ETV Bharat / state

ಜೈನಮುನಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಸರ್ಕಾರ ನಕಾರ: ಸದನದ ಬಾವಿಗಿಳಿದು ಧರಣಿ ನಡೆಸಿದ ಬಿಜೆಪಿ

author img

By

Published : Jul 11, 2023, 8:36 PM IST

Updated : Jul 11, 2023, 9:45 PM IST

ವಿಧಾನ ಪರಿಷತ್​​ ನಲ್ಲಿ ನಿಯಮ 68ರ ಅಡಿಯಲ್ಲಿ ನಡೆದ ಚರ್ಚೆ ವೇಳೆ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ ಪರಮೇಶ್ವರ್ ಉತ್ತರಿಸಿದರು.

Home Minister Dr Parameshwar answered.
ವಿಧಾನ ಪರಿಷತ್​​ ನಲ್ಲಿ ಗೃಹ ಸಚಿವ ಡಾ ಪರಮೇಶ್ವರ್ ಉತ್ತರಿಸಿದರು.

ವಿಧಾನ ಪರಿಷತ್​​ ನಲ್ಲಿ ಗೃಹ ಸಚಿವ ಡಾ ಪರಮೇಶ್ವರ್ ಉತ್ತರಿಸಿದರು.

ಬೆಂಗಳೂರು:ಒಂದು ಕಾಲಕ್ಕೆ ಯಾವ ಸಂಸ್ಥೆ ಚೋರ್ ಬಚಾವೋ ಸಂಸ್ಥೆಯಾಗಿತ್ತೋ, ಕಾಂಗ್ರೆಸ್ ಬ್ಯೂರೋ ಆಫ್ ಇನ್ಸ್ಟಿಟ್ಯೂಟ್ ಆಗಿತ್ತೋ ಆ ಸಂಸ್ಥೆಗೆ ಜೈನ ಮುನಿ ಹತ್ಯೆ ಪ್ರಕರಣ ಕೊಡಿ ಎನ್ನುತ್ತಿದ್ದೀರಲ್ಲ, ನಾವು ಅಸಮರ್ಥರಾದಾಗ ಬೇರೆಯವರ ಬಳಿ ಹೋಗುತ್ತೇವೆ. ಆದರೆ ನಾವು ಸಮರ್ಥರಿದ್ದೇವೆ. ಹಾಗಾಗಿ ಸಿಬಿಐಗೆ ವಹಿಸಲ್ಲ ಎಂದು ಗೃಹ ಸಚಿವ ಡಾ ಪರಮೇಶ್ವರ್ ತಿಳಿಸಿದ್ದು, ಸರ್ಕಾರದ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ವಿಧಾನ ಪರಿಷತ್​​ ನಲ್ಲಿ ನಿಯಮ 68ರ ಅಡಿ ನಡೆದ ಚರ್ಚೆಗೆ ಉತ್ತರಿಸಿದ ಗೃಹ ಸಚಿವರು, ಭೀಕರ ಹತ್ಯೆ ಜೈನ ಮುನಿಗಳದ್ದಾಗಿದೆ, ಯಾವುದೇ ನಾಗರಿಕ ಸಮಾಜಕ್ಕೆ ಗೌರವ ತರುವಂತದ್ದಲ್ಲ, ಮುನಿಗಳ ಸರ್ವವನ್ನೂ ತ್ಯಾಗ ಮಾಡಿ ಧರ್ಮದ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದರು ಅವರ ಹತ್ಯೆ ಖಂಡನೀಯ. ಇದು ನೋವಿನ ಸಂಗತಿಯಾಗಿದೆ.

ನಮ್ಮ ಇಲಾಖೆ ಬಹಳ ತ್ವರಿತವಾಗಿ ದೂರು ಬಂದ ಆರು ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಮುಂದಿನ ತನಿಖೆ ಪ್ರಾರಂಭಿಸಿದ್ದಾರೆ. ಕೊಲೆಯಾದ ಕಡೆಯಲ್ಲಾ ಗೃಹ ಸಚಿವರು ಹೋಗುವುದಿಲ್ಲ. ಆದರೆ ಈ ಕೊಲೆ ಜೈನ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ಜೈನ ಸಮುದಾಯ ಆತಂಕ ವ್ಯಕ್ತಪಡಿಸಿ, ವಿಶ್ವದ ಹಲವು ಕಡೆ ಪ್ರತಿಭಟನೆ ನಡೆಸಿತು.

ಹೀಗಾಗಿ ನಾನು ಖುದ್ದಾಗಿ ಹೋಗಲು ನಿರ್ಧರಿಸಿದೆ. ಇದರ ಜೊತೆ ವರೂರು ಮಠದ ಶ್ರೀಗಳು ಆಮರಣಾಂತ ಉಪವಾಸ ಕುಳಿತರು ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರುತ್ತೇವೆ. ಉಪವಾಸ ವಾಪಸು ಪಡೆಯಿರಿ ಎಂದು ಮನವಿ ಮಾಡಿದೆ. ಮಾರನೇ ದಿನ ಖುದ್ದಾಗಿ ಹೋಗಿ ವರೂರು ಮಠದ ಶ್ರೀಗಳನ್ನು ಭೇಟಿ ಮಾಡಿದೆ, ನಂತರ ಸ್ಥಳಕ್ಕೆ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಿ ಸಮುದಾಯಕ್ಕೆ ಧೈರ್ಯ ತುಂಬಿದ್ದೇನೆ ಎಂದು ಉತ್ತರಿಸಿದರು.

