ಬೆಂಗಳೂರು: ಕನ್ನಡ ಭಾಷೆ, ಸಂಸ್ಕೃತಿ ಮತ್ತು ಇತಿಹಾಸಕ್ಕೆ ಸಂಬಂಧಿಸಿದಂತೆ ಪ್ರಚುರ ಪಡಿಸುವ ಮತ್ತು ಕನ್ನಡ ಭಾಷಾ ಪ್ರೌಢಿಮೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನ ಪಾತ್ರ ಮಹತ್ವದ್ದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಹೇಳಿದರು.
ಕನ್ನಡ ಕಾಯಕ ವರ್ಷಾಚರಣೆಯಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ನಾಡಿನ ಪ್ರತಿಯೊಬ್ಬರನ್ನು ಒಳಗೊಳ್ಳುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಜತೆಗೆ ಪ್ರಾಧಿಕಾರದ ಅಷ್ಟ ಕಾರ್ಯಸೂಚಿಗಳ ಅಡಿಯಲ್ಲಿ ಎಲ್ಲರೂ ಕಾರ್ಯನಿರ್ವಹಿಸುವುದು ಬಹುಮುಖ್ಯವಾಗಿದೆ ಎಂದರು.
![ಕನ್ನಡ ಕಟ್ಟುವಿಕೆಯಲ್ಲಿ ಎಲ್ಲರ ಪಾತ್ರ ಮುಖ್ಯ](https://etvbharatimages.akamaized.net/etvbharat/prod-images/kn-bng-05-nagabarana-kannada-pradikara-vidanasodha-ka10032_13112020230143_1311f_1605288703_877.jpg)
ಕನ್ನಡ ಕಾಯಕ ವರ್ಷಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಬೇಕಾಗಿರುವ ಕಾರ್ಯಚಟುವಟಿಕೆಗಳ ಕುರಿತು ಪ್ರಾಧಿಕಾರ ಸದಸ್ಯರೊಂದಿಗೆ ವಿಧಾನಸೌಧದಲ್ಲಿಂದು ಸಭೆ ನಡೆಸಿದ ಅಧ್ಯಕ್ಷರು, ಎಲ್ಲ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಯಾವ ರೀತಿ ಕೆಲಸ ಕಾರ್ಯಗಳನ್ನು ನಡೆಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಕನ್ನಡ ಕಾಯಕಕ್ಕಾಗಿ ಈಗಾಗಲೇ ಕನ್ನಡ ಕಾಯಕ ಪಡೆಯನ್ನು ಮಾಡಲಾಗಿದೆ. ಅಲ್ಲದೆ ಕನ್ನಡ ಕೆಲಸ ಮಾಡುವ ಆಸಕ್ತ ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳಬಹುದು. ಆದರೆ, ಯಾವುದೇ ಕಾರಣಕ್ಕೂ ವ್ಯಾಪ್ತಿ ಮೀರಬಾರದು ಮತ್ತು ಪ್ರಾಧಿಕಾರಕ್ಕೆ ಚ್ಯುತಿ ಬಾರದಂತೆ ಎಚ್ಚರವಹಿಸುವುಂತೆ ಸಲಹೆ ನೀಡಿದರು.
ಸಂತಾಪ:
ಇದೇ ಸಂದರ್ಭದಲ್ಲಿ ನಿಧನರಾದ ನಾಡಿನ ಇಬ್ಬರು ದೈತ್ಯ ಪ್ರತಿಭೆಗಳಾದ ಧಾರವಾಡದ ಕವಿ ವಿ.ಸಿ.ಐರಸಂಗ ಮತ್ತು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರುಗಳ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ನಡೆಸಿ ಸಂತಾಪ ವ್ಯಕ್ತಪಡಿಸಲಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರೊ.ಅಬ್ದುಲ್ ರೆಹಮಾನ್ ಪಾಷಾ, ರೋಹಿತ್ ಚಕ್ರತೀರ್ಥ, ಡಾ.ರಮೇಶ್ ಗುಬ್ಬಿಗೂಡು, ಸುರೇಶ್ ಬಡಿಗೇರ, ಕಬ್ಬಿನಾಲೆ ವಸಂತ ಭಾರದ್ವಾಜ, ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ.ಸಿ.ಎ.ಕಿಶೋರ್, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.