ETV Bharat / state

ರೋಹಿಣಿ ಸಿಂಧೂರಿ, ಡಿ.ರೂಪಾ ವಿರುದ್ಧ ಇಲಾಖಾ ವಿಚಾರಣೆಗೆ ಸರ್ಕಾರ ಆದೇಶ

author img

By

Published : Feb 24, 2023, 11:00 PM IST

ಸಿಎಂ ಬಸವರಾಜ ಬೊಮ್ಮಾಯಿ‌ ಸೂಚನೆ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ವಿಧಾನಸೌಧ
ವಿಧಾನಸೌಧ

ಬೆಂಗಳೂರು: ಬಹಿರಂಗವಾಗಿ ಜಟಾಪಟಿಗಿಳಿದಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಇಲಾಖಾ ವಿಚಾರಣೆಗೆ ಸರ್ಕಾರ ಆದೇಶಿಸಿದೆ. ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಸ್ಥಳ ನಿಗದಿ ಮಾಡದೇ ಎತ್ತಂಗಡಿ ಮಾಡಲಾಗಿದೆ. ಇದೀಗ ಮಹಿಳಾ ಅಧಿಕಾರಿಗಳಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶಿಸಿದ್ದಾರೆ.

ಸಿಎಂ ಬೊಮ್ಮಾಯಿ‌ ಸೂಚನೆ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಇಲಾಖಾ ವಿಚಾರಣೆಗೆ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಶಿಸ್ತು ಉಲ್ಲಂಘಿಸಿದ ಅಧಿಕಾರಿಗಳ ನಡೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಡಿ.ರೂಪಾ ವಿರುದ್ಧ ಮಾಧ್ಯಮ ಮುಂದೆ ಬಹಿರಂಗ ಹೇಳಿಕೆ, ಸಾಮಾಜಿಕ‌ ಜಾಲತಾಣದಲ್ಲಿ ಫೋಟೋ ಪ್ರಕಟಣೆ, ಆ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವುದನ್ನು ತನಿಖಾ ವ್ಯಾಪ್ತಿಗೆ ಒಳಪಡಿಸಲಾಗುವುದು. ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಈಜುಕೊಳ ನಿರ್ಮಾಣ, ಪಾರಂಪರಿಕ ಕಟ್ಟಡ ನಿಯಮಾವಳಿ ಉಲ್ಲಂಘನೆ ಆರೋಪ ಹಾಗೂ ಬ್ಯಾಗ್ ಖರೀದಿ ಪ್ರಕರಣಗಳು ಇಲಾಖೆ ತನಿಖಾ ವ್ಯಾಪ್ತಿಗೆ ಒಳಪಡಲಿದೆ. ಇಬ್ಬರು ಅಧಿಕಾರಿಗಳ ವಿರುದ್ಧ ಸಿವಿಲ್‌ ಸೇವಾ ನಿಯಮಾವಳಿ ಉಲ್ಲಂಘನೆಯನ್ನೂ ತನಿಖೆಗೆ ಒಳಪಡಿಸಲಾಗುವುದು.

ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಫೆ. 20ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭೇಟಿಯಾಗಿ ದಾಖಲೆಗಳೊಂದಿಗೆ ಪರಸ್ಪರ ದೂರು ನೀಡಿದ್ದರು. ಬಳಿಕ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿದ್ದ ರೋಹಿಣಿ ಸಿಂಧೂರಿಯನ್ನು ಸ್ಥಳ ನಿಗದಿಗೊಳಿಸದೇ ವರ್ಗಾವಣೆ ಮಾಡಲಾಗಿದ್ದರೆ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಹುದ್ದೆಯಿಂದ ಡಿ‌. ರೂಪಾ ಅವರನ್ನೂ ಕೂಡಾ ಸ್ಥಳ ನಿಗದಿ ಮಾಡದೇ ವರ್ಗಾವಣೆ ಮಾಡಲಾಗಿದೆ.

ಅದಕ್ಕೂ ಮೊದಲು ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿತ್ತು. ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ನೋಟಿಸ್ ನೀಡಿದ್ದರು. ಸೇವಾ ನಿಯಮದ ಉಲ್ಲಂಘನೆ‌‌ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು.

ಸರ್ಕಾರಕ್ಕೆ ಮುಜುಗರ: ನೋಟಿಸ್‌ನಲ್ಲಿ ಪರಸ್ಪರ ಆರೋಪಗಳಿಗಾಗಿ ಮಾಧ್ಯಮಗಳನ್ನು ಬಳಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ತಮ್ಮ ಆಕ್ಷೇಪ, ದೂರುಗಳನ್ನು ನೀಡಲು ಸೂಕ್ತ ವೇದಿಕೆ ಇದ್ದರೂ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದೀರಿ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಹಾಗೂ ಮುಜುಗರ ಉಂಟಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿತ್ತು.

ಸರ್ಕಾರಿ ಅಧಿಕಾರಿಯಾಗಿ ಈ ರೀತಿಯ ವರ್ತನೆ ಸಮಂಜಸವಲ್ಲ. ಇದು ಸೇವಾ ನಿಯಮದ ವಿರುದ್ಧವಾಗಿದೆ. ನಿಯಮದ ಪ್ರಕಾರ, ಸರ್ಕಾರಿ ಅಧಿಕಾರಿ ತಮ್ಮ ಕರ್ತವ್ಯ ನಿರ್ವಹಣೆ, ಸರ್ಕಾರಿ ಯೋಜನೆಗಳು ಪ್ರಚುರಪಡಿಸಲು ಮಾತ್ರ ಮಾಧ್ಯಮಗಳ ಮುಂದೆ ಹೋಗಬಹುದಾಗಿದೆ. ತಮ್ಮ ಆರೋಪ, ದೂರುಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವ ಬದಲು ಮಾಧ್ಯಮಗಳ ಮುಂದೆ ಹೋಗಿರುವುದನ್ನು ತಪ್ಪಿಸಬಹುದಾಗಿತ್ತು ಎಂದು ತಿಳಿಸಲಾಗಿತ್ತು.

ಇದನ್ನೂ ಓದಿ: ಐಎಎಸ್​​​​​​​ ಅಧಿಕಾರಿ ಸಿಂಧೂರಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಕೋರ್ಟ್​ ನಿರ್ಬಂಧ: ರೋಹಿಣಿಗೆ ಬಿಗ್​ ರಿಲೀಫ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.