ETV Bharat / state

ಸಮನ್ಸ್ ಜಾರಿ ಮಾಡದೆ ವಿಚ್ಛೇದನ ಮಂಜೂರು : ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು

author img

By

Published : May 12, 2023, 10:35 PM IST

ಪತ್ನಿಗೆ ಕಾನೂನು ಪ್ರಕಾರ ಸಮನ್ಸ್ ಜಾರಿ ಮಾಡದೇ ಏಕಪಕ್ಷೀಯವಾಗಿ ವಿಚಾರಣೆ ನಡೆಸಿ ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

the-high-court-set-aside-the-order-of-the-family-court
ಸಮನ್ಸ್ ಜಾರಿ ಮಾಡದೆ ವಿಚ್ಛೇದನ ಮಂಜೂರು : ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಪಡಿಸಿದ ಹೈಕೋರ್ಟ್

ಬೆಂಗಳೂರು: ದಂಪತಿ ನಡುವಿವ ಕೌಟುಂಬಿಕ ವ್ಯಾಜ್ಯವೊಂದರಲ್ಲಿ ಪತ್ನಿಗೆ ಕಾನೂನು ಪ್ರಕಾರ ಸಮನ್ಸ್ ಜಾರಿ ಮಾಡದೇ ಏಕಪಕ್ಷೀಯವಾಗಿ ವಿಚಾರಣೆ ನಡೆಸಿ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ತುಮಕೂರಿನ ವಿನೋಬಾನಗರದ ಮಹಿಳೆಯೊಬ್ಬರು 2017ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಅಲ್ಲದೆ, ನಾಗರಿಕ ಪ್ರಕ್ರಿಯೆ ಸಂಹಿತೆಯ (ಸಿಪಿಸಿ) ನಿಯಮ 17ರ ಪ್ರಕಾರ ಪ್ರತಿವಾದಿಯು ಸಮನ್ಸ್ ಸ್ವೀಕೃತಿಗೆ ಸಹಿ ಹಾಕದಿದ್ದರೆ ಅಥವಾ ಸಮನ್ಸ್ ನೀಡುವ ಸಂದರ್ಭದಲ್ಲಿ ಮನೆಯಲ್ಲಿರದಿದ್ದರೆ, ಅಲ್ಲಿಗೆ ತೆರಳಿದ್ದ ಅಧಿಕಾರಿ ಪ್ರತಿವಾದಿಯ ಮನೆಯ ಮುಂಬಾಗಿಲಿನ ಮೇಲೆ ಅಥವಾ ಮನೆಯ ಯಾವುದಾದರೂ ಒಂದು ಎದ್ದು ಕಾಣಬಹುದಾದ ಜಾಗದಲ್ಲಿ ಸಮನ್ಸ್ ಪ್ರತಿಯನ್ನು ಅಂಟಿಸಿ, ಮೂಲ ಪ್ರತಿಯನ್ನು ನ್ಯಾಯಾಲಯಕ್ಕೆ ಹಿಂದಿರುಗಿಸಬೇಕು ಎಂದು ಹೇಳಲಾಗಿದೆ.

ಅಲ್ಲದೆ, ಯಾವ ಕಾರಣಕ್ಕೆ ಆ ರೀತಿ ಮಾಡಲಾಗಿದೆ ಎಂಬ ಕಾರಣದ ಜತೆಗೆ, ಮನೆಯನ್ನು ಗುರುತಿಸಿದ ವ್ಯಕ್ತಿಯ ಹೆಸರು ಹಾಗೂ ವಿಳಾಸ ಮತ್ತು ಯಾರ ಉಪಸ್ಥಿತಿಯಲ್ಲಿ ಸಮನ್ಸ್ ಕಾಪಿಯನ್ನು ಅಂಟಿಸಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು. ಪ್ರಕರಣದಲ್ಲಿ ಈ ಪ್ರಕ್ರಿಯೆ ಪಾಲನೆಯಾಗಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ರಿಜಿಸ್ಟರ್ಡ್ ಪೋಸ್ಟ್ ಮೂಲಕ ಸಮನ್ಸ್ ಜಾರಿ ಮಾಡಿದ್ದು, ಅದರ ಲಕೋಟೆಯ ಮೇಲಿದ್ದ ಸ್ವೀಕರಿಸಿಲ್ಲ ಎಂಬ ಹಿಂಬರಹದ ಆಧಾರದ ಮೇಲೆ ನ್ಯಾಯಾಲಯ ಪ್ರಕರಣವನ್ನು ಏಕಪಕ್ಷೀಯವಾಗಿ ನಿರ್ಧರಿಸಿದೆ.

ಸಮನ್ಸ್ ನೀಡುವ ವಿಚಾರದಲ್ಲಿ ಕೌಟುಂಬಿಕ ನ್ಯಾಯಾಲಯ ಅನುಸರಿಸಿರುವ ಕಾರ್ಯವಿಧಾನ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ದಂಪತಿಗೆ ವಿಚ್ಛೇದನ ನೀಡಿ 2017ರ ಏಪ್ರಿಲ್ 28ರಂದು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ. ಜತೆಗೆ, ಪ್ರಕರಣವನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದ್ದು, ಎರಡೂ ಪಕ್ಷದವರಿಗೂ ಅವಕಾಶ ನೀಡಿ 6 ತಿಂಗಳ ಒಳಗೆ ಪ್ರಕರಣವನ್ನು ಕಾನೂನು ಪ್ರಕಾರ ನಿರ್ಧರಿಸಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?: ತುಮಕೂರಿನ ದಂಪತಿ 2006ರಲ್ಲಿ ಇಸ್ಲಾಂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದರು. ಗಂಡನದು ಅವಿಭಕ್ತ ಕುಟುಂಬವಾಗಿದ್ದು, ಆತನ ಪಾಲಕರು ಹಾಗೂ ಸಹೋದರರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಈ ನಡುವೆ ಸಣ್ಣ ಪುಟ್ಟ ವಿಷಯಗಳಿಗೂ ಕುಟುಂಬ ಸದಸ್ಯರೊಡನೆ ಜಗಳ ನಡೆಯುವುದು ಸಾಮಾನ್ಯವಾಗಿತ್ತು. ಆದರೆ, ಯಾವುದೇ ಕಾರಣ ಪತ್ನಿ ಮನೆ ತೊರೆದು ಹೋಗಿದ್ದರು.

ಅವರನ್ನು ಮತ್ತೆ ಮನೆಗೆ ಕರೆತರಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಪತ್ನಿಗೆ ಬೇರೊಬ್ಬರ ಜತೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದ ಪತಿ, ವಿಚ್ಛೇದನ ಕೋರಿ ತುಮಕೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸಮನ್ಸ್ ನೀಡಿದ್ದರೂ ಪತ್ನಿ ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣ ನೀಡಿ, ನ್ಯಾಯಾಲಯ ಪತ್ನಿಯ ಅನುಪಸ್ಥಿತಿಯಲ್ಲಿ ಏಕಪಕ್ಷೀಯವಾಗಿ ವಿಚ್ಛೇದನ ನೀಡಿ ಆದೇಶಿಸಿತ್ತು. ಇದನ್ನು ಪತ್ನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ:ಹೆಚ್ಚುವರಿ ಪಡೆದಿದ್ದ ಶುಲ್ಕ ಹಿಂದಿರುಗಿಸುವಂತೆ ಮೆಡಿಕಲ್ ಕಾಲೇಜಿಗೆ ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.