ETV Bharat / state

ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಂಸದ ಧ್ರುವನಾರಾಯಣ್ ಅಂತ್ಯಕ್ರಿಯೆ: ಸಿಎಂ ಬಸವರಾಜ ಬೊಮ್ಮಾಯಿ

author img

By

Published : Mar 11, 2023, 12:59 PM IST

Updated : Mar 11, 2023, 3:34 PM IST

ಸಕಲ ಸರ್ಕಾರಿ ಗೌರವದೊಂದಿಗೆ ಧ್ರುವನಾರಾಯಣ್ ಅಂತ್ಯಕ್ರಿಯೆ ಸಿಎಂ ತೀರ್ಮಾನ - ಅಭಿವೃದ್ಧಿ ಪರ ರಾಜಕಾರಣಿಗೆ ಗಣ್ಯರ ಸಂತಾಪ - ಕಂಬನಿ ಮಿಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದರಾಮಯ್ಯ

former-mp-r-dhruvanarayan-passed-away
ಮಾಜಿ ಸಂಸದ ಧ್ರುವನಾರಾಯಣ್

ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಂಸದ ಧ್ರುವನಾರಾಯಣ್ ಅಂತ್ಯಕ್ರಿಯೆ

ಬೆಂಗಳೂರು: ಮಾಜಿ ಸಂಸದ ಧ್ರುವನಾರಾಯಣ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿದೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧ್ರುವನಾರಾಯಣ್ ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ವಿರೋಧ ಪಕ್ಷದಲ್ಲಿದ್ದರೂ ಕೂಡ ರಾಜ್ಯದ ಅಭಿವೃದ್ಧಿಯಲ್ಲಿ ಸಾಕಷ್ಟು ಬಾರಿ ಮುಕ್ತವಾಗಿ ಚರ್ಚೆ ಮಾಡಿದ್ದೆವು. ಅವರ ಚಿಂತನೆ ಮತ್ತು ನಮ್ಮ ಚಿಂತನೆಯಲ್ಲಿ ಸಾಮ್ಯವಿತ್ತು. ಎರಡು ಬಾರಿ ಶಾಸಕರಾಗಿ ಹಾಗೂ ಸಂಸದರಾಗಿದ್ದ ಅವರು ಈ ರಾಜ್ಯದ ಅಭಿವೃದ್ಧಿ, ಪರಿಶಿಷ್ಟ ಜನಾಂಗದ ಬಗ್ಗೆ ಹಾಗೂ ಚಾಮರಾಜನಗರದ ಬಗ್ಗೆ ಶ್ರೇಷ್ಠ ಕಳಕಳಿ ವ್ಯಕ್ತಪಡಿಸುತ್ತಿದ್ದರು. ಒಳ್ಳೆ ಕೆಲಸ ಮಾಡಿದ್ದರು. ಅವರಿಗೆ ಹೃದಯಾಘಾತವಾಗಿ ಸಾವು ಉಂಟಾಗಿದ್ದು ಆಘಾತ ತಂದಿದೆ. ನಂಬಲಾಗುತ್ತಿಲ್ಲ. ಅತಿ ಕ್ರಿಯಾಶೀಲರಾಗಿ ಓಡಾಡುತ್ತಿದ್ದರು ಎಂದರು.

ಬದ್ಧತೆಯುಳ್ಳ ರಾಜಕಾರಣಿ : ಸಂಸತ್ತಿನಲ್ಲಿ ಅವರು ಪರಿಣಾಮಕಾರಿಯಾಗಿ ಮಾತನಾಡುತ್ತಿದ್ದರು.ಪರಿಶಿಷ್ಟ ಜನಾಂಗ, ರಾಜ್ಯದ ಬಗ್ಗೆ ಮಾತನಾಡಿದ್ದಾರೆ. ಬದ್ಧತೆಯುಳ್ಳ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ದೇವರು ಇಷ್ಟೊಂದು ಕ್ರೂರಿ ಆಗಬಾರದಿತ್ತು: ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್​ ಧ್ರುವನಾರಯಣ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಇಂದು ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು, ದೇವರು ಇಷ್ಟೊಂದು ಕ್ರೂರಿ ಆಗಬಾರದಿತ್ತು. ದೇವರು ಇದ್ದಾನೋ ಇಲ್ಲವೋ ಅನ್ನುವಷ್ಟು ಅನುಮಾನವನ್ನು ಧ್ರುವನಾರಾಯಣ ಸಾವು ತಂದಿದೆ. ಧ್ರುವ ನಮ್ಮ ಕಾರ್ಯಾಧ್ಯಕ್ಷ ಎಂಬುದಕ್ಕಿಂತ ನಮ್ಮ ಕುಟುಂಬದ ಸದಸ್ಯ, ಸಹೋದರನಂತಿದ್ದರು. ನಮ್ಮ ಹೃದಯಕ್ಕೆ ಹತ್ತಿರವಾಗಿದ್ದರು. ಅವರ ಅಗಲಿಕೆ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಹೇಳಿದರು.

