ETV Bharat / state

ಬೆಂಗಳೂರು: ಇನ್ಶೂರೆನ್ಸ್ ಪಾಲಿಸಿಗಳ ಹೆಸರಿನಲ್ಲಿ ವಂಚಿಸುತ್ತಿದ್ದ ದಂಪತಿ ಬಂಧನ

author img

By ETV Bharat Karnataka Team

Published : Dec 12, 2023, 3:31 PM IST

ಹಿರಿಯ ನಾಗರಿಕರಿಗೆ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾಡಿಸಿದರೆ ಹೆಚ್ಚಿನ ಹಣ ಬರುವುದಾಗಿ ನಂಬಿಸಿ ದಂಪತಿ ವಂಚನೆ ಮಾಡುತ್ತಿದ್ದರು.

ಇನ್ಶೂರೆನ್ಸ್ ಪಾಲಿಸಿಗಳ ಹೆಸರಿನಲ್ಲಿ ವಂಚನೆ
ಇನ್ಶೂರೆನ್ಸ್ ಪಾಲಿಸಿಗಳ ಹೆಸರಿನಲ್ಲಿ ವಂಚನೆ

ಬೆಂಗಳೂರು : ಪ್ರತಿಷ್ಠಿತ ಇನ್ಶೂರೆನ್ಸ್ ಕಂಪನಿಗಳ ಹೆಸರಿನಲ್ಲಿ ಅವಧಿ ಪೂರ್ವ ಪಾಲಿಸಿಗಳನ್ನು ಹಿರಿಯ ನಾಗರಿಕರಿಗೆ ನೀಡುವುದಾಗಿ ವಂಚಿಸುತ್ತಿದ್ದ ದಂಪತಿಯನ್ನ ಸಿಸಿಬಿಯ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉದಯ್.ಬಿ ಹಾಗೂ ತೀರ್ಥಾ ಗೌಡ ಬಂಧಿತ ದಂಪತಿ.

ಈ ಹಿಂದೆ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ ದಂಪತಿಗಳಿಬ್ಬರಿಗೂ ಅದರ ಜ್ಞಾನವಿತ್ತು. ಕೋವಿಡ್ ನಂತರ ಬರುತ್ತಿದ್ದ ಆದಾಯ ಇಬ್ಬರಿಗೂ ಸಾಕಾಗುತ್ತಿರಲಿಲ್ಲ. ಇದರಿಂದ ಅಡ್ಡದಾರಿ ಹಿಡಿದಿದ್ದ ದಂಪತಿಗಳು, ಇಂದಿರಾನಗರದಲ್ಲಿ ಶ್ರೀನಿಧಿ ಇನ್ಫೋಸೋರ್ಸ್ ಎಂಬ ಕಚೇರಿಯನ್ನು ಆರಂಭಿಸಿದ್ದರು. ಆ ಕಚೇರಿಯಲ್ಲಿ 4 ರಿಂದ 5 ಜನರು ಟೆಲಿ ಕಾಲರ್ ಗಳನ್ನು ನೇಮಕ ಮಾಡಿಕೊಂಡು ಅವರ ಮೂಲಕ ಇನ್ಶುರೆನ್ಸ್ ಲ್ಯಾಪ್ಸ್ ಆಗಿರುವ ಪಾಲಿಸಿದಾರರುಗಳಿಗೆ ಪಾಲಿಸಿ ಹಣ ಕಟ್ಟಿದಲ್ಲಿ ಇನ್ಶೂರೆನ್ಸ್ ಹಣವು ದೊರೆಯುವುದು ಅಥವಾ ಈಗಾಗಲೇ ಕಂತನ್ನು ಕಟ್ಟಿ ಬಿಟ್ಟಿರುವ ಹಣಕ್ಕೆ ಬಡ್ಡಿ ಸಮೇತ ಹಣವನ್ನು ವಾಪಸ್​ ನೀಡಲಾಗುವುದು ಎಂದು ಹೇಳಿಸುವ ಕೆಲಸವನ್ನು ಮಾಡಿಸುತ್ತಿದ್ದರು.

