ETV Bharat / state

ಇಸ್ರೇಲ್ -​ ಪ್ಯಾಲೆಸ್ಟೇನ್​ ಸಂಘರ್ಷ : ಸಿಲುಕಿದ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸಿದ ಸರ್ಕಾರ

author img

By ETV Bharat Karnataka Team

Published : Oct 8, 2023, 8:38 PM IST

ಇಸ್ರೇಲ್​ ಮತ್ತು ಪ್ಯಾಲೆಸ್ಟೇನ್ ನಡುವೆ ಸಂಘರ್ಷ ಮುಂದುವರೆದಿದ್ದು, ಈ ಸಂಬಂಧ ಇಸ್ರೇಲ್​ನಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ.

israel-palestine-conflict-government-has-launched-a-helpline-for-stranded-kannadigas
ಇಸ್ರೇಲ್ -​ ಪ್ಯಾಲೆಸ್ಟೇನ್​ ಸಂಘರ್ಷ : ಸಿಲುಕಿದ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸಿದ ಸರ್ಕಾರ

ಬೆಂಗಳೂರು : ಇಸ್ರೇಲ್​ ಮತ್ತು ಹಮಾಸ್ ಉಗ್ರಗಾಮಿಗಳ​ ನಡುವೆ ಸಂಘರ್ಷ ಮುಂದುವರೆದಿದೆ. ಈ ಸಂಬಂಧ ಇಸ್ರೇಲ್​ ಮತ್ತು ಪ್ಯಾಲೆಸ್ಟೇನ್​ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿರುವಂತೆ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಜೊತೆಗೆ ತುರ್ತು ಸಂದರ್ಭಗಳಲ್ಲಿ ರಾಯಭಾರಿ ಕಚೇರಿಯನ್ನು ಸಂಪರ್ಕಿಸುವಂತೆ ಕೋರಿದೆ. ಇಸ್ರೇಲ್​ ಮತ್ತು ಪ್ಯಾಲೆಸ್ಟೇನ್ ಹಮಾಸ್​ ಉಗ್ರರ ಕಾದಾಟದಲ್ಲಿ ಒಟ್ಟು 600ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಯುದ್ಧ ಪೀಡಿತ ಇಸ್ರೇಲ್​ನಲ್ಲಿ ಸಿಲುಕಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಈ ಸಂಬಂಧ ಹೆಲ್ಪ್​ಲೈನ್​ ಮತ್ತು ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರವನ್ನು ಸರ್ಕಾರ ತೆರೆದಿದ್ದು, ಇಲ್ಲಿ ಸಂಪರ್ಕಿಸುವಂತೆ ಕೋರಲಾಗಿದೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, ಇಸ್ರೇಲ್​ನಲ್ಲಿನ ಸದ್ಯದ ಪರಿಸ್ಥಿತಿ ಕಳವಳಕಾರಿಯಾಗಿದೆ. ಮಾನವೀಯತೆಯ ದೃಷ್ಟಿಯಿಂದ ನಾವು ಎಲ್ಲೆಡೆ ಶಾಂತಿ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸುತ್ತೇವೆ. ಇಸ್ರೇಲ್​ನಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಪ್ರಜೆಗಳ ಸುರಕ್ಷತೆಯ ದೃಷ್ಟಿಯಿಂದ ವಿದೇಶಾಂಗ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.

ಇಸ್ರೇಲ್​ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್​ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ವಿನಂತಿಸಲಾಗಿದೆ. ದಯವಿಟ್ಟು ಹೆಚ್ಚಿನ ಜಾಗರೂಕತೆಯನ್ನು ವಹಿಸುತ್ತಾ, ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ ಸುರಕ್ಷತಾ ಆಶ್ರಯಗಳ (ಬಾಂಬ್ ಶೆಲ್ಟರ್​) ಹತ್ತಿರ ಇರಬೇಕಾಗಿ ವಿನಂತಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಇಸ್ರೇಲ್​ ಹೋಮ್​ ಫ್ರಂಟ್​​ ಕಮಾಂಡ್​ ವೆಬ್​ಸೈಟ್​​ ಅಥವಾ ಕರಪತ್ರವನ್ನು ವೀಕ್ಷಿಸಿ ಎಂದು ತಿಳಿಸಲಾಗಿದೆ. ಜೊತೆಗೆ https://www.indembassyisrael.gov.in ಸಂಪರ್ಕಿಸಲು ಕೋರಲಾಗಿದೆ.

ಇಸ್ರೇಲ್‌ನಲ್ಲಿರುವ ಭಾರತದ ನಾಗರಿಕರಿಗೆ ಮತ್ತು ಕನ್ನಡಿಗರಿಗೆ ತುರ್ತು ಸಹಾಯದ ಅಗತ್ಯವಿರುವ ಸಂದರ್ಭಗಳಲ್ಲಿ, ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆಗಳನ್ನು (080222340676, 08022253707) ಹಾಗೂ ಕೇಂದ್ರ ಸಹಾಯವಾಣಿ ಸಂಖ್ಯೆ (+97235226748) ಸಂಪರ್ಕಿಸುವಂತೆಯೂ ಸಿಎಂ ಕೋರಿದ್ದಾರೆ.

ಇಲ್ಲಿನ ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿನ ವಿವರಗಳ ಪ್ರಕಾರ, ಇಸ್ರೇಲ್‌ನಲ್ಲಿ ವಜ್ರದ ವ್ಯಾಪಾರಿಗಳು, ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 18,000 ಭಾರತೀಯ ನಾಗರೀಕರು ನೆಲೆಸಿದ್ದಾರೆ. ಹಾಗೆಯೇ, ಸರಿಸುಮಾರು 85,000 ಭಾರತೀಯ ಮೂಲದ ಯಹೂದಿಗಳಿದ್ದಾರೆ. ಅವರು ಐವತ್ತು ಮತ್ತು ಅರವತ್ತರ ದಶಕದಲ್ಲಿ ಭಾರತದಿಂದ ಇಸ್ರೇಲ್‌ಗೆ ವಲಸೆ ಹೋದವರಾಗಿದ್ದಾರೆ.

ಇದನ್ನೂ ಓದಿ : ಇಸ್ರೇಲ್-ಪ್ಯಾಲೆಸ್ಟೀನ್ ನಡುವೆ ಭುಗಿಲೆದ್ದ ಯುದ್ಧ: ಭಾರತೀಯರು ಜಾಗರೂಕರಾಗಿರಲು ರಾಯಭಾರಿ ಕಚೇರಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.