ದೇಶದಲ್ಲಿ ಆಗುವ ಬೆಳವಣಿಗೆ ಕಾದು ನೋಡಿ.. ದೆಹಲಿಯಲ್ಲಿ ನಿತೀಶ್ ಕುಮಾರ್ ಭೇಟಿ ಬಳಿಕ ಹೆಚ್​ಡಿಕೆ ಪ್ರತಿಕ್ರಿಯೆ

author img

By

Published : Sep 5, 2022, 10:44 PM IST

nitish kumar meet hdk

ನಿತೀಶ್ ಕುಮಾರ್ ಮತ್ತು ಕುಮಾರಸ್ವಾಮಿ ಭೇಟಿ. ಮುಂದಿನ ದಿನಗಳಲ್ಲಿ ದೇಶದ ಹಿತದೃಷ್ಟಿಯಿಂದ ಏನೇನು ಬೆಳವಣಿಗೆ ಆಗುತ್ತವೆ ಕಾದುನೋಡಿ ಎಂದು ಮಾರ್ಮಿಕವಾಗಿ ಕುಮಾರಸ್ವಾಮಿ ಉತ್ತರಿಸಿದರು.

ಬೆಂಗಳೂರು/ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನವದೆಹಲಿಯಲ್ಲಿ ಇಂದು ಸಂಜೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

nitish kumar meet hdk
ನಿತೀಶ್​ ಕುಮಾರ್ ಭೇಟಿ ಮಾಡಿದ ಹೆಚ್​ಡಿ ಕುಮಾರಸ್ವಾಮಿ

ಜನತಾ ಪರಿವಾರ ಒಗ್ಗೂಡುವ ಬಗ್ಗೆ ಮಾತುಕತೆ ನಡೆಯಿತು. ಕೆಲ ದಿನಗಳ ಹಿಂದೆ ಬಿಹಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ನಂತರ ಮತ್ತೆ ಈ ಚರ್ಚೆಗೆ ಚಾಲನೆ ಸಿಕ್ಕಿದೆ. ಜಯಪ್ರಕಾಶ ನಾರಾಯಣ್ ಅವರಿಂದ ಪ್ರಾರಂಭವಾದ ಜನತಾ ಪರಿವಾರ ಮತ್ತೆ ಒಂದುಗೂಡಬೇಕಿದೆ. ಈಗ ದೇಶದಲ್ಲಿ ಬಲವಾದ ವಿಪಕ್ಷದ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚಿಗೆ ದೇಶದ ಉದ್ದಗಲಕ್ಕೂ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಅದರಲ್ಲೂ ಪ್ರಮುಖವಾಗಿ ಬಿಹಾರದಲ್ಲಿ ಆದಂತಹ ರಾಜಕೀಯದ ಒಂದು ಹೊಸ ಬೆಳವಣಿಗೆ ಎಲ್ಲರ ಗಮನ ಸೆಳೆದಿದೆ. ಜನತಾ ಪರಿವಾರ ಮತ್ತೆ ಒಂದಾಗಬೇಕು ಎಂಬ ಚರ್ಚೆಗಳು ನಡೆದಿವೆ. ನಿತೀಶ್‌ ಕುಮಾರ್‌ ಅವರು ಕೆಲ ಮಹತ್ವದ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಪ್ರಾಥಮಿಕ ಹಂತದ ಚರ್ಚೆಗಳಾಗಿವೆ ಎಂದರು.

ರಾಹುಲ್ ಭೇಟಿಯಾದ ನಿತೀಶ್ ಕುಮಾರ್: ತಮ್ಮ ಭೇಟಿಗೂ ಮೊದಲು ನಿತೀಶ್ ಕುಮಾರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ, ಮುಂದಿನ ದಿನಗಳಲ್ಲಿ ದೇಶದ ಹಿತದೃಷ್ಟಿಯಿಂದ ಏನೇನು ಬೆಳವಣಿಗೆ ಆಗಬೇಕು ಆ ಬೆಳವಣಿಗೆಗಳು ಯಾವ ರೀತಿ ಆಗುತ್ತವೆ ಕಾದುನೋಡಿ ಎಂದು ಅವರು ಮಾರ್ಮಿಕವಾಗಿ ಉತ್ತರಿಸಿದರು.

2018ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿದಾಗ ಸುಮಾರು 23 ರಾಜ್ಯಗಳ ಪ್ರಮುಖ ನಾಯಕರು ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆ ಪ್ರಮಾಣವಚನ ಸಮಾರಂಭದಲ್ಲಿ ಸೇರಿದ್ದ ಅವತ್ತಿನ ಸನ್ನಿವೇಶ, ಒಂದು ಪರ್ಯಾಯ ಶಕ್ತಿಯಾಗಿ ಒಟ್ಟುಗೂಡಿಸಬೇಕೆಂದು ಆಸೆ ಇತ್ತು. ಆದರೆ, ಅದಕ್ಕೆ ಹಿನ್ನಡೆ ಆಯಿತು. ಈಗ ಬಿಹಾರದಲ್ಲಿ ಆಗಿರುವ ಬೆಳವಣಿಗೆಯಿಂದ ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡೊಣ ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯದ ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ರಾಜ್ಯದ ಜೆಡಿಯು ಅಧ್ಯಕ್ಷ ಮಹಿಮಾ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.

(ಇದನ್ನೂ ಓದಿ: ಬೈಠಿಯೆ.. ಚಲೀಯೆ.. ಪ್ರಧಾನಿ ಅಭ್ಯರ್ಥಿ ಕುರಿತು ಕೆಸಿಆರ್ - ನಿತೀಶ್ ವಿಡಿಯೋ ವೈರಲ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.