ETV Bharat / state

ಮೊದಲಹಂತದ ಯಶಸ್ಸಿನ ಗುಂಗಿನಲ್ಲಿರುವ ಜೆಡಿಎಸ್.. ಕಲ್ಯಾಣ ಕರ್ನಾಟಕದಲ್ಲಿ ಪಂಚರತ್ನ ರಥಯಾತ್ರೆಗೆ ಸಿದ್ಧತೆ

author img

By

Published : Jan 3, 2023, 9:26 PM IST

ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಜೆಡಿಎಸ್​- ಜ. 5 ರಿಂದ ರಾಜ್ಯದಲ್ಲಿ ಎರಡನೇ ಹಂತದ ಪಂಚರತ್ನ ರಥಯಾತ್ರೆ- ಬೀದರ್​ನಿಂದ ಕಲ್ಯಾಣ ಕರ್ನಾಟಕ ಪ್ರವೇಶ

jds pancharatna rathyatra
ಜೆಡಿಎಸ್ ಪಂಚರತ್ನ ರಥಯಾತ್ರೆ

ಬೆಂಗಳೂರು: ಈ ಬಾರಿಯ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಜೆಡಿಎಸ್​ ತಮ್ಮ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿರುವ ಗಮನ ಸೆಳೆದಿದೆ. ಅಲ್ಲದೆ, ಜಾತ್ಯತೀತ ಜನತಾದಳ ಮೊದಲ ಹಂತದ ಪಂಚರತ್ನ ರಥಯಾತ್ರೆ ಯಶಸ್ಸಿನ ಗುಂಗಿನಲ್ಲೇ ಎರಡನೇ ಹಂತದ ರಥಯಾತ್ರೆಗೆ ಜೆಡಿಎಸ್ ಸಿದ್ದತೆ ನಡೆಸಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿರುವ ಜೆಡಿಎಸ್, ಮೊದಲ ಹಂತದ ಪಂಚರತ್ನ ರಥಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಎರಡನೇ ಹಂತದ ರಥಯಾತ್ರೆಗೆ ತಯಾರಿ ನಡೆಸಿದೆ.

ಎರಡನೇ ಹಂತದ ಪಂಚರತ್ನ ರಥಯಾತ್ರೆಗೆ ಜನವರಿ 5 ರಿಂದ ಬೀದರ್ ನಿಂದ ಚಾಲನೆ ಸಿಗಲಿದ್ದು, ರಥಯಾತ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಚರಿಸಲಿದೆ. ನಂತರ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮೂರನೇ ಹಂತದ ಪಂಚರತ್ನ ರಥಯಾತ್ರೆ ಜರುಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಮೊದಲ ಹಂತದ ರಥಯಾತ್ರೆ 35 ಕ್ಷೇತ್ರದಲ್ಲಿ ಕೈಗೊಳ್ಳಲಾಗಿತ್ತು. ಈ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದೇ ಹುಮ್ಮಸ್ಸಿನಲ್ಲಿ ಎರಡನೇ ಹಂತಕ್ಕೆ ಸಿದ್ಧತೆ ಕೈಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಬಲಗೊಳಿಸಿ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಜೆಡಿಎಸ್ ಮಾಡಲಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ರಥಯಾತ್ರೆಗೆ ಎರಡನೇ ಹಂತದಲ್ಲಿಯೂ ಯಶಸ್ವಿಗೊಳಿಸಲು ಕಲ್ಯಾಣ ಕರ್ನಾಟಕ ಭಾಗದ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಎರಡನೇ ಹಂತದ ಯಾತ್ರೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಉಪನಾಯಕ ಬಂಡೆಪ್ಪ ಕಾಶೆಂಪೂರ್ ಮತ್ತಿತರ ನಾಯಕರು ಹೆಚ್ ಡಿಕೆಗೆ ಸಾಥ್ ನೀಡಲಿದ್ದಾರೆ.

