ETV Bharat / state

ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ: ಸಿಎಂ ಕಚೇರಿ ಕಾಫಿ - ತಿಂಡಿಗೆ 200 ಕೋಟಿ ರೂ.‌ದುಂದು ವೆಚ್ಚ: ಎನ್.ಆರ್.ರಮೇಶ್ ಆರೋಪ

author img

By

Published : Mar 6, 2023, 4:03 PM IST

ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪ : ಸಿಎಂ ಕಚೇರಿಯಲ್ಲಿ ಕಾಫಿ, ತಿಂಡಿಗೆ 200 ಕೋಟಿ ದುಂದುವೆಚ್ಚದ ದೂರು- ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್​ ಆರ್​ ರಮೇಶ್​ ಆರೋಪ

corruption-in-siddaramaih-govt-200-crores-spent-on-snacks-in-cm-office
ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ : ಸಿಎಂ ಕಚೇರಿ ಕಾಫಿ-ತಿಂಡಿಗೆ 200 ಕೋಟಿ ರೂ.‌ದುಂದು ವೆಚ್ಚ: ಎನ್.ಆರ್.ರಮೇಶ್

ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ : ಸಿಎಂ ಕಚೇರಿ ಕಾಫಿ-ತಿಂಡಿಗೆ 200 ಕೋಟಿ ರೂ.‌ದುಂದು ವೆಚ್ಚ: ಎನ್.ಆರ್.ರಮೇಶ್

ಬೆಂಗಳೂರು : ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ವಿಧಾನಸೌಧದಲ್ಲಿನ ಸಿಎಂ ಅಧಿಕೃತ ಕಚೇರಿಯಲ್ಲಿ ಕೇವಲ ಕಾಫಿ, ತಿಂಡಿ, ಬಿಸ್ಕೆಟ್​​ಗಳ ಹೆಸರಿನಲ್ಲಿ ಸುಮಾರು 200.62 ಕೋಟಿ ರೂ. ಹೆಚ್ಚು ಹಣ ದುಂದು ವೆಚ್ಚ ಮಾಡಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ತಿಂಡಿ, ಕಾಫಿಗೆ 200 ಕೋಟಿ ರೂ. ದುಂದು ವೆಚ್ಚ ಆರೋಪ : ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ 2013-14 ರಿಂದ 2017-18 ರವರೆಗಿನ 5 ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಚೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳ/ ಗಣ್ಯರ ಉಪಚಾರ ಕಾರ್ಯಗಳ ಹೆಸರಿನಲ್ಲಿ ಕಾಫೀ - ಟೀ - ತಿಂಡಿ - ಉಪಹಾರ ಪೂರೈಕೆ ಕಾರ್ಯಗಳಿಗೆ ಎಂದು ವೆಚ್ಛ ಮಾಡಿರುವ ಒಟ್ಟು ಮೊತ್ತ 200,62,93,027 ರೂಪಾಯಿ. ಈ ಬಗ್ಗೆ RTI ಕಾಯ್ದೆಯಡಿ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಅಧಿಕೃತ ದಾಖಲೆಗಳಿಂದ ಮಾಹಿತಿ ಬಯಲಾಗಿದೆ ಎಂದು ವಿವರಿಸಿದರು.

