ETV Bharat / state

ಫುಡ್​ ಡೆಲಿವರಿಗೆ ಬಂದು ಲಿಫ್ಟ್‌​ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿಗೆ ನ್ಯಾಯಾಂಗ ಬಂಧನ

author img

By

Published : Jun 25, 2023, 1:04 PM IST

ಫುಡ್​ ಡೆಲಿವರಿ ಮಾಡಲು ಬಂದ ವ್ಯಕ್ತಿ ಲಿಫ್ಟ್‌​ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆರೋಪಿಯನ್ನು ಕೋರ್ಟ್​ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Bengaluru crime
ಬೆಂಗಳೂರು ಅಪರಾಧ

ಬೆಂಗಳೂರು: ಅಪಾರ್ಟ್ಮೆಂಟಿಗೆ ಫುಡ್​ ಡೆಲಿವರಿ ಮಾಡಲು ಬಂದು ಲಿಫ್ಟ್​​ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಕೋರ್ಟ್​ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲಘಟ್ಟಪುರ ವ್ಯಾಪ್ತಿಯ ಖಾಸಗಿ ಅಪಾರ್ಟ್​​ಮೆಂಟ್​​ನಲ್ಲಿ ಜೂನ್ 21ರ ಸಂಜೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ತಲಘಟ್ಟಪುರ ಪೊಲೀಸರು ಆರೋಪಿ ಚೇತನ್ (30) ಎಂಬಾತನನ್ನು ಬಂಧಿಸಿದ್ದರು.

ಅಪಾರ್ಟ್ಮೆಂಟ್​ನ 3ನೇ ಮಹಡಿಯಲ್ಲಿರುವವರಿಗೆ ಫುಡ್ ಡೆಲಿವರಿ ಮಾಡಲು ಚೇತನ್​ ಲಿಫ್ಟ್​​ನಲ್ಲಿ ಹೋಗುತ್ತಿದ್ದ. ಅದೇ ಸಂದರ್ಭದಲ್ಲಿ ಲಿಫ್ಟ್ ಬಳಸಿ 13ನೇ ಮಹಡಿಯಲ್ಲಿ ಟ್ಯೂಷನ್ ಪಡೆಯಲು ಟೀಚರ್ ಬಳಿ ಬಾಲಕಿ ತೆರಳುತ್ತಿದ್ದಳು. ಈ ವೇಳೆ ಆರೋಪಿ 'ಬ್ಯಾಡ್ ಟಚ್' ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಲಿಫ್ಟ್​ನಿಂದ ಹೊರಬಂದ ಬಾಲಕಿ ಟ್ಯೂಷನ್ ಟೀಚರ್​ಗೆ ವಿಷಯ ತಿಳಿಸಿದ್ದಳು.

ಕೂಡಲೇ ಟೀಚರ್ ಬಾಲಕಿಯ ಪೋಷಕರಿಗೆ ವಿಷ ತಿಳಿಸಿದ್ದಾರೆ. ತಕ್ಷಣ ಆರೋಪಿ ವಾಪಸ್​ ಹೋಗುವುದರೊಳಗೆ ಅಪಾರ್ಟ್​ಮೆಂಟ್​​ನ ಇತರ ನಿವಾಸಿಗಳು, ಸೆಕ್ಯೂರಿಟಿ ಸೇರಿ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ತಲಘಟ್ಟಪುರ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಡಿಗೆ ಕಾರು ಪಡೆದು ವಂಚಿಸುತ್ತಿದ್ದ ಆರೋಪಿ ಬಂಧನ: ಬಾಡಿಗೆಗೆ ಕಾರುಗಳನ್ನು ಪಡೆದುಕೊಂಡು, ಬಳಿಕ ಅವುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಫೈನಾನ್ಸಿಯರ್‌ಗಳ ಬಳಿ ಅಡಮಾನ ಇಟ್ಟು ಪರಾರಿಯಾಗಿದ್ದ ಆರೋಪಿಯನ್ನು ತಿಲಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವೇದಾಂತ್‌ ಗೌಡ ಅಲಿಯಾಸ್ ಜೀವನ್ (26) ಬಂಧಿತ ಆರೋಪಿ. ಬಂಧಿತನಿಂದ 78.70 ಲಕ್ಷ ರೂ. ಮೌಲ್ಯದ ಆರು ವಿವಿಧ ಕಂಪನಿಗಳ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಹಾಸನ ಮೂಲದ ಆರೋಪಿ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ. ಕಾರುಗಳನ್ನು ಬಾಡಿಗೆಗೆ ನೀಡುವವರಿಂದ ಮದುವೆ ಸಮಾರಂಭ ಹಾಗೂ ಇತರೆ ಕಾರಣಗಳನ್ನು ನೀಡಿ ಕಾರುಗಳನ್ನು ಬಾಡಿಗೆಗೆ ಪಡೆದುಕೊಂಡು ಹೋಗುತ್ತಿದ್ದ. ಬಾಡಿಗೆಗೆ ಕಾರನ್ನು ಪಡೆಯುವಾಗ ಮಾಲೀಕರಿಂದ ಕಾರುಗಳ ಇನ್ಶುರೆನ್ಸ್, ಆರ್‌ಸಿ ಕಾರ್ಡ್, ಬ್ಯಾಂಕ್ ಎನ್‌ಒಸಿ ಸೇರಿದಂತೆ ಎಲ್ಲಾ ಅಸಲಿ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ.

