ETV Bharat / state

ಇಂದಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿದ್ಯುತ್, ಕುಡಿಯುವ ನೀರು ಉಚಿತ: ಸಿಎಂ ಸಿದ್ದರಾಮಯ್ಯ ಘೋಷಣೆ

author img

By ETV Bharat Karnataka Team

Published : Nov 1, 2023, 11:50 AM IST

Updated : Nov 1, 2023, 1:41 PM IST

Free electricity and drinking water: ಇಂದಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಉಚಿತವಾಗಿ ನೀಡಲಾಗುತ್ತದೆ ಎಂದು ಸಿಎಂ ಘೋಷಿಸಿದ್ದಾರೆ.

Free electricity and drinking water  all government schools in the state  CM Siddaramaiah announced  Karnataka Rajyotsava celebration  ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಕುಡಿಯುವ ನೀರು ಉಚಿ  ಸಿಎಂ ಸಿದ್ದರಾಮಯ್ಯ ಘೋಷಣೆ  ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಉಚಿತ  ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ  ಐವತ್ತು ವರ್ಷದ ಕಾರ್ಯಕ್ರಮ  ಕಂಠೀರವ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಆಯೋಜನೆ  68 ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಧ್ವಜಾರೋಹಣ
ಸಿಎಂ ಸಿದ್ದರಾಮಯ್ಯ ಘೋಷಣೆ

ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಉಚಿತವಾಗಿ ವಿದ್ಯುತ್ ಹಾಗು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಓದಬೇಕು, ಕನಿಷ್ಠ ಎಸ್ಎಸ್ಎಲ್​ಸಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಓದಬೇಕು ಎಂದು ಕರೆ ನೀಡಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿಂದು ಶಿಕ್ಷಣ ಇಲಾಖೆ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, ರಾಜ್ಯ ಏಕೀಕರಣವಾದಾಗ ಮೈಸೂರು ರಾಜ್ಯ ಎಂದು ಕರೆಯಲಾಯಿತು. 1973 ರಲ್ಲಿ ಅಂದಿನ ಸಿಎಂ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ಮರುನಾಮಕರಣಕ್ಕೆ 50 ವರ್ಷ ತುಂಬಿದೆ. ಇಡೀ ರಾಜ್ಯದಲ್ಲಿ ಒಂದು ವರ್ಷ ಕರ್ನಾಟಕ ಸಂಭ್ರಮ 50 ಹೆಸರಿನ ಮೂಲಕ ಕನ್ನಡದ ಇತಿಹಾಸ, ಸಂಸ್ಕೃತಿ, ಭಾಷೆ, ಕಲೆ, ಸಂಗೀತ, ಜನಪದ, ಸಂಪ್ರದಾಯವನ್ನು ರಾಜ್ಯದ ಉದ್ದಗಲಕ್ಕೆ ತಿಳಿಸುವ ಕೆಲಸ ಮಾಡಲಿದ್ದೇವೆ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎನ್ನುವ ಘೋಷವಾಕ್ಯದೊಂದಿಗೆ ಇಡೀ ರಾಜ್ಯದಲ್ಲಿ ನಾವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಈ ವರ್ಷಕ್ಕೆ 50 ವರ್ಷದ ಕಾರ್ಯಕ್ರಮ ಮಾಡಬೇಕಿತ್ತು. ಆದರೆ ಹಿಂದಿನ ಸರ್ಕಾರ ಅದನ್ನು ಮಾಡಲಿಲ್ಲ. ಹಾಗಾಗಿ ನಾನು ಈ ವರ್ಷ ಸಂಭ್ರಮಾಚರಣೆಗೆ ಬಜೆಟ್​ನಲ್ಲಿ ಘೋಷಣೆ ಮಾಡಿದ್ದು, ಮುಂದಿನ ಒಂದು ವರ್ಷ ಈ ಕಾರ್ಯಕ್ರಮ ನಡೆಯಲಿದೆ. ಜನರನ್ನು ಜಾಗೃತಿ ಮಾಡುವ ಕೆಲಸ ಮಾಡಲಿದ್ದೇವೆ ಎಂದು ಸಿಎಂ ತಿಳಿಸಿದರು.

