ETV Bharat / state

ಕಾಂಗ್ರೆಸ್‌ಗೆ ನಾವು ಮುಸ್ಲಿಮರ ವೋಟಿಗೆ ಕೈ ಹಾಕ್ತೀವಿ ಅನ್ನೋ ಭಯ: ಈಶ್ವರಪ್ಪ

author img

By

Published : Dec 15, 2022, 1:22 PM IST

Updated : Dec 16, 2022, 6:43 AM IST

ಕಾಂಗ್ರೆಸ್​ಗೆ​ ಈ ಹಿಂದೆ ಮುಸ್ಲಿಮರ ಮತಗಳು ನೂರಕ್ಕೆ ನೂರು ಸಿಗುತ್ತವೆ ಎಂಬ ನಂಬಿಕೆ ಇತ್ತು. ಆದರೆ, ಈಗ ಅವರಿಗೆ ಮುಸ್ಲಿಮರ ಮತಗಳು ಕೈತಪ್ಪುವ ಭಯ ಉಂಟಾಗಿದೆ ಎಂದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಹೇಳಿದ್ದಾರೆ.

former-minister-eshwarappa-slams-congress
ಮಾಜಿ ಸಚಿವ ಕೆಎಸ್​ ಈಶ್ವರಪ್ಪ

ಮಾಜಿ ಸಚಿವ ಕೆಎಸ್​ ಈಶ್ವರಪ್ಪ

ಶಿವಮೊಗ್ಗ: ಕಾಂಗ್ರೆಸ್​ಗೆ ಮುಸ್ಲಿಮರ ಮತಗಳು ನೂರಕ್ಕೆ ನೂರರಷ್ಟು ಸಿಗುತ್ತವೆ ಎಂಬ ನಂಬಿಕೆ ಈ ಹಿಂದೆ ಇತ್ತು. ಆದರೆ, ಈಗ ಆ ಮತಗಳು ಕೈತಪ್ಪುವ ಭಯ ಶುರುವಾಗಿದೆ ಎಂದು ಬಿಜೆಪಿ ಹಿರಿಯ ಶಾಸಕ ಕೆ.ಎಸ್​​ ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸಲ್ಮಾನರ ಮತಗಳು ನಮ್ಮದೇ ಆಸ್ತಿ ಎಂದು ಅಂದುಕೊಂಡಿದ್ದರು. ಬಿಜೆಪಿಯವರು ಮುಸಲ್ಮಾನರ ಮತಗಳಿಗೆ ಎಲ್ಲಿ ಕೈ ಹಾಕ್ತಾರೋ ಅನ್ನೋ ಭಯ ಅವರಲ್ಲಿ ಶುರುವಾಗಿದೆ. ಅದಕ್ಕೆ ಸಭೆ ಮಾಡಿದ್ದಾರೆ ಎಂದು ಟೀಕಿಸಿದರು.

