ETV Bharat / state

ರಾಜ್ಯ ಸರ್ಕಾರಕ್ಕೆ ಪರಿಷ್ಕೃತ ಲಾಕ್‌ಡೌನ್ ಮಾರ್ಗಸೂಚಿ ಮಾಡಿಕೊಟ್ಟ ಪುಣ್ಯಾತ್ಮ ಯಾರು?: ದಿನೇಶ್ ಗುಂಡೂರಾವ್ ಪ್ರಶ್ನೆ

author img

By

Published : May 9, 2021, 10:14 PM IST

Updated : May 9, 2021, 10:22 PM IST

ರಾಜ್ಯಸರ್ಕಾರದ ಲಾಕ್​ಡೌನ್​ ನಿಯಮಗಳ ಕುರಿತು ಅಸಮಾಧಾನ ಹೊರಹಾಕಿರುವ ದಿನೇಶ್ ಗುಂಡೂರಾವ್ ಜನ ತರಕಾರಿ ಕೊಳ್ಳಲು ವಾಹನ ಬಳಸುವಂತಿಲ್ಲ ಎಂದು ಪರಿಷ್ಕೃತ ಲಾಕ್​ಡೌನ್​ ನಿಯಮ ಹೇಳುತ್ತದೆ. ಹಾಗಾದರೆ ಜನರೇನು ಪುಷ್ಪಕ ವಿಮಾನದಲ್ಲಿ ಓಡಾಡಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.

dinesh
dinesh

ಬೆಂಗಳೂರು: ರಾಜ್ಯ ಸರ್ಕಾರ ನಾಳೆಯಿಂದ 14 ದಿನಗಳ ಕಾಲ ಘೋಷಿಸಿರುವ ಲಾಕ್​ಡೌನ್​​ಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿರುವ ಅವರು, ರಾಜ್ಯ ಸರ್ಕಾರಕ್ಕೆ ಪರಿಷ್ಕೃತ ಲಾಕ್‌ಡೌನ್ ಮಾರ್ಗಸೂಚಿಯನ್ನು ಮಾಡಿಕೊಟ್ಟ ಪುಣ್ಯಾತ್ಮ ಯಾರು? ಈ ಲಾಕ್‌ಡೌನ್ ನಿಯಮದ ಪ್ರಕಾರ ಬೆಳಗ್ಗೆ 10 ರವರೆಗೆ ಅಗತ್ಯ ವಸ್ತುಗಳು ಸಿಗುತ್ತವೆ. ಆದರೆ ಅವುಗಳನ್ನು ಕೊಳ್ಳಲು ಜನ ವಾಹನ ಬಳಸುವಂತಿಲ್ಲ. ಹಾಗಾದರೆ ವೃದ್ಧರು, ಅಶಕ್ತರು ಏನು ಮಾಡಬೇಕು? ಜನ ಯಾವುದಾದರೂ ಮಾಯಾ ವಾಹನ ಬಳಸಿ ಅಗತ್ಯ ಸಾಮಾನು ತರಬೇಕೆ? ಎಂದು ಪ್ರಶ್ನಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಹೆಜ್ಜೆ-ಹೆಜ್ಜೆಗೆ ಅಂಗಡಿ ಮುಂಗಟ್ಟು ಸಿಗುತ್ತವೆ. ಆದರೆ ಹಳ್ಳಿಗಳ ಪರಿಸ್ಥಿತಿ ಹಾಗಿಲ್ಲ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳು ಐದಾರು ಕಿ.ಮೀ. ದೂರ ಇವೆ. ವಾಹನ ಬಳಸದೆ ಇಷ್ಟು ದೂರ ನಡೆದು ತಲೆಯ ಮೇಲೆ ಸಾಮಾನು ಹೊತ್ತು ತರಬೇಕೆ? ಇಂತಹ ತಲೆ ಕೆಟ್ಟ ನಿಯಮಗಳನ್ನು ಮಾಡುವ ಸರ್ಕಾರಕ್ಕೆ ಕನಿಷ್ಠ ಜ್ಞಾನವೂ ಇಲ್ಲವಾಯಿತೆ? ಎಂದು ಕೇಳಿದ್ದಾರೆ.

ಯಾವುದಾದರೂ ನಿಯಮ ಜಾರಿಗೆ ತರುವ ಮುನ್ನ, ಸರ್ಕಾರ ನಡೆಸುವವರು ಅದರ ಸಾಧಕ ಬಾಧಕಗಳನ್ನು ಪರಾಮರ್ಶಿಸಬೇಕು. ನೂತನ ಲಾಕ್‌ಡೌನ್ ನಿಯಮಗಳನ್ನು ಪೇಟೆವಾಸಿಗಳು ಪಾಲಿಸಬಹುದು. ಆದರೆ ಗ್ರಾಮೀಣ ಪ್ರದೇಶದಲ್ಲಿ ಜನ ಈ ನಿಯಮ ಪಾಲಿಸಲು ಸಾಧ್ಯವೇ ಇಲ್ಲ. ವಾಹನ ಬಳಸದೇ ಹಳ್ಳಿ ಜನರೇನು ಪುಷ್ಪಕ ವಿಮಾನದಲ್ಲಿ ಓಡಾಡಲು ಸಾಧ್ಯವೆ? ಮೊದಲು ಈ ಗೊಂದಲದ ನಿಯಮ ಬದಲಾಯಿಸಿ ಎಂದು ಸಲಹೆ ನೀಡಿದ್ದಾರೆ.

Last Updated :May 9, 2021, 10:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.