ETV Bharat / state

ಮಿಷನ್​ ವಾತ್ಸಲ್ಯ ಜಾರಿಗೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

author img

By ETV Bharat Karnataka Team

Published : Sep 9, 2023, 10:01 PM IST

ಮಿಷನ್ ವಾತ್ಸಲ್ಯ ಯೋಜನೆ ಜಾರಿಗೆ ಅಗತ್ಯವಿರುವ ಆರ್ಥಿಕ ನೆರವು ಪಡೆದುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

high-court-directs-government-to-submit-proposal-for-implementation-of-mission-vatsalya
ಮಿಷನ್​ ವಾತ್ಸಲ್ಯ ಜಾರಿಗೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರಾಜ್ಯದಲ್ಲಿ ಕೇಂದ್ರದ ಪ್ರಾಯೋಕತ್ವದ ಮಿಷನ್ ವಾತ್ಸಲ್ಯ ಯೋಜನೆ ಪರಿಣಾಮಕಾರಿ ಜಾರಿಗೆ ಅಗತ್ಯವಿರುವ ಆರ್ಥಿಕ ನೆರವು ಪಡೆದುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಸರ್ಕಾರೇತರ ಸಂಸ್ಥೆ ಬಚ್ಪನ್ ಬಚಾವೋ ಆಂದೋಲನ್ ಸಲ್ಲಿಸಿದ್ದ ಅರ್ಜಿ ಆಧರಿಸಿ ಸುಪ್ರೀಂಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ. ಈ ನಿರ್ದೇಶನಗಳ ಜಾರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್​. ದೀಕ್ಷಿತ್​ ಅವರಿದ್ದ ವಿಭಾಗೀಯಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ. ಅಷ್ಟೇ ಅಲ್ಲದೆ, ಮಿಷನ್ ವಾತ್ಸಲ್ಯ ಯೋಜನೆಯನ್ನು ಪರಿಣಾಮಕಾರಿ ಜಾರಿಗೆ ಅಗತ್ಯ ಯೋಜನೆಗಳನ್ನು ಸಲ್ಲಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ಅವಕಾಶವಿದೆ. ಅದರಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆಯೇ? ಇಲ್ಲವಾದರೆ ಏಕೆ ಸಲ್ಲಿಸಿಲ್ಲ? ಮುಂದಿನ ವರ್ಷದ ಯೋಜನೆಯನ್ನು ಸಲ್ಲಿಸಬೇಕು ಮತ್ತು ಅವುಗಳ ಒಂದು ಪ್ರತಿಯನ್ನು ನ್ಯಾಯಾಲಯಕ್ಕೂ ಸಲ್ಲಿಸಬೇಕು ಎಂದು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಕೇಂದ್ರದ ಸೂಚನೆಗೆ ರಾಜ್ಯ ಪ್ರತಿಕ್ರಿಯಿಸದಿದ್ದರೆ, ಮುಂದಿನ ಒಂದು ವಾರದಲ್ಲಿ ವಿವರವಾದ ಯೋಜನೆಯನ್ನು ಸಲ್ಲಿಸಬೇಕು ಎಂದು ಇದೇ ವೇಳೆ ನ್ಯಾಯಪೀಠ ತಿಳಿಸಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ(ಎಸ್​ಡಿಜಿ) ಸಾಧನೆಗಾಗಿ ಮಕ್ಕಳ ಸಮಗ್ರ ಅಭಿವೃದ್ಧಿ ಮತ್ತು ರಕ್ಷಣೆ ಉದ್ದೇಶದಿಂದ ಕೇಂದ್ರ ಸರ್ಕಾರ ಮಿಷನ್ ವಾತ್ಸಲ್ಯ ಯೋಜನೆ ಜಾರಿಗೊಳಿಸಿದೆ. ಅದರಡಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 2022ರ ಜು.5ರಂದು ಆರ್ಥಿಕ ಪ್ರಸ್ತಾವ ಹಾಗೂ ಯೋಜನೆಯನ್ನು ಸಲ್ಲಿಸಲು ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿತ್ತು.

ಅಲ್ಲದೆ, ಯೋಜನೆಯಡಿ ಭಾಗವಾಗಿ ಯಾವುದೇ ಮಕ್ಕಳನ್ನು ಹಿಂದೆ ಬೀಳುವಂತೆ ಬಿಡಬಾರದು (ಲೀವ್ ನೋ ಚೈಲ್ಡ್ ಬಿಹೈಂಡ್)ಎಂಬ ಘೋಷವಾಕ್ಯದಡಿ ಪೋಸ್ಕೋ ಕಾಯಿದೆ 2012 ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2005ರಡಿ ಮಕ್ಕಳ ರಕ್ಷಣೆಗೆ ರಾಜ್ಯಗಳು ಪ್ರಸ್ತಾವಗಳನ್ನು ಸಲ್ಲಿಸಿ, ಕೇಂದ್ರದಿಂದ ಆರ್ಥಿಕ ನೆರವು ಪಡೆದು ಆ ಯೋಜನೆಯನ್ನು ಜಾರಿಗೊಳಿಸಬೇಕಾಗಿದೆ.

ಇದನ್ನೂ ಓದಿ: ಗಮನಕ್ಕೆ ತರದೇ ಪತ್ನಿಯ ಚೆಕ್ ಮೂಲಕ ಸಾಲ ಪಡೆಯುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.