ETV Bharat / state

ಬಹುಶಃ 40% ಕಮೀಷನ್ ನೀಡದ ಕಾರಣ ಫಾಕ್ಸ್‌ಕಾನ್ ಒಪ್ಪಂದ ರದ್ದಾಗಿದೆ: ಸುರ್ಜೇವಾಲಾ ವ್ಯಂಗ್ಯ

author img

By

Published : Mar 5, 2023, 8:13 PM IST

Updated : Mar 5, 2023, 9:23 PM IST

ತೈವಾನ್‌ ಫಾಕ್ಸ್‌ಕಾನ್ ಕಂಪನಿ ಜೊತೆ ಹೂಡಿಕೆ ಒಪ್ಪಂದ ಆಗದೇ ಇದ್ದರೂ ಆಪಲ್ ಐಪೋನ್ ಕಂಪನಿ ತಯಾರಿಕಾ ಘಟಕ ಸ್ಥಾಪನೆ ಬಗ್ಗೆ ಮುಖ್ಯಮಂತ್ರಿಗಳು ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

congress symbol
ಕಾಂಗ್ರೆಸ್ ಗುರುತು

ಬೆಂಗಳೂರು: ಜನಪ್ರಿಯತೆ ಪಡೆಯುವ ಸಲುವಾಗಿ ಸೂಕ್ತ ಸಮಯಕ್ಕಿಂತ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫಾಕ್ಸ್‌ಕಾನ್ ಒಪ್ಪಂದ ಕುರಿತು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು, ಲಾಯರ್, ಲಾಯರ್ ನಿನ್ನ ಹೆಸರು ಬಸವರಾಜ ಬೊಮ್ಮಾಯಿ. ಬೊಮ್ಮಾಯಿ ಸರ್ಕಾರದೊಂದಿಗೆ ಫಾಕ್ಸ್‌ಕಾನ್ ಒಪ್ಪಂದಕ್ಕೆ ಸಹಿ ಹಾಕುವುದು.

ಆಪಲ್ ಐಫೋನ್‌ ತಯಾರಿಸುವುದು ಮತ್ತು 1,00,000 ಉದ್ಯೋಗಗಳನ್ನು ಸೃಷ್ಟಿಸುವುದು ಎಂಬ ಸಿಎಂ ಬೊಮ್ಮಾಯಿ ಅವರ ಪ್ರತಿಪಾದನೆ ನಕಲಿ ತನದ ಒಂದು ಪ್ರಯತ್ನವಾಗಿದೆ. ಅವರು 40% ಕಮೀಷನ್ ನೀಡದ ಕಾರಣ ಬಹುಶಃ ರದ್ದುಗೊಳಿಸಲಾಗಿದೆ ಎಂದು ಲೇವಡಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಟ್ವೀಟ್: ಐಫೋನ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಫಾಕ್ಸ್‌ಕಾನ್ ಸಂಸ್ಥೆ ಭಾರತದಲ್ಲಿ ಹೊಸ ಹೂಡಿಕೆ ಒಪ್ಪಂದ ಆಗಿಲ್ಲ. ಆದರೆ ಸಿಎಂ ಬೊಮ್ಮಾಯಿಯವರು ನಿನ್ನೆ ಆ್ಯಪಲ್ ಕಂಪನಿ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲಿದ್ದು, ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುವುದಾಗಿ ಹೇಳಿದ್ದರು‌. ಸಿಎಂ ಸುಳ್ಳು ಹೇಳಿದ್ಯಾಕೆ.? ಫಾಕ್ಸ್‌ಕಾನ್ ಸಂಸ್ಥೆ ಹೊಸ ಹೂಡಿಕೆಯ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಇದನ್ನು ಸ್ವತಃ ಆ ಸಂಸ್ಥೆಯೇ ಸ್ಪಷ್ಟಪಡಿಸಿದೆ. ಆದರೆ ಮುಖ್ಯಮಂತ್ರಿಗಳ ಕಚೇರಿ ಕರ್ನಾಟಕದಲ್ಲಿ ಈ ಸಂಸ್ಥೆ 5740 ಕೋಟಿ ಹೂಡಿಕೆ ಮಾಡಲಿದೆ ಎಂದಿದೆ. ಒಪ್ಪಂದವೇ ಆಗದೇ ಹೂಡಿಕೆ ಮಾಡಲು ಹೇಗೆ ಸಾಧ್ಯ.? ರಾಜ್ಯದ ಮುಖ್ಯಮಂತ್ರಿಗಳು ಆಧಾರ ರಹಿತವಾಗಿ ಹೀಗೆ ಮಾತಾಡಬಹುದೇ? ಆ್ಯಪಲ್ ಕಂಪನಿಯ ತಯಾರಿಕಾ ಘಟಕ ಸ್ಥಾಪನೆಯ ಬಗ್ಗೆ ಮುಖ್ಯಮಂತ್ರಿಗಳು ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಒಬ್ಬ ಮುಖ್ಯಮಂತ್ರಿ ಹೀಗೆ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯಬಹುದೆ.? ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಬೊಮ್ಮಾಯಿಯವರು ಹೀಗೆ ಸುಳ್ಳು ಹೇಳುವ ಕಲೆಯನ್ನು ಮೋದಿಯವರಿಂದ ಕಲಿತರೆ ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಕರ್ನಾಟಕದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆಯೇ? ಪ್ರಚಾರದ ಸ್ಟಂಟ್ ಮಾಡುವ ಮೂಲಕ ಸಿಎಂ ಇಂಥ ಪ್ರತಿಷ್ಠಿತ ಹೂಡಿಕೆಗೆ ಏಕೆ ಧಕ್ಕೆ ತರುತ್ತಾರೆ? ಹೆಚ್ಚಿನ ಹೂಡಿಕೆದಾರರು ಅಂತಿಮ ಒಪ್ಪಂದಕ್ಕೆ ಸಹಿ ಹಾಕುವವರೆಗೆ ಗೌಪ್ಯತೆ ಕಾಪಾಡಿಕೊಳ್ಳಲಿ ಎಂದು ಬಯಸುತ್ತಾರೆ. ಆದರೆ ರಾಜ್ಯದಲ್ಲಿ ಆ ಕಾರ್ಯ ಆಗಿಲ್ಲ ಎಂದು ಆರೋಪಿಸಿದರು.

