ETV Bharat / state

ಸಾರ್ವಜನಿಕ ಆಸ್ತಿಗೆ ಹಾನಿ: ನಾರಾಯಣ ಗೌಡ ಸೇರಿ 6 ಜನರ ವಿರುದ್ಧ ಎಫ್‌ಐಆರ್

author img

By ETV Bharat Karnataka Team

Published : Dec 28, 2023, 8:12 PM IST

ಕರವೇ ಕಾರ್ಯಕರ್ತರು ದೇವನಹಳ್ಳಿ ಸಾದಹಳ್ಳಿಗೇಟ್​ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿರುವ ಘಟನೆಗೆ ಸಂಬಂಧಿಸಿದಂತೆ ನಾರಾಯಣ ಗೌಡ ಸೇರಿ 6 ಜನರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Karave protest
ಕರವೇ ಪ್ರತಿಭಟನೆ

ಯಲಹಂಕ(ಬೆಂಗಳೂರು ಗ್ರಾಮಾಂತರ): ವಾಣಿಜ್ಯ ಮಳಿಗೆಗಳು ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಹಾಕುವಂತೆ ಒತ್ತಾಯಿಸಿ ಬುಧವಾರ ನಾರಾಯಣ ಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದೇವನಹಳ್ಳಿ ಸಾದಹಳ್ಳಿ ಗೇಟ್​ನಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಘಟನಾವಳಿಗಳಿಗೆ ಸಂಬಂಧಿಸಿದಂತೆ ನಾರಾಯಣ ಗೌಡ ಸೇರಿದಂತೆ 6 ಜನರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಪಿಎಸ್‌ಐ ಲಿತೀನ್ ಎಂಬವರು ದೂರಿನನ್ವಯ ನ್ಯಾಷನಲ್ ಹೈವೇ ಅಥಾರಿಟಿ ಆ್ಯಕ್ಟ್, IPC ಸೆಕ್ಷನ್‌ಗಳಾದ 283, 188, 427, 341, 188, 283ರಡಿ ಎಫ್‌ಐಆರ್ ದಾಖಲಾಗಿದೆ. ನಾರಾಯಣ ಗೌಡ A1, ಜಗದೀಶ್ A2, ಸುರೇಶ್ A3 ಬಿ.ಕೆ.ನಾರಾಯಣ ಸ್ವಾಮಿ A4, ಬಿ.ಟಿ.ಅನಿಲ್ ಕುಮಾರ್ A5 ಹಾಗು ಅಂಬರೀಶ್ A6 ಆರೋಪಿಗಳೆಂದು ಗುರುತಿಸಲಾಗಿದೆ.

ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರವೇ ಮುಖಂಡರ ವಿರುದ್ಧ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ, ಪೊಲೀಸ್​ ಕಾನ್ಸ್‌ಟೆಬಲ್ ಮೇಲೆ ಉಗಿದಿರುವುದು, ಹೆದ್ದಾರಿ ತಡೆ ಮತ್ತು ಗಲಾಟೆ ಕುರಿತಂತೆ ಮೂರು ಪ್ರಕರಣಗಳು ದಾಖಲಾಗಿದೆ. ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾರಾಯಣಗೌಡ ಅವರ ಆರೋಗ್ಯ ತಪಾಸಣೆ ನಡೆಸಿ, ಪರಪ್ಪನ ಅಗ್ರಹಾರ ಜೈಲಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಕ್ರಾಸ್ ಬಳಿ ಬಸ್ ತಡೆದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಬಂಧನ ಖಂಡಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಿದ್ದರು. ತಾಲೂಕು ಕಚೇರಿ ವೃತ್ತದಲ್ಲಿ ಸೇರಿ ಸರ್ಕಾರದ ಕ್ರಮ ಖಂಡಿಸಿ, ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ-ಪರಮೇಶ್ವರ್: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಧ್ಯಮದವರ ಜೊತೆ ಈ ಕುರಿತು ಮಾತನಾಡಿ, ಪ್ರತಿಭಟನೆಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ. ಕನ್ನಡ ನಾಮಫಲಕ ವಿಚಾರಕ್ಕೆ ಒತ್ತಾಯಪೂರ್ವಕವಾಗಿ ಅಂಗಡಿ, ಶಾಪಿಂಗ್ ಮಾಲ್‌ಗಳ ಮೇಲೆ ದಾಳಿ ಮಾಡುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಸರ್ಕಾರ ಅಥವಾ ಬಿಬಿಎಂಪಿಯವರನ್ನು ಒತ್ತಾಯಿಸಬೇಕಿತ್ತು ಎಂದು ಹೇಳಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ವ್ಯಾಪಾರಸ್ಥರು ಪೊಲೀಸರ ರಕ್ಷಣೆ ಕೋರಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಪೊಲೀಸರು ಕಣ್ಣಾರೆ ನೋಡಿಕೊಂಡು ಸುಮ್ಮನಿರಬೇಕು ಎಂದು ಬಯಸುವುದು ತಪ್ಪು. ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು ಎಂದು ಸಚಿವರು ಎಚ್ಚರಿಸಿದರು.

ಇದನ್ನೂಓದಿ: ಬೆಂಗಳೂರಿನ ಜತೆ ಹೈದರಾಬಾದ್​ ಕೂಡ ಐಟಿ ಹಬ್​: ಚಂದ್ರಬಾಬು ನಾಯ್ಡು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.