ETV Bharat / state

ಬೆಂಗಳೂರಲ್ಲಿ ಕೊರೊನಾ ಉಲ್ಬಣ: ಮಾರ್ಷಲ್​ಗಳ ಜೊತೆ 2 ಸಾವಿರ ಹೋಂ ಗಾರ್ಡ್ಸ್​ ನಿಯೋಜನೆ

author img

By

Published : Apr 5, 2021, 3:49 PM IST

ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಬಿಬಿಎಂಪಿಯು ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಜನರ ಮೇಲೆ ನಿಗಾ ಇಡಲು ಈಗಾಗಲೇ ಮಾರ್ಷಲ್​ಗಳಿದ್ದು, ಇವರ ಜೊತೆ ಹೋಂಗಾರ್ಡ್ಸ್​​​​ಗಳನ್ನು ಸಹ ನಿಯೋಜಿಸಲಾಗಿದೆ.

home-guards-appointed-in-bangalore-for-covid-duty
ಬೆಂಗಳೂರಲ್ಲಿ ಕೊರೊನಾ ಉಲ್ಬಣ

ಬೆಂಗಳೂರು: ಮಾಸ್ಕ್ ಹಾಕದೇ, ಗುಂಪುಗುಂಪಾಗಿ ಅಂತರ ಇಲ್ಲದೆ ಓಡಾಡುವವರಿಗೆ ಕಡಿವಾಣ ಹಾಕುಲು ಬಿಬಿಎಂಪಿ ಇನ್ನಷ್ಟು ಕಠಿಣ ನಿಯಮ ಜಾರಿ ಮಾಡಲು ಮುಂದಾಗಿದೆ.

ಕೋವಿಡ್ 2ನೇ ಅಲೆ ವಿಪರೀತವಾಗಿ ಹರಡುತ್ತಿರುವ ಹಿನ್ನೆಲೆ, ಮಾರ್ಷಲ್ಸ್, ಪೊಲೀಸರು ಅಷ್ಟೇ ಅಲ್ಲದೆ ಹೆಚ್ಚುವರಿಯಾಗಿ 2 ಸಾವಿರ ಹೋಂ ಗಾರ್ಡ್ಸ್​​​​ಗಳ ನಿಯೋಜಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಬಗ್ಗೆ ಹೋಂ ಗಾರ್ಡ್ಸ್ ಐಜಿಪಿಯವರಿಗೆ ಪತ್ರವನ್ನೂ ಬರೆಯಲಾಗಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಅವರು, ಮತ್ತೆ ಕೋವಿಡ್ ಉಲ್ಬಣವಾಗ್ತಿದೆ. ಎಲ್ಲರಿಗೂ ಅಂಕುಶ ಹಾಕುವುದು ಅಗತ್ಯವಾಗಿದೆ. ಎಲ್ಲರೂ ಕೋವಿಡ್ ನಿಯಮ ಪರಿಪಾಲನೆ ಮಾಡಬೇಕಾಗುತ್ತದೆ. ಮಾರ್ಷಲ್, ಪೊಲೀಸರಲ್ಲದೆ, 2 ಸಾವಿರ ಹೋಂ ಗಾರ್ಡ್ ನಿಯೋಜಿಸಲು ಸಹ ನಿರ್ಧರಿಸಲಾಗಿದೆ. ಪ್ರತಿ ಸ್ಟೇಷನ್ ವ್ಯಾಪ್ತಿಯಲ್ಲಿ 20 ಜನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಾರ್ಷಲ್​ಗಳ ಜೊತೆ 2 ಸಾವಿರ ಹೋಂಗಾರ್ಡ್ಸ್​ ನಿಯೋಜನೆ

ಲಸಿಕೆ ವಿಚಾರವಾಗಿ ಮಾತನಾಡಿ, ಅಪಾರ್ಟ್​​ಮೆಂಟ್​, ಇಂಡಸ್ಟ್ರೀಗಳ ಯುನಿಟ್ ಒಳಗೆ ಅವರ ಸೌಲಭ್ಯ ನೋಡಿಕೊಂಡು, ಇತಿಮಿತಿಗೆ ಒಳಪಟ್ಟು ಬೃಹತ್ ಕಾರ್ಯಕ್ರಮವಾಗಿ ವ್ಯಾಕ್ಸಿನೇಷನ್‌ ಆಗಬೇಕಿದೆ. ಅಲ್ಲದೆ ಲಸಿಕಾ ಕೇಂದ್ರಗಳೂ ಹೆಚ್ಚಳವಾಗಬೇಕಿದೆ. ಈ ನಿಟ್ಟಿನಲ್ಲಿ ಪಾಲಿಕೆ ಕ್ರಮಕೈಗೊಳ್ಳುತ್ತಿದೆ ಎಂದರು.

