ETV Bharat / state

ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ: ಏನೆಲ್ಲ ಸಿಕ್ತು?

author img

By

Published : Apr 19, 2023, 5:48 PM IST

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ಬೆಂಗಳೂರಿನ ಹಲವು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ ಕೆಜಿಎಫ್‌ ಬಾಬುಗೆ ಐಟಿ ಅಧಿಕಾರಿಗಳು ಬಿಗ್​ ಶಾಕ್‌ ನೀಡಿದರು.

ಕೆಜಿಎಫ್ ಬಾಬು ಮನೆಯಲ್ಲಿ ಐಟಿಯಿಂದ ವಶಪಡಿಸಿಕೊಂಡ ಸ್ವತ್ತು
ಕೆಜಿಎಫ್ ಬಾಬು ಮನೆಯಲ್ಲಿ ಐಟಿಯಿಂದ ವಶಪಡಿಸಿಕೊಂಡ ಸ್ವತ್ತು

ಬೆಂಗಳೂರು: ತೆರಿಗೆ ವಂಚನೆ ಸೇರಿದಂತೆ ಚುನಾವಣಾ ಅಕ್ರಮ ನಡೆಸುತ್ತಿರುವ ಶಂಕೆಯ ಮೇರೆಗೆ ಇಂದು ಬೆಳಗ್ಗೆ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಸೀರೆ ಸೇರಿದಂತೆ ಹಲವು ವಸ್ತುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್​ ಆಕ್ಷಾಂಕಿಯಾಗಿದ್ದ ಕೆಜಿಎಫ್ ಬಾಬುಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪತ್ನಿ ರುಕ್ಸಾನ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಳೆದ ಎರಡು ದಿನಗಳ ಹಿಂದಷ್ಟೇ ನಾಮಪತ್ರ ಸಲ್ಲಿಸಿದ್ದರು‌. ಚುನಾವಣಾ ತಯಾರಿಯಲ್ಲಿರುವಾಗಲೇ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.‌ ವಸಂತನಗರದಲ್ಲಿರುವ ಕೆಜಿಎಫ್ ಬಾಬು ಅವರ ನಿವಾಸ ರುಕ್ಸಾನ ಪ್ಯಾಲೇಸ್​ಗೆ ಐಟಿ ಅಧಿಕಾರಿಗಳು ದಾಳಿ‌ ಮಾಡಿದ್ದಾರೆ.

ಡಿ.ಡಿ ಕವರ್​ಗಳ ಮೇಲೆ ಕೆಜಿಎಫ್ ಬಾಬು ಭಾವಚಿತ್ರ: ಶೋಧ ಕಾರ್ಯಾಚರಣೆಯಲ್ಲಿ 2,000 ಸಾವಿರಕ್ಕೂ ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ), ಒಂದು ಸೀರೆಗೆ ಐದು ಸಾವಿರ ಬೆಲೆ ಹೇಳಲಾಗುತ್ತಿರುವ 5 ಸಾವಿರಕ್ಕೂ ಹೆಚ್ಚು ಸೀರೆಗಳು ದೊರೆತಿವೆ. ಸೀರೆ ಹಾಗೂ ಡಿ.ಡಿ ಕವರ್​ಗಳ ಮೇಲೆ ಕೆಜಿಎಫ್ ಬಾಬು ಭಾವಚಿತ್ರವಿರುವುದು ಕಂಡುಬಂದಿದೆ.

ಕೆಜಿಎಫ್ ಬಾಬು ಮನೆ ಮೇಲೆ‌ ನಡೆಯುತ್ತಿರುವ ದಾಳಿ ಇದೇ ಮೊದಲೇನಲ್ಲ. ಕಳೆದ ವರ್ಷವೂ ದಾಳಿ ನಡೆದಿತ್ತು. ಅಲ್ಲದೇ ಅಕ್ರಮವಾಗಿ ಹಣ ವರ್ಗಾವಣೆ ಕಾಯ್ದೆಯಡಿ‌ ಪ್ರಕರಣ ದಾಖಲಿಸಿಕೊಂಡು ಜಾರಿ ನಿರ್ದೇಶನಾಲಯ‌ (ಇ.ಡಿ) ಪ್ರಕರಣ ದಾಖಲಿಸಿಕೊಂಡಿತ್ತು. ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ವ್ಯವಹಾರ‌‌ಗಳನ್ನು ಮಾಡಿಕೊಂಡಿರುವ ಬಾಬು ಅವರು ಅಕ್ರಮ ಹಣ ವರ್ಗಾವಣೆ ಮಾಡಿರುವ ಬಗ್ಗೆ ಇಡಿ ತನಿಖೆಯೂ ನಡೆಯುತ್ತಿದೆ.

ಕೆಜಿಎಫ್‌ ಬಾಬು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಭಾರಿ ತಯಾರಿ ನಡೆಸಿದ್ದರು. ಆದರೆ, ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿತ್ತು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಪತ್ನಿ ಶಾಝಿಯಾ ತರನ್ನುಮ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ವೇಳೆ ಅವರು ಹಾಗೂ ತಮ್ಮ ಪತಿ ಕೆಜಿಎಫ್‌ ಬಾಬು ಅವರ ಆಸ್ತಿ ವಿವರ ಘೋಷಿಸಿದ್ದು, 1,621 ಕೋಟಿ ರೂ ಆಸ್ತಿ ಇದೆ ಎಂದು ತಿಳಿದುಬಂದಿದೆ.

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್: ಮನೆ, ಮನೆಗೆ ಪೋಸ್ಟ್ ಮೂಲಕ ಡಿ.ಡಿ ತಲುಪಿಸುತ್ತಿದ್ದ ಆರೋಪದ ಮೇರೆಗೆ ಉದ್ಯಮಿ ಹಾಗೂ ರಾಜಕೀಯ ಮುಖಂಡ ಕೆಜಿಎಫ್ ಬಾಬು ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ (ಏಪ್ರಿಲ್ 4-2023) ರಂದು ಎಫ್ಐಆರ್ ದಾಖಲಾಗಿತ್ತು. 1105 ರೂ. ನಂತೆ ಮೂರು ಸಾವಿರ ಮಂದಿಗೆ ಡಿ.ಡಿ ಕೊಡಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿದ್ದಾಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 30 ಲಕ್ಷ ರೂ ಡಿಡಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮನೆ ಮನೆಗೆ ಡಿಡಿ ತಲುಪಿಸುತ್ತಿದ್ದ ಆರೋಪ: ಕೆಜಿಎಫ್ ಬಾಬು ವಿರುದ್ಧ ಎಫ್ಐಆರ್ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.