ಸಿದ್ದರಾಮಯ್ಯ ಸರ್ಕಾರದಿಂದ ಭ್ರಷ್ಟಾಚಾರ ಆರೋಪ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ “ರಾಜ್ಯ ಅತಿಥಿ ಗೃಹಗಳ ವಿಭಾಗ”ದ ಅಧಿಕಾರಿಗಳು ನೀಡಿರುವ ಅಧಿಕೃತ ದಾಖಲೆಗಳು ಹೇಳುವಂತೆ, ಸಿದ್ಧರಾಮಯ್ಯ ಆಡಳಿತಾವಧಿಯಲ್ಲಿ ಅಂದಿನ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳು ಮತ್ತು ಅತಿಥಿ - ಗಣ್ಯರ ಉಪಚಾರಗಳಿಗೆಂದು ವೆಚ್ಛ ಮಾಡಿರುವ ವರ್ಷಾವಾರು ವಿವರ ಹೀಗಿದೆ. 2013-14ರಲ್ಲಿ 36,03,03,078, 2014-15ರಲ್ಲಿ 38,26,68,575, 2015-16ರಲ್ಲಿ 36,66,19,743, 2016-17ರಲ್ಲಿ 44,73,92,077, 2017-18ರಲ್ಲಿ 44,93,09,554 ರೂ. ನಂತೆ ಒಟ್ಟು 200,62,93,027 ರೂ. ಹಗರಣವಾಗಿದೆ ಎಂದು ರಮೇಶ್​​ ಆರೋಪಿಸಿದ್ದಾರೆ.

ದಿನಕ್ಕೆ 11 ಲಕ್ಷ ರೂ ವೆಚ್ಚವಾಗಿದೆ ಎಂದು ದೂರು : 5 ವರ್ಷಗಳ ಅವಧಿ ಎಂದರೆ ಒಟ್ಟು 1,825 ದಿನಗಳು. ಭಾನುವಾರ, ಎರಡನೇ ಶನಿವಾರ ಮತ್ತು ಸರ್ಕಾರೀ ರಜಾ ದಿನಗಳು ಪ್ರತೀ ವರ್ಷಕ್ಕೆ 82 ದಿನಗಳಂತೆ, ಐದು ವರ್ಷಗಳಿಗೆ ಒಟ್ಟು 410 ದಿನಗಳು ಸರ್ಕಾರೀ ರಜಾ ದಿನಗಳು ಆಗುತ್ತವೆ. ಆದರೂ, ಸಿದ್ಧರಾಮಯ್ಯ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಯು ಒಂದು ದಿನವೂ ರಜೆಯಿಲ್ಲದೇ ಎಲ್ಲ ಭಾನುವಾರಗಳು, ಎರಡನೇ ಶನಿವಾರಗಳು ಮತ್ತು ಎಲ್ಲ ಸರ್ಕಾರಿ ರಜಾ ದಿನಗಳಲ್ಲೂ ಕಾರ್ಯ ನಿರ್ವಹಿಸಿದೆ ಎಂದು ಭಾವಿಸಿದರೂ 5 ವರ್ಷಗಳ ಅವಧಿಯ ಒಟ್ಟು 1,825 ದಿನಗಳಲ್ಲಿ ಅಂದಿನ ಸಿದ್ಧರಾಮಯ್ಯ ಅಧಿಕೃತ ಕಚೇರಿಯ ಸಭೆಗಳಲ್ಲಿ ಮತ್ತು ಅತಿಥಿ ಗಣ್ಯರ ಉಪಚಾರಗಳ ಹೆಸರಿನಲ್ಲಿ ಕಾಫೀ - ತಿಂಡಿ - ಸ್ನಾಕ್ಸ್ - ಉಪಹಾರಗಳಿಗೆಂದು ಪ್ರತೀ ದಿನವೊಂದಕ್ಕೆ ಮಾಡಿರುವ ಸರಾಸರಿ ವೆಚ್ಛ 10,99,339 ಆಗಿದೆ ಎಂದು ಆರೋಪಿಸಿದರು.

