ETV Bharat / state

ಸಂವಿಧಾನದ ಆಶಯಗಳನ್ನು ಎಲ್ಲಾ ಸಮುದಾಯಗಳಿಗೆ ತಲುಪಿಸಲು ಜಾತಿ ಗಣತಿ ಆರಂಭಿಸಿದೆ: ಸಿಎಂ

author img

By ETV Bharat Karnataka Team

Published : Dec 1, 2023, 7:20 AM IST

CM Siddaramaiah statement on caste census: ಜಾತಿ ಗಣತಿಗೆ ಕಾಂಗ್ರೆಸ್ ಬದ್ಧ. ಸಂವಿಧಾನದ ಆಶಯಗಳನ್ನು ಎಲ್ಲರಿಗೂ ತಲುಪಿಸಬೇಕೆಂದು ಜಾತಿ ಗಣತಿ ಆರಂಭಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

siddaramaiah
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರತಿಯೊಂದು ಜಾತಿ ಮತ್ತು ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯುವುದಕ್ಕೆ ಮತ್ತು ಸಂವಿಧಾನದ ಆಶಯಗಳನ್ನು ಕಾರ್ಯಕ್ರಮಗಳ ಮೂಲಕ ಎಲ್ಲಾ ಸಮುದಾಯಗಳಿಗೂ ತಲುಪಿಸುವುದಕ್ಕಾಗಿ ನಾನೇ ಜಾತಿ ಗಣತಿ ಆರಂಭಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಸಮಾಜ ಸೇವಕ ದಿವಂಗತ ಲಿಂಗಪ್ಪ ಅವರಿಗೆ ಮರಣೋತ್ತರ ಕನಕಶ್ರೀ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಹೇಳಿದ್ದ ಎಚ್ಚರಿಕೆ ಮಾತುಗಳನ್ನು ಮರೆಯಬಾರದು. ಜಾತಿ ಗಣತಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಇದೇ ವೇಳೆ ಸಿಎಂ ಹೇಳಿದರು.

ಎಲ್ಲರಿಗೂ ಚಪ್ಪಾಳೆ ತಟ್ಟಬೇಡಿ: ಸುಖಾಸುಮ್ಮನೆ ಎಲ್ಲರಿಗೂ ಚಪ್ಪಾಳೆ ತಟ್ಟಬೇಡಿ. ನಿಮ್ಮಲ್ಲೊಂದು ತತ್ವ ಇರಲಿ. ಮೂರು ವರ್ಷಗಳಿಂದ ಕನಕಶ್ರೀ ಪ್ರಶಸ್ತಿಯನ್ನೇ ಕೊಟ್ಟಿಲ್ಲ. ಆದರೂ ಅವರಿಗೂ ಚಪ್ಪಾಳೆ ತಟ್ಟೋದು, ಇಲ್ಲಿ ಬಂದು ನನಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ನಿಮಗೆ ಸ್ಪಷ್ಟತೆ ಇರಲಿ, ಕನಕದಾಸರು ಒಂದು ಜಾತಿಗೆ ಸೇರಿದವರಲ್ಲ. ಕುರುಬ ಜಾತಿಯವರನ್ನು ಮೆಚ್ಚಿಸಲು ಕನಕ ಜಯಂತಿ ಮಾಡುತ್ತಿಲ್ಲ. ಕನಕದಾಸರು ವಿಶ್ವ ಮಾನವರಾಗಿದ್ದರು. ಅವರ ತತ್ವಾದರ್ಶಗಳನ್ನು ಪಾಲಿಸಿ ವಿಶ್ವ ಮಾನವರಾಗೋಣ ಎಂದು ಮನವಿ ಮಾಡಿದರು.

