ETV Bharat / state

ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹಿಂದೂ ಸಂಘಟನೆಗಳ ತಯಾರಿ..

author img

By

Published : Aug 21, 2022, 4:59 PM IST

ಸೆಪ್ಟೆಂಬರ್ 10 ರವರೆಗೆ ವಿನಾಯಕ ಮಹೋತ್ಸವ ಆಚರಣೆ ಮಾಡುವುದರ ಕುರಿತು ಗಣೇಶೋತ್ಸವ ಸಮಿತಿ ಫ್ಲೆಕ್ಸ್ ಪೋಸ್ಟರ್ ಬಿಡುಗಡೆ ಮಾಡಿದೆ ಎಂದು ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್‌ರಾಜ್ ತಿಳಿಸಿದ್ದಾರೆ.

ಗಣೇಶೋತ್ಸವ ಆಚರಣೆಗೆ ಸಿದ್ಧತೆ
ಗಣೇಶೋತ್ಸವ ಆಚರಣೆಗೆ ಸಿದ್ಧತೆ

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಈ ವರ್ಷ ಅದ್ಧೂರಿಯಾಗಿ 11 ದಿನ ಗಣೇಶೋತ್ಸವ ಆಚರಣೆ ಮಾಡಲಾಗುವುದು ಎಂದು ಸ್ಥಳೀಯ ನಾಗರಿಕ ಒಕ್ಕೂಟ, ಗಣೇಶ ಉತ್ಸವ ಸಮಿತಿ ಹಾಗೂ ಇತರ ಹಿಂದೂಪರ ಸಂಘಟನೆಗಳು ಸ್ಪಷ್ಟಪಡಿಸಿವೆ. ಮುಖ್ಯವಾಗಿ ಈದ್ಗಾ ಮೈದಾನವನ್ನು ಜಯಚಾಮರಾಜೇಂದ್ರ ಒಡೆಯ‌ರ್ ಆಟದ ಮೈದಾನವೆಂದು ಉಲ್ಲೇಖ ಮಾಡಲಾಗುತ್ತಿದೆ. ಆದರೆ, ನಾಗರೀಕ ಒಕ್ಕೂಟದಲ್ಲಿ ಬಿರುಕು ಕೂಡ ಕಂಡು ಬರುತ್ತಿದೆ ಎಂದು ಹೇಳಲಾಗ್ತಿದೆ.

ಕಳೆದ ಮೂರ್ನಾಲ್ಕು ತಿಂಗಳಿಂದ ಚಾಮರಾಜಪೇಟೆ ಆಟದ ಮೈದಾನದ ಸಂಬಂಧ ಹೋರಾಟ ನಡೆಸಲಾಗಿದೆ. ಈಗ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಅನುಮತಿ ಸಿಗದಿದ್ದರೆ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅನುಮತಿ ಪಡೆದುಕೊಳ್ಳುತ್ತೇವೆ. ಒಟ್ಟಾರೆ, ಈ ವರ್ಷ ಚಾಮರಾಜಪೇಟೆ ನಾಗರಿಕರ ಒಕ್ಕೂಟ, ಬೆಂಗಳೂರು ನಗರ ಗಣೇಶ ಉತ್ಸವ ಸಮಿತಿ, ನಾಗರಿಕ ಶ್ರೀರಾಮಸೇನೆ, ವಿಶ್ವ ಸನಾತನ ಪರಿಷತ್‌ನಿಂದ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುತ್ತೇವೆ ಎಂದು ನಾಗರಿಕರ ಒಕ್ಕೂಟ ವೇದಿಕೆಯ ಪ್ರಧಾನ ಅಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ.

ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್‌ರಾಜ್ ಅವರು ಮಾತನಾಡಿದರು

ಹಲವು ವರ್ಷಗಳಿಂದ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಮನವಿ ಸಲ್ಲಿಸಲಾಗುತ್ತಿತ್ತು. ಆದರೆ, ಬಿಬಿಎಂಪಿ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಒಪ್ಪಿಗೆ ನೀಡುತ್ತಿರಲಿಲ್ಲ. ಈ ವರ್ಷ ಸರ್ಕಾರದ ಮೈದಾನವೆಂದು ಘೋಷಣೆ ಮಾಡಿರುವ ಹಿನ್ನೆಲೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಅನುಮತಿ ಸಿಗದಿದ್ದರೂ ನಾವು ವಿನಾಯಕನ ಉತ್ಸವ ಮಾಡುತ್ತೇವೆ. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರ ಗಣೇಶ ಫೋಟೋಗಳನ್ನು ಪೆಂಡಾಲ್‌ಗಳಲ್ಲಿ ಇಟ್ಟು ಪೂಜಿಸಲಾಗುತ್ತದೆ. ಪಾದರಾಯನಪುರದಿಂದ ಗಣೇಶೋತ್ಸವ ಮೆರವಣಿಗೆಯನ್ನು ಮಾಡಲಾಗುತ್ತದೆ. ಮೆರವಣಿಗೆ ಮಾಡುವ ರಸ್ತೆಯ ಕುರಿತ ಬ್ಲೂಪ್ರಿಂಟ್ ತಯಾರಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್‌ರಾಜ್ ಮಾಹಿತಿ ನೀಡಿದ್ದಾರೆ.

