ETV Bharat / state

ಕಾಂಗ್ರೆಸ್ ಮೇಲಿನ ಆಸಕ್ತಿ ಕಳೆದುಕೊಂಡ ಜೆಡಿಎಸ್ ರೆಬೆಲ್ಸ್ : ರಾಜ್ಯಸಭೆ ಚುನಾವಣೆ ಮೂಲಕ ಬಹಿರಂಗ

author img

By

Published : Jun 12, 2022, 3:21 PM IST

ಜೆಡಿಎಸ್ ಪಕ್ಷದ ರೆಬೆಲ್ ಶಾಸಕರು ಇದುವರೆಗೂ ಹೊಂದಿದ್ದ ಕಾಂಗ್ರೆಸ್ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿರುವುದು ರಾಜ್ಯಸಭೆಗೆ ನಡೆದ ಚುನಾವಣೆ ಮತದಾನದ ಮೂಲಕ ಬಹಿರಂಗವಾಗಿದೆ.

jds-ministers-lost-their-interest-in-congress
ಕಾಂಗ್ರೆಸ್ ಮೇಲಿನ ಆಸಕ್ತಿ ಕಳೆದುಕೊಂಡ ಜೆಡಿಎಸ್ ರೆಬೆಲ್ಸ್ : ರಾಜ್ಯಸಭೆ ಚುನಾವಣೆ ಮೂಲಕ ಬಹಿರಂಗ

ಬೆಂಗಳೂರು : ಜೆಡಿಎಸ್ ಪಕ್ಷದ ರೆಬೆಲ್ ಶಾಸಕರು ಇದುವರೆಗೂ ಹೊಂದಿದ್ದ ಕಾಂಗ್ರೆಸ್ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿರುವುದು ರಾಜ್ಯಸಭೆಗೆ ನಡೆದ ಚುನಾವಣೆ ಮತದಾನದ ಮೂಲಕ ಬಹಿರಂಗವಾಗಿದೆ. ಕೋಲಾರ ಶಾಸಕ ಶ್ರೀನಿವಾಸಗೌಡ, ಗುಬ್ಬಿ ಶಾಸಕ ಶ್ರೀನಿವಾಸ್, ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ, ಅರಸಿಕೆರೆ ಶಾಸಕ ಶಿವಲಿಂಗೇಗೌಡ, ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಪಕ್ಷದ ರಾಜ್ಯ ನಾಯಕರ ವಿರುದ್ಧ ಬೇಸರಗೊಂಡಿದ್ದು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಎಲ್ಲಾ ಶಾಸಕರು ಅಂತಿಮವಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ಕೈ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು.

jds-ministers-lost-their-interest-in-congress
ಕಾಂಗ್ರೆಸ್ ಮೇಲಿನ ಆಸಕ್ತಿ ಕಳೆದುಕೊಂಡ ಜೆಡಿಎಸ್ ರೆಬೆಲ್ಸ್

ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ತಾವು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಹಾಗೂ ತಮ್ಮ ಪುತ್ರನಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಮನವಿ ಮಾಡಿ ಯಶಸ್ವಿಯಾಗಿದ್ದರು ಎಂಬ ಮಾತು ಸಹ ಕೇಳಿಬಂದಿತ್ತು. ಅದೇ ರೀತಿ ಕಾಂಗ್ರೆಸ್ ನಾಯಕರು ಕಡೆಯ ಕ್ಷಣದವರೆಗೂ ಗುಬ್ಬಿ ಶಾಸಕ ಶ್ರೀನಿವಾಸ್ ಸಂಪರ್ಕದಲ್ಲಿದ್ದರು. ಬಹುತೇಕ ಐದು ಮಂದಿ ಕಾಂಗ್ರೆಸ್ ಪರ ಅಡ್ಡಮತದಾನ ಮಾಡಲಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರದ್ದಾಗಿತ್ತು. ಈ ಮೂಲಕ ತಮ್ಮ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿಖಾನ್ ರನ್ನು ಗೆಲ್ಲಿಸಿಕೊಳ್ಳುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ರೂಪಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಶಾಸಕರು ಕಾಂಗ್ರೆಸ್ ನತ್ತ ಒಲವು ಕಡಿಮೆ ಮಾಡಿಕೊಂಡಿದ್ದಾರೆ ಎಂಬ ವಸ್ತುಸ್ಥಿತಿ ರಾಜ್ಯಸಭೆ ಚುನಾವಣೆ ಮತದಾನದ ಮೂಲಕ ಹೊರಬಿದ್ದಿದೆ.

ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಅಸಮಾಧಾನ : ಕಡೆಯ ಕ್ಷಣದವರೆಗೂ ಕಾಂಗ್ರೆಸ್ ಪರ ಮತ ಚಲಾಯಿಸುವ ಭರವಸೆ ನೀಡಿದ್ದ ಗುಬ್ಬಿ ಶಾಸಕ ಶ್ರೀನಿವಾಸ್ ಉಲ್ಟಾ ಹೊಡೆದು ಬಿಜೆಪಿಗೆ ಮತ ನೀಡಿದ್ದರು. ಈ ಮೂಲಕ ತುಮಕೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್​ಗೆ ಪರ್ಯಾಯವಾಗಿ ಬಿಜೆಪಿ ಜನಪ್ರಿಯತೆ ಸಾಧಿಸುತ್ತಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದನ್ನು ಈಗಲೇ ನಿರ್ಧರಿಸಬಾರದು ಎಂದು ತೀರ್ಮಾನಿಸಿದ್ದಾರೆ.

ತುಮಕೂರು ಹಾಗೂ ಹಾಸನ ಜಿಲ್ಲೆಯಲ್ಲಿ ಬಿಜೆಪಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ಸಿಕ್ಕರೆ ಬಿಜೆಪಿಯಿಂದಲೇ ಸ್ಪರ್ಧಿಸುವೆ, ಇಲ್ಲವೇ ಜೆಡಿಎಸ್ ನಲ್ಲಿ ಮುಂದುವರಿಯುವ ಅನುಮಾನವನ್ನು ಶಿವಲಿಂಗೇಗೌಡ ಹಾಗೂ ಶ್ರೀನಿವಾಸ್ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಜಿ ಟಿ ದೇವೇಗೌಡ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಸಮಾನ ಸಂಪರ್ಕ ಹೊಂದಿದ್ದು, ಮುಂಬರುವ ದಿನಗಳಲ್ಲಿ ತಮ್ಮ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದೊಮ್ಮೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಸರ್ಕಾರ ರಚನೆಗೆ ಜೆಡಿಎಸ್ ಪಕ್ಷ ನಿರ್ಣಾಯಕ ಸ್ಥಾನ ವಹಿಸಲಿದೆ. ಈ ಹಿನ್ನೆಲೆ ಜೆಡಿಎಸ್ ನಲ್ಲೇ ಇದ್ದು ಶಾಸಕರಾದರೆ ಜನರ ವಿಶ್ವಾಸದ ಜೊತೆ ಮುಂದೆ ಸಚಿವರಾಗುವ ಅವಕಾಶವೂ ಒದಗಿ ಬರಬಹುದು ಎಂಬ ನಿರೀಕ್ಷೆ ಜಿ ಟಿ ದೇವೇಗೌಡ ಹಾಗೂ ಎ ಟಿ ರಾಮಸ್ವಾಮಿ ಅವರಿಗೆ ಇದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಗೆ ಕೈ ಕೊಟ್ಟ ಜೆಡಿಎಸ್ ನಾಯಕರು : ಸದ್ಯ ಕೋಲಾರ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ಪರ ಮತ ಚಲಾಯಿಸಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ತಮಗೆ ಒಂದು ಸುಭದ್ರ ಕ್ಷೇತ್ರವನ್ನು ಈಗಲೂ ಹುಡುಕುತ್ತಲೇ ಇರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರವನ್ನು ತಮ್ಮ ಆಯ್ಕೆಯ ಭಾಗವಾಗಿ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿದರೆ, ಶ್ರೀನಿವಾಸಗೌಡ ತಮ್ಮ ಅವಕಾಶವನ್ನು ತ್ಯಾಗ ಮಾಡಬೇಕಾಗಿ ಬರಬಹುದು. ಗುಬ್ಬಿ ಶ್ರೀನಿವಾಸಗೆ ತುಮಕೂರು ಬಿಜೆಪಿ ನಾಯಕರ ಒಲವು ಸಿಕ್ಕರೆ ಮುಂದಿನ ಚುನಾವಣೆಯಲ್ಲಿ ಅವರೇ ಅಭ್ಯರ್ಥಿ ಆಗಲಿದ್ದಾರೆ. 2008, 2013 ಹಾಗೂ 2018ರಲ್ಲಿ ಗುಬ್ಬಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಎಸ್ ಆರ್ ಶ್ರೀನಿವಾಸ್ ಕ್ಷೇತ್ರದಲ್ಲಿ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಹಿಂದೆ ಕೆಜೆಪಿ ಅಭ್ಯರ್ಥಿಯಾಗಿ ಹಾಗೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬೆಟ್ಟಸ್ವಾಮಿ ಬದಲು ಶ್ರೀನಿವಾಸ್​ ಅವರಿಗೆ ಟಿಕೆಟ್ ನೀಡಿದರೂ ಅಚ್ಚರಿ ಇಲ್ಲ.

