ETV Bharat / state

ನಾನು ದೇವರ ವಿರೋಧಿ ಅಲ್ಲ, ಹಿಂದೂ ವಿರೋಧಿ ಅಲ್ಲ, ನಾನೂ ಕೂಡಾ ಹಿಂದೂ: ಸಿದ್ದರಾಮಯ್ಯ

author img

By

Published : Feb 14, 2023, 10:52 PM IST

ವಿಧಾನಸಭೆ ಬಜೆಟ್ ಅಧಿವೇಶನ - ನಾನು ಕೂಡಾ ಹಿಂದೂ ಇಲ್ಲವಾದರೆ ನನಗೆ ಅಪ್ಪ ಅಮ್ಮ ಹಿಂದೂ ಹೆಸರು ಇಟ್ಟಿದ್ದು ಯಾಕೆ ? ದೇಶಕ್ಕೆ ಮನುವಾದ ಪುರೋಹಿತಷಾಹಿ ಶಾಪ - ಸರ್ಕಾರದ ವಿರುದ್ಧ ಸದನದಲ್ಲಿ ಸಿದ್ದರಾಮಯ್ಯ ವಾಗ್ದಾಳಿ

Leader of Opposition Siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ನಾನು ದೇವರ ವಿರೋಧಿ ಅಲ್ಲ, ಹಿಂದೂ ವಿರೋಧಿ‌ ಅಲ್ಲ. ನಾನು ಹಿಂದೂ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾನು ದೇವರ ವಿರೋಧಿ ಅಲ್ಲ, ಹಿಂದೂ ವಿರೋಧಿ‌ ಅಲ್ಲ. ನಾನು ಹಿಂದೂ. ನಾನು ದೇವರ ವಿರೋಧಿ ಅಲ್ಲ.‌ ನಾನು ಹಿಂದೂ ವಿರೋಧಿ ಅಲ್ಲ. ನಾನು ಹಿಂದೂ. ಇಲ್ಲವಾದರೆ ನನಗೆ ಅಪ್ಪ ಅಮ್ಮ ಹಿಂದೂ ಎಂದು ಏಕೆ ಹೆಸರಿಡುತ್ತಿದ್ದರು?.

ಹಿಂದೂ ತತ್ವಗಳು ಬಹುತ್ವದ ಮೇಲೆ ನಂಬಿಕೆ ಇಟ್ಟ ಧರ್ಮ. ಆ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟವನು. ಬಿಜೆಪಿಯವರು ಹೇಳುವ ಹಿಂದೂ ಧರ್ಮ ಅಲ್ಲ. ನನ್ನದು ಬಿಜೆಪಿಯವರು ನನನ್ನು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಾನು ಪ್ಯೂರ್ ವೆಜಿಟೇರಿಯನ್:ಡಿಸೆಂಬರ್ 1 ರಿಂದ ನಾನೂ ಪ್ಯೂರ್ ವೆಜಿಟೇರಿಯನ್ ಆಗಿದ್ದೇನೆ. ಒಂದು ಸಣ್ಣ ಆಪರೇಷನ್ ಆಯ್ತು, ಅದಕ್ಕೆ ವೆಜಿಟೇರಿಯನ್ ಆಗಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು. ಈ ವೇಳೆ ಸಚಿವ ಆರ್.ಅಶೋಕ್, ಹೌದಾ ಯಾಕೆ, ನೀವು ಏನಾದರೂ ಗೆಲ್ಲಬೇಕು ಅಂತಾ ರೇವಣ್ಣ ರೀತಿ ಹೋಮ ಹವನ ಮಾಡಿಸುತ್ತಿದ್ದೀರಾ ಹೇಗೆ?. ಬೊಟ್ಟು ಇಡುತ್ತಿದ್ದೀರಿ. ಇತ್ತೀಚೆಗೆ, ಹೋಮ ಹವನ ಜೋರಾಗಿರಬೇಕು ನಿಮಗೆ ಅಂತ ಆರ್.ಅಶೋಕ್ ಕಾಲೆಳೆದರು.

