ETV Bharat / state

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ಸರ್ಕಾರದ ಆದೇಶ

author img

By

Published : Jul 17, 2023, 9:30 PM IST

Updated : Jul 17, 2023, 9:40 PM IST

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮೊಬೈಲ್ ಬಳಕೆ ನಿಷೇಧ
ಮೊಬೈಲ್ ಬಳಕೆ ನಿಷೇಧ

ಬೆಂಗಳೂರು : ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇದಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದೇವಾಲಯಗಳ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿರುವುದರಿಂದ ಭಕ್ತರು ದೇವಾಲಯಕ್ಕೆ ಆಗಮಿಸಿದಾಗ ಮೊಬೈಲ್ ಫೋನ್ ಬಳಕೆಯ ಶಬ್ದಗಳಿಂದ ದೇವಾಲಯದ ಸಿಬ್ಬಂದಿಗೂ ಹಾಗೂ ದೇವರ ದರ್ಶನಕ್ಕೆ ಬರುವ ಭಕ್ತರಿಗೂ ಏಕ ಮನಸ್ಸಿನಿಂದ ಧ್ಯಾನ ಪೂಜಾದಿಗಳನ್ನು ನಡೆಸಲು ತೊಂದರೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ದೇವರ ದರ್ಶನದ ಸಮಯದಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ಡ್​​​ ಆಫ್ ಮಾಡಿ, ದೇವರ ದರ್ಶನ ಮಾಡುವಂತೆ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ದೇವಾಲಯಗಳ ಸೂಚನಾ ಫಲಕಗಳಲ್ಲಿ ಅಗತ್ಯ ಸೂಚನೆಗಳನ್ನು ಪ್ರಕಟಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ಸರ್ಕಾರ ಆದೇಶ
ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ಸರ್ಕಾರ ಆದೇಶ

ಅರ್ಚಕರ ಒಕ್ಕೂಟದಿಂದ ಸಚಿವೆಗೆ ಮನವಿ ಪತ್ರ: ಇನ್ನೊಂದೆಡೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಕೋರಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ - ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಗೆ (ಡಿಸೆಂಬರ್ 17-2022) ಮನವಿ ಪತ್ರವನ್ನು ಸಲ್ಲಿಸಿತ್ತು.

ವಿಕಾಸಸೌಧದಲ್ಲಿ ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ. ಎಸ್. ಎನ್ ದೀಕ್ಷಿತ್, ಸಚಿವೆಗೆ ಮನವಿ ಪತ್ರ ಸಲ್ಲಿಸಿದ್ದರು. ಮನವಿ ಪತ್ರದಲ್ಲಿ ದೇವಾಲಯಗಳಲ್ಲಿ ಮೊಬೈಲ್ ಬಳಕೆ ತುಂಬಾ ಅಪಾಯಕಾರಿಯಾಗಿರುತ್ತದೆ. ದೇವಸ್ಥಾನಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಆಚರಣೆಯ ಮಧ್ಯದಲ್ಲಿ ಅಶ್ಲೀಲವಾದ ರಿಂಗ್ ಟೋನ್‌ಗಳ ಕಿರಿಕಿರಿ, ಭಕ್ತರು ಧ್ಯಾನಾಸ್ತಕರಾಗಿ ಧ್ಯಾನ ಮಾಡುವಾಗ ಕೆಲವು ಹೆಣ್ಣು ಮಕ್ಕಳ ಫೋಟೋ ತೆಗೆಯುವುದು, ಜೋರಾಗಿ ಮಾತನಾಡುವುದು, ದೇವರ ಫೋಟೋ ತೆಗೆಯುವುದು, ಅರ್ಚನೆ ಮಾಡುತ್ತಿರುವಾಗ ಮಂತ್ರಗಳ ಉಚ್ಛಾರಣೆ ಮಾಡುವಾಗ ಮೊಬೈಲ್‌ನಲ್ಲಿ ಹಾಡುಗಳನ್ನು ಹಾಕುವುದು, ದೇವರ ಮೇಲಿರುವ ಆಭರಣಗಳ ಫೋಟೋ, ಇತ್ತೀಚೆಗೆ ಸೆಲ್ಫಿ ಫೋಟೋ, ದೇವರ ಗರ್ಭಗುಡಿಗೆ ಬೆನ್ನು ಹಾಕಿ ಫೋಟೋ ತೆಗೆಯುವುದು, ದೇವಾಲಯಗಳ ಆವರಣದಲ್ಲಿ ಇಟ್ಟಿರುವ ಹುಂಡಿಗಳ ಫೋಟೋ ತೆಗೆಯುವುದು ಹೆಚ್ಚಾಗಿದೆ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿತ್ತು.

