ETV Bharat / state

'ಪಂಚರತ್ನ ಯೋಜನೆ ಜಾರಿಗೆ ಜನರ ಮೇಲೆ ತೆರಿಗೆ ಹಾಕಲ್ಲ, ನಯಾಪೈಸೆ ಸಾಲ ಮಾಡಲ್ಲ'

author img

By

Published : Apr 5, 2023, 9:33 PM IST

ಹೆಚ್​.ಡಿ.ಕುಮಾಸ್ವಾಮಿ ಚಾಮರಾಜಪೇಟೆಯಲ್ಲಿ ಜೆಡಿಎಸ್​ನ ಸ್ಥಳೀಯ ಮುಖಂಡರ ಜತೆಗೂಡಿ ಪಂಚರತ್ನ ರಥಯಾತ್ರೆ ನಡೆಸಿದರು.

hd-kumarswamy-election-campaign-in-chamarajapete
ಪಂಚರತ್ನ ಯೋಜನೆ ಜಾರಿಗೆ ಜನರ ಮೇಲೆ ತೆರಿಗೆ ಹಾಕಲ್ಲ, ನಯಾಪೈಸೆ ಸಾಲ ಮಾಡಲ್ಲ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲು ಜನರ ಮೇಲೆ ನಾನು ಒಂದು ಪೈಸೆ ತೆರಿಗೆ ಹಾಕುವುದಿಲ್ಲ ಹಾಗೂ ಒಂದು ರೂಪಾಯಿ ಸಾಲ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಚಾಮರಾಜಪೇಟೆಯಲ್ಲಿ ಇಂದು ಸಂಜೆ ನಡೆದ ಪಂಚರತ್ನ ರಥಯಾತ್ರೆ ನಡೆಸುವ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಬಡತನ ನಿವಾರಿಸುವ ನಿಟ್ಟಿನಲ್ಲಿ ನಾನು ರೂಪಿಸಿರುವ ಪಂಚರತ್ನ ಯೋಜನೆಗಳು ಸಂಜೀವಿನಿಯಾಗಿ ಕೆಲಸ ಮಾಡುತ್ತವೆ. ಜಾಗತಿಕವಾಗಿ ಹೆಸರು ಮಾಡಿರುವ ಮಹಾನಗರದಲ್ಲಿ ಬಡತನ ಇನ್ನೂ ತಾಂಡವವಾಡುತ್ತಿರುವುದು ಅತ್ಯಂತ ನೋವಿನ ಸಂಗತಿ. ಈ ಬಡತನಕ್ಕೆ ಪರಿಹಾರ ಪಂಚರತ್ನಗಳಲ್ಲಿ ಇದೆ ಎಂದು ಹೇಳಿದರು.

ಒಂದು ಬಾರಿ ನನಗೆ ಅವಕಾಶ ಕೊಡಿ, ನಾನು ಇನ್ನೂ ಇಪ್ಪತ್ತೈದು ವರ್ಷ ಅಧಿಕಾರ ಕೊಡಿ ಎಂದು ಕೇಳುವುದಿಲ್ಲ. ಅಮೃತಕಾಲ ತರುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ, ಈವರೆಗೆ ಅಧಿಕಾರದಲ್ಲಿದ್ದ ಅಲ್ಪ ಸಮಯದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ. ಪಂಚರತ್ನ ಯೋಜನೆಗಳ ಜಾರಿ ನನ್ನ ಜೀವಿತಾವಧಿಯ ಕನಸು. ಈ ಯೋಜನೆಗಳು ಜಾರಿಗೆ ಬಂದರೆ ಎಲ್ಲರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.

