ETV Bharat / state

ಕಾಂಗ್ರೆಸ್ ಸೇರ್ಪಡೆಗೊಂಡ ಗೋಪಾಲಕೃಷ್ಣ : ಹುಡುಗಾಟಕ್ಕಾಗಿ ಬಿಜೆಪಿಗೆ ಹೋಗಿದ್ದೆ ಎಂದ ಮಾಜಿ ಶಾಸಕ

author img

By

Published : Apr 3, 2023, 3:16 PM IST

ಮೊನ್ನೆಯಷ್ಟೇ ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದ ಎನ್​ ವೈ ಗೋಪಾಲಕೃಷ್ಣ ಅವರು ಇಂದು ಕಾಂಗ್ರೆಸ್​ ಪಕ್ಷವನ್ನು ಸೇರಿಕೊಂಡಿದ್ದಾರೆ.

Ex MLA Gopalakrishna joined Congress
ಕಾಂಗ್ರೆಸ್​ ಸೇರಿದ ಮಾಜಿ ಶಾಸಕ ಗೋಪಾಲಕೃಷ್ಣ

ಬೆಂಗಳೂರು: ಕೂಡ್ಲಿಗಿ ಮಾಜಿ ಶಾಸಕ ಎನ್​ ವೈ ಗೋಪಾಲಕೃಷ್ಣ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರಿದರು. ಡಿಕೆ ಶಿವಕುಮಾರ್​ ಅವರು ಪಕ್ಷದ ಬಾವುಟ ನೀಡಿ, ಶಾಲು ಹೊದಿಸಿ ಬರಮಾಡಿಕೊಂಡರು. ಇವರ ಜತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್​ಗೆ ಬೆಂಬಲಿಸಿ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ನಮ್ಮ ನಡೆ ಅಧಿಕಾರದ ಕಡೆ ಆಗುತ್ತಿದೆ. ಜನ ತೋರಿಸುತ್ತಿರುವ ಪ್ರೀತಿ ಹಾಗೂ ಬಿಜೆಪಿ ತೊರೆದು ನಮ್ಮ ಮನೆ ಬಾಗಿಲು ತಟ್ಟುತ್ತಿರುವ ಶಾಸಕರು ಇದಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಮೊನ್ನೆ ಗೋಪಾಲಕೃಷ್ಣ ಅವರು ಬಿಜೆಪಿಗೆ ರಾಜೀನಾಮೆ ಕೊಟ್ಟು ಇಂದು ಕಾಂಗ್ರೆಸ್​ ಸೇರುತ್ತಿದ್ದಾರೆ. ಶಿವಲಿಂಗೇಗೌಡರು ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 9 ರಂದು ನಮ್ಮ ಕ್ಷೇತ್ರದಲ್ಲೇ ಕಾಂಗ್ರೆಸ್ ಸೇರುತ್ತೇನೆ ಎಂದಿದ್ದಾರೆ. ನನಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕರೆ ಮಾಡಿದ್ದಾರೆ. ನಾವು ಬಂದು ಸದಸ್ಯತ್ವ ಸ್ವೀಕರಿಸಿ ಎಂದಿದ್ದೇವೆ ಎಂದರು.