ದೇವಸ್ಥಾನಗಳಲ್ಲಿ ಹೋಮ, ಹವನ, ಪೂಜೆ, ಜಪ, ತಪ ಇತ್ಯಾದಿಗಳಲ್ಲಿ ನಿರತರಾಗಿರುವಾಗ ಮಂತ್ರ ಪುಷ್ಪ ಅಭಿಷೇಕಾಧಿ ಧಾರ್ಮಿಕ ಕಾರ್ಯಗಳಲ್ಲಿ ಮೊಬೈಲ್‌ಗಳನ್ನು ಬಳಕೆ ಮಾಡಿದರೆ ಪೂಜೆಯ ಏಕಾಗ್ರತೆ ತಪ್ಪುತ್ತದೆ. ಇದರಿಂದ ಭಕ್ತರ ಏಕಾಗ್ರತೆಗೆ ಧಕ್ಕೆ ಉಂಟಾಗುತ್ತದೆ. ಭಕ್ತಿಯಿಂದ ಪೂಜಿಸಲು ಬರುವ ಭಕ್ತರಿಗೆ ದೇವಸ್ಥಾನ ವ್ಯವಸ್ಥೆಯ ಬಗ್ಗೆ ತಪ್ಪು ಭಾವನೆಗಳು ಹಾಗೂ ತಪ್ಪು ಕಲ್ಪನೆಗಳು ಮೂಡುವ ಸಂಭವ ಇದೆ ಎಂದು ಆತಂಕ ವ್ಯಕ್ತಪಡಿಸಿತ್ತು.

ನಿಷೇಧವನ್ನು ಜಾರಿಗೆ ತರುವುದು ತುಂಬಾ ಅವಶ್ಯಕ: ಈ ನಿಟ್ಟಿನಲ್ಲಿ ದೇವಸ್ಥಾನದ ಧಾರ್ಮಿಕ ಕಾರ್ಯಗಳು ವ್ಯವಸ್ಥಿತವಾಗಿ ಯಾವುದೇ ಅಡ್ಡಿ ಅಡಚಣೆಗಳು ಇಲ್ಲದೆ ನಡೆಯಲು ಮೊಬೈಲ್ ಬಳಕೆಯ ನಿಷೇಧವನ್ನು ಜಾರಿಗೆ ತರುವುದು ತುಂಬಾ ಅವಶ್ಯಕವಾಗಿರುತ್ತದೆ. ಆದ್ದರಿಂದ ದೇವಸ್ಥಾನಕ್ಕೆ ಬರುವ ಮುಂಚೆ, ಪ್ರವೇಶಿಸುವ ಮುಂಚೆ ಮೊಬೈಲ್‌ನ್ನು ಸೀಮಿತ ಜಾಗದಲ್ಲಿ ಇಟ್ಟು ಒಳಗೆ ಬರುವಂತೆ ಆದೇಶಿಸಬೇಕಾಗಿ ಕೋರುತ್ತೇವೆ. ಇದನ್ನು ಆದಷ್ಟು ಶೀಘ್ರವಾಗಿ ಜಾರಿಗೊಳಿಸಬೇಕಾಗಿ ಒಕ್ಕೂಟದ ಪರವಾಗಿ ಕೋರುತ್ತೇವೆ ಎಂದು ಆಗ ಸಚಿವರಾಗಿದ್ದ ಶಶಿಕಲಾ ಜೊಲ್ಲೆಗೆ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು.

ಇದನ್ನೂ ಓದಿ: ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಅರ್ಚಕರ ಒಕ್ಕೂಟದಿಂದ ಸಚಿವೆಗೆ ಮನವಿ ಪತ್ರ

Last Updated : Jul 17, 2023, 9:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.