ಪಂಚರತ್ನ ಯೋಜನೆಗಳು ಜಾತಿ ಧರ್ಮ ಮೀರಿದ ಉದಾತ್ತ ಕಾರ್ಯಕ್ರಮಗಳು. ನಿತ್ಯ ಬೆಳಗಾದರೆ ನನ್ನ ಮನೆಯ ಹತ್ತಿರ ಬರುವ ಜನರ ನೋವನ್ನು ಕಂಡು ರೂಪಿಸಿದ ಕಾರ್ಯಕ್ರಮ. ಈ ಯೋಜನೆಗಳು ಜಾರಿಯಾದರೆ ಕರ್ನಾಟಕ ಸರ್ಗ ಸದೃಶ ರಾಜ್ಯವಾಗುತ್ತದೆ ಎಂದು ಮಾಧ್ಯಮಗಳೇ ಬರೆದಿವೆ. ದಯಮಾಡಿ ಒಮ್ಮೆ ಅವಕಾಶ ಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಎಲ್​ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ, ಮಾರಣಾಂತಿಕ ಕ್ಯಾನ್ಸರ್, ಬೋನ್ ಮ್ಯಾರೋ, ಹೃದ್ರೋಗ ಸೇರಿದಂತೆ ಸರ್ವ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ, ಐದು ಲಕ್ಷ ರೂಪಾಯಿ ಮೊತ್ತದ ಉಚಿತ ಮನೆ, ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ತುಂಬುವ ರೀತಿಯಲ್ಲಿ ಉದ್ಯೋಗ ಸೇರಿದಂತೆ ಅನೇಕ ಕಾರ್ಯಕ್ರಮಗಳು ಪಂಚರತ್ನ ಯೋಜನೆಗಳಲ್ಲಿ ಇವೆ ಎಂದು ಹೇಳಿದರು.

ಅಡುಗೆ ಅನಿಲ ಸಿಲಿಂಡರ್​​ಗೆ ಶೇ.50ರಷ್ಟು ಸಬ್ಸಿಡಿ: ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದು ಅಡುಗೆ ಅನಿಲ ಸಿಲಿಂಡರ್ ಉಚಿತ ಎಂದು ಹೇಳಿತು. ಆದರೆ, ಈಗ 1,150 ರೂಪಾಯಿಗೆ ಸಿಲಿಂಡರ್ ಮಾರುತ್ತಿದೆ. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದು ಸಿಲಿಂಡರ್​ಗೆ ಶೇ.50ರಷ್ಟು ಸಬ್ಸಿಡಿ ಕೊಡುತ್ತೇವೆ. ಅಲ್ಲದೆ, 60 ವರ್ಷ ಮೀರಿದ ಹಿರಿಯರಿಗೆ ಮಾಸಿಕ 5000 ರೂ., ವಿಧವೆಯರು ವಿಕಲಚೇತನರಿಗೆ ಮಾಸಿಕ 2500 ರೂ. ಕೊಡಲಾಗುವುದು. ಆಟೋ ಚಾಲಕರಿಗೆ ಮಾಸಿಕ 2000 ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಹೆಚ್​ಡಿಕೆ ಘೋಷಣೆ ಮಾಡಿದರು.

ಸಂಜೆ ಚಾಮರಾಜಪೇಟೆಯಲ್ಲಿ ರಥಯಾತ್ರೆ ನಡೆಸಿದ ಕುಮಾರಸ್ವಾಮಿ, ಕಾಟನ್​ಪೇಟೆಯಲ್ಲಿರುವ ಸಿಸಿಬಿ ಕಚೇರಿ ರಸ್ತೆಯಿಂದ ರಥಯಾತ್ರೆ ಆರಂಭ ಮಾಡಿದರು. ಕ್ಷೇತ್ರದ ಮುಖಂಡರಾದ ಇಮ್ರಾನ್ ಪಾಷಾ ಮತ್ತು ಗೋವಿಂದರಾಜು ಜತೆಗೂಡಿ ಮತಯಾಚನೆ ಮಾಡಿದರು. ಇದಕ್ಕೂ ಮುನ್ನ ಗಾಂಧಿನಗರ ಕ್ಷೇತ್ರದಲ್ಲಿ ಹಲವಾರು ಪ್ರದೇಶಗಳಲ್ಲಿ ಯಾತ್ರೆ ನಡೆಸಿದ ಮಾಜಿ ಮುಖ್ಯಮಂತ್ರಿಗಳು, ಮಾಗಡಿ ರಸ್ತೆ, ಓಕಳಿಪುರ, ಶ್ರೀರಾಮಪುರ ಮುಂತಾದ ಕಡೆ ಸಂಚರಿಸಿ ಮತಯಾಚನೆ ನಡೆಸಿದರು. ಗಾಂಧಿನಗರ ಕ್ಷೇತ್ರದ ಅಭ್ಯರ್ಥಿ ನಾರಾಯಣಸ್ವಾಮಿ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಇದನ್ನೂ ಓದಿ: ಕೇಂದ್ರ ಬಿಜೆಪಿ ಸರ್ಕಾರವು 'ಶಿಂಧೆ ಸೂತ್ರದ ಗೊಂಬೆ'ಯಾಗಿ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ? : ಹೆಚ್​ ಡಿಕೆ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.