ಕಾಂಗ್ರೆಸ್ ಎಂದರೆ ಹೋರಾಟ, ಸೇರುವ ನಾಯಕರು, ಶಾಸಕರು, ಕಾರ್ಯಕರ್ತರು ನದಿಯಾಗಿ ಬಂದು ಸಾಗರ ಸೇರುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧವಾಗಿ ರಾಜ್ಯದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬೆಂಬಲ ನೀಡುತ್ತಿದ್ದಾರೆ. 3, 4, 5 ಸಾರಿ ಶಾಸಕರಾಗಿದ್ದವರು ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಪುಟ್ಟಣ್ಣ, ಬಾಬೂರಾವ್​ ಚಿಂಚನ್​ಸೂರ್ ಸಾಕಷ್ಟು ಕಾಲಾವಧಿ ಇರುವಾಗಲೇ ಎಂಎಲ್​ಸಿ ಸ್ಥಾನ ತೊರೆದು ಬಂದಿದ್ದಾರೆ. ಇವರೆಲ್ಲಾ ದಡ್ಡರಲ್ಲ. ಜೆಡಿಎಸ್​ನಲ್ಲಿ ಸಾಕಷ್ಟು ಮಂದಿ ಬಂದು ಸೇರಿದ್ದನ್ನು ಗಮನಿಸಿದ್ದೀರಿ. ಬದಲಾವಣೆಗೆ ಜನ ತೀರ್ಮಾನಿಸಿದ್ದಾರೆ. ಡಬಲ್ ಎಂಜಿನ್ ಸರ್ಕಾರದಿಂದ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಗೊತ್ತಾಗಿದೆ ಎಂದರು.

ಇನ್ನು ಸಾಕಷ್ಟು ಜನ ಕಾಂಗ್ರೆಸ್ ಮನೆ ಬಾಗಿಲು ಬಡಿಯುತ್ತಿದ್ದಾರೆ. ನಮಗೆ ಅವರಿಗೆ ಕಾಲಾವಕಾಶ ಕಲ್ಪಿಸಲು ಆಗುತ್ತಿಲ್ಲ. ಇಂದು ಎನ್​.ವೈ, ಗೋಪಾಲಕೃಷ್ಣ ಅರ್ಜಿ ಸ್ವೀಕರಿಸಿ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದೇನೆ. ಅಲ್ಲಿದ್ದ ಒಬ್ಬ ಮಾಜಿ ಶಾಸಕರನ್ನು ಬಿಜೆಪಿಯವರು ಕರೆದುಕೊಂಡರು. ಹಾಲಿ ಅಭ್ಯರ್ಥಿ ಬಾಬು ಸಾಕಷ್ಟು ಉತ್ತಮ ಕಾರ್ಯ ಮಾಡಿದ್ದಾರೆ. ಅವರನ್ನೂ ಗಮನದಲ್ಲಿ ಇಟ್ಟುಕೊಂಡಿದ್ದೇವೆ. ಗೋಪಾಲಕೃಷ್ಣ ಬೇಷರತ್ತಾಗಿ ಕಾಂಗ್ರೆಸ್​ಗೆ ಬರುತ್ತಿದ್ದಾರೆ. ನೀವು ಶಾಸಕರು, ಕ್ಷೇತ್ರ ಇದೆ ಯಾಕೆ ಬರುತ್ತಿದ್ದೀರಿ ಎಂದು ಕೇಳಿದೆ. ಅಲ್ಲಿ ನಾನು ಹೋಗಿ ಎಲ್ಲವನ್ನೂ ನೋಡಿದ್ದೇನೆ. ನನ್ನ ಸಾವು ಕಾಂಗ್ರೆಸ್​ನಲ್ಲಿ ಅಗಬೇಕೆಂದು ಕಾಂಗ್ರೆಸ್​ಗೆ ಬಂದಿದ್ದೇನೆ ಎಂದಿದ್ದಾರೆ. ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧವಾದ ನಾಯಕ. ನಾನು ಅವರ ಚುನಾವಣೆ ಶ್ರಮ ಕಂಡಿದ್ದೇನೆ. ಬಿಜೆಪಿ ಗಾಳಕ್ಕೆ ಬಿದ್ದಿದ್ದರು, ಈಗ ವಾಪಸ್​ ಆಗಿದ್ದಾರೆ. ಈಗ ಅವರೊಂದಿಗೆ ಸಾವಿರಾರು ಕಾರ್ಯಕರ್ತರಿದ್ದಾರೆ. ನಾವೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್​ಗೆ ಸೇರಿಸಿಕೊಳ್ಳುತ್ತಿದ್ದೇನೆ ಎಂದರು.

