ETV Bharat / state

ಅಕ್ರಮವಾಗಿ ಗನ್ ಸಿದ್ಧಪಡಿಸಿ ಮಾರಾಟ ಆರೋಪ : ಆರೋಪಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

author img

By

Published : May 8, 2023, 8:31 PM IST

ಅಕ್ರಮವಾಗಿ ಬ್ಯಾರೆಲ್​ ಗನ್​ಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಹೈಕೋರ್ಟ್​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

high-court-granted-bail-to-the-accused-who-was-involved-in-illegallly-preparing-guns
ಅಕ್ರಮವಾಗಿ ಗನ್ ಸಿದ್ದಪಡಿಸಿ ಮಾರಾಟ ಮಾಡಿದ ಆರೋಪ : ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ಬೆಂಗಳೂರು : ಅಕ್ರಮವಾಗಿ ಗನ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದ ಹಾಗೂ ಸ್ಫೋಟಕಗಳನ್ನು ಸಂಗ್ರಹಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಸುಮಾರು 1 ವರ್ಷಕ್ಕೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ತುಮಕೂರು ಜಿಲ್ಲೆಯ ಉರ್ಡಿಗೆರೆ ಹೋಬಳಿಯ ದುರ್ಗದಹಳ್ಳಿಯ ಕೃಷ್ಣಪ್ಪ ಎಂಬುವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ ಈ ಅರ್ಜಿಯನ್ನು ಮಾನ್ಯ ಮಾಡಿದೆ.

ಅಲ್ಲದೆ, ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಅರ್ಜಿದಾರನ ವಿರುದ್ಧ ಸಿಂಗಲ್ ಬ್ಯಾರೆಲ್ ಗನ್‌ಗಳನ್ನು ತಯಾರಿಸಿ, ಪರವಾನಗಿ ಹೊಂದಿರದ ವ್ಯಕ್ತಿಗಳಿಗೆ (ಪ್ರಕರಣದ ಇತರ ಆರೋಪಿಗಳು) ಮಾರಾಟ ಮಾಡಿದ ಆರೋಪವಿದೆ. ಆತನಿಂದ ಕೆಲವು ಗನ್‌ಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. 2022ರ ಜ. 12ರಿಂದ ಅಂದರೆ ಕಳೆದ 1 ವರ್ಷ 3 ತಿಂಗಳುಗಳಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ. ವಿಚಾರಣಾ ನ್ಯಾಯಾಲಯದ ವಿಚಾರಣೆಗಾಗಿ ಅರ್ಜಿದಾರನನ್ನು ಬಂಧಿಸಿಟ್ಟುಕೊಳ್ಳುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಕೋರ್ಟ್​ ವಿಧಿಸಿರುವ ಷರತ್ತುಗಳು ಏನು : ಅರ್ಜಿದಾರ ಆರೋಪಿ 2 ಲಕ್ಷ ರೂ. ಮೊತ್ತದ ಬಾಂಡ್ ಹಾಗೂ ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ಒದಗಿಸಬೇಕು. ಪ್ರತ್ಯಕ್ಷ್ಯ ಅಥವಾ ಪರೋಕ್ಷವಾಗಿ ಸಾಕ್ಷಿಗಳ ನಾಶಕ್ಕೆ ಯತ್ನಿಸಬಾರದು. ಯಾವುದೇ ವಿಳಂಬವಿಲ್ಲದೆ ಪ್ರಕರಣದ ವಿಚಾರಣೆ ಎದುರಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ಹೊರಕ್ಕೆ ಹೋಗಬಾರದು ಎಂಬ ಷರತ್ತುಗಳನ್ನು ವಿಧಿಸಿರುವ ಉಚ್ಚ ನ್ಯಾಯಾಲವು, ಆರೋಪಿ ಕೃಷ್ಣಪ್ಪನಿಗೆ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಹಿನ್ನೆಲೆ : ಅರ್ಜಿದಾರ ಹಾಗೂ ಮತ್ತೊಬ್ಬ ವ್ಯಕ್ತಿ ಗನ್‌ಗಳ ತಯಾರಿಕೆ, ಮಾರಾಟ ಹಾಗೂ ಸ್ಫೋಟಕ ವಸ್ತುಗಳ ಸಂಗ್ರಹದಂತಹ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ 2022ರ ಜ. 12ರಂದು ಅರ್ಜಿದಾರನ ಮನೆಯ ಮೇಲೆ ಕ್ಯಾತಸಂದ್ರ ಠಾಣೆಯ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪರವಾನಗಿ ಇಲ್ಲದ ಗನ್‌ಗಳು ಹಾಗೂ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಆರೋಪಿ ತಯಾರಿಸಿದ್ದ ಗನ್‌ಗಳನ್ನು ಪ್ರಕರಣದ 2 ರಿಂದ 9 ನೇ ಆರೋಪಿಗಳಿಗೆ ಮಾರಾಟ ಮಾಡಿದ್ದ ಹಿನ್ನೆಲೆಯಲ್ಲಿ ಅದೇ ದಿನ ಎಲ್ಲ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದರು. ಪ್ರಕರಣದ ಇತರ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದರಾದರೂ, ಮೊದಲ ಆರೋಪಿ ಕೃಷ್ಣಪ್ಪಗೆ ಜಾಮೀನು ದೊರೆತಿರಲಿಲ್ಲ. ಇದರಿಂದ, ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿ, ಕಳೆದ 1 ವರ್ಷ 3 ತಿಂಗಳಿನಿಂದ ಜೈಲಿನಲ್ಲಿದ್ದೇನೆ. ಈಗಾಗಲೇ ತನಿಖೆ ಪೂರ್ಣಗೊಂಡು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದರು.

ಇದನ್ನೂ ಓದಿ : 19 ಜನ ಮಾದಕ‌ ದಂಧೆಕೋರರ ಬಂಧನ : 7 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.