ನಾವೆಲ್ಲ ಕನ್ನಡ ಭಾಷೆಯಲ್ಲೇ ವ್ಯವಹಾರ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದೇವೆ. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ವ್ಯವಹರಿಸಲ್ಲ ಎನ್ನುವ ಪ್ರತಿಜ್ಞೆ ಮಾಡಬೇಕು. ನಮ್ಮ ಭಾಷೆ, ನೆಲ, ಜಲ ಸಂಸ್ಕೃತಿ, ಕಲೆಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಅತಿ ಅವಶ್ಯಕ. ಕನ್ನಡ ಭಾಷೆ ನಮ್ಮ ತಾಯಿ ಭಾಷೆ, ಈ ನೆಲದ ಋಣ ತೀರಿಸಬೇಕಾದಲ್ಲಿ ನೆಲ, ಜಲ, ಭಾಷೆ ಸಂಸ್ಕೃತಿ ಎತ್ತಿ ಹಿಡಿಯುವ ಪ್ರತಿಜ್ಞೆಯನ್ನು ಎಲ್ಲ ಕನ್ನಡಿಗರು ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಡಿಸಿಎಂ ಡಿಕೆ ಶಿವಕುಮಾರ್​ ಹೇಳಿಕೆ

ನಮ್ಮನ್ನು ಅಭಿಮಾನ್ಯ ಶೂನ್ಯರು ಎನ್ನಲು ಹೋಗಲ್ಲ. ಆದರೆ ನಮಗೆ ಬೇರೆ ರಾಜ್ಯಗಳ ಜನರಂತೆ ಅಭಿಮಾನ ಇಲ್ಲದೇ ಇದ್ದರೂ ಅಷ್ಟೊಂದು ಧಾರಾಳತನ ಇರಬಾರದು. ಇಲ್ಲಿಗೆ ಬರುವ ಹೊರ ರಾಜ್ಯದವರು ಕನ್ನಡ ಕಲಿಯಬೇಕು. ಆ ವಾತಾವರಣ ನಿರ್ಮಾಣ ಮಾಡಬೇಕು. ಆಗ ಮಾತ್ರ ಅಧಿಕೃತ ಭಾಷೆ ಮಾತನಾಡಲು ಸಾಧ್ಯವಾಗಲಿದೆ. ತಮಿಳುನಾಡಿನಲ್ಲಿ ತಮಿಳು ಮಾತನಾಡದೆ ಬದುಕಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಮಾತಾಡದೆಯೇ ಇಡೀ ಬದುಕನ್ನು ನಡೆಸುವ ಪರಿಸ್ಥಿತಿ ಇದೆ. ಯಾವ ಭಾಷೆಯನ್ನೂ ಕಲಿಯಬೇಡಿ ಎನ್ನಲ್ಲ. ಯಾವ ಭಾಷೆ ಬೇಕಾದರೂ ಕಲಿಯಿರಿ. ಆದರೆ ಕನ್ನಡ ಮಾತನಾಡಿ, ಕನ್ನಡ ನಮ್ಮ ಸಾರ್ವಭೌಮ ಭಾಷೆ. ಆಡಳಿತ ಭಾಷೆಯಾಗಿ ಕನ್ನಡ ಎಂದು ಘೋಷಣೆ ಮಾಡಿದ್ದೇವೆ. ಕನ್ನಡದ ಆಡಳಿತ ವ್ಯವಹಾರ ಕನ್ನಡದಲ್ಲೇ ಆಗುತ್ತಿದೆ.