ಕನಕದಾಸರು ಆಕಸ್ಮಿಕವಾಗಿ ಕುರುಬರಾಗಿ ಹುಟ್ಟಿದ ವಿಶ್ವಶ್ರೇಷ್ಠ ಮಾನವೀಯ ಚೈತನ್ಯರಾಗಿದ್ದರು. ದಾಸ ಪಂಥಕ್ಕೆ ಪ್ರವೇಶಿಸುವ ಮೊದಲು ಅವರು ಪಾಳೇಗಾರರಾಗಿದ್ದರು. ಆದಿಕೇಶವನ ಭಕ್ತರಾಗಿ, ದಾಸರಾಗಿ, ದಾಸಶ್ರೇಷ್ಠರೂ ಆದರು. ಆದರೆ, ಕನಕದಾಸರ ಕೀರ್ತನೆಗಳಲ್ಲಿ ಅತ್ಯುನ್ನತ ಮಾನವೀಯ ಮೌಲ್ಯಗಳಿವೆ ಎಂದರು.

ಇದನ್ನೂ ಓದಿ : ಸರ್ಕಾರ ಉದ್ಯಮಸ್ನೇಹಿ ವಾತಾವರಣ ಉತ್ತೇಜಿಸುವ ಗುರಿ ಹೊಂದಿದೆ : ಟೆಕ್‌ ಸಮ್ಮಿಟ್‌ನಲ್ಲಿ ಸಿಎಂ ಸಿದ್ದರಾಮಯ್ಯ

ನಾನು ಕುರುಬನಾಗಿ ಜನಿಸಿದ್ದೇನೆ. ನೀವುಗಳು ಕುರುಬ ಸಮುದಾಯದಲ್ಲಿ ಜನಿಸಿರಬಹುದು. ಹಾಗಂದ ಮಾತ್ರಕ್ಕೆ ಕುರುಬರಾಗೇ ಸಾಯಬೇಕಾ?, ಅಪ್ಪಟ ಮನುಷ್ಯರಾಗಿ ಸಾಯಬೇಕು ಅಲ್ವಾ?. ಕನಕದಾಸರನ್ನು ಶೂದ್ರ ಜಾತಿಯವ ಎನ್ನುವ ಕಾರಣಕ್ಕೆ ಕೃಷ್ಣನ ದರ್ಶನಕ್ಕೆ ಬಿಡಲಿಲ್ಲ. ಕುವೆಂಪು ಅವರು ಹೇಳಿದಂತೆ ನಾವೆಲ್ಲಾ ವಿಶ್ವ ಮಾನವರಾಗಲು ಸಾಧ್ಯವಾಗದಿದ್ದರೂ ವಿಶ್ವ ಮಾನವರಾಗುವ ಮಾರ್ಗದಲ್ಲಿ ಸಾಗಬೇಕು. ಆ ಮೂಲಕ ನಾವೆಲ್ಲಾ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಸಿಎಂ ಕರೆ ಕೊಟ್ಟರು.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ರೈತರಿಗೆ 2,000 ರೂ. ವರೆಗೆ ಬರ, ಬೆಳೆ ನಷ್ಟ ಪರಿಹಾರ : ಸಿಎಂ

ಕನಕದಾಸರ 500ನೇ ಜಯಂತಿಯನ್ನು ಮಾಡಿದ್ದು ನಾನೇ. ಅಲ್ಲಿಯವರೆಗೂ 400ನೇ ಜಯಂತಿಯನ್ನು ಯಾರೂ ಆಚರಿಸಿರಲಿಲ್ಲ. ಕನಕದಾಸರ ಕುರಿತ ಸಾಹಿತ್ಯ ಕೃಷಿ ಮಾಡದಿದ್ದರೂ ಕನಕದಾಸರ ತತ್ವಾದರ್ಶಗಳನ್ನು ಪಾಲಿಸುತ್ತಾ, ಜನಸೇವಕರಾಗಿದ್ದ ಲಿಂಗಪ್ಪ ಅವರನ್ನು ಕನಕಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಅತ್ಯಂತ ಸೂಕ್ತ ಎಂದು ಮೆಚ್ಚುಗೆ ಸೂಚಿಸಿ, ಲಿಂಗಪ್ಪ ಅವರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.