ETV Bharat / state

ಶಿವಲಿಂಗೇಗೌಡರು ಡಬಲ್ ಮೂಡ್​​ನಲ್ಲಿದ್ದಾರೆ ಎಂದ ಸಿ.ಟಿ.ರವಿ: ನಾನು ಅಭಿಮನ್ಯು ಆಗಲ್ಲ, ಅರ್ಜುನ ಆಗುತ್ತೇನೆಂದ ಶಿವಲಿಂಗೇಗೌಡ

author img

By

Published : Feb 13, 2023, 4:09 PM IST

ವಿಧಾನಸಭೆಯಲ್ಲಿ ರಾಜ್ಯ ಪಾಲರ ಭಾಷಣದ ಮೇಲೆ ಚರ್ಚೆ ವೇಳೆ ಬಿಜೆಪಿ ಕಾಂಗ್ರೆಸ್​ ಮತ್ತು ಜೆಡಿಎಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.

ಸಿಟಿ ರವಿ ಶಿವಲಿಂಗೇಗೌಡರ ನಡುವೆ ಮಾತಿನ ಚಕಮಕಿ
ಸಿಟಿ ರವಿ ಶಿವಲಿಂಗೇಗೌಡರ ನಡುವೆ ಮಾತಿನ ಚಕಮಕಿ

ಬೆಂಗಳೂರು: ನೀವು ಈಗ ಡಬಲ್ ಮೂಡ್​ನಲ್ಲಿದ್ದೀರಿ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಅವರು, ಅರಸೀಕೆರೆ ಶಾಸಕ ಶಿವಲಿಂಗೇಗೌಡರನ್ನು ಛೇಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ರಾಜ್ಯಪಾಲರ ಭಾಷಣದ ಮೇಲೆ ರಾಜ್ಯ ಸರ್ಕಾರದ ಪರವಾಗಿ ಚರ್ಚೆ ಆರಂಭಿಸಿದ ಸಿ.ಟಿ.ರವಿ ಅವರು, ನಾನು ಡಬಲ್ ಇಂಜಿನ್​ ಸರಕಾರದ ಪ್ರಯೋಜನವೇನು ಅಂತ ಹೇಳ್ತಿದ್ದೆ ಎಂದರು. ಆಗ ಶಿವಲಿಂಗೇಗೌಡರು ಮಧ್ಯಪ್ರವೇಶಿಸಿ, ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಿರಾ ಎಂದು ಸಿ.ಟಿ.ರವಿ ಅವರ ಕಾಲೆಳೆದರು.

ನೀವು ಡಬಲ್​ ಮೂಡ್​​ನಲ್ಲಿದ್ದೀರಿ: ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ ನೀವು ಈಗ ಡಬಲ್ ಮೂಡ್​ನಲ್ಲಿ ಇದ್ದೀರಿ, ನಾನು ಶಿವಲಿಂಗೇಗೌಡರಿಗೆ ಹೇಳಿದ್ದೆ. ಎಣ್ಣೆ ಬರುತ್ತಿದೆ - ಕಣ್ಣು ಮುಚ್ಚಿಕೊಳ್ಳಬೇಡಿ ಎಂದಿದ್ದೆ. ಆದರೆ ಶಿವಲಿಂಗೇಗೌಡರು ಕೇಳಲಿಲ್ಲ ಎಂದು ಆಪರೇಷನ್ ಕಮಲದ ವೇಳೆ ಶಿವಲಿಂಗೆಗೌಡರನ್ನು ಸಂಪರ್ಕಿಸಿದ್ದನ್ನು ಪರೋಕ್ಷವಾಗಿ ಹೇಳಿದರು.