ದೇಶಕ್ಕೆ ಮನುವಾದ ಪುರೋಹಿತಷಾಹಿ ಶಾಪ: ಇಲ್ಲ.. ಇಲ್ಲ ನಾನು ಹೋಮ ಮಾಡಲ್ಲ. ಬಿಜೆಪಿಯವರು ಆಗದೇ ಇರೋದಕ್ಕೆ ಸಿದ್ದರಾಮಯ್ಯ ಹಿಂದೂ ವಿರೋಧಿ ಅಂತ ಹೇಳ್ತಾರೆ. ವಿವೇಕಾನಂದ ಕೂಡಾ ಹಿಂದೂ. ಈ‌ ದೇಶಕ್ಕೆ ಮನುವಾದ, ಪುರೋಹಿತಷಾಹಿ ಶಾಪ ಅಂತ ವಿವೇಕಾನಂದ ಹೇಳಿದ್ರು. ಹಾಗಾದರೆ ವಿವೇಕಾನಂದ ಹಿಂದೂ ವಿರೋಧಿನಾ?. ನಾವು ಸತ್ಯ ಒಪ್ಕೋತೇವೆ, ಸತ್ಯ ಅಸತ್ಯ ಮಾಡಲ್ಲ ನಾವು. ನೀವು ಮನುವಾದದಲ್ಲಿ ನಂಬಿಕೆ ಇಟ್ಟು ಸುಳ್ಳು ಹೇಳ್ತೀರಾ. ನಮ್ಮದು ಗಾಂಧಿವಾದ, ಸತ್ಯ ಅಷ್ಟೇ ಹೇಳ್ತೀವಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಭಾವನಾತ್ಮಕ ವಿಚಾರ ಇಟ್ಟು ಮತ ಕೇಳುವುದಕ್ಕೆ ನಾಚಿಕೆ ಆಗಲ್ವಾ?:ಮೊನ್ನೆ ಅಮಿತ್ ಶಾ ಬಂದು ಹೇಳಿದ್ದಾರಲ್ಲ, ಅಬ್ಬಕ್ಕ vs ಟಿಪ್ಪು ಎಂದು. ನಿಮಗೆ ಭಾವನಾತ್ಮಕ ವಿಚಾರ ಇಟ್ಟು ಮತ ಕೇಳುವುದಕ್ಕೆ ನಾಚಿಕೆ ಆಗಲ್ವಾ?. ನಿಮಗೆ ರಾಜಕೀಯ ಸಿದ್ಧಾಂತ ಇಲ್ವಾ?. ನೀವು ಒಂದೆಡೆ ಅಭಿವೃದ್ಧಿ ಅಂತೀರ ಇನ್ನೊಂದೆಡೆ ಟಿಪ್ಪು ಅಂತೀರಾ, ಗಾಂಧಿ vs ಸಾವರ್ಕರ್ ಅಂತೀರಾ?. ನಿಮಗೆ ರಾಜಕೀಯ ತತ್ವ ಇದಿಯಾ, ರಾಜಕೀಯ ನೀತಿ ಇದಿಯಾ?. ನಿಮಗೆ ನಾಚಿಕೆ ಆಗಲ್ವಾ? ಎಂದು ಪ್ರಶ್ನಿಸಿದರು.

ಗ್ರಾಮ ವಾಸ್ತವ್ಯ ಅಂದರೆ ಮಲಗೋದು:ಗ್ರಾಮ ವಾಸ್ತವ್ಯ ಅಂದರೆ ಅದು ಮಲಗುವುದು ಎಂದರ್ಥ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು. ಡೀಸೆಲ್‌ ಸಬ್ಸಿಡಿ ವಿಚಾರ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಅಶೋಕ ನೀನು ಹಳ್ಳಿಯಲ್ಲಿ ಮಲಗೋಕೆ ಹೋಗ್ತಿಯಲ್ವಾ, ಅಲ್ಲಿ ಡೀಸೆಲ್‌ ಸಬ್ಸಿಡಿ ಬಗ್ಗೆ ಹೇಳಿದ್ರಾ ಎಂದು ಪ್ರಶ್ನಿಸಿದರು‌ ಮಲಗೋಕೆ ಹೋಗಲ್ಲ, ಸೌಲಭ್ಯ ಕೊಡಲು ಹೋಗೋದು ಎಂದು ಉತ್ತರಿಸಿದರು. ಎಸ್, ಮಲಗೋದು ಅಂದ್ರೆ ಸೌಲಭ್ಯ ವಿತರಣೆ ಮಾಡೋದು ಅಂತಾ, ನಾನು ಮಲಗೋದು ಅಂತಾ ಹೇಳಿದೆ ಅಷ್ಟೇ, ಸೌಲಭ್ಯ ವಿತರಣೆ ಹೇಳಲಿಲ್ಲ ಅಷ್ಟೇ, ಸಾರಿ ಎಂದು ಸಿದ್ದರಾಮಯ್ಯ ಸ್ಪಷ್ಟ ಪಡಿಸಿದರು.