ಅಭಿವೃದ್ಧಿ ಪರ ರಾಜಕಾರಣಿಗೆ ಗಣ್ಯರ ಸಂತಾಪ

ಹುಟ್ಟು ಸಾವಿನ ನಡುವೆ ಇರುವ ಸಮಯವನ್ನು ಹೇಗೆ ಸದ್ಭಳಕೆ ಮಾಡಬಹುದು ಎನ್ನುವುದಕ್ಕೆ ಧ್ರುವನಾರಾಯಣ್ ಉತ್ತಮ ಸಾಕ್ಷಿ. ಒಳ್ಳೆಯತನಕ್ಕೆ ಅವರು ಮತ್ತೊಂದು ಉದಾಹರಣೆ. ಅವರ ಸಾರ್ಥಕ ಬದುಕು ಆದರ್ಶಪ್ರಾಯ. ಅವರ ಅಗಲಿಕೆ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ರಾಜಕೀಯ ರಂಗಕ್ಕೆ ಬಹುದೊಡ್ಡ ನಷ್ಟ ಎಂದರು.

ಪ್ರಜಾಧ್ವನಿ ಯಾತ್ರೆ ರದ್ದು: ಇಂದು ನಡೆಯಬೇಕಿದ್ದ ರಾಮನಗರದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಿದ್ದೇವೆ. ಈ ನಷ್ಟವನ್ನು ತಡೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಮಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ಸೇವೆ, ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ರಾಜ್ಯ ಪ್ರವಾಸ ಮಾಡಿದ್ದರು. ಚಾಮರಾಜನಗರ ಆಕ್ಸಿಜನ್ ದುರಂತ ಸಂದರ್ಭದಲ್ಲಿ ಅವರ ಸ್ಪಂದನೆ, ಬದ್ಧತೆ ಎಲ್ಲವೂ ಇತಿಹಾಸ ಪುಟ ಸೇರಲಿದೆ ಎಂದು ತಿಳಿಸಿದರು.

ಧ್ರುವನಾರಾಯಣ್ ಗೆ 61 ವರ್ಷ ಅಷ್ಟೇ ಆಗಿತ್ತು ಪಾದರಸದಂತೆ ಕೆಲಸ ಮಾಡುತ್ತಿದ್ದವರು: ಧ್ರುವನಾರಾಯಣ್(61) ವಿಧಿವಶ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತ ಪಡಿಸಿದರು, ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು ಧ್ರುವನಾರಾಯನ್​ಗೆ 61 ವರ್ಷ ಅಷ್ಟೇ ಆಗಿತ್ತು. ಪಾದರಸದಂತೆ ಕೆಲಸ ಮಾಡುತ್ತಿದ್ದವರು. ಅವರ ಸಾವು ನನಗೆ ಅಷ್ಟೇ ಅಲ್ಲ, ಕಾರ್ಯಕರ್ತರಿಗೆ, ನಾಯಕರಿಗೆ ತುಂಬಲಾರದ ನಷ್ಟ. ವಿಧಿ ಆಟದ ಮುಂದೆ ನಾವ್ಯಾರು ಆಡೋಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕಸಭೆಯಲ್ಲೂ ಜಿಲ್ಲೆ, ರಾಜ್ಯದ ಹಿತಾಸಕ್ತಿಗಾಗಿ ಬದ್ಧತೆ: ಮಾಜಿ‌ ಸಂಸದರು, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ನಿಧನ ನಮಗೆ ಆಘಾತ ಆಗಿದೆ, ಊಹೆ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಜ್ಜನ ರಾಜಕಾರಣಿ, ಸೃಜನಶೀಲ ವ್ಯಕ್ತಿ. ಶಾಸಕರಾಗಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಲೋಕಸಭೆಯಲ್ಲೂ ಜಿಲ್ಲೆ, ರಾಜ್ಯದ ಹಿತಾಸಕ್ತಿಗಾಗಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಮಾನಸಿಕ ಒತ್ತಡ ಧ್ರುವ ಅವರನ್ನು ಬಲಿ ಪಡೆಯಿತು: ಮಾನಸಿಕ ಒತ್ತಡ ಆರ್. ಧ್ರುವನಾರಾಯಣ್ ಅವರನ್ನು ಬಲಿ ಪಡೆಯಿತು. ಈ ಕೊಳಕು ರಾಜಕಾರಣದಲ್ಲಿ ಮಾನಸಿಕ ಒತ್ತಡ ರಾಜಕಾರಣಿಗಳಿಗೆ ಭಾದಿಸುತ್ತಿದೆ, ಇದು ದಲಿತ ರಾಜಕಾರಣಿಗಳಲ್ಲಿ ಹೆಚ್ಚು, ಒತ್ತಡ ನಿರ್ವಹಣೆ ಬಗ್ಗೆ ನಾವು ಸೋಲುತ್ತಿದ್ದೇವೆ, ಆ ಒತ್ತಡವೇ ಅವರನ್ನು ಬಲಿ ಪಡೆಯಿತು ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬೇಸರ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.