ತನಿಖೆ ತೀವ್ರಗತಿಯಲ್ಲಿ ನಡೆಯಿತ್ತಿದೆ, ಪೊಲೀಸರ ಮೇಲೆ ವಿಶ್ವಾಸ ಇರಬೇಕು, ದೇಶದಲ್ಲೇ ಉತ್ತಮ ಪೊಲೀಸ್ ಇಲಾಖೆ ಎನ್ನುವ ಹೆಸರಿಗೆ ಹಾಗಾಗಿ ಬೇರೆ ಸಂಸ್ಥೆ ತನಿಖೆ ಅಗತ್ಯವಿಲ್ಲ. ನಮ್ಮ ಪೊಲೀಸ್ ಇಲಾಖೆ ಸಮರ್ಥವಿದೆ, ಯಾವುದಾದರೂ ಅಧಿಕಾರಿ ಬೇಡ ಎಂದರೆ ಹೇಳಿ ಬದಲಾಯಿಸೋಣ. ಕೇವಲ ಆರು ಗಂಟೆಯಲ್ಲಿ ಆರೋಪಿಗಳ ಬಂಧಿಸಲಾಗಿದೆ. ತನಿಖೆ ಮುಂದುವರೆಸುತ್ತೇವೆ.

ಪ್ರಕರಣದಲ್ಲಿ ಇನ್ನೂ ಯಾರಾದರೂ ಆರೋಪಿಗಳಿದ್ದರೇ, ಬರ್ಬರ ಹತ್ಯೆಗೆ ಹಿನ್ನೆಲೆ ಏನಾದರೂ ಇದೆಯಾ? ಎಲ್ಲವನ್ನೂ ತನಿಖೆ ಮಾಡಲಾಗುತ್ತದೆ. 9 ತುಂಡು ಮಾಡುವಷ್ಟು ಕೋಪ ಇತ್ತು ಎಂದರೆ ಆ ಕೋಪಕ್ಕೆ ಕಾರಣ ಬೇಕಲ್ಲ. ಅದನ್ನು ತನಿಖೆ ಮಾಡುತ್ತೇವೆ ಎಂದು ಸಿಬಿಐ ತನಿಖೆ ನಿರಾಕರಿಸಿದರು.


ಐಸಿಸ್ ನಂಟಿದೆಯಾ ಎನ್ನುವ ಅನುಮಾನ: ಸರ್ಕಾರದ ಉತ್ತರಕ್ಕೆ ಬಿಜೆಪಿ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣದ ಸತ್ಯ ಹೊರಬರಲು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ನಾವು ಐಸಿಸ್ ಭಯೋತ್ಪಾದಕರು ಯಾವ ರೀತಿ ಟಾರ್ಜರ್ ಕೊಡುತ್ತಾರೆ ಎಂದು ಕೇಳಿದ್ದೆವು.

ಇಲ್ಲಿ ಜೈನ ಮುನಿ ಹತ್ಯೆ ಮಾಡಿ 9 ತುಂಡು ಮಾಡಿರುವುದನ್ನು ನೋಡಿದರೆ ಇದಕ್ಕೆ ಐಸಿಸ್ ನಂಟಿದೆಯಾ ಎನ್ನುವ ಅನುಮಾನ ಬರುತ್ತಿದೆ. ಐಸಿಸಿ ಕೇರಳಕ್ಕೆ ಬಂದಿದೆ. ಕರ್ನಾಟಕ್ಕೂ ಬರಲಿದೆ. ಇದು ಐಸಿಸ್ ಮಾದರಿಯ ಹತ್ಯೆಯಾಗಿದೆ ಹಾಗಾಗಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ತೇಜಸ್ವಿನಿಗೌಡ ಮಾತನಾಡಿ, ಕುಕ್ಕರ್ ಬಾಂಬ್, ಶಿವಮೊಗ್ಗ ಘಟನೆ ನಾವು ಲಘುವಾಗಿ ಪರಿಗಣಿಸಿದೆವು. ಆದರೆ ಎನ್ಐಎ ತನಿಖೆ ನಂತರವೇ ಇದರ ಆಳ ಅಗಲು ಗೊತ್ತಾಯಿತು. ಹಾಗಾಗಿ ಈ ಪ್ರಕರಣವನ್ನೂ ಲಘುವಾಗಿ ಪರಿಗಣಿಸಬಾರದು. ಸರ್ಕಾರದ ಉತ್ತರ ತುಂಬಾ ಜಾಳವಾಗಿದೆ, ಆರು ಲಕ್ಷ ಹಣಕ್ಕೆ ಮುನಿಯ ಹತ್ಯೆ ಯಾರೂ ನಂಬಲು ಸಾಧ್ಯವಿಲ್ಲ. ಹಾಗಾಗಿ ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು.