ಗ್ರಾಮ ವಾಸ್ತವ್ಯ ಅಂದ್ರೆ ಮಲಗೋದು ಅಂತಾ, ನೀನು ರಾತ್ರಿ ಎಲ್ಲ ಎದ್ದು ಕೂತಿರುತ್ತಿಯಾ? ಮಲಗಲ್ವಾ ಎಂದು ಸಿದ್ದರಾಮಯ್ಯ ಕಾಲೆಳೆದರು‌. ನೀನು ಹೋದಾಗ ಸಚಿವರು ಬಂದಿದ್ದಾರೆ ಅಂತಾ ಎಲ್ಲಾ ತಂದು ಕೊಡುತ್ತಾರೆ. ನಾಟಿ ಕೋಳಿ ಸಾಂಬಾರು ಎಲ್ಲಾ ತಂದು ಕೊಡುತ್ತಾರೆ ಎಂದರು. ಇಲ್ಲ ಸಾರ್ ನಾವು ಪ್ಯೂರ್ ವೆಜ್, ನಾಟಿ ಕೋಳಿ ಎಲ್ಲ ಇಲ್ಲ ಎಂದು ಸಚಿವ ಆರ್.ಅಶೋಕ್ ಸಮಜಾಯಿಷಿ ನೀಡಿದರು.

ಗೋಶಾಲೆ ಮಾರಬೇಕಾಗುತ್ತದೆ: ಭೋಜನದ ನಂತರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭಿಸಿದ ಸಿದ್ದರಾಮಯ್ಯ, ಗೋಹತ್ಯೆ ತಡೆ ಕಾಯ್ದೆ ವಾಪಸ್ ಗೆ ಮತ್ತೆ ಆಗ್ರಹಿಸಿದರು. ಅನುಪಯುಕ್ತ ರಾಸುಗಳನ್ನು ಮೊದಲೆಲ್ಲ ಮಾರಾಟ ಮಾಡ್ತಿದ್ರು.

ಈಗ ಅಂಥ ಸನ್ನಿವೇಶ ಇಲ್ಲ. ಗೋಶಾಲೆಗಳಿಗೇ ಮಾರಬೇಕಾಗುತ್ತದೆ. ಗೋಶಾಲೆಗಳೂ ಸರಿಯಾಗಿ ನಡೀತಿಲ್ಲ. ಗೋ ಶಾಲೆಯನ್ನೇ ಮಾರ ಬೇಕಾಗುತ್ತದೆ. ಗೋಹತ್ಯೆ ನಿಷೇಧ ಕಾನೂನು ತಂದಿದ್ದೇವೆ ಅಂತ ಬೆನ್ನು ತಟ್ಟಿಕೊಳ್ಳುವುದಲ್ಲ ಎಂದು ಕಿಡಿ ಕಾರಿದರು. ಗೋಹತ್ಯೆ ನಿಷೇಧದಿಂದ ಹಾಲು ಉತ್ಪಾದನೆ ಕುಂಠಿತವಾಗಿದೆ. ನಿತ್ಯ 94 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗ್ತಿತ್ತು. ಈಗ 76 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗ್ತಿದೆ. ರೈತರಿಗೆ ಇದರಿಂದ 6.66 ಲಕ್ಷ ನಿತ್ಯ ನಷ್ಟ ಆಗ್ತಿದೆ. ಇದಕ್ಕೆ ಸರ್ಕಾರದ ಬೇಜವಾಬ್ದಾರಿತನ, ಉಡಾಫೆ ಕಾರಣ. ಇದರಿಂದ ರೈತರು ನರಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂಓದಿ:ಸ್ಥಳೀಯ ಸಂಸ್ಥೆಗಳ ಚುನಾವಣೆ:10 ದಿನಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ಹೊರಡಿಸಲಾಗುವುದು ಎಂದ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.