ETV Bharat / state

ಬೆಂಗಳೂರು: ನಕಲಿ ವಿದೇಶಿ ಕರೆನ್ಸಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿ ಕಿಡ್ನಾಪ್​, ಮುಂದಾಗಿದ್ದೇನು?

author img

By ETV Bharat Karnataka Team

Published : Nov 11, 2023, 8:08 AM IST

ಅಮೆರಿಕನ್ ಡಾಲರ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದರೆಂಬ ಆರೋಪ ಕೇಳಿ ಬಂದಿದೆ.

ನಕಲಿ ವಿದೇಶಿ ಕರೆನ್ಸಿ ಪ್ರಕರಣ
ನಕಲಿ ವಿದೇಶಿ ಕರೆನ್ಸಿ ಪ್ರಕರಣ

ಬೆಂಗಳೂರು: ಇತ್ತೀಚೆಗೆ ಚಿಂದಿ ಆಯುವ ಪಶ್ಚಿಮ ಬಂಗಾಳ ಮೂಲದ ಸೇಲ್ಮನ್ ಎಸ್.ಕೆ ಎಂಬ ಕಾರ್ಮಿಕನಿಗೆ ಸಿಕ್ಕಿದ್ದ ಅಮೆರಿಕನ್ ಡಾಲರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದ ತೌಹಿದುಲ್ ಇಸ್ಲಾಂ ಎಂಬುವರನ್ನು ಕೆಲ ದುಷ್ಕರ್ಮಿಗಳು ಅಪಹರಿಸಿ ಬಿಡುಗಡೆ ಮಾಡಿದ್ದಾರೆಂಬ ಆರೋಪಗಳಿದ್ದು, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಶುಕ್ರವಾರ ವೀರಣ್ಯಾಪಾಳ್ಯದ ರೈಲ್ವೆ ಗೇಟ್ ಬಳಿಯ ಸುಮಾರು ನೂರು ಮೀಟರ್ ಅಂತರದಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲವೊಂದರಲ್ಲಿ ಸೇಲ್ಮನ್‌ಗೆ, 30ಲಕ್ಷ ರೂ. ಮೌಲ್ಯವುಳ್ಳ ಯುಎಸ್ ಡಾಲರ್‌ಗಳು ಪತ್ತೆಯಾಗಿದ್ದವು. ಬಳಿಕ ಈತ, ಸ್ವರಾಜ್ ಇಂಡಿಯಾ ಸಂಘಟನೆಯ ಸಾಮಾಜಿಕ ಕಾರ್ಯಕರ್ತ ಆರ್. ಕಲೀಂ ಉಲ್ಲಾ ಎಂಬುವರ ಮೂಲಕ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ಮಾಹಿತಿ ತಿಳಿಸಿದ್ದರು. ನಂತರ ಪೊಲೀಸರು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಇದು ಕಲರ್ ಜೆರಾಕ್ಸ್ ನೋಟುಗಳು ಅನ್ನೋದು ಗೊತ್ತಾಗಿತ್ತು.

ನ.7ರಂದು ದುಷ್ಕರ್ಮಿಗಳು ತೌಹಿದುಲ್ ಇಸ್ಲಾಂ ಅವರನ್ನು ಅವರ ನಿವಾಸದಿಂದಲೇ ಅಪಹರಿಸಿ, ಯುಎಸ್ ಕರೆನ್ಸಿಗಳನ್ನು ಅವರಿಗೆ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ವೇಳೆ ತೌಹಿದುಲ್ ತನ್ನ ಬಳಿ ಯಾವುದೇ ವಿದೇಶಿ ನೋಟುಗಳಿಲ್ಲ. ಸಿಕ್ಕ ಎಲ್ಲಾ ನೋಟುಗಳನ್ನು ಪೊಲೀಸರಿಗೊಪ್ಪಿಸಲಾಗಿದೆ ಎಂದು ಹೇಳಿದ್ದಾರೆ. ಅಷ್ಟಾದರೂ, ಈ ದುಷ್ಕರ್ಮಿಗಳು ಯುಎಸ್ ನೋಟುಗಳಿಗಾಗಿ ಒತ್ತಾಯಿಸಿದ್ದರು. ದುಷ್ಕರ್ಮಿಗಳು ಪರಿಶೀಲಿಸಿದಾಗ ತೌಹಿದುಲ್ ಬಳಿಯಲ್ಲಿ ಯಾವುದೇ ಯುಎಸ್ ಡಾಲರ್ ನೋಟುಗಳಿಲ್ಲ ಎಂದು ಗೊತ್ತಾಗಿ, ನ.8ರಂದು ಅಪಹರಣಕಾರರು ನಾಗವಾರಕ್ಕೆ ಕರೆತಂದು ಮಾರ್ಗಮಧ್ಯೆಯಲ್ಲಿ ಬಿಟ್ಟು ಕಳುಹಿಸಿದ್ದಾರೆ.

ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಲ್ಲಿ ತೌಹಿದುಲ್ ಕುಟುಂಬದವರಿಗೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ತೌಹಿದುಲ್ ಅಪಹರಣ ಸಂಬಂಧ ಈವರೆಗೂ ಯಾವುದೇ ಪೊಲೀಸರಿಗೆ ದೂರು ನೀಡಿಲ್ಲ. ಪೊಲೀಸರು ಹಲವು ಬಾರಿ ಕೇಳಿದರೂ ದೂರು ನೀಡಲು ನಿರಾಕರಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಪ್ರಕರಣ: ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಬಾಲಕನೊಬ್ಬನ ಅಪಹರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಅರ್ಧ ಗಂಟೆಯಲ್ಲಿ ಅಪಹರಣಾಕಾರರನ್ನು ಬಂಧಿಸಿದ್ದರು. ಕೆಜಿಎಫ್ ತಾಲೂಕಿನ ಬೇತಮಂಗಲ ಮೂಲದ ವೆಂಕಟೇಶ್ ಹಾಗೂ ಅರಹಳ್ಳಿ ಗ್ರಾಮದ ಶ್ರೀಕಾಂತ್ ಎಂಬುವರನ್ನು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ವಿಜಯಪುರ ಶಾಲಾ ಬಾಲಕಿ ಅಪಹರಣ ಪ್ರಕರಣ: ಐವರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.