ETV Bharat / state

ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಲು ನಾಳೆ ದೆಹಲಿ ಪ್ರವಾಸ: ಸದಾನಂದಗೌಡ

author img

By ETV Bharat Karnataka Team

Published : Oct 23, 2023, 12:57 PM IST

ಕಾಂಗ್ರೆಸ್​ ಸರ್ಕಾರದ ದುರಾಡಳಿತ ವಿರುದ್ಧ ವರಿಷ್ಠರ ಜೊತೆ ಮಾತುಕತೆ ನಡೆಸಲು ನಾಳೆ ದೆಹಲಿಗೆ ತೆರಳವುದಾಗಿ ಮಾಜಿ ಸಿಎಂ ಡಿವಿ ಸದಾನಂದ ಗೌಡ ಹೇಳಿದ್ದಾರೆ.

former-cm-dv-sadananda-gowda-visits-delhi-tomorrow
ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಲು ನಾಳೆ ದೆಹಲಿ ಪ್ರವಾಸ: ಸದಾನಂದಗೌಡ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ದ್ವೇಷದ ರಾಜಕಾರಣ ಹೆಚ್ಚಾಗಿದ್ದು ಇದೆಲ್ಲವನ್ನೂ ಜನರಿಗೆ ತಿಳಿಸಲು ಇದು ಸಕಾಲವಾಗಿದೆ. ಹಾಗಾಗಿ ಈ ಸಂಬಂಧ ವರಿಷ್ಠರ ಜೊತೆ ಮಾತುಕತೆ ನಡೆಸಲು ನಾಳೆ ದೆಹಲಿಗೆ ತೆರಳುವುದಾಗಿ ಮಾಜಿ ಸಿಎಂ ಡಿವಿ ಸದಾನಂದಗೌಡ ತಿಳಿಸಿದ್ದಾರೆ.

ಸಂಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ದಸರಾ ಪೂಜೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ. ಸರ್ಕಾರವು ರೈತರಿಗೆ ಸಹಕಾರ ಕೊಡುತ್ತಿಲ್ಲ, ದ್ವೇಷದ ರಾಜಕಾರಣ ಮಾಡುತ್ತಿದೆ. ತಮ್ಮ ವಿರೋಧಿಗಳನ್ನು ಯಾವ ರೀತಿಯಲ್ಲಿ ಬೇಕಾದರೂ ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಆಂತರಿಕ ಕಚ್ಚಾಟ ಶುರುವಾಗಿದೆ. ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರಿಂದ ಆಂತರಿಕ ಕಚ್ಚಾಟ ಉಂಟಾಗಿದೆ. ಆಡಳಿತಕ್ಕೆ ಬಂದ ಇಷ್ಟು ದಿನದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅವರ ಏಜೆಂಟ್ ಮೂಲಕ ಕಲೆಕ್ಷನ್ ಸೆಂಟರ್ ಮಾಡಿಕೊಂಡಿದೆ. ಇದೆಲ್ಲವನ್ನೂ ರಾಷ್ಟ್ರೀಯ ನಾಯಕರ ಗಮನಕ್ಕೆ ತರಬೇಕಿದೆ. ಜನರಿಗೆ ತಿಳಿಸಲು ಇದು ಅತ್ಯಂತ ಸಕಾಲ. ಈ ಸಂಬಂಧ ನಾಳೆ ದೆಹಲಿಗೆ ಹೋಗಲಿದ್ದೇನೆ ಎಂದರು.

ಕಾಂಗ್ರೆಸ್ ಚುನಾವಣೆ ಹಿನ್ನೆಲೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಣ ವರ್ಗಾವಣೆ ಮಾಡ್ತಿದೆ. ಅದರ ಬಗ್ಗೆ ಕಾಂಗ್ರೆಸ್ ಮಾತನಾಡ್ತಿಲ್ಲ. ಕಾಂಗ್ರೆಸ್ ನಾಯಕರ ಹಣೆ ಬರಹ ಇಷ್ಟೇ. ಕಾಂಗ್ರೆಸ್ ಮುಕ್ತ ಭಾರತ ಆಗಬೇಕು. ಲೂಟಿ ಹೊಡೆಯುವ ಕೆಲಸ ಮಾಡಲಾಗ್ತಿದೆ. ಅದೆಲ್ಲವನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.

