ETV Bharat / state

ಕರ್ನಾಟಕದ ಅಜಿತ್ ಪವಾರ್ ಕಾಯುತ್ತಿದ್ದಾನೆ, 3 ತಿಂಗಳಲ್ಲೇ ಸಿದ್ದು ಸರ್ಕಾರ ಪತನ: ಈಶ್ವರಪ್ಪ

author img

By

Published : Jul 4, 2023, 2:31 PM IST

ಕರ್ನಾಟಕದಲ್ಲಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​ ಸರ್ಕಾರ ಸಹ ಮಹಾರಾಷ್ಟ್ರದ ರೀತಿ ಪತನ ಆಗಲಿದೆ ಎಂದು ಕೆ.ಎಸ್.​ ಈಶ್ವರಪ್ಪ ಫ್ರೀಡಂ ಪಾರ್ಕ್​​ನಲ್ಲಿ ಹೇಳಿದರು.

K S Eshwarappa
ಈಶ್ವರಪ್ಪ

ಬೆಂಗಳೂರು: ಮಹಾರಾಷ್ಟ್ರ ರಾಜಕಾರಣದಲ್ಲಿ ಆದಂತಹ ಬೆಳವಣಿಗೆ ಕರ್ನಾಟಕದಲ್ಲಿಯೂ ಆಗುವ ದಿನಗಳು ದೂರವಿಲ್ಲ. ಇಲ್ಲಿಯೂ ಕರ್ನಾಟಕದ ಅಜಿತ್ ಪವಾರ್ ಕಾಯುತ್ತಿದ್ದು, ಮೂರು ತಿಂಗಳಿನಲ್ಲೇ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಭವಿಷ್ಯ ನುಡಿದರು.

ಫ್ರೀಡಂ ಪಾರ್ಕ್‌ನಲ್ಲಿಂದು ನಡೆಯುತ್ತಿರುವ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸದ್ಯದಲ್ಲೇ ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ರಾಜಕೀಯ ಬೆಳವಣಿಗೆ ಆಗಲಿದೆ. ಕರ್ನಾಟಕ ರಾಜ್ಯದ ಅಜಿತ್ ಪವಾರ್ ಕಾಯಿತ್ತಿದ್ದಾನೆ, ಮೂರು ತಿಂಗಳಿನಲ್ಲೇ ಸರ್ಕಾರ ಪತನವಾಗಲಿದೆ ಎಂದು ಯಾವುದೇ ಹೆಸರೇಳದೆ ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅರ್ಥ ಬರುವಂತೆ ಪ್ರಸ್ತಾಪ ಮಾಡಿದರು.

