ETV Bharat / state

ಖಾಲಿ ಸೈಟ್​​ಗೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್​​ಗಳಿಗೆ ವಂಚನೆ: ಡುಪ್ಲಿಕೇಟ್ ನರಸಯ್ಯ ಸೇರಿ ಮೂವರ ಬಂಧನ

author img

By

Published : Sep 10, 2022, 8:51 AM IST

ಖಾಲಿ ಸೈಟ್​​ಗೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್​​ಗಳಿಗೆ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ಧಾರೆ.

three accused arrested in Bengaluru
ಬಂಧಿತ ಆರೋಪಿಗಳು

ಬೆಂಗಳೂರು: ಖಾಲಿ ಸೈಟ್​​ಗಳನ್ನು ಗುರುತಿಸಿ ಲೋನ್ ಮಾಡಿಸಿಕೊಟ್ಟು ಸಿಲಿಕಾನ್ ಸಿಟಿ ಜನರಿಗೆ, ಬ್ಯಾಂಕ್​​ಗಳಿಗೆ ಯಾಮಾರಿಸುತ್ತಿದ್ದ ಮೂವರು ವಂಚಕರನ್ನು ಕೆ.ಜಿ ನಗರ ಪೊಲೀಸರು ಬಂಧಿಸಿದ್ದಾರೆ. ಉದಯ್ ಪ್ರತಾಪ್ ಸಿಂಗ್, ಅಯೂಬ್ ಖಾನ್ ಹಾಗೂ ಮುರುಳೀಧರ ಅಲಿಯಾಸ್ ಡುಪ್ಲಿಕೇಟ್ ನರಸಯ್ಯ ಬಂಧಿತ ಆರೋಪಿಗಳು.

ಆರೋಪಿಗಳು ಬನಶಂಕರಿಯ ಡಾಕ್ಟರ್ ನರಸಯ್ಯ ಎನ್ನುವವರ ಬಿಡಿಎಯ 60 X 40 ಖಾಲಿ ಜಾಗವನ್ನು ತಮ್ಮ ವಶಕ್ಕೆ ಪಡೆದುಕೊಂಡು ನಕಲಿ ದಾಖಲೆ ಸೃಷ್ಟಿಸಿದ್ದರು. ಮಾಸ್ಟರ್ ಮೈಂಡ್ ಉದಯ್ ಪ್ರತಾಪ್ ಸಿಂಗ್ ಹಾಗೂ ಅಯೂಬ್ ಖಾನ್ ನರಸಯ್ಯ ಅವರ ಆಸ್ತಿಯ ನಕಲಿ ದಾಖಲೆ ಸೃಷ್ಟಿಸಿದ್ದರು. ಅಲ್ಲದೇ ನರಸಯ್ಯನ ಹೆಸರಲ್ಲಿ ಬಸವೇಶ್ವರ ನಗರದ ಮುರುಳೀಧರ್ ಎಂಬ ನಕಲಿ ವ್ಯಕ್ತಿಯನ್ನು ವಾರಸುದಾರ ಎಂದು ತಂದು ತೋರಿಸಿ ಚಾಮರಾಜಪೇಟೆ ಸಬ್ ರಿಜಿಸ್ಟ್ರಾರ್ ಆಫೀಸ್​​ನಲ್ಲಿ ಆರೋಪಿಗಳು ದಾಖಲೆಗಳನ್ನು ಪಡೆದಿದ್ದರು ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಕಲಿ ದಾಖಲೆ ತಯಾರಿ: ಬಿಡಿಎ ಅಲಾಟ್ ಮೆಂಟ್ ಲೆಟರ್, ರಿಜಿಸ್ಟ್ರೇಷನ್ ಲೆಟರ್ ತಯಾರು ಮಾಡಿ ಮಾರಾಟಕ್ಕೆ ಮುಂದಾಗಿದ್ದರು. ಅದಕ್ಕಾಗಿ ಫ್ಲಿಪ್ ಕಾರ್ಟ್​ನಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಎಂಬಾತನನ್ನು ಪರ್ಚೆಸರ್ ಆಗಿ ಕರೆದಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್​​ನಲ್ಲಿ ಆತನ ಸ್ಯಾಲರಿ ಮೇಲೆ 1.40 ಕೋಟಿ ರೂ. ಲೋನ್ ಪಡೆದಿದ್ದರು. ನಂತರ ನಕಲಿ ನರಸಯ್ಯ ಅವರನ್ನು ಇಟ್ಟುಕೊಂಡು ಸುನೀಲ್​​ಗೆ ಪ್ರಾಪರ್ಟಿ ರಿಜಿಸ್ಟರ್ ಮಾಡಿದ್ದರು.