ಸದ್ಯ ನಗರದಲ್ಲಿ ಕೋವಿಡ್ ಹೆಚ್ಚಳವಾಗ್ತಿರೋದ್ರಿಂದ ಬೆಡ್​​ಗಳ ಮೀಸಲು ಅಗತ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯ ಶೇ.20ರಷ್ಟು ಹಾಸಿಗೆಗಳನ್ನು ಮೀಸಲಿಡಲು ನಿರ್ಧಾರಿಸಲಾಗಿದೆ. ನಿನ್ನೆಯಷ್ಟೇ ಈ ನಿರ್ಧಾರ ಆಗಿದೆ. ಸಾಸ್ಟ್ ಸಂಸ್ಥೆ ಮೂಲಕ ಹಾಸಿಗೆ ಒದಗಿಸುವ ಕೆಲಸ ಆಗಲಿದೆ ಎಂದರು.

ಕೋವಿಡ್ ಕೇರ್ ಸೆಂಟರ್​ಗಳನ್ನು ಹೆಚ್​ಎಎಲ್, ಹಜ್ ಭವನ್​​ನಲ್ಲಿ ಆರಂಭಿಸಲಾಗಿದೆ. ಹೆಚ್ಚಿನ ಅಗತ್ಯ ಬಿದ್ದರೆ, ಪ್ರತೀ ವಲಯಗಳಲ್ಲಿ, ಹೋಟೆಲ್, ಖಾಲಿ ಇರುವ ಮನೆಗಳಲ್ಲೂ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಬೆಂಗಳೂರು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಬೆಂಗಳೂರು ನಗರದಲ್ಲಿ ಬಿಬಿಎಂಪಿ ವ್ಯಾಪ್ತಿ ಹೊರಗಿನ ಪ್ರದೇಶದಲ್ಲಿ 5 ತಾಲೂಕುಗಳಿಂದ ಎಷ್ಟೆಲ್ಲ ಪ್ರಕರಣ ಬರ್ತಿವೆ ಎಂಬುದನ್ನು ಗಮನಿಸಲಾಗಿದೆ. ಒಂದು ತಿಂಗಳ ಹಿಂದೆ 30ರಷ್ಟು ಬರುತ್ತಿದ್ದ ಪ್ರಕರಣಗಳು, ಈಗ 230 ಪ್ರಕರಣಗಳು ಕಂಡುಬರ್ತಿವೆ. ಆನೇಕಲ್ ತಾಲೂಕಿನಲ್ಲಿ 236 ಪ್ರಕರಣಗಳು ಭಾನುವಾರ ದಾಖಲಾಗಿವೆ. ಆನೇಕಲ್‌ನಲ್ಲಿಯೇ ಶೇ.50ರಷ್ಟು ಪ್ರಕರಣಗಳು ಕಂಡುಬರ್ತಿವೆ. ಇದಕ್ಕಾಗಿ ಹೆಚ್ಚಿನ ಟೆಸ್ಟಿಂಗ್ ಮಾಡಲಾಗ್ತಿದೆ ಎಂದು ತಿಳಿಸಿದರು.

ನಗರ ಜಿಲ್ಲಾ ವ್ಯಾಪ್ತಿಯಲ್ಲಿ 5 ಕಂಟೈನ್​ಮೆಂಟ್ ಝೋನ್ ಇದ್ದು, ಆರ್ಮಿ ಕ್ಯಾಂಪ್, ಇಂಜಿನಿಯರಿಂಗ್ ಕಾಲೇಜ್​ಗಳನ್ನು ನಿಗದಿ ಮಾಡಲಾಗಿದೆ. 36 ಪ್ರಾಥಮಿಕ ಆರೋಗ್ಯ ಕೇಂದ್ರ, 3 ಸಮುದಾಯ ಕೇಂದ್ರಗಳಿವೆ. 60 ಮೊಬೈಲ್ ಟೀಂಗಳಿವೆ ಎಂದು ವಿವರಿಸಿದರು.

ಕೋವಿಡ್ ಸಂಬಂಧಿತ ಪರಿಕರಗಳಿಗೆ ತೊಂದರೆ ಇಲ್ಲ. ಆಶಾ ಕಾರ್ಯರ್ತೆಯರು ಸಾವಿರಕ್ಕೆ ಒಬ್ಬರಂತೆ ಇದ್ದಾರೆ. ಅಂಗನವಾಡಿ ಕಾರ್ಯಕರ್ತೆಯರೂ ಇದ್ದು, ಮನೆ ಮನೆ ಸರ್ವೇ ಮಾಡಲಾಗ್ತಿದೆ.
ಕೋವಿಡ್ ರೋಗ ಲಕ್ಷಣ ಇದ್ದರೆ ಟೆಸ್ಟ್ ಮಾಡಲಾಗ್ತಿದೆ. ಮೆಡಿಕಲ್ ಶಾಪ್​ಗಳಲ್ಲಿ ಜ್ವರ, ಕೆಮ್ಮಿಗೆ ಮಾತ್ರೆ ತೆಗೆದುಕೊಂಡವರ ಮಾಹಿತಿ ಪಡೆದು ಟೆಸ್ಟ್​​ಗೆ ಒಳಪಡಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಮೇ ಅಂತ್ಯದವರೆಗೆ ಕೋವಿಡ್ ಸ್ಫೋಟವಾಗಲಿದೆ: ಡಾ.ಕೆ.ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.