ETV Bharat / state

ಜೈನ ಮುನಿ ಹತ್ಯೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಬೇಕು : ಕೆ ಎಸ್ ಈಶ್ವರಪ್ಪ ಆಗ್ರಹ

author img

By

Published : Jul 12, 2023, 4:04 PM IST

ಶಿವಮೊಗ್ಗದಲ್ಲಿ ಜೈನ ಸಮುದಾಯದ ಮುಖಂಡರು ನಡೆಸಿದ ಪ್ರತಿಭಟನೆಯಲ್ಲಿ ಕೆ ಎಸ್ ಈಶ್ವರಪ್ಪ ಭಾಗವಹಿಸಿ ಮಾತನಾಡಿದರು.

ಶಿವಮೊಗ್ಗದಲ್ಲಿ ಜೈನ ಸಮುದಾಯ ಪ್ರತಿಭಟನೆ
ಶಿವಮೊಗ್ಗದಲ್ಲಿ ಜೈನ ಸಮುದಾಯ ಪ್ರತಿಭಟನೆ

ಸರ್ಕಾರವು ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೆ ಎಸ್ ಈಶ್ವರಪ್ಪ ಆಗ್ರಹಿಸಿದರು.

ಶಿವಮೊಗ್ಗ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಕೂಡಲೇ ರಾಜ್ಯ ಸರ್ಕಾರ ಸಿಬಿಐ (ಕೇಂದ್ರೀಯ ತನಿಖಾ ದಳ)ಗೆ ವಹಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆಗ್ರಹಿಸಿದರು. ನಗರದಲ್ಲಿಂದು ಜೈನ ಸಮುದಾಯದ ಮುಖಂಡರೊಂದಿಗೆ ವಿಶ್ವ ಹಿಂದೂ ಪರಿಷತ್​ ಬಜರಂಗದಳ ಸಂಘಟನೆ ಸೇರಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಜೈನಮುನಿ ಕಗ್ಗೊಲೆ ಆಗಿರುವುದು ನಮ್ಮ ರಾಜ್ಯಕ್ಕೆ ಕಳಂಕ ತಂದಿದೆ. ವೈಯಕ್ತಿಕವಾಗಿ ಏನು ಕೂಡ ಸುಖ, ಶಾಂತಿ ಅಪೇಕ್ಷೆ ಪಡದೆ ಇಡೀ ಸಮಾಜವೇ ಸುಖ ಶಾಂತಿಯಿಂದ ಇರಬೇಕು ಎನ್ನುವ ಒಬ್ಬ ಮುನಿಯನ್ನು ವಿದ್ಯುತ್ ಶಾಕ್ ಕೊಟ್ಟು ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಹಾಕಿದ್ದಾರೆ. ಈ ಪ್ರಯತ್ನ ಮಾಡಿರಬೇಕಾದರೆ ಯಾರೋ ಒಬ್ಬಿಬ್ಬರ ದುಷ್ಕೃತ್ಯ ಅಲ್ಲ. ಇದರ ಹಿಂದೆ ದೊಡ್ಡ ಷಡ್ಯಂತರ ಇದೆ ಎನ್ನುವುದು ಇಡೀ ರಾಜ್ಯದ ಹಾಗು ದೇಶದ ಜನರ ಅನುಮಾನವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ ಡಾ. ಜಿ ಪರಮೇಶ್ವರ್​ ಈ ಪ್ರಕರಣವನ್ನು ಸಿಬಿಐಗೆ ಕೊಡಲ್ಲ ಎಂದು ಹೇಳುತ್ತಿದ್ದಾರೆ. ನಮಗೆ ರಾಜ್ಯ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇದೆ. ಆದರೆ ಕೆಲವೊಂದು ಪ್ರಕರಣದಲ್ಲಿ ಸಿಬಿಐಗೆ ಕೊಟ್ಟ ನಂತರ ನ್ಯಾಯ ಸಿಕ್ಕಿದೆ. ಉದಾಹರಣೆಗೆ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಯಬೇಕಾದರೆ ಎನ್​ಐಎ (ರಾಷ್ಟ್ರೀಯ ತನಿಖಾ ತಂಡ)ಗೆ ಕೊಟ್ಟಿದ್ದೆವು. ಬಳಿಕ ಎನ್​ಐಎ ನಡೆಸಿದ ವಿಚಾರಣೆ ವೇಳೆ ಇದರ ಹಿಂದೆ ವಿದೇಶದ ಉಗ್ರಗಾಮಿ ಸಂಘಟನೆಗಳು ಇವೆ ಎಂಬುದು ಬೆಳಕಿಗೆ ಬಂತು.

ಇನ್ನು ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯ ಹಿಂದೂ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲೂ ಸಹ ಅನೇಕ ವಿಷಯಗಳು ಬಹಿರಂಗಗೊಂಡವು. ಹಾಗಾಗಿ ನಮ್ಮ ಪೊಲೀಸ್ ಇಲಾಖೆ ಬಗ್ಗೆ ನಮಗೆ ಗೌರವ ಇದ್ದು, ಅವರು ತನಿಖೆ ನಡೆಸಲಿ. ಆದರೆ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ನೀಡಲೇಬೇಕು. ಸಿಬಿಐ ತನಿಖೆಗೆ ಕೊಡಲಿಲ್ಲವೆಂದರೆ ರಾಜ್ಯ ಹಾಗು ದೇಶದಲ್ಲಿ ಅಹಿಂಸಾವಾದಿಗಳು ಆಕ್ರೋಶದಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂಬ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ಕೊಡುತ್ತಿದ್ದೇವೆ ಎಂದು ಈಶ್ವರಪ್ಪ ತಿಳಿಸಿದರು.

ದಿಗಂಬರ ಜೈನ ಸಂಘ ಬೃಹತ್ ಪ್ರತಿಭಟನೆ : ಮಂಗಳವಾರ ಜೈನಮುನಿ ಹತ್ಯೆಯನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ದಿಗಂಬರ ಜೈನ ಸಂಘ ಬೃಹತ್ ಪ್ರತಿಭಟನೆ ನಡೆಸಿತ್ತು. ಜಿಲ್ಲಾಧಿಕಾರಿ‌ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ಸಂಘವು, ಆಶ್ರಮದಿಂದ ಮಹಾರಾಜರನ್ನು ಅಪಹರಿಸಿ ಅಮಾನುಷವಾಗಿ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದ್ದರು. ಈ ಕೊಲೆ ಜೈನ ಸಮಾಜಕ್ಕೆ ಅಘಾತವನ್ನುಂಟು ಮಾಡಿದೆ. ಮಹಾರಾಜರ ಹತ್ಯೆಯನ್ನು ಜೈನ ಸಮಾಜವು ತೀವ್ರವಾಗಿ ಖಂಡಿಸುತ್ತಿದೆ. ಜೈನ ಸಮುದಾಯದವರು ಅಹಿಂಸಾ ಧರ್ಮದ ಪ್ರತಿಪಾದಕರು. ಇಂತಹ ಜೈನ ಮುನಿಗಳ ಹತ್ಯೆ ಮಾಡಿರುವುದು ಖಂಡನೀಯವಾಗಿದ್ದು, ಸಮಾಜಕ್ಕೆ ಸರಿ ಮಾರ್ಗವನ್ನು ತೋರಿಸುವ ಜೈನ ಮುನಿಗಳ ಹತ್ಯೆ ಹೇಯ ಕೃತ್ಯ ಎಂದು ಪ್ರತಿಭಟಿಸಿದ್ದರು.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಜೈನ‌ಮುನಿ ಹತ್ಯೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.