ETV Bharat / state

ಮಹೇಶ್ ಜೋಶಿಗೆ ನಿಂದಿಸಿದ ಆರೋಪ: ದೂರು ರದ್ದುಗೊಳಿಸಿದ ಕೋರ್ಟ್‌

author img

By

Published : Feb 26, 2023, 6:54 AM IST

ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರನ್ನು ನಿಂದಿಸಿದ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಆರೋಪಿಗಳನ್ನು ನಿರ್ದೋಷಿ ಎಂದು ಹೇಳಿದೆ.

ACMM court
ಎಸಿಎಂಎಂ ನ್ಯಾಯಾಲಯ

ಬೆಂಗಳೂರು: ಅವಾಚ್ಯ ಶಬ್ದಗಳಿಂದ ನಿಂದಿಸಿ, ದೂರದರ್ಶನ ಕೇಂದ್ರದಲ್ಲಿ ನಡೆಯುತ್ತಿದ್ದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ದೂರದರ್ಶನ ಕಾರ್ಯಕ್ರಮ‌ದ ಉಪ ನಿರ್ದೇಶಕ ಎನ್.ಕೆ.ಮೋಹನ ರಾಮ್‌ ಹಾಗೂ ಪ್ರೊಡಕ್ಷನ್ ಸಹಾಯಕ ಎಸ್.ಬಿ.ಭಜಂತ್ರಿ ವಿರುದ್ಧ ದೂರದರ್ಶನ ಕೇಂದ್ರದ ಅಂದಿನ ಹಿರಿಯ ನಿರ್ದೇಶಕ ಮಹೇಶ್ ಜೋಶಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ನಗರದ ಎಸಿಎಂಎಂ(ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌) ನ್ಯಾಯಾಲಯ ರದ್ದುಪಡಿಸಿದೆ. ಜೋಶಿ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್, ಪ್ರಕರಣದ ಆರೋಪಿಗಳಾಗಿದ್ದ ಎನ್.ಕೆ.ಮೋಹನ ರಾಮ್ ಮತ್ತು ಎಸ್.ಬಿ.ಭಜಂತ್ರಿ ಅವರನ್ನು ದೋಷಮುಕ್ತಗೊಳಿಸಿ ಆದೇಶಿಸಿದರು. ಆರೋಪಿಗಳ ವಿರುದ್ಧದ ಆಪಾದನೆಗಳನ್ನು ಪುಷ್ಟೀಕರಿಸುವ ಮತ್ತು ಸೂಕ್ತ ಸಾಕ್ಷ್ಯಗಳನ್ನು ಹಾಜರುಪಡಿಸುವಲ್ಲಿ ದೂರುದಾರರು ವಿಫಲವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದೊಂದು ಪರಸ್ಪರರ ವೃತ್ತಿಪರ ವೈಮನಸ್ಸು ಎಂದು ತಿಳಿದುಬಂದಿದೆ. ಈ ಕಾರಣಕ್ಕಾಗಿ ಮಹೇಶ್ ಜೋಶಿ ದೂರು ದಾಖಲಿಸಿದಂತಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಟ್ಟಿದ್ದಾರೆ. ಆರೋಪಿಗಳ ವಿರುದ್ಧ ದೂರಿನಲ್ಲಿ ನಿಗದಿಪಡಿಸಲಾಗಿದ್ದ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಸರ್ಕಾರಿ ನೌಕರನ ಕಾರ್ಯನಿರ್ವಹಣೆಗೆ ಅಡ್ಡಿ, ಶಾಂತಿ ಭಂಗ ಹಾಗೂ ಉದ್ದೇಶಪೂರ್ವಕ ಅಪಮಾನ, ಅಪರಾಧಿಕ ಒಳಸಂಚು ಮತ್ತು ರಾಷ್ಟ್ರೀಯ ಗೌರವಕ್ಕೆ ಅಪಮಾನ ಆರೋಪಗಳನ್ನು ರದ್ದುಪಡಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಮಹೇಶ್ ಜೋಶಿ ಅವರು 2008ರಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಹಿರಿಯ ನಿರ್ದೇಶಕರಾಗಿದ್ದರು. ಈ ಸಂದರ್ಭದಲ್ಲಿ 2008ರ ಆಗಸ್ಟ್ 15ರಂದು ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ನಡೆದಿತ್ತು. ಎನ್.ಕೆ.ಮೋಹನ ರಾಮ್ ಮತ್ತು ಎಸ್.ಪಿ.ಭಜಂತ್ರಿ ಎಂಬುವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಧ್ವಜಾರೋಹಣ ನಡೆಸದಂತೆ ಅಡ್ಡಿಯುಂಟು ಮಾಡಿದರು. ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುವಾಗ ನನ್ನ ಭಾಷಣಕ್ಕೆ ವಿರುದ್ಧವಾಗಿ ಆರೋಪಿಗಳು ಭಾಷಣ ಪ್ರಾರಂಭಿಸಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದರು.

ಹೀಗೊಂದು ವಿಭಿನ್ನ ಶಿಕ್ಷೆ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದಲ್ಲಿ ಎರಡು ವರ್ಷ ಶಿಕ್ಷೆಗೆ ಒಳಗಾಗಿದ್ದ 81 ವರ್ಷದ ಅಪರಾಧಿಗೆ ಒಂದು ವರ್ಷ ಕಾಲ ಅಂಗನವಾಡಿಯಲ್ಲಿ ಉಚಿತ ಸೇವೆ ಸಲ್ಲಿಸುವ ವಿಭಿನ್ನ ಶಿಕ್ಷೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ ನ್ಯಾಯಾಲಯ ಅವರಿಗೆ ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಮಾರ್ಪಡಿಸಿ ಮೂರು ದಿನಕ್ಕಿಳಿಸಿದೆ. ಅಲ್ಲದೇ, ಒಂದು ವರ್ಷ ಮಿತನಡ್ಕ ಅಂಗನವಾಡಿಯಲ್ಲಿ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸಲು ಆದೇಶ ನೀಡಿದೆ.

ಇದನ್ನೂ ಓದಿ: 81 ವರ್ಷದ ಅಪರಾಧಿಗೆ ಸಂಬಳವಿಲ್ಲದೆ ಅಂಗನವಾಡಿಯಲ್ಲಿ ಕೆಲಸ ಮಾಡುವ ಶಿಕ್ಷೆ ವಿಧಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.