ನಮ್ಮ ಆಡಳಿತ ಪರಿಣಾಮಕಾರಿಯಾಗಿ ಜನರನ್ನು ತಲುಪಲು ಕನ್ನಡ ಭಾಷೆಯಲ್ಲಿ ವ್ಯವಹಾರ ಆದಾಗ ಮಾತ್ರ ಸಾಧ್ಯ. ಹಾಗಾಗಿ ಪ್ರತಿಯೊಬ್ಬ ಅಧಿಕಾರಿ, ರಾಜಕಾರಣಿ ಕನ್ನಡದಲ್ಲೇ ವ್ಯವಹರಿಸಬೇಕು. ಬರೀ ಘೋಷಣೆ ಮಾಡಿದರೆ ಸಾಲದು. ಕನ್ನಡ ನಮ್ಮ ಮಾತೃಭಾಷೆ. ನೆಲದ ಭಾಷೆ. ಕೇಂದ್ರ ಸರ್ಕಾರ ಇಂದೂ ಕೂಡ ಹಿಂದಿ, ಇಂಗ್ಲಿಷ್​ನಲ್ಲಿ ಕೇಂದ್ರದ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸುತ್ತಿದೆ. ಇದಕ್ಕೆ ವಿರೋಧ ಮಾಡಬೇಕು. ಈ ಬಗ್ಗೆ ಪಿಎಂಗೆ ಪತ್ರ ಬರೆಯುತ್ತೇನೆ. ಮಕ್ಕಳಿಗೆ ಗೊತ್ತಿರುವ ಭಾಷೆಯಲ್ಲಿ ಪರೀಕ್ಷೆ ಮಾಡಬೇಕಿದೆ ಎಂದರು.

ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳ ತಪ್ಪಿಸಿ ಖಾಸಗಿ ಶಾಲೆಗೆ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ಮೇಧಾವಿ ಆಗಲಿದ್ದೇವೆ. ಉದ್ಯೋಗ ಸಿಗಲಿದೆ ಎನ್ನುವುದು ಸರಿಯಾದ ತಿಳುವಳಿಕೆ ಅಲ್ಲ. ನಮ್ಮ ರಾಜ್ಯದ ಅನೇಕ ವಿಜ್ಞಾನಿಗಳು ಕನ್ನಡದಲ್ಲೇ ಓದಿ ವಿಖ್ಯಾತರಾಗಿದ್ದಾರೆ. ಹಾಗಾಗಿ ಇಂಗ್ಲೀಷ್ ಮಾಧ್ಯಮದಲ್ಲೇ ಓದಬೇಕು ಎನ್ನುವುದು ತಪ್ಪು ಕಲ್ಪನೆ ಎಂದರು. ಕನ್ನಡ ಮಾಧ್ಯಮದ ನಮ್ಮ ಕಲ್ಪನೆಗೆ ಕೋರ್ಟ್ ಸಹಕಾರ ಕೊಡುತ್ತಿಲ್ಲ. ಮಕ್ಕಳು ಯಾವ ಮಾಧ್ಯಮದಲ್ಲಿ ಓದಬೇಕು ಎಂದು ಪೋಷಕರ ಇಚ್ಛೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಹಾಗಾಗಿ ಕನ್ನಡ ಮಾಧ್ಯಮದ ನಮ್ಮ ಆಶಯ ಈಡೇರಿಲ್ಲ. ಇದರ ಬದಲಾವಣೆಗೆ ಯತ್ನಿಸುತ್ತೇವೆ ಎಂದರು.

ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಕೂಡ ನೀಡುವುದು ಅಗತ್ಯವಿದೆ. ಕನಿಷ್ಠ ಎಸ್ಎಸ್ಎಲ್​ಸಿ ವರೆಗಾದರೂ ಕನ್ನಡ ಮಾಧ್ಯಮದಲ್ಲಿ ಓದಬೇಕು ಎಂದು ಕರೆ ನೀಡಿದ ಸಿಎಂ, ಸರ್ಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್, ಕುಡಿಯುವ ನೀರು ಸೌಲಭ್ಯಕ್ಕೆ ಶಿಕ್ಷಕರು ಮನವಿ ಮಾಡಿದ್ದಾರೆ. ಅದನ್ನು ಪರಿಗಣಿಸಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ವಿದ್ಯುತ್ ಮತ್ತು ಕುಡಿಯುವ ನೀರನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು. ಇಂದು ಭವ್ಯ ಕರ್ನಾಟಕ ಕಟ್ಟಬೇಕಿದೆ. ಅದಕ್ಕಾಗಿ ನುಡಿದಂತೆ ನಡೆದು ಗ್ಯಾರಂಟಿ, ಭಾಗ್ಯ ಸೇರಿದಂತೆ ಅನೇಕ ಯೋಜನೆ ತಂದಿದ್ದೇವೆ ಎಂದರು.

ನವೆಂಬರ್ 1ಕ್ಕೆ ಮಾತ್ರ ಭಾಷಾಭಿಮಾನ ಸೀಮಿತವಾಗದಿರಲಿ: ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ ಕನ್ನಡ, ಕನ್ನಡಿಗ, ಕನ್ನಡತನ ನವೆಂಬರ್ 1 ಕ್ಕೆ ಮಾತ್ರ ಸೀಮಿತವಾಗದಿರಲಿ. ಕನ್ನಡ ಹೃದಯ ಭಾಷೆಯಾಗಲಿ ಎಂದು ಕರೆ ನೀಡಿದರು. ಕನ್ನಡ ನೆಲವೇ ನಮಗೆ ಸ್ವರ್ಗ. ಹಾಗಾಗಿ ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರ ನೆನೆಯೋಣ. ಕನ್ನಡಿಗರ ಮನಸ್ಸು ಒಗ್ಗೂಡಿಸದೆ ಸಹಬಾಳ್ವೆ ಅಸಾಧ್ಯ. ಬಸ್, ರೈಲಿಗೆ ಬೆಂಕಿ ಹಂಚುವುದರಿಂದ ಭಾಷೆ ಅಭಿಮಾನ.. ರಾಜ್ಯ ಅಭಿಮಾನ ಆಗಲ್ಲ. ರಾಜ್ಯದ ಗೌರವವನ್ನು ಉಳಿಸಬೇಕು ಎನ್ನುತ್ತಾ ತಮ್ಮ ಭಾಷಣದುದ್ದಕ್ಕೂ ಕುವೆಂಪುರವರು ಬರೆದಿರುವ ಕವಿತೆಯ ಸಾಲುಗಳನ್ನ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಗುಣಮಟ್ಟದ ಶಿಕ್ಷಣದ ಜೊತೆ ವಿದ್ಯಾರ್ಥಿಗಳಲ್ಲಿ ಸಮಾನತೆ, ರಾಷ್ಟ್ರೀಯ ಮೌಲ್ಯ ರೂಪಿಸಿ ಉತ್ತಮ ಪ್ರಜೆಯಾಗಿಸುವ ಗುರಿ ನಮ್ಮದಾಗಿದೆ ಎಂದು ತಿಳಿಸಿದರು.