ಪಕ್ಷಕ್ಕಾಗಿ ಶ್ರಮಿಸುತ್ತೇನೆ - ಗೋಪಾಲಕೃಷ್ಣ : ಕಾಂಗ್ರೆಸ್​ ಪಕ್ಷ ಸೇರ್ಪಡೆ ನಂತರ ಮಾತನಾಡಿದ ಎನ್​.ವೈ. ಗೋಪಾಲಕೃಷ್ಣ, ನನಗೆ ಪಕ್ಷದ ದೊಡ್ಡ ಬೆಂಬಲ ಇತ್ತು. ನನ್ನ ತಾಯಿ ಸಹ ಜಿಲ್ಲಾ ಪಂಚಾಯಿತಿಗೆ ಚುನಾವಣೆಗೆ ನಿಲ್ಲುವಾಗ ಕಾಂಗ್ರೆಸ್​ನಿಂದ ನಿಲ್ಲುತ್ತೇನೆ ಎಂದಿದ್ದರು. ಅಂದು ಅವರನ್ನು ನಾನು ಮತ್ತು ನನ್ನ ಅಣ್ಣ ಸೇರಿ ಗೆಲ್ಲಿಸಿಕೊಂಡಿದ್ದೆವು. ನಾನು ಪಕ್ಷಕ್ಕೆ ಪ್ರಾಮಾಣಿಕವಾಗಿ ಇದ್ದೆ. 1997ರಲ್ಲಿ ನನಗೆ ಡಿಕೆಶಿ ಟಿಕೆಟ್ ಕೊಡಿಸಿದರು. ಅನಿವಾರ್ಯವಾಗಿ ಜಾತಿ ಲೆಕ್ಕಾಚಾರದ ಹಿನ್ನೆಲೆ 2013ರಲ್ಲಿ ನನ್ನನ್ನು ಸೋಲಿಸುವ ಕಾರ್ಯ ಆಯಿತು.

ಕಾಂಗ್ರೆಸ್​ ರಾಜ್ಯ ನಾಯಕರು ನನ್ನನ್ನು ಮನೆ ಬಾಗಿಲಿಗೆ ಕರೆಸಿ ಟಿಕೆಟ್ ಕೊಡಿಸಿದ್ದರು. ಕಾಂಗ್ರೆಸ್ ಎಲ್ಲಾ ರಾಜ್ಯ ನಾಯಕರ ಪ್ರೀತಿ ನನ್ನ ಮೇಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಉತ್ತಮ ಕನಸುಗಾರರು. ಡಿಕೆಶಿ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್ ಕಟ್ಟಲು ಶ್ರಮಿಸಿದ್ದಾರೆ. ನಾನು ಕಳೆದುಕೊಂಡಿದ್ದ ಜಾಗಕ್ಕೆ ವಾಪಸ್ ಬಂದು ಹುಡುಕಿ ಗೌರವ ಪಡೆದಿದ್ದೇನೆ. ನನಗೆ ಆಶೀರ್ವಾದ ಮಾಡಿದರೆ ಇಡೀ ಚಿತ್ರದುರ್ಗ ಜಿಲ್ಲೆ ಜತೆ ಬಳ್ಳಾರಿ ಜಿಲ್ಲೆಯಲ್ಲೂ ಓಡಾಡಿ ಕೆಲಸ ಮಾಡುತ್ತೇನೆ. ಕೂಡ್ಲಗಿ ಕ್ಷೇತ್ರದ ಕಾರ್ಯಕರ್ತರಿಗೆ ಕರೆ ಕೊಟ್ಟ ಅವರು, ನಾನು ಅಲ್ಲಿ ಬಿಜೆಪಿ ಶಾಸಕನಾಗಿದ್ದೆ. ಅಲ್ಲಿ ಕೆಲಸ ಮಾಡಿದ್ದೆ. ಇದೀಗ ಅಲ್ಲಿ ಮತ್ತೆ ಕಾಂಗ್ರೆಸ್ ಅಲ್ಲಿಯೇ ಅಧಿಕಾರಕ್ಕೆ ಬರಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸ ಇದೆ ಎಂದರು.