ಬಿಜೆಪಿಗೆ ಆಹ್ವಾನ ಮಾಡಲು ಬಯಸಿದ್ದೆ: ಕಾಂಗ್ರೆಸ್ ನಾಯಕ ಧ್ರುವನಾರಾಯಣ್ ನಿಧನ‌ ಹಿನ್ನೆಲೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಧೃವನಾರಾಯಣ್ ಅವರು ಸಜ್ಜನ ರಾಜಕಾರಣಿ. ನಾನು ಅವರನ್ನ ಬಿಜೆಪಿಗೆ ಆಹ್ವಾನ ಮಾಡಲು ಬಯಸಿದ್ದೆ. ನಾನು ಹಿಂದೆ ಕಾಂಗ್ರೆಸ್​​ನಲ್ಲಿದ್ದಾಗ ನನ್ನ ಜೊತೆಗೆ ಶಾಸಕರಾಗಿದ್ದರು. ಪಕ್ಷ ಯಾವುದೇ ಇದ್ದರೂ ವಯಕ್ತಿಕ ಸಂಬಂಧಕ್ಕೆ ಮತ್ಸರ ಇಲ್ಲ. ಇವತ್ತು ಅವರು ನಮ್ಮ ಜೊತೆಯಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.

ಮಧ್ಯಾಹ್ನ 3ರ ತನಕ ವಿಜಯನಗರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ: ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರು, ಅಂತಿಮ ದರ್ಶನಕ್ಕೆ ಸಲಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 3ರ ತನಕ ವಿಜಯನಗರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಬಳಿಕ ಮೈಸೂರಿನ ಕಾಂಗ್ರೆಸ್ ಕಚೇರಿಗೆ ಪಾರ್ಥಿವ ಶರೀರ ತಲುಪಲಿದೆ. ನಂತರ ನಂಜನಗೂಡಿಗೆ ಪಾರ್ಥಿಕ ಶರೀರವನ್ನು ಕೊಂಡೊಯ್ಯಲಾಗುತ್ತದೆ. ನಾಳೆ ಸ್ವಗ್ರಾಮವಾದ ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತೆ ಎಂದರು.

ದಾವಣಗೆರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹ್ಮದ್ ಹಾಗು ಹರಿಹರ ಶಾಸಕ ಎಸ್ ರಾಮಪ್ಪನವರು ಧ್ರುವನಾರಾಯಣ್ ಅಗಲಿಕೆ ಸಂತಾಪ ಸೂಚಿಸಿದರು. ಗೆಳೆಯನ ಸಾವಿನಿಂದ ದುಃಖಿತರಾದ ಸಲೀಂ ಅಹ್ಮದ್, ಧ್ರುವನಾರಾಯಣ್ ಅಗಲಿಕೆ ನಂಬಲು ಆಗುತ್ತಿಲ್ಲ, 40 ವರ್ಷಗಳಿಂದ ಜೊತೆಯಲ್ಲಿ ಕೆಲಸ ಮಾಡಿದ್ದೆವು, ಎನ್​ಎಸ್​ಯುಐನಲ್ಲೂ ಕೆಲಸ ಮಾಡಿದ್ದೇವು. ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸಂಘಟನೆ ಹಾಗು ಚುನಾವಣೆ ತಂತ್ರಗಾರಿಕರ ಬಗ್ಗೆ ಸುರ್ಜೇವಾಲರವರೊಂದುಗೆ ನಿನ್ನೆ ಬೆಳಿಗ್ಗೆ ಇಬ್ಬರು ಚರ್ಚಿಸಿದ್ದೇವು, 24 ಗಂಟೆಯಲ್ಲಿ ಅವರು ನಮ್ಮನ್ನು ಅಗಲಿದ್ದು ನಂಬಲಾಗುತ್ತಿಲ್ಲ ಎಂದರು.

ಇನ್ನು ಹರಿಹರದ ಕಾಂಗ್ರೆಸ್ ಶಾಸಕ ಪ್ರತಿಕ್ರಿಯಿಸಿ ಧೃವ ನಾರಾಯಣ್ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ, ಧೃವ ನಾರಾಯಣ್ ನಿಧನಕ್ಕೆ ಹರಿಹರ ಶಾಸಕ ಎಸ್ ರಾಮಪ್ಪ ಸಂತಾಪ ಸೂಚಿಸಿದರು.

ಇದನ್ನೂ ಓದಿ: ಮಾಜಿ ಸಂಸದ ಆರ್​ ಧ್ರುವನಾರಾಯಣ್​ ಇನ್ನಿಲ್ಲ: ಗಣ್ಯರಿಂದ ಸಂತಾಪ

Last Updated : Mar 11, 2023, 3:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.