ತನ್ನ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ನಕಲು ಪ್ರತಿ ನೀಡಿ ಕಾರು ಕೊಂಡೊಯ್ಯುತ್ತಿದ್ದ. ಅಲ್ಲದೆ, ಪ್ರತಿನಿತ್ಯ ಬಾಡಿಗೆಯಾಗಿ 2 ಸಾವಿರ ರೂ. ಕೊಡುವುದಾಗಿ ನಂಬಿಸಿ, ಮುಂಗಡವಾಗಿ ಹತ್ತು ದಿನಗಳ 20 ಸಾವಿರ ರೂ ಬಾಡಿಗೆ ಕೊಡುತ್ತಿದ್ದ. ಹತ್ತು ದಿನಗಳ ಬಳಿಕ ಐದು - ಹತ್ತು ಸಾವಿರ ಕೊಟ್ಟು ಇನ್ನಷ್ಟು ದಿನ ಬಾಡಿಗೆಗೆ ಬೇಕೆಂದು ಮಾಲೀಕರನ್ನು ನಂಬಿಸುತ್ತಿದ್ದ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ: ಕಾರು ಮಾಲೀಕರಿಂದ ಪಡೆದ ಎಲ್ಲಾ ದಾಖಲೆಗಳನ್ನು ನಕಲು ಮಾಡುತ್ತಿದ್ದ ಆರೋಪಿ, ತನ್ನ ಆಧಾರ್ ನಂಬರ್‌ಗೆ ಕಾರು ಮಾಲೀಕರ ಫೋಟೋ ಅಂಟಿಸುತ್ತಿದ್ದ. ಆರ್.ಸಿ.ಕಾರ್ಡ್, ಬ್ಯಾಂಕ್ ಎನ್‌ಒಸಿಗೂ ತನ್ನ ಹೆಸರು ಸೇರಿಸುತ್ತಿದ್ದ. ಬಳಿಕ ಫೈನಾನ್ಸಿಯರ್‌ಗಳ ಬಳಿ ತುರ್ತು ಹಣದ ಅಗತ್ಯವಿದೆ ಎಂದು ಹಣ ಪಡೆಯುತ್ತಿದ್ದ. ಕೆಲವೊಮ್ಮೆ ಕಾರು ಮಾಲೀಕರ ಅಸಲಿ ದಾಖಲೆಗಳನ್ನೇ ತೋರಿಸಿ ಅಡಮಾನ ಇಡುತ್ತಿದ್ದ. ಮೇ 26ರಂದು ಜಯನಗರ ನಿವಾಸಿ ದಿಲೀಪ್ ಎಂಬುವರಿಗೆ ಅವರ ಸ್ನೇಹಿತರ ಮೂಲಕ ಪರಿಚಯವಾದ ವೇದಾಂತ್, ಎರ್ಟಿಗಾ ಕಾರು ತಂದು, ಸ್ನೇಹಿತ ಶಶಿಕುಮಾರ್ ಎಂಬಾತನ ತಾಯಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ಹಣ ಬೇಕೆಂದು 7 ಲಕ್ಷ ರೂ. ಪಡೆದುಕೊಂಡಿದ್ದ. ಜೂನ್ 12 ರಂದು ಮತ್ತೊಮ್ಮೆ ಬಂದು ಎಕ್ಸ್‌ಯುವಿ 500 ಕಾರು ಮಾಲೀಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಣದ ಅಗತ್ಯವಿದೆ ಎಂದು ಹೇಳಿ 3 ಲಕ್ಷ ರೂ. ಪಡೆದುಕೊಂಡು ಪರಾರಿಯಾಗಿದ್ದ.

ಆದರೆ ದಿಲೀಪ್ ಮನೆ ಬಳಿ ನಿಲ್ಲಿಸಿದ್ದ ಎಕ್ಸ್‌ಯುವಿ ಕಾರನ್ನು ಅದರ ಅಸಲಿ ಮಾಲೀಕ ಜಿಪಿಎಸ್ ಆಧಾರದ ಮೇಲೆ ಪತ್ತೆ ಹಚ್ಚಿ, ಮತ್ತೊಂದು ಕೀ ಬಳಸಿ ಕೊಂಡೊಯ್ದಿದ್ದರು. ಈ ವಿಚಾರ ತಿಳಿದ ದಿಲೀಪ್, ಕಾರು ಮಾಲೀಕರ ಬಳಿ ಪ್ರಶ್ನಿಸಿದಾಗ, ತನ್ನ ಕಾರನ್ನು ಜೂಮ್ ಕಾರಿನವರಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಯಾರಿಗೂ ಮಾರಾಟ ಮಾಡಿಲ್ಲ. ದಾಖಲೆಗಳಿಗೆ ಸಹಿಯೂ ಮಾಡಿಲ್ಲ ಎಂದಿದ್ದರು. ಜೂಮ್ ಕಾರಿನವರಿಗೆ ಪ್ರಶ್ನಿಸಿದಾಗ ವೇದಾಂತ್ ಎಂಬಾತ ಕಾರನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದ ಎಂಬುದು ಗೊತ್ತಾಗಿತ್ತು. ಬಳಿಕ ದಿಲೀಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ ತಿಲಕ್ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ; 7 ಯುವತಿಯರ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.