ಮೊದಲ ಹಂತ ಯಶಸ್ವಿ: ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೆಯಿಂದ ಆರಂಭವಾಗಿತ್ತು. ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕುರುಡುಮೇಲೆ ಶ್ರೀ ಗಣಪತಿ ದೇವಾಲಯದಲ್ಲಿ ಬೆಳಗ್ಗೆ ಮಹಾಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ರಥಯಾತ್ರೆಗೆ ಮಾಜಿ ಪ್ರಧಾನಮಂತ್ರಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡರು ಅವರು ಚಾಲನೆ ನೀಡಿದ್ದರು. ಮುಳಬಾಗಿಲು ಪಟ್ಟಣದ ತಿರುಪತಿ ಬೈಪಾಸ್ ರಸ್ತೆಯ ಬಾಲಾಜಿ ಭವನದ ಪಕ್ಕದ ಜಾಗದಲ್ಲಿ ಬೃಹತ್ ಸಮಾವೇಶ ನಡೆಯಿತು. ಸುಮಾರು ಎರಡು ಲಕ್ಷ ಜನರು ಭಾಗವಹಿಸಿದ್ದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಂದು ಕುರುಡುಮಲೆ ಗ್ರಾಮ ವಾಸ್ತವ್ಯ ಮಾಡುವದರೊಂದಿಗೆ ಗ್ರಾಮದ ಜನರ ಜತೆ ಸಂವಾದ, ವಿಚಾರ ವಿನಿಮಯ ನಡೆಸಿದರು. ಮಹಿಳೆಯರು, ಯುವಕರು, ರೈತರು, ವೃದ್ಧರ ಜತೆ ಚರ್ಚೆ ನಡೆಸಿ ಹಲವಾರು ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಿದರು.ಹಳ್ಳಿಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುವುದರ ಜತೆಗೆ ಸ್ವತಃ ತಾವೇ ಗ್ರಾಮ ಸಂಚಾರ ನಡೆಸಿದ್ದರು.

ಪಂಚ ಯೋಜನೆಗಳ ಪಂಚರತ್ನ : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ಪಕ್ಷವು, ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕೆಂಬ ಉದ್ದೇಶ ಹೊಂದಿದೆ. ಇದಕ್ಕಾಗಿ ಪಂಚರತ್ನ ಯಾತ್ರೆ ಹೆಸರಿನಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದರು.

ಜೆಡಿಎಸ್ ಪಂಚರತ್ನ ರಥಯಾತ್ರೆ ಹೋದಕಡೆ ಭಾರಿ ಯಶಸ್ವು ಗಳಿಸಿತ್ತು. ವಿಧಾನಸಭೆ ಕ್ಷೇತ್ರ ಬಂಗಾರಪೇಟೆ, ಮಾಲೂರು, ಕೋಲಾರ, ಶ್ರೀನಿವಾಸಪುರ, ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ತುಮಕೂರು ಜಿಲ್ಲೆಯ ತುಮಕೂರು ನಗರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು,ಹಾಸನ ಜಿಲ್ಲೆಯ ಬೇಲೂರು, ಅರಸೀಕೆರೆ, ಹಾಸನ, ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ ನವೆಂಬರ್ 30ರಂದು ತುಮಕೂರು ಜಿಲ್ಲೆಯ ಕುಣಿಗಲ್, ಡಿಸೆಂಬರ್ 1ರಂದು ತುಮಕೂರು ಗ್ರಾಮಾಂತರ ಹಾಗೂ ಡಿಸೆಂಬರ್ 2ರಿಂದ ಕ್ರಮವಾಗಿ ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಆನೇಕಲ್​ನಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ಜರುಗಿತು. ಮೊದಲ ಹಂತದ ರಥಯಾತ್ರೆ ನವೆಂಬರ್ 1ರಂದು ಮುಳಬಾಗಿಲಿನಲ್ಲಿ ಶುರುವಾಗಿ ಡಿಸೆಂಬರ್ 6ಕ್ಕೇ ಆನೇಕಲ್​ನಲ್ಲಿ ಅಂತ್ಯವಾಗಿತ್ತು.

ಇದನ್ನೂಓದಿ: ರಾಜ್ಯ ಚುನಾವಣೆ ಪೂರ್ವತಯಾರಿ ಪರಿವೀಕ್ಷಣೆ; ಮತಪಟ್ಟಿ ಪರಿಷ್ಕರಣೆಯಲ್ಲಿ ಜಾಗೃತೆ ವಹಿಸಿ.. ಉಪಚುನಾವಣಾ ಆಯುಕ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.