ರಾಜ್ಯಾಧ್ಯಕ್ಷ ಆಯ್ಕೆ ಹೈಕಮಾಂಡ್​ ಬಿಟ್ಟ ವಿಚಾರ : ರಾಜ್ಯಾಧ್ಯಕ್ಷ ಆಯ್ಕೆ ವಿಚಾರ ಕೇಂದ್ರದ ವರಿಷ್ಠರಿಗೆ ಬಿಟ್ಟ ವಿಚಾರ. ಈಗಾಗಲೇ ವಿಳಂಬ ಅಗಿರೋದು ಸತ್ಯ. ಇದು ಸವಾಲಿನ ಕೆಲಸವಾಗಿದೆ. ಸುದೀರ್ಘವಾದ ಚರ್ಚೆ ಮಾಡುತ್ತೇನೆ. ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷೆ ಆಗ್ತಾರಾ ಅನ್ನೋ ವಿಚಾರದಲ್ಲಿ ನಾನು ಏನೂ ಹೇಳಲು ಸಾಧ್ಯವಿಲ್ಲ, ಅವರು ಆಗಬಹುದಾ, ಹೋಗಬಹುದಾ ಅನ್ನೋ ಬಗ್ಗೆ ಚರ್ಚೆ ಮಾಡಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಹೈಕಮಾಂಡ್ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಲಿದೆ. ಹಾಗಾಗಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹಾರಿಕೆ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ. ಹೈಕಮಾಂಡ್ ಯಾರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೂ ನಮ್ಮೆಲ್ಲರ ಸಹಕಾರ ಇದ್ದೇ ಇರುತ್ತದೆ ಎಂದರು.

ಹೈಕಮಾಂಡ್ ವಿರುದ್ಧ ಸದಾನಂದಗೌಡ ಅಸಮಾಧಾನ ಎಂದು ಮಾಧ್ಯಮದಲ್ಲಿ ವರದಿ ಬರುತ್ತಿದೆ. ಆದರೆ ಇದು ಅಸಮಾಧಾನ ಅಲ್ಲ. ಪಕ್ಷವನ್ನು ಮತ್ತೆ ಕಟ್ಟುವ ಚಿಂತನೆ. ಯಾರು ಏನು ತಿಳಿದುಕೊಂಡರೂ ಸರಿ. ಪಕ್ಷ ಕಟ್ಟುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ. ಪಂಚ ರಾಜ್ಯಗಳ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಬಿಜೆಪಿ ಜಾತಿ ಲೆಕ್ಕಾಚಾರದಲ್ಲಿ ರಾಜಕಾರಣ ಮಾಡೋದಿಲ್ಲ. ಒಕ್ಕಲಿಗರನ್ನೇ ಕರೆದು ಮಾತನಾಡುತ್ತಿದೆ ಅನ್ನೋದು ಸುಳ್ಳು ಎಂದರು.

ಅಣ್ಣಾಮಲೈ ಮನೆ ಮುಂದೆ ದೊಡ್ಡ ಬಿಜೆಪಿ ಬಾವುಟ ಹಾಕಿದ್ದರು. ಮೊನ್ನೆ ಅದನ್ನು ತೆರವು ಮಾಡಲಾಗಿದೆ. ಈ ವೇಳೆ ದೊಡ್ಡ ಹೊಡೆದಾಟ ಆಗಿದೆ. ಹಲವು ಕಾರ್ಯಕರ್ತರಿಗೆ ಗಾಯಗಳಾಗಿವೆ. ಅದರ ವರದಿ ಕೊಡೋದಕ್ಕೆ ಸಮಿತಿ ರಚಿಸಲಾಗಿದೆ. ಸಮಿತಿ ನೇತೃತ್ವ ನನಗೆ ವಹಿಸಲಾಗಿದ್ದು, ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು ಅದಕ್ಕಾಗಿ ತಮಿಳುನಾಡಿಗೆ ಹೋಗಲಿದ್ದೇನೆ ಎಂದು ಹೇಳಿದರು.

ಕರ್ನಾಟಕದಲ್ಲಿ ನೋಡಬಹುದು ಸೋಷಿಯಲ್ ಮೀಡಿಯಾದಲ್ಲಿ ಏನಾದರು ಪೋಸ್ಟ್​ ಹಾಕಿದರೆ ಅರೆಸ್ಟ್ ಮಾಡ್ತಾರೆ. ಬಿಜೆಪಿಯಲ್ಲಿ ಸಬಲವಾಗಿರೋರನ್ನು ಕುಗ್ಗಿಸೋ ಕೆಲಸ ಮಾಡುತ್ತಿದ್ದಾರೆ. ಕಲಬುರಗಿಯಲ್ಲಿ ಕಾರ್ಯಕರ್ತನ ಆತ್ಮಹತ್ಯೆಗೆ ಕಾರಣ ಆಗಿದ್ದಾರೆ. ಮಂಡ್ಯದಲ್ಲಿ ಸಚಿವರ ವರ್ತನೆ ನೋಡಿದ್ದೇವೆ. ಬಿಜೆಪಿ ಮತ್ತೆ ಪುಟಿದೆಳುವಂತೆ ಮಾಡಬೇಕು. ಪಕ್ಷ ಮತ್ತೆ ಸಂಘಟನೆ ಮಾಡಬೇಕು. ಆ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ : ಕಾಂಗ್ರೆಸ್ ಮುಖಂಡನಿಗೆ ಕುಳಿತುಕೊಳ್ಳಲು ಕುರ್ಚಿ ಸಿಕ್ಕಿಲ್ಲ ಎಂದು ಗದ್ದಲ: ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲೇ 'ಕೈ' ಕುರ್ಚಿ ಗಲಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.