ETV Bharat / state

ಜ್ಯೋತಿಷಿಗಳ ಸಲಹೆಯಂತೆ ಕನಕಪುರದಿಂದ ಡಿ.ಕೆ.ಸುರೇಶ್ ಸ್ಪರ್ಧೆ: ಆರ್.ಅಶೋಕ್ ವ್ಯಂಗ್ಯ

author img

By

Published : Apr 20, 2023, 5:19 PM IST

Updated : Apr 20, 2023, 6:12 PM IST

​ಕನಕಪುರದಲ್ಲಿ ಡಿಕೆ ಶಿವಕುಮಾರ್ ಜೊತೆ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿರುವುದಕ್ಕೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.

dk-suresh-contests-from-kanakapur-as-advised-by-astrologers-r-ashok
ಜ್ಯೋತಿಷಿಗಳ ಸಲಹೆಯಂತೆ ಕನಕಪುರದಿಂದ ಡಿಕೆ ಸುರೇಶ್ ಸ್ಪರ್ಧೆ: ಆರ್​ ಅಶೋಕ್ ವ್ಯಂಗ್ಯ

ಸಚಿವ ಆರ್​ ಅಶೋಕ್​

ಬೆಂಗಳೂರು: "ಕಳೆದ ಎರಡು ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋಮ, ಹವನ ಮಾಡುತ್ತಿದ್ದಾರೆ. ಅವರು ಜ್ಯೋತಿಷ್ಯವನ್ನು ಬಹಳ ನಂಬುತ್ತಾರೆ. ಬಹುಶ: ಸುರೇಶ್ ಅವರನ್ನು ತಮ್ಮ ಕ್ಷೇತ್ರದಲ್ಲಿ ನಿಲ್ಲಿಸಲು ಜ್ಯೋತಿಷಿಗಳು ಹೇಳಿರಬಹುದು. ಅದಕ್ಕಾಗಿ ಅವರು ತಮ್ಮ ಸಹೋದರ ಡಿ.ಕೆ.ಸುರೇಶ್​​ರನ್ನು ಕನಕಪುರದಲ್ಲಿ ನಿಲ್ಲಿಸಿದ್ದಾರೆ" ಎಂದು ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಟಾಂಗ್ ಕೊಟ್ಟರು.

ಪದ್ಮನಾಭನಗರದ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "20 ಲಾಯರ್ 20 ಆಡಿಟರ್​ಗಳನ್ನು ಇಟ್ಟುಕೊಂಡವರಿಗೆ ಭಯ ಯಾಕೆ?. ಯಾರು ಯಾರೋ ಕನ್ನಡ ಬಾರದವರೆಲ್ಲ ಹೋಗಿ ಕನ್ನಡದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಅಂಥದ್ದರಲ್ಲಿ ಅವರಿಗೆ ಭಯ ಯಾಕೆ ಬಂದಿದೆಯೋ ಗೊತ್ತಿಲ್ಲ. ಬಹುಶಃ ಅವರು ಜ್ಯೋತಿಷಿಗಳನ್ನು ನಂಬಿದ್ದಾರೆ."

"ಜ್ಯೋತಿಷಿಗಳ ಪ್ರಕಾರವೇ ಹೋಗುತ್ತಿದ್ದಾರೆ. ಜ್ಯೋತಿಷ್ಯವೇ ಇವರಿಗೆ ಕ್ಷೇತ್ರದಲ್ಲಿ ಫಲಿತಾಂಶ ಕೊಡುವುದು. ಅದರಿಂದ ಅವರು ಹೀಗೆ ಮಾಡುತ್ತಿರಬಹುದು. ಆದರೆ ನಾನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಬೋಧಿಸಿದ್ದಂತೆ ನನ್ನ ಪ್ರಯತ್ನ ನಾನು ಮಾಡುತ್ತೇನೆ. ಫಲಾಫಲವನ್ನು ಭಗವಂತನಿಗೆ ಬಿಟ್ಟಿದ್ದೇನೆ. ಅದರಂತೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಫಲಿತಾಂಶ ಜನರಿಗೆ ಬಿಟ್ಟಿದ್ದೇನೆ" ಎಂದರು.