ಹಿಜಾಬ್ ಗೊಂದಲ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಆಶಯ ಹೊಂದಿದ್ದ ಹಲವು ಜೆಡಿಎಸ್ ಶಾಸಕರ ವಿಚಾರದಲ್ಲಿ ನಡೆದ ವಾದ-ವಿವಾದ ಸಾಕಷ್ಟು ಆತಂಕ ಮೂಡಿಸಿದೆ. ನಿಜ ವಿಚಾರದಲ್ಲಿ ಕಾಂಗ್ರೆಸ್ ಕೈಗೊಂಡ ನಿಲುವು ಮುಂಬರುವ ದಿನಗಳಲ್ಲಿ ತಮ್ಮ ಮತ ಬ್ಯಾಂಕನ್ನು ಪಡೆಯಬಹುದು ಎಂಬ ಆತಂಕ ಕೂಡ ಜೆಡಿಎಸ್ ಶಾಸಕರಿಗೆ ಇದೆ. ಈ ಹಿನ್ನೆಲೆ ತಾವು ಬಿಜೆಪಿಯತ್ತ ಮುಖ ಮಾಡಿದರೆ ಒಕ್ಕಲಿಗ ಹಾಗೂ ಲಿಂಗಾಯತ ಸೇರಿದಂತೆ ಮೇಲ್ವರ್ಗದ ಮತದಾರರ ಜೊತೆ ತಮ್ಮೊಂದಿಗೆ ಇರುವ ಸಾಂಪ್ರದಾಯಿಕ ಮತದಾರರು ಸಹ ಕೈಹಿಡಿಯಲಿದ್ದಾರೆ ಎಂಬ ಯೋಚನೆ ಕೆಲವರಿಗೆ ಮೂಡಿದೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್ ರೆಬೆಲ್ ಶಾಸಕರಾದ ಜಿ ಟಿ ದೇವೇಗೌಡ, ಶಿವಲಿಂಗೇಗೌಡ ಹಾಗೂ ರಾಮಸ್ವಾಮಿ ಜೆಡಿಎಸ್ ಪರವಾಗಿಯೇ ರಾಜ್ಯಸಭೆಯಲ್ಲಿ ಮತದಾನ ಮಾಡಿದ್ದು, ಪಕ್ಷದ ಮೇಲಿನ ತಮ್ಮ ಅಸಮಾಧಾನ ಮುಂದುವರಿಯಲಿದೆ. ಕ್ಷೇತ್ರದ ಮತದಾರರ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿದ್ದಾಗಿ ಹೇಳಿದ್ದಾರೆ. ಇನ್ನೊಂದೆಡೆ ಶ್ರೀನಿವಾಸಗೌಡ ಕಾಂಗ್ರೆಸ್ ಪರ ನಿಂತಿದ್ದು ಗುಬ್ಬಿ ಶ್ರೀನಿವಾಸ್ ಬಿಜೆಪಿ ಪರ ನಿಂತಿದ್ದಾರೆ. ಒಟ್ಟಾರೆ ಜೆಡಿಎಸ್ ಶಾಸಕರು ತಮ್ಮ ಅನುಕೂಲ ನೋಡಿಕೊಂಡು ಮುಂಬರುವ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದು, ಎಲ್ಲಾ ಕಡೆ ತಮಗೆ ಅವಕಾಶ ಉಳಿದುಕೊಳ್ಳುವಂತೆ ನೋಡಿಕೊಂಡಿದ್ದಾರೆ.

ಓದಿ :ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.