ಹುಡುಗಾಟಕ್ಕೆ ತೆಗೆದುಕೊಂಡ ನಿರ್ಧಾರ - ಗೋಪಾಲಕೃಷ್ಣ: ಇನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ. ಈ ಹಿಂದೆ ನನ್ನ ಹೇಳಿಕೆಗಳ ವಿಚಾರದಲ್ಲಿಯೂ ಅಂದಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ನಾನು ಬಿಜೆಪಿಗೆ ಹೋಗಿದ್ದ ಸಂದರ್ಭ ಬೇರೆ, ಪರಿಸ್ಥಿತಿ ಬೇರೆ. ಸಾಕಷ್ಟು ತಪ್ಪು ಮಾಡಿದ್ದೆ ಆಗ, ನಾನು ಟಿಕೆಟ್​ಗಾಗಿ ನಾಯಕರ ಮನೆಗೆ ಹೋಗಿದ್ದೆ. ನನ್ನ ಮನೆ ಬಾಗಿಲಿಗೆ ಬಂದಿಲ್ಲ. ನಾನು ಹುಡುಗಾಟಕ್ಕೆ ಇಂತಹ ನಿರ್ಧಾರ ಕೈಗೊಂಡಿದ್ದೆ. ಈಗ ಮರಳಿ ಬಂದಿದ್ದೇನೆ ಎಂದು ಬಿಜೆಪಿಗೆ ಹೋಗಿ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರಲು ಅತಿ ದೊಡ್ಡ ಆಕಾಂಕ್ಷಿಗಳ ಪಟ್ಟಿಯೇ ಇದೆ. ಎಲ್ಲರಿಗೂ ಉತ್ತಮ ಸ್ಥಾನ ಮಾನ ಕಲ್ಪಿಸಲು ಸಾಧ್ಯವಿಲ್ಲ. ಹೊಸಬರಿಗೆ ಅವಕಾಶ ನೀಡುತ್ತಿರುವುದರಿಂದ ಹಿಂದೆ ಹಣ ಕಟ್ಟಿದವರಿಗೆ ಅನ್ಯಾಯ ಆಗಲ್ಲ. ಎಲ್ಲರೂ ಪಕ್ಷದ ಕಷ್ಟಕ್ಕಾಗಿ ಹಣ ಕೊಟ್ಟಿದ್ದಾರೆ. ಯಾರಿಗೇ ಅವಕಾಶ ಸಿಕ್ಕರೂ ಉಳಿದವರು ಸಹಕರಿಸುತ್ತಾರೆ. 2 ಲಕ್ಷ ರೂ. ಕಟ್ಟಿದವರಿಗೆ ಟಿಕೆಟ್​ ನೀಡುತ್ತೇವೆ ಎಂದು ಹೇಳಿಲ್ಲ. ಇಂದು ಕೆಲವರು ಅದೇ ವಿಚಾರ ಮುಂದಿಟ್ಟು ಹೋರಾಟ ನಡೆಸುತ್ತಿದ್ದಾರೆ. ನಡೆಸಲಿ ಬಿಡಿ. ಇಂದು ನಮ್ಮ ವಿರುದ್ಧ ಹೋರಾಡುವವರು, ನಾಳೆ ಬಿಜೆಪಿ, ಜೆಡಿಎಸ್​ ವಿರುದ್ಧ ಹೋರಾಡುತ್ತಾರೆ ಎಂದರು.

