ಬೆಂಗಳೂರು: ಪಕ್ಷ ಸಂಘಟನೆ ಹಾಗೂ ಪುನಾರಚನೆಗೆ ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಪಕ್ಷದ ವಿವಿಧ ಮುಖಂಡರೊಂದಿಗೆ ಚರ್ಚಿಸಿದರು. ಶಾಸಕ ಯಶವಂತರಾಯಗೌಡ ಪಾಟೀಲ್, ಮಾಜಿ ಶಾಸಕ ಅಪ್ಪಾಜಿ ನಾಡಗೌಡ, ಎಂಎಲ್ಸಿ ಶ್ರೀನಿವಾಸ ಮಾನೆ, ಮಾಜಿ ಎಂಎಲ್ಸಿ ಎಂ.ಡಿ. ಲಕ್ಷ್ಮೀನಾರಾಯಣ ಅವರು ಡಿ.ಕೆ. ಶಿ ಅವರನ್ನು ಸದಾಶಿವನಗರದ ನಿವಾಸದಲ್ಲಿ ಬೆಳಗ್ಗೆ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
ಕಳೆದ ವಾರ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿರುವ ಡಿಕೆಶಿ, ಮುಂಬರುವ ದಿನಗಳಲ್ಲಿ ಪಕ್ಷದ ವಿವಿಧ ಸಮಿತಿಗಳ ರಚನೆ ಹಾಗೂ ಸಂಘಟನೆಗೆ ಹೊಸತನ ನೀಡುವ ಕಾರ್ಯಕ್ಕೆ ಮುಂದಾಗಲಿದ್ದಾರೆ.
ಈ ನಿಟ್ಟಿನಲ್ಲಿ ಪಕ್ಷದ ವಿವಿಧ ನಾಯಕರು ಹಾಗೂ ವಿಭಾಗಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರ ಜೊತೆ ನಿರಂತರವಾಗಿ ಸಮಾಲೋಚನೆ ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಇಂದು ಸಹ ಮಹತ್ವದ ಸಭೆ ನಡೆದಿದ್ದು, ಪಕ್ಷ ಕಟ್ಟುವ ವಿಚಾರವಾಗಿ ಗಂಭೀರ ಚರ್ಚೆ ಮಾಡಿದ್ದಾರೆ.
![dks meeting with congress leaders](https://etvbharatimages.akamaized.net/etvbharat/prod-images/kn-bng-01-dks-house-meeting-script-7208077_29062021114607_2906f_1624947367_781.jpg)
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷರಾಗಿರುವ ಎಮ್ ಡಿ ಲಕ್ಷ್ಮಿ ನಾರಾಯಣ್ ಸಹ ಇಂದು ಭೇಟಿಯಾಗಿ ಚರ್ಚಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅವರು ಸಂದರ್ಭದಲ್ಲಿ ರಾಜ್ಯ ಸಂಚಾರ ಮಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರು ಈವರೆಗೆ ಅಂಗೀಕರಿಸಿಲ್ಲ. ಇಂದಿನ ಚರ್ಚೆಯ ಬಳಿಕ ಒಂದು ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ.
ಒಟ್ಟಾರೆ ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ವಿಚಾರವಾಗಿ ಗಂಭೀರ ಚರ್ಚೆಗಳು ಹಾಗೂ ಹೇಳಿಕೆಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ, ಈ ವಿಚಾರಕ್ಕೆ ಹೆಚ್ಚಿನ ಗಮನ ಹರಿಸದೆ ಪಕ್ಷ ಸಂಘಟನೆಗೆ ಡಿಕೆಶಿ ಮುಂದಾಗಿದ್ದಾರೆ.