ಇಸಿ ತೆಗೆಯಲು ಹೋದಾಗ ವಂಚನೆ ಬಯಲು: ಸೈಟ್​​ ಮಾಲೀಕ ನರಸಯ್ಯ ಹೋಗಿ ಪ್ರಾಪರ್ಟಿಯ 'ಇಸಿ'ಯನ್ನು ತೆಗೆದಾಗ ಆಗಲೇ ಅವರಿಗೆ ಪ್ರಾಪರ್ಟಿ ಬೇರೆಯವರ ಹೆಸರಿಗೆ ನೋಂದಣಿ ಆಗಿದೆ ಎಂಬುದು ಗೊತ್ತಾಗಿದೆ. ನೇರವಾಗಿ ಅವರು ವಿವಿ ಪುರಂ ಠಾಣೆಗೆ ಬಂದು ದೂರು ನೀಡಿದ್ದರು. ನಂತರ ಪ್ರಕರಣವನ್ನು ಕೆ.ಜಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಕೆ.ಜಿ ನಗರ ಇನ್ಸ್​​ಪೆಕ್ಟರ್ ರಕ್ಷಿತ್ ಮತ್ತು ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

ಓರ್ವ ಆರೋಪಿ ಸಾಫ್ಟ್‌ವೇರ್ ಇಂಜಿನಿಯರ್: ಆರೋಪಿಗಳ ಪೈಕಿ ಉದಯ್ ಪ್ರತಾಪ್ ಸಿಂಗ್ ಮೂಲತಃ ಬೆಂಗಳೂರಿನವನಾಗಿದ್ದಾನೆ. ನಾಗ್ಪುರದಲ್ಲಿ ವಾಸವಾಗಿರುವ ಉದಯ್ ಸಾಫ್ಟ್‌ವೇರ್ ಇಂಜಿನಿಯರ್. ಈ ಹಿಂದೆ ಇವರು ನಕಲಿ ಪಾಸ್ ಪೋರ್ಟ್​ ಪ್ರಕರಣದಲ್ಲಿ ಬಂಧಿಯಾಗಿದ್ದರು. ಉಳಿದಂತೆ ಅಯೂಬ್ ಖಾನ್ ಬೇರೆಯವರ ಜಾಗದ ದಾಖಲೆ ತೆಗೆದು ಉದಯ್​​ ಅವರಿಗೆ ಮಾಹಿತಿ ನೀಡಿದ್ದರು ಎನ್ನಲಾಗ್ತಿದೆ.

ಉಳಿದ ಆರೋಪಿಗಳಿಗಾಗಿ ಶೋಧ: ನಕಲಿ ನರಸಯ್ಯ ಅವರ ರೂಪದಲ್ಲಿ ಬಂದ ಮುರುಳೀಧರ ಬಸವೇಶ್ವರನಗರದ ನಿವಾಸಿ. ನರಸಯ್ಯನ ಹೆಸರು ಹೇಳಿಕೊಂಡು ಬಂದಿದ್ದಕ್ಕೆ ಉದಯ್ ಮುರುಳೀಧರನಿಗೆ 2 ಲಕ್ಷ ರೂ. ಕೊಟ್ಟಿದ್ದನಂತೆ. ಸದ್ಯ ಮೂವರು ಆರೋಪಿಗಳು ವಂಚನೆ ಮತ್ತು ಫೋರ್ಜರಿನಲ್ಲಿ ಪ್ರಕರಣದಲ್ಲಿ ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಆಭರಣಗಳು, ಹಣ ಹೊಂದಿದ್ದರೂ ಬಿಪಿಎಲ್​ ಕಾರ್ಡ್: ಶಿರಾ ಪುರಸಭೆಯ ಸದಸ್ಯನ ಆಯ್ಕೆ ಅಸಿಂಧು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.