ಅಲ್ಲದೇ ಶಿವಲಿಂಗೇಗೌಡರು ಚಕ್ರವ್ಯೂಹದಲ್ಲಿ ಈಗ ಸಿಲುಕಿದ್ದಾರೆ ಎಂದ ಸಿ.ಟಿ. ರವಿ ಅವರ ಮಾತಿಗೆ ತಿರುಗೇಟು ನೀಡಿದ ಶಿವಲಿಂಗೇಗೌಡರು, ನಾನು ಚಕ್ರವ್ಯೂಹದಲ್ಲಿ ಸಿಲುಕಿಲ್ಲ. ನಾನು ಅಭಿಮನ್ಯು ಆಗುವುದಿಲ್ಲ. ನಾನು ಅರ್ಜುನ ಪಾತ್ರ ಹಾಕುವುದು. ನಾನು ಅಭಿಮನ್ಯು ಪಾತ್ರ ಹಾಕಲ್ಲ. ಜನರ ಬೆಂಬಲ ಇರುವ ತನಕ ನಾನು ಅರ್ಜುನ ಎಂದರು. ಯಾರು ಅರ್ಜುನ - ಯಾರು ಅಭಿಮನ್ಯು ಅಂತ ಮುಂಬರುವ ಚುನಾವಣೆಯಲ್ಲಿ ಗೊತ್ತಾಗಲಿದೆ. ದುರ್ಯೋಧನ ಯಾರು ಅಂತ ನನಗೆ ಗೊತ್ತು. ನಾನು ಭೀಮನ ಪಾತ್ರ ಮಾಡಿದವನು, ದುರ್ಯೋಧನ ಪಾತ್ರ ಹಾಕಿಲ್ಲ ಎಂದು ಸಿಟಿ ರವಿ ತಿರುಗೇಟು ನೀಡಿದರು.

ಮಧ್ಯಪ್ರವೇಶಿಸಿದ ಅಶೋಕ್​​​​​​ ಹೇಳಿದ್ದೇನು?: ವಿಧಾನಸಭೆಯಲ್ಲಿ ಸಿ.ಟಿ. ರವಿ ಹಾಗೂ ಶಿವಲಿಂಗೇಗೌಡ ಮಾತುಕತೆ ನಡುವೆ ಸಚಿವ ಆರ್.ಅಶೋಕ್ ಮಧ್ಯ ಪ್ರವೇಶಿಸಿ, ನಿನ್ನೆ ಕಾರ್ಯಕ್ರಮದ ವೇದಿಕೆ ಮೇಲೆ ಸುತ್ತಲೂ ಯಾರಿದ್ದರು ಅಂತ ಹೇಳಿ, ಕರ್ಣ ಯಾರು, ದುರ್ಯೋಧನ ಯಾರು ಅಂತ ಹೇಳಬಹುದು ನೀವು ಎಂದು ಕೆಣಕಿದರು. ಇದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯೋ, ಚುನಾವಣಾ ಪ್ರಣಾಳಿಕೆಯೋ?. ಚುನಾವಣಾ ಪ್ರಚಾರದ ಭಾಷಣ ಓದಿಸಿಬಿಟ್ಟಿದ್ದಾರೆ ಎಂದು ಸಿ.ಟಿ.ರವಿ ಅವರ ಚರ್ಚೆಗೆ ಶಿವಲಿಂಗೇಗೌಡರು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅನೈತಿಕ ರೀತಿಯಲ್ಲಿ ಕಾಂಗ್ರೆಸ್ - ಜೆಡಿಎಸ್ ಸರ್ಕಾರ ರಚನೆಯಾಯ್ತು. ಬಿಜೆಪಿಯ ಬಿ ಟೀಮ್ ಅಂತ ಸಿದ್ಧರಾಮಯ್ಯ ಭಾಷಣ ಮಾಡಿದ್ರು. ಆದರೆ, ಅವರೊಂದಿಗೆ ಸೇರಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದರು ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕುಟುಕಿದ್ದಾರೆ. ರಾಜ್ಯದಲ್ಲಿ 2018ರಲ್ಲಿ ಯಾವ ಪಕ್ಷಕ್ಕೂ ಜನಾದೇಶ ಸಿಕ್ಕಿರಲಿಲ್ಲ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನಿಂದ ಸಿದ್ಧರಾಮಯ್ಯ ಸೋತರು. ನಂತರ ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಬಿಜೆಪಿ ಸರ್ಕಾರ ರಚನೆಯಾಯಿತು. ಜನರ ಮುಂದೆ ಅಗ್ನಿಪರೀಕ್ಷೆಗೆ ಹೋದಾಗ ಬೆಂಬಲ ಸಿಕ್ತು. ಯಾವುದೇ ಸಂದರ್ಭದಲ್ಲೂ ಜನರು ನಮ್ಮ ಮೇಲೆ ಅನುಮಾನ ಪಟ್ಟಿಲ್ಲ ಎಂದರು.