ಅಲ್ಲದೆ ಹಿರಿಯ ನಾಗರಿಕರಿಗೆ ಒಂದು ವರ್ಷಕ್ಕೆ 1 ಕೋಟಿಯ ಪಾಲಿಸಿ ಮಾಡಿಸಿದ್ದಲ್ಲಿ 5 ಕೋಟಿ ಹಣವು ಬರುತ್ತದೆ ಎಂದು ನಂಬಿಸಿ, ಅವರ ಸಂಬಂಧಿಕರು, ಸ್ನೇಹಿತರ ಹೆಸರಿನಲ್ಲಿಯೂ ಹೆಚ್ಚಿನ ಪಾಲಿಸಿಗಳನ್ನು ಮಾಡಿಸುವಂತೆ ಅಮೀಷವೊಡ್ಡಿ ಹಣ ಪಡೆದುಕೊಂಡು ತಮ್ಮ ಸ್ವಂತ ಅಕೌಂಟ್ ಹಾಗೂ ತಮ್ಮ ಹೆಸರಿನಲ್ಲಿ ಪಾಲಿಸಿಗಳನ್ನು ಮಾಡಿಸಿಕೊಳ್ಳುತ್ತಿದ್ದರು.

ಸದ್ಯ ಆರೋಪಿ ದಂಪತಿಯನ್ನು ಬಂಧಿಸಲಾಗಿದ್ದು, ಸುಮಾರು 1.80 ಕೋಟಿ ರೂ ವಂಚಿಸಿ, 40 ಲಕ್ಷ ರೂ ಹಣವನ್ನು ತಮ್ಮ ಸ್ವಂತ ಖಾತೆಗೆ ಜಮಾ ಮಾಡಿಕೊಂಡು ಹಿರಿಯ ನಾಗರಿಕರಿಗೆ ವಂಚನೆ ಮಾಡಿರುವ ಬಗ್ಗೆ ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಲಾಗಿದ್ದು, ಇದೇ ರೀತಿ 290 ವಂಚನೆಯ ಪ್ರಕರಣಗಳು ತನಿಖೆಯಿಂದ ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಪೊಲೀಸ್​ ಸೋಗಿನಲ್ಲಿ ಸಾರ್ವಜನಿಕರಿಗೆ ವಂಚನೆ : ಇತ್ತೀಚೆಗೆ ನಗರದ ಮತ್ತೊಂದೆಡೆ ಪೊಲೀಸ್​ ಸೋಗಿನಲ್ಲಿ ಸಾರ್ವಜನಿಕರನ್ನು ಪರಿಚಯಿಸಿಕೊಂಡು, ನಗರದ ವಿವಿಧೆಡೆ ಪೊಲೀಸರು ಸೀಜ್ ಮಾಡಿರುವ ವಾಹನಗಳನ್ನ ಕಡಿಮೆ ಬೆಲೆಗೆ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನ ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದರು. ಕೆ. ಲೂರ್ದನಾಥನ್ (53) ಬಂಧಿತ ಆರೋಪಿಯಾಗಿದ್ದು, ಈ ಹಿಂದೆ ಗೃಹರಕ್ಷಕದಳದಲ್ಲಿ ಕೆಲಸ ಮಾಡುತ್ತಿದ್ದನು. ಬಳಿಕ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದರೆ ಪೊಲೀಸ್ ಸಮವಸ್ತ್ರ ಧರಿಸಿ ಜಪ್ತಿ ಮಾಡಿರುವ ವಾಹನಗಳನ್ನು ಹರಾಜಿನಲ್ಲಿ ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸುತ್ತಿದ್ದ. ಇದಕ್ಕೆ ಪ್ರತಿಯಾಗಿ ಅವರಿಂದ ಹಣ ಪಡೆದು, ನಂತರ ವಂಚಿಸುತ್ತಿದ್ದನು.

ಇದನ್ನೂ ಓದಿ : 9 ವರ್ಷಗಳಿಂದ ವಂಚನೆಯಲ್ಲಿ ತೊಡಗಿದ್ದ ಆರೋಪಿ ಒಂದೇ ದಿನದಲ್ಲಿ ಸಿಸಿಬಿ ಬಲೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.