ETV Bharat / state

CD Case​​: ಯುವತಿ ಹೇಳಿಕೆ ರದ್ದು ಕೋರಿ ಪೋಷಕರು ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್

author img

By

Published : Jun 22, 2021, 7:10 PM IST

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿ ಯುವತಿ ದಾಖಲಿಸಿರುವ ಪ್ರಮಾಣಿತ ಹೇಳಿಕೆ ರದ್ದುಪಡಿಸುವಂತೆ ಕೋರಿ ಯುವತಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

court
court

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿ ಯುವತಿ ದಾಖಲಿಸಿರುವ ಪ್ರಮಾಣಿತ ಹೇಳಿಕೆ ರದ್ದುಪಡಿಸುವಂತೆ ಕೋರಿ ಯುವತಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.

ಸಿಆರ್ ಪಿಸಿ ಸೆಕ್ಷನ್ 164ರ ಅಡಿ ತಮ್ಮ ಮಗಳು ದಾಖಲಿಸಿರುವ ಹೇಳಿಕೆ ರದ್ದುಪಡಿಸುವಂತೆ ಕೋರಿ ಯುವತಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಯುವತಿಯ ಪರ ವಕೀಲ ಸಂಕೇತ್ ಏಣಗಿ ವಾದಿಸಿ, ಮ್ಯಾಜಿಸ್ಟ್ರೇಟ್ ಎದುರು ಸಿಆರ್​​ಪಿಸಿ ಸೆಕ್ಷನ್ 164ರ ಅಡಿ ಸಂತ್ರಸ್ತೆ ನೀಡಿರುವ ಹೇಳಿಕೆ ಕಾನೂನು ಬದ್ಧವಾಗಿದೆ. ಯುವತಿಯ ಸ್ವಪ್ರೇರಣೆಯಿಂದ ಹೇಳಿಕೆ ನೀಡಿದ್ದಾರೆ. ಯಾರದೇ ಒತ್ತಾಯ, ಬಲವಂತ ಅಥವಾ ಪ್ರಭಾವಕ್ಕೆ ಮಣಿದು ಹೇಳಿಕೆ ನೀಡಿಲ್ಲ ಎಂದು ವಿವರಿಸಿದರು.

ಎಸ್ಐಟಿ ಪರ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿ, ಮ್ಯಾಜಿಸ್ಟ್ರೆಟ್ ಎದುರು ಪ್ರಮಾಣೀಕೃತ ಹೇಳಿಕೆ ದಾಖಲಿಸುವಾಗ ತನ್ನ ಮೇಲೆ ಯಾರಿಂದಲೂ, ಯಾವುದೇ ರೀತಿಯ ಒತ್ತಡ ಇರಲಿಲ್ಲ ಎಂದು ಯುವತಿಯೇ ಸ್ಪಷ್ಟಪಡಿಸಿದ್ದಾಳೆ.

ಇದಕ್ಕೂ ಮೊದಲು ಪೋಷಕರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆಯೂ, ಸ್ವಇಚ್ಛೆಯಿಂದಲೇ ಪಾಲಕರಿಂದ ದೂರ ಇದ್ದೇನೆ ಎಂದು ತಿಳಿಸಿದ್ದಾಳೆ. ಹೀಗಾಗಿ, ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿರುವ ಹೇಳಿಕೆ ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶವಿಲ್ಲ. ಹೇಳಿಕೆಯ ಸತ್ಯಾಸತ್ಯೆ ನ್ಯಾಯಾಲಯದ ವಿಚಾರಣೆಯಲ್ಲಿ ತಿಳಿಯಬೇಕಿದೆ.

ಆದ್ದರಿಂದ, ಯುವತಿಯ ಪೋಷಕರು ತಮ್ಮ ಮಗಳ ಹೇಳಿಕೆ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಜಾಗೊಳಿಸಬೇಕು ಎಂದು ಪಿ. ಪ್ರಸನ್ನ ಕುಮಾರ್ ಮನವಿ ಮಾಡಿದರು. ವಾದ ಪುರಸ್ಕರಿಸಿದ ಪೀಠ, ಅರ್ಜಿ ವಜಾ ಮಾಡಿ ಆದೇಶಿಸಿತು.

ಯುವತಿ ಪೋಷಕರ ಮನವಿ :

ಸಿಡಿ ಪ್ರಕರಣ ಸಂಬಂಧ ಮಾರ್ಚ್ 30 ರಂದು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ತಮ್ಮ ಮಗಳು ಸಿಆರ್​​ಪಿಸಿ ಸೆಕ್ಷನ್ 164ರ ಅಡಿ ಪ್ರಮಾಣಿತ ಹೇಳಿಕೆ ದಾಖಲಿಸಿದ್ದಾಳೆ. ಸ್ವಇಚ್ಛೆಯಿಂದ ಹೇಳಿಕೆ ನೀಡುವ ಸ್ಥಿತಿಯಲ್ಲಿ ಆಕೆ ಇಲ್ಲ, ಯಾವುದೋ ಒತ್ತಡ ಹಾಗೂ ಪ್ರಭಾವಕ್ಕೆ ಒಳಗಾಗಿ ಈ ಹೇಳಿಕೆ ದಾಖಲಿಸಿದ್ದಾಳೆ. ಆದ್ದರಿಂದ, ಅವಳ ಹೇಳಿಕೆ ಪರಿಗಣಿಸಬಾರದು. ಹಾಗೆಯೇ, ಮಗಳ ಹೇಳಿಕೆ ದಾಖಲು ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಕೋರಿ ಯುವತಿಯ ತಂದೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ರಮೇಶ್ ಜಾರಕಿಹೊಳಿ‌ ಮುಂಬೈ ಪ್ರವಾಸದ ಬಗ್ಗೆ ನನ್ನನೇನೂ ಕೇಳಬೇಡಿ: ಸಚಿವ ಗೋವಿಂದ ಕಾರಜೋಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.