ಇದನ್ನೂ ಓದಿ: ಕನಕಪುರದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ: ಅಚ್ಚರಿಗೆ ಕಾರಣವಾದ ಕಾಂಗ್ರೆಸ್‌ ನಡೆ

'ಪದ್ಮನಾಭನಗರದಲ್ಲಿ ಡಿಕೆಶಿ ಸ್ಪರ್ಧೆ ನಿರೀಕ್ಷಿಸಿದ್ದೆ': "ನಾನು ಕನಕಪುರದಲ್ಲಿ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಕೂಡ ಪದ್ಮನಾಭನಗರಕ್ಕೆ ಬಂದು ಸ್ಪರ್ಧೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಹಾಗೊಂದು ವೇಳೆ ಸ್ಪರ್ಧೆ ಮಾಡಿದರೆ ಇಡೀ ರಾಜ್ಯದಲ್ಲಿ ತೀವ್ರ ಕುತೂಹಲ ಇರುವ ಕ್ಷೇತ್ರಗಳು ಕನಕಪುರ ಮತ್ತು ಪದ್ಮನಾಭನಗರ ಆಗುತ್ತಿತ್ತು. ಇಡೀ ರಾಜ್ಯದ ಜನ ನಮ್ಮೆರಡು ಕ್ಷೇತ್ರಗಳನ್ನೇ ನೋಡುತ್ತಿದ್ದರು. ಅಂತಹ ಸ್ಪರ್ಧೆ ಅಲ್ಲಿ ಎದುರಾಗುತ್ತಿತ್ತು ಎಂದು ತಿಳಿದುಕೊಂಡಿದ್ದೆ. ಆದರೆ, ಯಾಕೋ ಡಿ.ಕೆ.ಶಿವಕುಮಾರ್ ಬರಲಿಲ್ಲ. ಜಾತಿ ಸಮುದಾಯದ ನಾಯಕರಿಗೆಲ್ಲ ದೂರವಾಣಿ ಕರೆ ಮಾಡಿ ಸ್ಪರ್ಧೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ನಂತರ ಕಡೆಗೆ ಯಾಕೋ ಸ್ಪರ್ಧೆ ನಿರ್ಧಾರ ಕೈಬಿಟ್ಟಿದ್ದಾರೆ" ಎಂದರು.

"ಪದ್ಮನಾಭನಗರ ಕ್ಷೇತ್ರದ ಹೆಸರಿನಲ್ಲೇ ಕಮಲ ಇದೆ. ಪದ್ಮ ಅಂದರೆ ಕಮಲ. ಇಲ್ಲಿ ಸ್ವಾಭಾವಿಕವಾಗಿಯೇ ಕಮಲ ಅರಳಲಿದೆ. ಯಾರು ಬಂದರೂ ಗೆಲ್ಲಲು ಸಾಧ್ಯವಿಲ್ಲ. ಯಾರು ಬಂದರೂ ನಡೆಯಲ್ಲ. ಹಾಗಾಗಿ ಅವರು ಬಂದಿಲ್ಲ. ಅವರು ಕನಕಪುರದಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾನು ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಹೋರಾಟ ನಡೆಸುತ್ತೇನೆ. ಶಕ್ತಿ ಮೀರಿ ಪ್ರಯತ್ನ ನಡೆಸುತ್ತೇನೆ. ಅಮಿತ್ ಶಾ, ಮೋದಿ ಕೊಟ್ಟಿರುವ ಟಾಸ್ಕ್ ನಿರ್ವಹಿಸುತ್ತೇನೆ. ನನಗೆ ಎರಡು ಕಡೆ ಅವಕಾಶ ಮಾಡಿಕೊಟ್ಟಿದ್ದಾರೆ. ಎರಡು ಕಡೆ ಪ್ರಚಾರ ಮಾಡಬೇಕಿದೆ. ನಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸದೊಂದಿಗೆ ಚುನಾವಣೆ ಎದುರಿಸುತ್ತಿದ್ದೇನೆ" ಎಂದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ಬೆಂಬಲ ನೀಡಿದ ದಲಿತ ಸಂಘರ್ಷ ಸಮಿತಿಯ ಐಕ್ಯ ಹೋರಾಟ ಸಾಧನಾ ಸಮಿತಿ: ಕೈ ಹಿಡಿದ ಬಿಜೆಪಿ, ಜೆಡಿಎಸ್​ ನಾಯಕರು

Last Updated : Apr 20, 2023, 6:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.