ನಮ್ಮ ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣಗೊಂಡು 50 ವರ್ಷವಾದ ಸಂಭ್ರಮವಾಗಿದೆ. ರಾಜ್ಯದಲ್ಲಿ ಕನ್ನಡವನ್ನೇ ಆಡಳಿತ ಭಾಷೆಯಾಗಿ ಘೋಷಿಸಲಾಗಿದೆ. ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಲ್ಲಿ 13 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಚಾಲನೆಯಲ್ಲಿದೆ. ಮತ್ತಷ್ಟು ಅಗತ್ಯ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಲಾಗುತ್ತದೆ. 8311 ಹೊಸ ಶಾಲಾ ಕೊಠಡಿ ನಿರ್ಮಾಣ ಕಾರ್ಯರೂಪಕ್ಕೆ ಬರುತ್ತಿದೆ. 2 ಸಾವಿರ ಕೆಪಿಎಸ್ ಶಾಲೆ ಆರಂಭದ ಗುರಿ ಇದ್ದು, ಮುಂದಿನ ವರ್ಷ 600 ಕರ್ನಾಟಕ ಪಬ್ಲಿಕ್ ಶಾಲೆ ಆರಂಭದ ಗುರಿ ಹಾಕಿಕೊಳ್ಳಲಾಗಿದೆ‌. ಎಸ್ಎಸ್ಎಸ್ಸಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆ ಮೂಲಕ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆಯ ಪ್ರಗತಿ ಕುರಿತು ವಿವರ ನೀಡಿದರು.

ಸ್ವಯಂ ಸೇವಾ ಸಂಘಗೊಳದಿಗೆ ಹಾಲು ನೀಡುವ ಯೋಜನೆಗೆ ಶೀಘ್ರವಾಗಿ ಜಾರಿ ಮಾಡಲಾಗುತ್ತದೆ. ಸಸ್ಯ ಶಾಮಲ ಯೋಜನೆ ಜಾರಿ ಮಾಡುತ್ತಿದ್ದು, ಶಾಲಾ ಬ್ಯಾಗ್ ಹೊರೆ 50 % ಕಡಿಮೆ ಮಾಡುತ್ತೇವೆ ಎಂದು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ.

ಕನ್ನಡಕ್ಕೆ ಪ್ರತ್ಯೇಕ ಧ್ವಜ ಬೇಕು: ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕನ್ನಡಿಗರಿಗೆ ಕನ್ನಡದ್ದೇ ಆದ ಧ್ವಜ ಬೇಕು. ಆರು ವರ್ಷದ ಹಿಂದೆ ನಾವು ಶಿಫಾರಸು ಮಾಡಿದ್ದೆವು. ಆದರೆ ಕೇಂದ್ರದಿಂದ ಆರು ವರ್ಷದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಲ್ಲ ಕನ್ನಡಿಗರೂ ಕೇಂದ್ರದ ಮೇಲೆ ಒತ್ತಡ ತರಬೇಕು. ಕನ್ನಡಧ್ವಜ ನಮ್ಮ ಅಭಿಮಾನದ ಹೆಗ್ಗುರುತು. ಕನ್ನಡ ಧ್ವಜ ನಮ್ಮ ಧ್ವಜವಾಗಿದೆ. ಕನ್ನಡದ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ನಡೆಯಿತ್ತಿದೆ. ಕೇಂದ್ರದಿಂದ ಹಿಂದಿ ಇಂಗ್ಲಿಷ್ ಕಡ್ಡಾಯದಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಕನ್ನಡದ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ಕೇಂದ್ರದ ಹಲವು ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಂದ ಹುದ್ದೆ ಕಸಿಯುವ ಕೆಲಸ ಮಾಡಲಾಗುತ್ತಿದೆ. ಭಾಷಾ ತಾರತಮ್ಯದ ವಿರುದ್ಧ ದನಿ ಎತ್ತಬೇಕಿದೆ ಎಂದರು. ಇದಕ್ಕೂ ಮುನ್ನ ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕ ಪಥಸಂಚಲನ ಮೂಡಿಬಂದಿತು. ವಿದ್ಯಾರ್ಥಿಗಳು ನಾಡಗೀತೆ, ರೈತ ಗೀತೆ ಮೊಳಗಿಸಿದರು.

ಓದಿ: 68ನೇ ಕನ್ನಡ ರಾಜ್ಯೋತ್ಸವ: ಕಂಠೀರವ ಸ್ಟೇಡಿಯಂನಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

Last Updated :Nov 1, 2023, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.