ETV Bharat / state

ಬೆಂಗಳೂರು ಮೈಸೂರು ಟೋಲ್ ಗೊಂದಲ, ಆಕ್ಷೇಪಣೆ ಸಲ್ಲಿಸಲು ಎನ್ಎಚ್ಎಐಗೆ ಹೈಕೋರ್ಟ್ ಸೂಚನೆ

author img

By

Published : Mar 15, 2023, 9:38 PM IST

ಮಾಧ್ಯಮಗಳ ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿರುವ ಹೈಕೋರ್ಟ್​, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹ ಮಾಡುತ್ತಿರುವ ಕ್ರಮಕ್ಕೆ ಆಕ್ಷೇಪಣೆ ಸಲ್ಲಿಸಲು ಎನ್​ಎಚ್ಐಗೆ ಸೂಚನೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ, ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ನೇತೃತ್ವ ವಿಭಾಗೀಯ ಪೀಠ.

high court
ಹೈಕೋರ್ಟ್​

ಬೆಂಗಳೂರು:ಕೆಲ ದಿನಗಳ ಹಿಂದೆ ಅಷ್ಟೇ ಲೋಕಾರ್ಪಣೆ ಆಗಿದ್ದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಸಂಚರಿಸುವ ವಾಹನ ಸವಾರರಿಂದ ಟೋಲ್ ಸಂಗ್ರಹ ವಿಚಾರ ಸಂಬಂಧಿಸಿದಂತೆ ಎದುರಾಗಿರುವ ಗೊಂದಲ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ಹೈಕೋರ್ಟ್ ಬುಧವಾರ ಆದೇಶಿಸಿದೆ. ಬೆಂಗಳೂರು -ಕನಕಪುರ ರಸ್ತೆ ವಿಸ್ತರಣೆ ಕುರಿತಂತೆ ಎಸ್ಪಿ ಸಂದೀಪ್ ರಾಜು ಅವರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನೂ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ನೇತೃತ್ವದ ವಿಭಾಗೀಯ ಪೀಠ. ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೈವೇ ಟೋಲ್ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದಿರುವ ಧರಣಿ ಕುರಿತಾಗಿ ಮಾಧ್ಯಮಗಳಲ್ಲಿ ಪ್ರಕಟಿಸಿ ವರದಿಯನ್ನೂ ಪ್ರಸ್ತಾಪಿಸಿದೆ. ಈ ಪ್ರಕರಣ ಸ್ವಯಂ ಪ್ರೇರಿತವಾಗಿ ಪರಿಗಣಿಸಬೇಕಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಪೀಠ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಎನ್ಎಚ್ಎಐಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ. ಅಲ್ಲದೇ, ಶುಲ್ಕ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ಮತ್ತು ಸಂಗ್ರಹ ನಿರ್ಧಾರ) ರಸ್ತೆ 2008ರ ನಿಯಮ 3ರ ಅಡಿ ಅವಕಾಶವಿದೆ.

ಇದಕ್ಕೂ ಮುನ್ನ, ಅಧಿಸೂಚನೆ ಪ್ರಕಟ ಸೇರಿದಂತೆ ಹಲವು ಪೂರ್ವಾಗತ್ಯಗಳನ್ನು ಪೂರೈಸಬೇಕು. ಸವಾರರಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದು, ಈ ವಿಷಯವನ್ನು ಪರಿಗಣಿಸಬೇಕಿದೆ. ಈ ಸಂಬಂಧ ಎನ್ಎಚ್ಎಐ, ಅದರ ಯೋಜನಾ ನಿರ್ದೇಶಕ, ಯೋಜನೆ ಜಾರಿ ಘಟಕ ಮತ್ತು ಎನ್ಎಚ್ಎಐನ ಸಹಾಯಕ ಕಾರ್ಯಕಾರಿ ಎಂಜಿನಿಯರ್​ಗಳು ಮೂರು ವಾರಗಳಲ್ಲಿ ಈ ಸಂಬಂಧ ವಿವರವಾದ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.