ಸಿಟಿ ರವಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕೆಜೆ ಚಾರ್ಜ್​: ಆಗ ಸಿ.ಟಿ.ರವಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಜೆ.ಜಾರ್ಜ್ ಅವರು, ಚುನಾವಣೆಯಲ್ಲಿ ಸೋತ ಹಲವು ನಿದರ್ಶನಗಳು ರಾಜ್ಯದಲ್ಲಿದೆ. ಬಿಜೆಪಿಯ ಎರಡು ಶಾಸಕರು ಮಾತ್ರ ಇದ್ದರು ನಂತರ ಬಿಜೆಪಿ ಅಧಿಕಾರಕ್ಕೆ ಬಂದ ಉದಾಹರಣೆಯಿದೆ. ಚುನಾವಣೆಯ ಸೋಲು ಗೆಲುವು ಬಗ್ಗೆ ಸಿ.ಟಿ.ರವಿ ಹೇಳಿಕೆ ಸರಿಯಲ್ಲ ಎಂದರು.

ನಂತರ ಮಾತು ಮುಂದುವರಿಸಿದ ಸಿ.ಟಿ.ರವಿ, ತಮ್ಮ ಭಾಷಣದ ವೇಳೆ ವಿಕಲಾಂಗ ಮಗು ಜನನದ ಪ್ರಸ್ತಾಪ ಮಾಡಿದರು. ಹಲವು ವರ್ಷ ಕಾದು ದಂಪತಿಗೆ ವಿಕಲಾಂಗ ಮಗು ಹುಟ್ಟಿತು. ವಿಕಲಾಂಗ ಮಗು ಹುಟ್ಟಿದಾಗ ಮಗುವಿನ ಸೋದರ ಮಾವ ಅದರ ಲಾಭ ಪಡೆದರು. ವಿಕಲಾಂಗ ಮಗುವನ್ನು ನೋಡಲು ಜನರು ಬರತೊಡಗಿದರು. ಆಗ ಮಾವ ಆ ಮಗುವನ್ನು ನೋಡಲು ಟಿಕೆಟ್ ಇಟ್ಟ. ಒಂದು ದಿನ ಮಗು ಸತ್ತಾಗ ಮಾವನಿಗೆ ತುಂಬಾ ಬೇಸರ ಆಯಿತು. ಮಗು ಇದ್ದರೆ ಟಿಕೆಟ್ ಮೂಲಕ ಹಣ ಸಂಪಾದನೆಯಾಗುತಿತ್ತು. ಮಗು ಸತ್ತಿದ್ದರಿಂದ ಮಾವನಿಗೆ ತುಂಬಾ ತೊಂದರೆಯಾಯ್ತು ಎಂದರು.