ಬಿಜೆಪಿಯದ್ದು ಪ್ರಚಾರ ಜಾಸ್ತಿ ಎಂದ ಹೆಚ್​ಡಿಕೆ: ಜೆಡಿಎಸ್ ಸಹ ಇಂದು ಇದೇ ವಿಚಾರವನ್ನೂ ಪ್ರಸ್ತಾಪ ಮಾಡಿದೆ. ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಇಂದು ಬೆಳಗ್ಗೆ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದನ್ನು ಗಮನಿಸಬಹುದಾಗಿದೆ. ಟ್ವೀಟ್​ನಲ್ಲಿ ಅವರು, ರಾಜ್ಯ ಬಿಜೆಪಿ ಸರ್ಕಾರದ್ದು ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಎನ್ನುವ ನೀತಿ. ಇದೇ ಅದರ ಘೋಷವಾಕ್ಯ, ಧ್ಯೇಯವಾಕ್ಯ. ಜಾಹೀರಾತುಗಳಲ್ಲಿಯೇ ಜಳಕ ಮಾಡುತ್ತಿರುವ ಈ ಸರ್ಕಾರಕ್ಕೆ ಜನರ ಕ್ಷೇಮ, ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಉದ್ಯೋಗ ಸೃಷ್ಟಿ ಬಗ್ಗೆ ಎಳ್ಳಷ್ಟೂ ದೂರದೃಷ್ಟಿ ಇಲ್ಲ. ಐಫೋನ್ ತಯಾರಿಸುವ ತೈವಾನ್‌ ದೇಶದ ಫಾಕ್ಸ್‌ ಕಾನ್‌ ಕಂಪನಿ ರಾಜ್ಯದಲ್ಲಿ ಹೂಡಿಕೆ ಮಾಡಲು ಬಂದಿದೆ ಎಂದು ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾಗೂ ಇಬ್ಬರು ಸಚಿವರು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡರು. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಕೈಯಲ್ಲಿ ಸಹಿಪತ್ರಗಳನ್ನಿಡಿದು ಮಾಧ್ಯಮಗಳಿಗೆ ಪೋಸು ಕೊಟ್ಟರು ಎಂದು ಹೆಚ್​ಡಿಕೆ ಟೀಕಿಸಿದ್ದಾರೆ.

ಇದನ್ನೂ ಓದಿ:ಸಿಎಂ ಭೇಟಿಯಾದ ಧರ್ಮೇಂದ್ರ ಪ್ರಧಾನ್.. ರೇಸ್ ಕೋರ್ಸ್ ನಿವಾಸದಲ್ಲಿ ಚುನಾವಣಾ ರಣತಂತ್ರದ ಕುರಿತು ಚರ್ಚೆ

Last Updated :Mar 5, 2023, 9:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.