ನಿರುದ್ಯೋಗಿ ಯುವಕರಿಗೆ ಮೂರು ಸಾವಿರ ರೂ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯ, ಡಿಕೆಶಿ ಈಗ ಷರತ್ತು ಹಾಕಿದ್ದಾರೆ ಇದು ಸರಿಯಲ್ಲ, ಕೊಟ್ಟ ಮಾತಿನಂತೆ ಹಣ ಕೊಡದೇ ಇದ್ದರೆ ರಾಜ್ಯದ ಯುವಕರನ್ನು ಕಟ್ಟಿಕೊಂಡು ಬಿಜೆಪಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ. ವಿದ್ಯುತ್ ದರ ಹೆಚ್ಚಳದಿಂದ ಜನ ರೊಚ್ಚಿಗೆದ್ದಿದ್ದಾರೆ. ವಿದ್ಯುತ್ ದರ ಹೆಚ್ಚಳ ಬಿಜೆಪಿ ಸರ್ಕಾರ ಎಂದು ಆರೋಪಿಸಿದಿರಿ, ಬಿಜೆಪಿ ಮೇಲೆ ಆಪಾದನೆ ಮಾಡಿದ್ದೀರಲ್ಲ ಇದು ಯಾವ ನ್ಯಾಯ?. ಭಾಗ್ಯಜ್ಯೋತಿ ನೋಂದಣಿಗೆ ಸರ್ವರ್ ಡೌನ್​ ಆಗಿದ್ದಕ್ಕೆ ಸರ್ವರ್ ಹ್ಯಾಕ್ ಆಯಿತು ಎಂದು ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಕೇಂದ್ರ ಹ್ಯಾಕ್ ಮಾಡಿದೆ ಎಂದರೂ ನಂತರ ರಾಜಕೀಯ ಹೇಳಿಕೆ ಎಂದು ಜಾರಕಿಹೊಳಿ ಒಪ್ಪಿಕೊಂಡರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಮಗೆ ನಾಯಕತ್ವದ ಕೊರತೆ ಇಲ್ಲ, ಮೋದಿ ವಿಶ್ವನಾಯಕ. ಅವರ ನಾಯಕತ್ವದಲ್ಲಿ ನಾವು ಸೆಡ್ಡುಹೊಡೆದು ನಿಲ್ಲುತ್ತೇವೆ, ಯಾರು ಬರುತ್ತಾರೋ ಬರಲಿ, 25ಕ್ಕಿಂತಲೂ ಹೆಚ್ಚಿನ ಸ್ಥಾನ ಗೆಲ್ಲಲಿದ್ದೇವೆ. ನಾಯಕತ್ವ, ಸಂಘಟನೆ ಸಿದ್ಧವಿದೆ, ಮತದಾರರು ಬಿಜೆಪಿ ಪರ ಇದ್ದಾರೆ. ಸಂಖ್ಯೆ ಕಡಿಮೆ ಆಗಿರಬಹುದು ಆದರೆ ಶೇಕಡಾವಾರು ಕಡಿಮೆಯಾಗಿಲ್ಲ. ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದಿದ್ದೇವೆ ಇದರ ಅರ್ಥ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಮತದಾರರು ಇದ್ದಾರೆ ಎನ್ನುವುದಾಗಿದೆ ಎಂದರು.

ಕೇರಳ ಫೈಲ್ಸ್​​ ನೋಡಿದರೆ ಮತಾಂತರ ಬಿಲ್ ವಾಪಸ್ ಪಡೆಯಲ್ಲ, ಬೇಕಾದರೆ ನಾನೇ ನಿಮಗೆಲ್ಲ ಟಿಕೆಟ್ ಕೊಟ್ಟು ಸಿನಿಮಾ ತೋರಿಸಲು ಸಿದ್ಧ. ಗೋಹತ್ಯೆ ನಿಷೇಧ ವಾಪಸ್ ಸರಿಯಲ್ಲ, ಈ ರಾಜ್ಯದ ಜನ ಇದನ್ನು ಸಹಿಸಲ್ಲ. ಐದು ಗ್ಯಾರಂಟಿ ತಕ್ಷಣ ಜಾರಿ ಮಾಡಬೇಕು. ಮೊದಲ ಕ್ಯಾಬಿನೆಟ್ ನಿಂದಲೇ ಐದು ಗ್ಯಾರಂಟಿ ಹಣ ಕೊಡಬೇಕು ಎಂದು ಆಗ್ರಹಿಸಿದರು.

ವಿಧಾಸಭೆಯಲ್ಲಿ 66 ಹುಲಿಗಳಿವೆ, ಸದನದ ಹೊರಗೆ ಲಕ್ಷಾಂತರ ಹುಲಿಗಳಿವೆ. ರಾಜ್ಯದ ಜನರ ಪರ ಹೋರಾಟ ಮಾಡಲಿದ್ದೇವೆ. ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಈಶ್ವರಪ್ಪ ತಿಳಿಸಿದರು.

ಇದನ್ನೂ ಓದಿ: BJP protest: 'ಗ್ಯಾರಂಟಿ ಯೋಜನೆ ನೀಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ'.. ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.