೆಂಗಳೂರು: ಜೆಡಿಎಸ್ನಲ್ಲಿ ಒಂದೆಡೆ ಅಸಮಾಧಾನದ ಹೊಗೆಯಾಡುತ್ತಿದೆ. ಮತ್ತೊಂದೆಡೆ ಉಪ ಚುನಾವಣೆಗೆ ಸದ್ದಿಲ್ಲದೇ ಚುನಾವಣಾ ಪ್ರಚಾರ ಆರಂಭವಾಗಿದೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಕೆಲ ಶಾಸಕರು ಹಾಗೂ ವಿಧಾನ ಪರಿಷತ್ನ ಕೆಲ ಸದಸ್ಯರು ಮುನಿಸಿಕೊಂಡಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ವರಿಷ್ಠರು ಉಪ ಚುನಾವಣೆ ಜೊತೆಗೆ ವಿಧಾನ ಪರಿಷತ್ ಎಲೆಕ್ಷನ್ಗೂ ತಯಾರಿ ನಡೆಸುತ್ತಿದ್ದಾರೆ.
ಈಗಾಗಲೇ ಉಪಚುನಾವಣೆ ಸಂಬಂಧ ಹಲವು ಸಭೆಗಳು ನಡೆದಿವೆ. ಮುಂದಿನ ಜೂನ್ನಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ನಿನ್ನೆಯಷ್ಟೇ ಮೊದಲ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಿದ್ದಾರೆ. ಇದರ ನಡುವೆ ಅನರ್ಹ ಶಾಸಕ ಕೆ.ಗೋಪಾಲಯ್ಯರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್ ಮುಖಂಡರು, ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ.
ಬೆಂಗಳೂರು ನಗರದ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ, ಮತದಾರರಿಗೆ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಎರಡು ಬಾರಿ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದವರು ಈಗ ಪಕ್ಷ ತೊರೆದಿದ್ದಾರೆ. ಅವರಿಗೆ ಪಕ್ಷ ಹಾಗೂ ಕ್ಷೇತ್ರದ ನಾಗರಿಕರ ಪರ 27 ಪ್ರಶ್ನೆಗಳನ್ನು ಕೇಳಿರುವ ಕಿರುಹೊತ್ತಿಗೆ ತರಲಾಗಿದೆ. ಪಕ್ಷದಿಂದ ಅವರಿಗಾಗಿರುವ ಲಾಭ ಮತ್ತು ಪಕ್ಷಕ್ಕೆ ಅವರ ಕೊಡುಗೆ ಏನು ? ಪಕ್ಷದಿಂದ ಅವರಿಗೆ ಏನು ತೊಂದರೆಯಾಗಿದೆ ಎಂಬುದು ಸೇರಿ ಕರಪತ್ರದಲ್ಲಿ ಹಲವು ಪ್ರಶ್ನೆಗಳಿವೆ.
ರಾಜಕೀಯ ಲಾಭಕ್ಕಾಗಿ ಗೋಪಾಲಯ್ಯನವರು ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಜೆಡಿಎಸ್ ಪಕ್ಷದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆ ಮಾಡಲಾಗಿದೆ ಎನ್ನುತ್ತಾರೆ ಮುಖಂಡರು. ಅದೇ ರೀತಿ ಉಪಚುನಾವಣೆ ನಡೆಯುವ ಇತರ ಕ್ಷೇತ್ರಗಳಲ್ಲೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.