ETV Bharat / state

ಕೇಂದ್ರ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ.. 20 ವಿವಿಧ ಪ್ರಕರಣ ದಾಖಲು

author img

By ETV Bharat Karnataka Team

Published : Aug 26, 2023, 8:13 PM IST

ಅವಧಿ ಮೀರಿ ಮಧ್ಯರಾತ್ರಿ ನಡೆಸಲ್ಪಡುತ್ತಿದ್ದ ಪಬ್​ ಬಾರ್ ಮತ್ತು ರೆಸ್ಟೋರೆಂಟ್ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇಂದ್ರ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ
ಕೇಂದ್ರ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ

ಬೆಂಗಳೂರು: ಅವಧಿ ಮೀರಿ, ಅನಧಿಕೃತವಾಗಿ ನಡೆಸಲ್ಪಡುತ್ತಿದ್ದ ಪಬ್, ಬಾರ್ ಮತ್ತು ರೆಸ್ಟೋರೆಂಟ್, ವಾಣಿಜ್ಯ ನೆಲೆಗಟ್ಟುಗಳು ಸೇರಿದಂತೆ ಕೇಂದ್ರ ವಿಭಾಗದ ಪ್ರಮುಖ ಸ್ಥಳಗಳಲ್ಲಿ ತಡರಾತ್ರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು 20 ವಿವಿಧ ಪ್ರಕರಣಗಳನ್ನ ದಾಖಲಿಸಿಕೊಂಡಿದ್ದಾರೆ. ಅವಧಿ ಮೀರಿ ಮಧ್ಯರಾತ್ರಿ 1 ಗಂಟೆಯ ನಂತರವೂ ವ್ಯವಹರಿಸುತ್ತಿದ್ದವರ ವಿರುದ್ಧ 13 ಪ್ರಕರಣಗಳನ್ನು ದಾಖಲಿಸಲಾಗಿದೆ. ಅನೈತಿಕ ಕಳ್ಳ ಸಾಗಾಣಿಕೆ ಕಾಯ್ದೆಯಲ್ಲಿ ಓರ್ವ ಹೋಟೆಲ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿದೇಶಿ ಮಹಿಳಾ ಪ್ರಜೆಯನ್ನು ರಕ್ಷಿಸಲಾಗಿದೆ. ಅಲ್ಲದೇ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ಅಡಚಣೆಯುಂಟು ಮಾಡುತ್ತಿದ್ದ ಮಂಗಳಮುಖಿ ವಿರುದ್ಧ 5 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಬೆಂಗಳೂರು ಪೊಲೀಸ್​ ಇಲಾಖೆ ಹೆಸರಲ್ಲಿ ನಕಲಿ ಖಾತೆ: ಬೆಂಗಳೂರು ಪೊಲೀಸ್ ಇಲಾಖೆ ಹೆಸರಿನಲ್ಲಿ ನಕಲಿ X (ಟ್ವಿಟರ್) ಖಾತೆ ತೆರೆದು, ಕ್ರಿಕೆಟ್​ ಬಗ್ಗೆ ಪೋಸ್ಟ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಸೇತುಪಟ್ಟುವಿನ ವೈದ್ಯಕೀಯ ವಿದ್ಯಾರ್ಥಿ ಮಹೇಶ್​ ಕುಮಾರ್​ ಎಂಬಾತ ನಕಲಿ ಖಾತೆ ಸೃಷ್ಟಿಸಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ನಕಲಿ ಖಾತೆ ವಿಚಾರ ಬೆಂಗಳೂರು ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಸೈಬರ್ ಕ್ರೈಂ ಪೊಲೀಸ್ ಇಲಾಖೆಯ ರವಿ ಎಂಬ ಕಾನ್ಸ್​ಟೇಬಲ್​ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ವೇಳೆ ಕಂಪ್ಯೂಟರ್ ಮೂಲಕ ನಕಲಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ಗಳನ್ನು ಮಾಡಿರುವುದು ಹಾಗು ಐಪಿ ವಿಳಾಸವು ಪತ್ತೆಯಾಗಿತ್ತು. ಬಳಿಕ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇನ್ನು ತಮಾಷೆಗಾಗಿ ಟ್ವಿಟರ್ ಖಾತೆ ಆರಂಭಿಸಿರುವುದಾಗಿ ಮಹೇಶ್ ಕುಮಾರ್ ಹೇಳಿದ್ದಾನೆ. ಸದ್ಯ ಪೊಲೀಸರು ಮಹೇಶ್ ಕುಮಾರ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಮಾಂಗಲ್ಯ ಸರ ಕದ್ದೊಯ್ದ ನಕಲಿ ಸ್ವಾಮೀಜಿ: ಕೌಟುಂಬಿಕ ಕಲಹ ಸರಿಪಡಿಸುವುದಾಗಿ ಹೇಳಿ ನಕಲಿ ಸ್ವಾಮೀಜಿಯೊಬ್ಬ 2.40 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕದ್ದೊಯ್ದ ಘಟನೆ ನಿನ್ನೆ ಬೆಂಗಳೂರಿನ ಇಂದಿರಾನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಕದಿರಯ್ಯನಪಾಳ್ಯದಲ್ಲಿ ನಡೆದಿತ್ತು. ಸರ ಕಳೆದುಕೊಂಡ ಸುಗುಣಾ ಎಂಬವರು ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಸುಗುಣ, ಫೋನ್ ಮೂಲಕ ತಮಿಳುನಾಡು ಮೂಲದ ರಾಜ ಎಂಬ ನಕಲಿ ಸ್ವಾಮೀಜಿಯನ್ನು ಸಂಪರ್ಕಿಸಿದ್ದರು. "ಮನೆಯಲ್ಲಿ ಪೂಜೆ ಮಾಡಿ ಸಮಸ್ಯೆ ನಿವಾರಿಸುವುದಾಗಿ ಹೇಳಿದ್ದ ಆರೋಪಿ, ಸಂಜೆ ಸಮಯ ಸುಗುಣಾರ ಮನೆಗೆ ಬಂದು ಪೂಜೆ ಮಾಡಿ, ಮಾಂಗಲ್ಯ ಸರವನ್ನು ಬಿಚ್ಚಿಡುವಂತೆ ಸೂಚಿಸಿ, ನಂತರ ಮನೆಯ ಹೊರಗಡೆ ಪೂಜೆ ಸಲ್ಲಿಸಲು ಹೋದಾಗ ಆರೋಪಿ ಸರ ಸಮೇತ ಪರಾರಿಯಾಗಿದ್ದಾನೆ ಎಂದು ಸುಗುಣ ದೂರಿನಲ್ಲಿ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಮುಖ್ಯ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪಿಎಸ್​ಐ ಪುತ್ರನ ವಶಕ್ಕೆ ಪಡೆದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.