ನಾಗರಿಕರ ಒಕ್ಕೂಟ ವೇದಿಕೆ ಪ್ರಧಾನ ಅಧ್ಯಕ್ಷ ರಾಮೇಗೌಡ ಅವರು ಮಾತನಾಡಿದರು

ಪ್ರತಿನಿತ್ಯ ಪೂಜಾ ಕೈಂಕರ್ಯ: ಸೆಪ್ಟೆಂಬರ್ 10ರವರೆಗೆ ವಿನಾಯಕ ಮಹೋತ್ಸವ ಆಚರಣೆ ಮಾಡುವುದರ ಕುರಿತು ಗಣೇಶೋತ್ಸವ ಸಮಿತಿ ಫ್ಲೆಕ್ಸ್ ಪೋಸ್ಟರ್ ಬಿಡುಗಡೆ ಮಾಡಿದೆ. ಗಣೇಶ ಚತುರ್ಥಿಯ ದಿನ ಬೆಳಗ್ಗೆ 9 ಗಂಟೆಗೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರತಿನಿತ್ಯ ನಿಗದಿತ ಸಂಜೆ ಪೂಜಾ ಕೈಂಕರ್ಯ ಜತೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಾಗರಿಕ ಒಕ್ಕೂಟದಲ್ಲಿ ಬಿರುಕು: ಚಾಮರಾಜಪೇಟೆ ಮೈದಾನವನ್ನು ಮುಸ್ಲಿಂ ಸಮುದಾಯ ಅಥವಾ ವಕ್ಫ್​ ಬೋರ್ಡ್‌ಗೆ ಖಾತಾ ಮಾಡಿಕೊಡಬಾರದು, ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ ಹೆಸರಿಡಬೇಕು. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿ ಎಲ್ಲ ಧಾರ್ಮಿಕ ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟವು ಇಡೀ ಕ್ಷೇತ್ರವನ್ನು ಬಂದ್‌ ಮಾಡಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈಗ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ರುಕ್ಕಾಂಗದ ನಡುವೆ ಬಿರುಕು ಮೂಡಿದೆ.

ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಅವರು ಮಾತನಾಡಿ, ನಾನು ಶಾಸಕ ಜಮೀರ್ ಅಹ್ಮದ್​ ಅವರ ಜೊತೆ ಶಾಮೀಲಾಗಿಲ್ಲ. ಅಂತಹ ಕನಿಷ್ಠಮಟ್ಟದ ರಾಜಕಾರಣವನ್ನು ಮಾಡುವುದಿಲ್ಲ. ಈಗಾಗಲೇ ಮೂರು-ನಾಲ್ಕು ಬಾರಿ ಮಾಧ್ಯಮಗೋಷ್ಟಿಯಲ್ಲಿ ಜಮೀರ್ ಅವರ ವಿರುದ್ಧವಾಗಿಯೇ ಹೇಳಿಕೆ ನೀಡಿದ್ದೇನೆ. ಅಂದರೆ, ಅವರು ನಮ್ಮ ಗಣೇಶಹಬ್ಬಕ್ಕೆ ಸಹಕರಿಸುತ್ತಿಲ್ಲ. ಅವರೇನಾದ್ರೂ ಈ ಸಾಮರಸ್ಯ ಕಾಪಾಡಬಹುದು. ಅವರು ಮನಸ್ಸು ಮಾಡಿದರೆ ಇವತ್ತು ಕೆಲಸವಾಗುತ್ತದೆ ಎಂದಿದ್ದೇನೆ. ನಾವು ಬಹಳ ಹಿಂದಿನಿಂದ ರಾಜಕಾರಣ ಮಾಡುತ್ತ ಬಂದಿದ್ದೇವೆ. ಯಾವುದೇ ಕಾರಣಕ್ಕೂ ಜಮೀರ್ ಅವರ ಜೊತೆ ಶಾಮೀಲಾಗಿಲ್ಲ. ಜಮೀರ್ ಅವರ ಜೊತೆ ಇವರೇ ಯಾಕೆ ಶಾಮೀಲಾಗಿ ನನ್ನ ಮೇಲೆ ಗೂಬೆ ಕೂರಿಸಬಾರದು?. ಇವರೇ ಯಾಕೆ ದುಡ್ಡು ಇಸ್ಕೊಂಡಿರಬಾರದು. ಇವರು ಒಬ್ಬರೇ ಹೇಳಿರಬೇಕು ಅಂದ್ರೆ ಕಾರಣ ಏನು?. ಇದು ನನ್ನ ಅನಿಸಿಕೆ ಎಂದು ತಿಳಿಸಿದರು.

ಓದಿ: ಮೊಟ್ಟೆ ಪ್ರಕರಣವನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬೇಕೆನ್ನುವುದು ಅವರಿಗೆ ಬಿಟ್ಟಿದ್ದು: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.