ರಾಜಕಾರಣ ಬಿಸಿನೆಸ್​ ಅಲ್ಲ ಎಂದ ಸಿಟಿ ರವಿ: ಕೆಲವರು ವಿಕಲಾಂಗ ಮಗು ಹುಟ್ಟಲಿ ಅಂತ ಕಾಯುತ್ತಿದ್ದಾರೆ ರಾಜಕಾರಣ ಬ್ಯುಸಿನೆಸ್ ಅಲ್ಲ. ವಿಕಲಾಂಗ ಮಗು ಹುಟ್ಟಿದರೆ ಕಲೆಕ್ಷನ್ ಎಜೆಂಟ್ ಹುಟ್ಟಿಕೊಳ್ಳುತ್ತಾರೆ. ಕಲೆಕ್ಷನ್ ಗೇಟ್ ಇಟ್ಟುಕೊಳ್ಳುವುದನ್ನು ತಡೆಯಬೇಕಿದೆ. ಅದಕ್ಕಾಗಿ ಒಳ್ಳೆಯ ಮಗು ಹುಟ್ಟುವ ಅಗತ್ಯವಿದೆ. ಯಾರ ಹಂಗು ಇಲ್ಲದ ಸರ್ಕಾರ ರಚನೆಯಾಗಬೇಕು ಎನ್ನುವುದು ನಮ್ಮ ಆಶಯವಿದೆ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ವಿರುದ್ಧ ಲೇವಡಿ ಮಾಡಿದರು.

ಬಿಜೆಪಿ- ಜೆಡಿಎಸ್​​ ಸದಸ್ಯರ ನಡುವೆ ಮಾತಿನಚಕಮಕಿ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶಂಪೂರ್ ಅವರು, ನಾವು ಬಹುಮತಕ್ಕೆ ಬರುತ್ತೇವೆ ಎಂದರು. ಆಗ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಮಾತು ಮುಂದುವರಿಸಿದ ಸಿ.ಟಿ.ರವಿ ಅವರು, 2006 ರಲ್ಲಿ ಪ್ರಧಾನಿಗಳ ಜೊತೆ ಚೀನಾ ಪ್ರವಾಸಕ್ಕೆ ನಮ್ಮ ಮುಖ್ಯಮಂತ್ರಿಗಳಿಗೂ ಆಹ್ವಾನ ಇತ್ತು. ನಮ್ಮ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಹೋಗಲಿಲ್ಲ.

ಇದರಿಂದ ರಾಜ್ಯಕ್ಕೆ 40 ಸಾವಿರ ಕೋಟಿ ಬಂಡವಾಳ ಹರಿದು ಬರುವುದು ತಪ್ಪಿತು ಸಿದ್ದರಾಮಯ್ಯ ಸಣ್ಣತನದ ರಾಜಕಾರಣ ಮಾಡಿದ್ರು ಎಂದು ಹೇಳಿದರು. ಈ ವೇಳೆ ಜೆಡಿಎಸ್​ನ ಶಿವಲಿಂಗೇಗೌಡ ಎದ್ದು ನಿಂತು ಆಕ್ಷೇಪಿಸಿದರು. ಸಿ.ಟಿ. ರವಿ ಪಕ್ಷದ ಕ್ಯಾಂಪೇನ್ ಮಾಡುತ್ತಿದ್ದಾರೆ. ಅವರು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುತ್ತಿಲ್ಲ. ನಿಮ್ಮ ರೀತಿ ನಮಗೂ ಭಾಷಣ ಮಾಡಲು ಬರುತ್ತದೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ವೇ ಇರೋದು, ಎಲ್ಲರಿಗೂ ಗೊತ್ತಿದೆ ಎಂದು ಶಿವಲಿಂಗೇಗೌಡ, ಪ್ರಿಯಾಂಕ್ ಖರ್ಗೆ, ದೇಶಪಾಂಡೆ, ಬಂಡೆಪ್ಪ ಕಾಶಂಪೂರ್ ತೀವ್ರ ಆಕ್ಷೇಪಿಸಿದರು

ಇದನ್ನೂ ಓದಿ: ಪರೀಕ್ಷೆ ವೇಳೆ ವಿದ್ಯುತ್ ತೊಂದರೆಯಾಗಲ್ಲ, ಬೇಸಿಗೆ ವಿದ್ಯುತ್ ಬೇಡಿಕೆ ಪೂರೈಕೆಗೆ ಸಿದ್ಧ: ಸುನೀಲ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.