ETV Bharat / state

'ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು, ಬನ್ನಿ ಬಹಿರಂಗ ಚರ್ಚೆಗೆ': ಹೆಚ್‌ಡಿಕೆಗೆ ಡಿಕೆಶಿ ಸವಾಲು

author img

By ETV Bharat Karnataka Team

Published : Oct 25, 2023, 5:10 PM IST

DCM Sivakumar challenged former CM Kumaraswamy on Ramanagara issue
DCM Sivakumar challenged former CM Kumaraswamy on Ramanagara issue

ರಾಮನಗರ ಜಿಲ್ಲೆಯ ಅಭಿವೃದ್ಧಿ ವಿಚಾರದ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು

ಬೆಂಗಳೂರು: ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಕನಕಪುರವನ್ನು ಸೇರ್ಪಡೆ ಮಾಡುವ ಬಗ್ಗೆ ಜನರ ಅಭಿಪ್ರಾಯ ಕೇಳುತ್ತಿದ್ದೇನೆ. ಬುದ್ಧಿವಂತಿಕೆ ಇಲ್ಲದಿದ್ದರೂ ನಡೆಯುತ್ತದೆ, ಪ್ರಜ್ಞಾವಂತಿಕೆ ಇರಬೇಕು. ನಾವು ಬೆಂಗಳೂರಿನವರು, ಬೆಂಗಳೂರಲ್ಲೇ ಇರಬೇಕು. ರಾಮನಗರ ಛಿದ್ರ ಮಾಡಿದವರು ನಾವಲ್ಲ, ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಎಂದು ತಿರುಗೇಟು ಕೊಟ್ಟರು.

ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ರಾಮನಗರದಲ್ಲಿ ಕುಮಾರಸ್ವಾಮಿ ಆಸ್ತಿ ಮಾಡಿಲ್ಲವೇ?. ಜಮೀನು ರೇಟ್ ಎಷ್ಟಿದೆ ಕೇಳಿ?. ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುವುದರ ಬಗ್ಗೆ ಬನ್ನಿ ಚರ್ಚೆ ಮಾಡೋಣ. ಯಾವುದೇ ಮಾಧ್ಯಮದ ವೇದಿಕೆಗೆ ಬಂದರೂ ಸರಿ, ನಾನು ಬರುತ್ತೇನೆ ಎಂದು ಕುಮಾರಸ್ವಾಮಿ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.

ನಾವು ಬೆಂಗಳೂರಿನವರು. ಹೊಸಕೋಟೆ, ನೆಲಮಂಗಲ, ಮಾಗಡಿ, ಚನ್ನಪಟ್ಟಣ, ರಾಮನಗರ ಮತ್ತು ಕನಕಪುರದವರೆಲ್ಲಾ ಬೆಂಗಳೂರಿನವರೇ. ನಾನು ನನ್ನ ಜನರಿಗೆ ತಿಳಿವಳಿಕೆ ಹೇಳುವೆ. ನೀವೂ ಆಸ್ತಿ ಮಾಡಿಲ್ಲವೇ? ನಾವೇನಾದರೂ ತಕರಾರು ಮಾಡುತ್ತಿದ್ದೇವಾ? ವಿದ್ಯೆಗೋಸ್ಕರ ಎಷ್ಟು ಜಮೀನು ದಾನ ಮಾಡಿದ್ದೇನೆ ಎಂಬ ಅರಿವಿದೆಯೇ? ರಾಮನಗರ ಜಿಲ್ಲೆಯಲ್ಲಿ ಮೂರು ಬಿಲ್ಡಿಂಗ್ ಕಟ್ಟಿದ್ದೀರಿ, ಶುಭ ಹಾರೈಸುತ್ತೇನೆ. ಕ್ಷೇತ್ರದ ಶ್ರೇಯಸ್ಸು ಬೆಳೆಸಬೇಕಾದ್ದು ನಮ್ಮ ಕರ್ತವ್ಯ ಎಂದು ವಾಗ್ದಾಳಿ ನಡೆಸಿದರು.

ನಾವು ಕೊಟ್ಟ ಬೆಂಬಲ ಉಳಿಸಿಕೊಳ್ಳಲು ಆಗಿಲ್ಲ: ನಾವು ಕೊಟ್ಟ ಬೆಂಬಲವನ್ನು ನಿಮಗೆ ಉಳಿಸಿಕೊಳ್ಳಲು ಆಗಲಿಲ್ಲ. ಒಬ್ಬರು ಬೆಳಗಾವಿಯವರು, ಒಬ್ಬ ಚನ್ನಪಟ್ಟಣದವರು, ಮತ್ತೊಬ್ಬರು ಬೆಂಗಳೂರಿನವರು ಮೈತ್ರಿ ಸರ್ಕಾರ ತೆಗೆಯಲು ಶ್ರಮ ಹಾಕಿ ಯಶಸ್ವಿಯಾದರಲ್ಲವೇ? ಅವರನ್ನೇ ಈಗ ತಬ್ಬಿಕೊಂಡಿದ್ದೀರಾ? ಆಗ ಹಗಲು-ರಾತ್ರಿ ನಿಮ್ಮೊಂದಿಗೆ ನಿಂತವರಾರು? ಅನೇಕ ಕಹಿ ಘಟನೆ ಸಹಿಸಿಕೊಂಡು ಅವರೊಂದಿಗೆ ಕೈಜೋಡಿಸಿದ್ದೇನೆ. ಅಂದು ಸಿದ್ದರಾಮಯ್ಯ ಅವರು ಹೈಕಮಾಂಡ್​​ ಹೇಳಿದರೆಂದು ಬೇಷರತ್ ಆಶೀರ್ವಾದ ಮಾಡಿದರು. ಅಷ್ಟಾದರೂ ಮಾನವೀಯತೆ ಬೇಡವೇ? ಉಪಕಾರ ಸ್ಮರಣೆ ಬೇಡವೇ ಎಂದು ಪ್ರಶ್ನಿಸಿದರು.

ಸರ್ಕಾರವನ್ನು ನೀವು ಉಳಿಸಿಕೊಳ್ಳಬೇಕಿತ್ತು. ಅಂದು ಸರ್ಕಾರ ಬೀಳಿಸಿದವರೊಂದಿಗೆ ಈಗ ಕೈ ಜೋಡಿಸಿದ್ದೀರಿ. ಸಿದ್ದರಾಮಯ್ಯ ಅವರಿಗೆ ಯಾಕೆ ಮೀರ್ ಸಾದಿಕ್ ಅಂತೀರಿ? ಬೆಳಗಾವಿ ಅಧಿವೇಶನದಲ್ಲಿ ದಾಖಲೆಸಮೇತ ಮಾತನಾಡಿ ಎಂದು ಕೆಲವು ಹಳೆಯ ಘಟನಾವಳಿಗಳನ್ನು ಬಹಿರಂಗಪಡಿಸುವ ಮೂಲಕ ಡಿಕೆಶಿ ಸವಾಲೆಸೆದರು.

ಇದನ್ನೂ ಓದಿ: ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆ ಛಿದ್ರ ಮಾಡಲು ಸಾಧ್ಯವಿಲ್ಲ, ಅದೇನು ಕಲ್ಲುಬಂಡೆಯೇ?: ಡಿಕೆಶಿಗೆ ಹೆಚ್​ಡಿಕೆ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.