ಈಗ ಕುಮಾರಸ್ವಾಮಿ ಅನೇಕ ಭಾಗದಲ್ಲಿ ಪಂಚರತ್ನ ಯಾತ್ರೆ ಮಾಡ್ತಾ ಇದ್ದಾರೆ. ಅನೇಕ ಮುಸ್ಲಿಮರು ಆ ಸಭೆಗೆ ಹೋಗ್ತಿದ್ದಾರೆ. ಜೊತೆಗೆ ಆಪ್ ಪಕ್ಷ ಕೂಡ ಮುಸ್ಲಿಮರ ಮತ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ: ಅವರು ಹೇಗೆ ಬೇಕಾದರೂ ಮತಗಳನ್ನು ಹಂಚಿಕೊಳ್ಳಲಿ. ಹಿಂದುತ್ವದ ವಿಚಾರದಲ್ಲಿ ಬಿಜೆಪಿ ದೇಶದಲ್ಲಿ ಹೋರಾಟ ಮಾಡುತ್ತಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದಿದೆ. ಗುಜರಾತ್‌ನಲ್ಲೂ ನಿರೀಕ್ಷೆಗೂ ಮೀರಿ ಬೆಂಬಲ ಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲೂ ಕೂಡ ಹಿಂದುತ್ವದ ಆಧಾರದ ಮೇಲೆ ಚುನಾವಣೆ ಮಾಡ್ತೇವೆ. 150ಕ್ಕೂ ಹೆಚ್ಚು ಸ್ಥಾನ ಗೆದ್ದು, ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಬಸ್ ಯಾತ್ರೆ : ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಸಿದ್ದರಾಮಯ್ಯ ಒಂದು ಬಸ್ಸಿನಲ್ಲಿ, ಡಿ.ಕೆ.ಶಿವಕುಮಾರ್ ಇನ್ನೊಂದು ಬಸ್‌ನಲ್ಲಿ ಹೋಗ್ತೀನಿ ಎಂದಿದ್ದರು. ಎಲ್ಲಾ ಪಕ್ಷದಲ್ಲೂ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಬಿಜೆಪಿಯಲ್ಲೂ ಇದೆ. ಆದರೆ, ಮಲ್ಲಿಕಾರ್ಜುನ ಖರ್ಗೆಯವರು ಒಂದೇ ಬಸ್‌ನಲ್ಲಿ ಹೋಗ್ಬೇಕು ಎಂದು ಹೇಳಿದ್ದಾರೆ. ಅದನ್ನು ಒಪ್ಪಿಕೊಂಡು ಬಂದಿದ್ದಾರೆ. ತುಂಬಾ ಸಂತೋಷ. ಮೇಲಿನವರು ಎಲ್ಲಾ ರಾಜಕೀಯ ಪಕ್ಷಕ್ಕೂ ಕಡಿವಾಣ ಹಾಕಿದಾಗ ಒಂದು ಶಿಸ್ತು ಬರುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ ಸಭೆ ನಡೆಸಿದ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯನವರಿಗೆ ಬೇರೆ ಬೇರೆ ಮಾಡೋದು ರಕ್ತಗತವಾಗಿ ಬಂದಿದೆ. ಬಹಳ ಹಿಂದಿನಿಂದಲೂ ಈ ರೀತಿ ಮಾಡಿಕೊಂಡು ಬಂದಿದ್ದಾರೆ. ದೇವೆಗೌಡರ ಜೊತೆ ಇದ್ದಾಗ ಅವರು ಅಹಿಂದಾ ಸಮಾವೇಶ ಮಾಡಬೇಡಿ ಅಂದಿದ್ದರು. ಆದರೂ ಸಮಾವೇಶ ಮಾಡಿದ್ದಕ್ಕೆ ಪಕ್ಷದಿಂದ ತೆಗೆದು ಹಾಕಿದರು. ರಾಜ್ಯದಲ್ಲಿ ಸಿಎಂ ಆಗಿದ್ದವರು ನೀವು. ನಿಮ್ಮ ಕಾರ್ಯಕರ್ತರು ಒಳ್ಳೆ ನಾಯಕರ ಅಂದುಕೊಂಡಿದ್ದಾರೆ ಎಂದರು.

ಸಚಿವನಾಗುವುದು ಹೈಕಮಾಂಡ್​ಗೆ ಬಿಟ್ಟಿದ್ದು: ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು, ಸಚಿವ ಸಂಪುಟಕ್ಕೆ ಸೇರೋದು ಬಿಡೋದು ನಾನು ತೀರ್ಮಾನ ಮಾಡಲು ಆಗುವುದಿಲ್ಲ. ಕೇಂದ್ರದ ನಾಯಕರು ತೀರ್ಮಾನ ಮಾಡಿದರೆ ಮಂತ್ರಿ ಆಗುತ್ತೇನೆ. ಇಲ್ಲ ಅಂದರೆ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.

ಮಹಾರಾಷ್ಟ್ರ ಸರ್ಕಾರದಿಂದ ಉದ್ಧಟತನ: ಸಿಎಂ ಬೊಮ್ಮಾಯಿ ಮಹಾರಾಷ್ಟ್ರದ ಉದ್ಧಟತನದ ಬಗ್ಗೆ ಚರ್ಚಿಸಲು ದೆಹಲಿ ಹೋಗಿದ್ದಾರೆ. ಅನೇಕ ಮರಾಠಿಗರು ರಾಜ್ಯದಲ್ಲಿ, ಅನೇಕ ಕನ್ನಡಿಗರು ಮಹಾರಾಷ್ಟ್ರದಲ್ಲಿ ಇದ್ದಾ‌ರೆ‌. ಇಬ್ಬರೂ ಅಣ್ಣ ತಮ್ಮಂದಿರಂತೆ ಇದ್ದೇವೆ. ಆದರೆ, ಮಹಾರಾಷ್ಟ್ರ ಸರ್ಕಾರ ರಾಜಕೀಯಕ್ಕಾಗಿ ಕನ್ನಡಿಗರು ಮರಾಠಿಗರನ್ನು ಒಡೆದು, ಗಲಭೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ.‌ ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತ ಬಿಜೆಪಿ ಮುಖಂಡರು; ಶಿಷ್ಟಾಚಾರ ಉಲ್ಲಂಘನೆ

Last Updated : Dec 16, 2022, 6:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.