ಕೋರ್ಟ್ ಕಮಿಷನರ್ ನೇಮಕ: ಬೆಂಗಳೂರು-ಕನಕಪುರ ರಸ್ತೆ ಅಗಲೀಕರಣ ಕೆಲಸದ ನಿರ್ಮಾಣ, ನಿಗಾ ಮತ್ತು ಮೇಲ್ವಿಚಾರಣೆ ನಡೆಸಲು ಹೈಕೋರ್ಟ್ ವಕೀಲ ಶಿವಪ್ರಸಾದ್ ಶಾಂತನಗೌಡರ್ ಅವರನ್ನು ನ್ಯಾಯಾಲಯದ ಆಯುಕ್ತರನ್ನಾಗಿ (ಕೋರ್ಟ್ ಕಮಿಷನರ್) ನೇಮಕ ಮಾಡಿದೆ. ನಿರ್ಮಾಣ ಒಪ್ಪಂದಕ್ಕೆ ಸಂಬಂಧಿಸಿದ ಕೆಲಸದ ಸೂಕ್ತ ನಿಗಾ ಮತ್ತು ಮೇಲ್ವಿಚಾರಣೆಯನ್ನು ಸ್ವತಂತ್ರ ಎಂಜಿನಿಯರ್ ನಡೆಸಬೇಕು. ನ್ಯಾಯಾಲಯ ನೇಮಿಸಿದ ಆಯುಕ್ತರು ಅಗತ್ಯ ಸಹಾಯ ಪಡೆದುಕೊಳ್ಳಬಹುದು.

ನ್ಯಾಯಾಲಯ ನೇಮಿಸಿದ ಆಯುಕ್ತರಿಗೆ ನೆರವಾಗಲು ಸಹಾಯಕ ಎಂಜಿನಿಯರ್ ಅವರನ್ನು ತಾಂತ್ರಿಕ ವಿಚಾರದಲ್ಲಿ ನೆರವಾಗಲು ನೇಮಿಸುವಂತೆ ಲೋಕೋಪಯೋಗಿ ಇಲಾಖೆಯ ರಾಮನಗರ ವಿಭಾಗದ ಕಾರ್ಯಾಕಾರಿಣಿ ಎಂಜಿನಿಯರ್ ಅವರಿಗೆ ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದ್ದು, ಮೂರು ವಾರಗಳಲ್ಲಿ ವರದಿ ಸಲ್ಲಿಸಲು ಕೋರ್ಟ್ ಕಮಿಷನರ್ ಒಪ್ಪಿದ್ದಾರೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಮಾಧ್ಯಮ ವರದಿ ಉಲ್ಲೇಖ: ಮಾರ್ಚ್ 15ರಂದು ಮಾಧ್ಯಮಗಳಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಾಮನಗರ ಸಮೀಪ ಹೆಚ್ಚುವರಿ ಟೋಲ್ ಸಂಗ್ರಹಕ್ಕೆ ಆಕ್ಷೇಪಿಸಿ ಧರಣಿ ನಡೆಸಿರುವ ಕುರಿತು ಸುದ್ದಿ ಪ್ರಕಟವಾಗಿದೆ. ಏಜೆನ್ಸಿ ಟೋಲ್ ಸಂಗ್ರಹಿಸಿಲು ಆರಂಭಿಸಿದ್ದು, 135-205 ರೂಪಾಯಿಗಳನ್ನು ಕಾರ್ ಮತ್ತು ವ್ಯಾನ್​​ಗಳಿಗೆ, ಲಘು ವಾಣಿಜ್ಯ ವಾಹನಗಳಾದ ಮಿನಿ ಬಸ್ 220-330 ರೂಪಾಯಿ ವಿಧಿಸಲಾಗುತ್ತಿದೆ.

ಟ್ರಕ್, ಬಸ್​ಗಳಿಗೆ 460-690 ರೂಪಾಯಿ, ಮೂರು ಎಕ್ಸೆಲ್ ವಾಣಿಜ್ಯ ವಾಹನಗಳಿಗೆ 500-750 ರೂಪಾಯಿ, ಬೃಹತ್ ನಿರ್ಮಾಣ ಸಂಬಂಧಿತ ವಾಹನಗಳಿಗೆ 720-1,080 ರೂಪಾಯಿ, ಅತಿ ಬೃಹತ್ ವಾಹನಗಳಿಗೆ 880-1,315 ರೂಪಾಯಿ ವಿಧಿಸಲಾಗುತ್ತಿದೆ ಎಂದು ಮಾಧ್ಯಮಗಳ ವರದಿಯಲ್ಲಿ ಉಲ್ಲೇಖಿಸಿತ್ತು. ರಸ್ತೆ ನಿರ್ಮಾಣ ಕೆಲಸ ಮುಗಿಯದಿದ್ದರೂ ಟೋಲ್ ಸಂಗ್ರಹಣೆಯು ಅಸಮರ್ಥನೀಯವಾಗಿದ್ದು, ದೊಡ್ಡ ತಾಂತ್ರಿಕ ಸಮಸ್ಯೆಗಳಿಂದಾಗಿ ವಾಹನಗಳಿಗೆ ತೊಂದರೆಯಾಗಿದೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿದ್ದವು.
ಇದನ್ನೂಓದಿ:5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗೆ ಅವಕಾಶ ನೀಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.