ಜಗತ್ತಿನ ಹಲವೆಡೆ ಪ್ರತಿಭಟನೆ: ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮೂಲಕ ವಿಶೇಷ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ನಮ್ಮ ಪೊಲೀಸರು ಸಮರ್ಥರೇ, ಇನ್ನಷ್ಟು ಸಮರ್ಥರಿರುವ ಸಂಸ್ಥೆಗೆ ಯಾಕೆ ಕೊಡಬಾರದು. ಸಿಬಿಐ ಬಹಳ ಆಳವಾಗಿ ಅಧ್ಯಯನ ಮಾಡಲಿದೆ ಎನ್ನುವ ನಂಬಿಕೆ ಜನರಲ್ಲಿದೆ.

ಸಮಾಜದಲ್ಲಿ ಜನರಿಗೆ ಮೋಕ್ಷ ಸಿಗಲಿ, ಅಶಾಂತಿ ನಿರ್ಮಾಣವಾಗದಿರಲಿ ಎನ್ನುವ ಸಂಕಲ್ಪದಲ್ಲಿ ಬದುಕುತ್ತಿದ್ದರು ಅಂತಹ ಜೈನ ಮುನಿಗಳ ಹತ್ಯೆಗೆ ಜಗತ್ತಿನ ಹಲವೆಡೆ ಪ್ರತಿಭಟನೆ ಆಗಿದೆ. ನಾವು ಕೇಳುತ್ತಿದ್ದೇವೆ ಎನ್ನುವ ಕಾರಣಕ್ಕೆ ಸಿಬಿಐಗೆ ಕೊಡದಿರುವ ನಿರ್ಧಾರ ಬೇಡ, ಸಾವಿಗೆ ನ್ಯಾಯ ಸಿಗಲು ಸಿಬಿಐಗೆ ಕೊಡಿ, ಪ್ರತಿಷ್ಟೆಗೆ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಪರಮೇಶ್ವರ್, ನನ್ನನ್ನು ಅನುಭವಿ ಗೃಹ ಸಚಿವ ಎನ್ನುತ್ತೀರಿ, ನಮ್ಮ ಪೊಲೀಸರು ಸಮರ್ಥರು ಅನ್ನುತ್ತೀರಿ ಆದರೂ ಸಿಬಿಐ ಅನ್ನುತ್ತೀರಿ, ನಮ್ಮ ಮೇಲೆ ನಂಬಿಕೆ ಇಡಿ,‌ಗೃಹ ಸಚಿವ, ಪೊಲೀಸರು ಅಸಮರ್ಥರಾದರೆ, ವೈಫಲ್ಯರಾದರೆ ಆಗ ಸಿಬಿಐಗೆ ಕೊಡಬಹುದು. ನಾವು ಇಲ್ಲಿ ಸಮರ್ಥರಿದ್ದೇವೆ.ಸಿಬಿಐಗೆ ಎಷ್ಟು ಪ್ರಕರಣ ವಹಿಸಿದ್ದೀರ,ಅದೆಲ್ಲಾ ಏನಾಗಿದೆ ಎಲ್ಲ ಮಾಹಿತಿ ಇದೆ, ಈಗ ನಾವು ತನಿಖೆ ಮಾಡುತ್ತಿದ್ದೇವೆ ವಿಶ್ವಾಸ ಇರಿಸಿ ಎಂದರು.

ಒಂದು ಕಾಲಕ್ಕೆ ಯಾವ ಸಂಸ್ಥೆ ಚೋರ್ ಬಚಾವೋ ಸಂಸ್ಥೆಯಾಗಿತ್ತೋ, ಕಾಂಗ್ರೆಸ್ ಬ್ಯೂರೋ ಆಫ್ ಇನ್ಸ್ಟಿಟ್ಯೂಟ್ ಆಗಿತ್ತೋ ಆ ಸಂಸ್ಥೆಗೆ ಕೊಡಿ ಎನ್ನುತ್ತಿದ್ದೀರಲ್ಲ. ನಾವು ಅಸಮರ್ಥರಾದಾಗ ಬೇರೆಯವರ ಬಳಿ ಹೋಗುತ್ತೇವೆ. ಆದರೆ ನಾವು ಸಮರ್ಥರಿದ್ದೇವೆ ಹಾಗಾಗಿ ಸಿಬಿಐಗೆ ವಹಿಸಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು, ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾದ ಹಿನ್ನೆಲೆ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಿದರು.

ಇದನ್ನೂಓದಿ:ಜೈನ‌ ಮುನಿಗಳ ಹತ್ಯೆ ಕೇಸ್: ಇಬ್ಬರು ಆರೋಪಿಗಳನ್ನ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್​​

Last Updated : Jul 11, 2023, 9:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.