ಸಿಎಂ, ಗೃಹಸಚಿವರು ರಾಜೀನಾಮೆ ನೀಡಲಿ ಎಂದು ಆಗ್ರಹ: ನನ್ನ ಕ್ಷೇತ್ರದ ಗಡಿಯಲ್ಲಿ ನೈತಿಕ ಪೊಲೀಸ್​ಗಿರಿ ನೆಪದಲ್ಲಿ ಒಂದು ಕೊಲೆ ಆಗಿದೆ. ನಾನು ದಿಢೀರ್ ಹೇಳಿಕೆ ನೀಡಿರಲಿಲ್ಲ. ನಮ್ಮ ಸ್ಥಳೀಯ ಕಾಂಗ್ರೆಸ್ ನಾಯಕರು ಈ ಬಗ್ಗೆ ಗಮನ ಹರಿಸಿದ್ದಾರೆ. ನಾವು ಪೊಲೀಸರ ಬಳಿ ಮಾಹಿತಿ ಪಡೆದಿದ್ದೇವೆ. ಬಿಜೆಪಿ ಜತೆ ಸಂಪರ್ಕ ಇರುವವರು ಮಾಡಿದ್ದಾರೆ ಎಂಬ ಮಾಹಿತಿ ಇದೆ. ಮೃತ ಪಟ್ಟವ ಒಬ್ಬ ರೈತ. ಏತಕ್ಕಾಗಿ ದನಗಳನ್ನು ಕೊಂಡೊಯ್ಯುತ್ತಿದ್ದನೋ ಗೊತ್ತಿಲ್ಲ. ಈ ಘಟನೆಗೆ ಸಿಎಂ ಹಾಗೂ ಗೃಹ ಸಚಿವರು ನೇರ ಕಾರಣ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಅಲ್ಪಸಂಖ್ಯಾತ ಬಾಂಧವರು ತಮ್ಮ ಕೆಲಸ ಮಾಡುತ್ತಾರೆ, ಅದನ್ನು ತಡೆಯಬಾರದು. ಸಿಎಂ ಕೂಡಲೇ 25 ಲಕ್ಷ ರೂ. ಪರಿಹಾರ ನೀಡಬೇಕು. ಕೃತ್ಯದಲ್ಲಿ ಭಾಗಿಯಾದವರನ್ನೆಲ್ಲಾ ಕೂಡಲೇ ಬಂಧಿಸಬೇಕು. ಯಾರ್ಯಾರು ಭಾಗಿಯಾಗಿದ್ದಾರೋ ಅವರ ಬಂಧನ ಆಗದಿದ್ದರೆ, ಸರಿಯಲ್ಲ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ತನಿಖೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದರು.

ಮೀಸಲಾತಿ ಘೋಷಣೆ ಬಿಜೆಪಿ ಸರ್ಕಾರ ಮಾಡಿಕೊಂಡ ಸ್ವಯಂಕೃತ ಅಪರಾಧ. ಯಾರಿಂದಲೋ ಮೀಸಲಾತಿ ಕಿತ್ತು, ಇನ್ನೊಬ್ಬರಿಗೆ ಕೊಟ್ಟಿದ್ದು ಏಕೆ? ಅಲ್ಪಸಂಖ್ಯಾತರನ್ನು ದೇಶದಿಂದ ಓಡಿಸಲು ಆಗುತ್ತದೆಯೇ? ಮುಖ್ಯಮಂತ್ರಿಗಳು ಅವರ ಪ್ರತಿಷ್ಠೆಗಾಗಿ ರಾಜ್ಯದ ತಲೆ ತಗ್ಗುವಂತೆ ಮಾಡಿದ್ದಾರೆ. ನಾವು ಈ ಸಮುದಾಯದವರ ಬೆನ್ನಿಗೆ ಇದ್ದೇವೆ. ನಿರಂತರವಾಗಿ ಇವರ ಪರ ಹೋರಾಡುತ್ತಿದ್ದೇವೆ. ನಾವು ನಮ್ಮ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಎಲ್ಲಾ ಸಮಾಜದ ನಡುವೆ ಬಡಿದಾಡುವ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ತಂದಿದೆ. ನಾವು ಮುಂದೆ ಅಧಿಕಾರಕ್ಕೆ ಬರುತ್ತೇವೆ. ಪ್ರಮಾಣವಚನ ಸ್ವೀಕಾರಕ್ಕೆ ಬನ್ನಿ ಎಂದರು.

ಇದನ್ನೂ ಓದಿ: ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.