ETV Bharat / state

ಎಸ್.ಎಂ.ಕೃಷ್ಣ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್: ಕಾವೇರಿ ಸಂಕಷ್ಟದ ಬಗ್ಗೆ ಸಮಾಲೋಚನೆ

author img

By ETV Bharat Karnataka Team

Published : Oct 1, 2023, 10:31 PM IST

ಕಾವೇರಿ ವಿಚಾರವಾಗಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಲಹೆಗಳನ್ನು ಪಡೆದುಕೊಂಡಿದ್ದಾರೆ.

ಎಸ್.ಎಂ.ಕೃಷ್ಣ ಭೇಟಿ ಮಾಡಿದ ಡಿಸಿಎಂ ಶಿವಕುಮಾರ್
ಎಸ್.ಎಂ.ಕೃಷ್ಣ ಭೇಟಿ ಮಾಡಿದ ಡಿಸಿಎಂ ಶಿವಕುಮಾರ್

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಸದಾಶಿವನಗರದ ನಿವಾಸಕ್ಕೆ ಭಾನುವಾರ ಸಂಜೆ ಭೇಟಿ ನೀಡಿ ಕಾವೇರಿ ನೀರು ಹಂಚಿಕೆ ಸಂಕಷ್ಟದ ಬಗ್ಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಳೆ ಅಭಾವದಿಂದ ರಾಜ್ಯಕ್ಕೆ ಬಂದೊದಗಿರುವ ಪರಿಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ಇಂಥದ್ದೇ ಪರಿಸ್ಥಿತಿ ಎದುರಿಸಿದ್ದ ಕೃಷ್ಣ ಅವರಿಂದ ಡಿಕೆಶಿ ಸಲಹೆಗಳನ್ನೂ ಪಡೆದರು.

ಇದಕ್ಕೂ ಮುಂಚೆ ಕುಮಾರಪಾರ್ಕ್‌ನಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್​.ಎಂ ಕೃಷ್ಣ, ಯಾವಾಗ ಮಳೆ ಕಡಿಮೆಯಾಗುತ್ತದೋ ಆಗ ಕಾವೇರಿ ನದಿ ನೀರಿನ ವಿವಾದ ಸದ್ದು ಮಾಡುತ್ತದೆ. ಮಳೆಗಾಲ ಕ್ಷೀಣಿಸಿದಾಗ ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ಒತ್ತಡ ಬರುತ್ತದೆ. ತಮಿಳುನಾಡಿನವರ ಹೇಳಿಕೆಗಳು ಬಹಳ ಮಟ್ಟಿಗೆ ವಸ್ತುಸ್ಥಿತಿಯನ್ನು ನಾಚಿಸುವಂತಿರುತ್ತವೆ.

ಈ ವಿಚಾರದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹ. ನದಿ ಪಾತ್ರದ ನಾಲ್ಕು ರಾಜ್ಯಗಳು ಕುಳಿತು ಮಾತುಕತೆ ಮೂಲಕ ಸಂಕಷ್ಟ ಸೂತ್ರ ರೂಪಿಸಿದಲ್ಲಿ ಮಾತ್ರ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಶಾಶ್ವತವಾಗಿ ತೆರೆ ಎಳೆಯಲು ಸಾಧ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ : ಕಾವೇರಿ ಸಮಸ್ಯೆಗೆ 'ಸಂಕಷ್ಟ ಸೂತ್ರ'ವೊಂದೇ ಶಾಶ್ವತ ಪರಿಹಾರ: ಎಸ್.ಎಂ.ಕೃಷ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.