ಪ್ರತೀ ನಿತ್ಯ ತಮ್ಮ ಕಚೇರಿಯ ಸಭೆ - ಕಾರ್ಯಗಳಿಗೆಂದು ಮತ್ತು ಅತಿಥಿ ಗಣ್ಯರ ಉಪಚಾರಗಳಿಗೆ - ಕಾಫೀ - ತಿಂಡಿ - ಸ್ನಾಕ್ಸ್ - ಉಪಹಾರಗಳ ಪೂರೈಕೆಯ ಹೆಸರಿನಲ್ಲಿ ದಿನವೊಂದಕ್ಕೆ ತಲಾ ಹನ್ನೊಂದು ಲಕ್ಷ ರೂಪಾಯಿಗಳಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದರೆ ನಂಬಲಸಾಧ್ಯ. ಇಂತಹ ಲೆಕ್ಕವನ್ನು ತೋರಿಸಿರುವ ಸಿದ್ಧರಾಮಯ್ಯ ಮತ್ತು ಅವರ ಕಚೇರಿಯ ಸಿಬ್ಬಂದಿವರ್ಗ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR)ಯ ಅಂದಿನ ಅಧಿಕಾರಿಗಳು ನಕಲಿ ದಾಖಲೆಗಳ ಮೂಲಕ ಹಣ ಲೂಟಿ ಮಾಡಿದ್ದಾರೆ. ಅಂದಿನ ಮುಖ್ಯಮಂತ್ರಿಗಳ ಕಚೇರಿಯ ಈ ದುಂದು ವೆಚ್ಛಗಳ ಬಗ್ಗೆ Office of the Principal Accountant Generalದವರು ನೀಡಿರುವ ಲೆಕ್ಕ ಪರಿಶೋಧನಾ ವರದಿಯಲ್ಲಿ ತಮ್ಮ ತೀವ್ರ ಆಕ್ಷೇಪಣೆಗಳನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಲ್ಪಟ್ಟಿವೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರು ರಾಜ್ಯದ ಜನರ ಕಿವಿಗೆ ದಾಸವಾಳ‌ ಹೂವು ಇಟ್ಟಿದ್ದಾರೆ. ಐದು ವರ್ಷಗಳಲ್ಲಿ ಸಿಎಂ ಕಚೇರಿ 314, 315, 316 ಕೊಠಡಿಗಳಲ್ಲಿ ಸಂಬಂಧ ಪಟ್ಟ ಸಭೆಗಳ ಅತಿಥಿಗಳ ಉಪಚಾರಕ್ಕಾಗಿ 200.62 ಕೋಟಿ ರೂ. ದುಂದು ವೆಚ್ಚ ಮಾಡಿದ್ದಾರೆ. ಸಿದ್ದರಾಮಯ್ಯ ಪರಮ‌ಭ್ರಷ್ಟ. ಸಿಎಂ ಭೇಟಿಯಾಗಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಡುವಂತೆ ಕೋರಿದ್ದೇನೆ. ಅವರು ಮಾರ್ಚ್ 15ರೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ. ಕನಿಷ್ಠ ದಾಖಲೆ ಸಹಿತ ಐದಾರು ಪ್ರಕರಣಗಳ ಸಂಬಂಧ ಸಿಎಂ ಮಾ.15 ರೊಳಗೆ ತನಿಖೆಗೆ ವಹಿಸುವ ಬಗ್ಗೆ ಘೋಷಣೆ ಮಾಡಲಿದ್ದಾರೆ. ಕಾನೂನು ಅಭಿಪ್ರಾಯ ಪಡೆದು ಐದಾರು ಪ್ರಕರಣಗಳ ಬಗ್ಗೆ ಸಿಎಂ ಬೊಮ್ಮಾಯಿ‌ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಇನ್ನಷ್ಟು ಹಗರಣವನ್ನು ಬಯಲಿಗೆ ಎಳೆಯುತ್ತೇನೆ ಎಂದ ಎನ್​ ಆರ್​ ರಮೇಶ್ : 3.97 ಕೋಟಿ ರೂ.ರಷ್ಟು ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಚಾರಕ್ಕೆ ವೆಚ್ಚ ಆಗಿದೆ. ಇದು ಯಡಿಯೂರಪ್ಪ ಅವಧಿ ಹಾಗೂ ಬೊಮ್ಮಾಯಿ‌ ಸರ್ಕಾರದ ಅವಧಿಯಲ್ಲಿ ಆಗಿರುವ ವೆಚ್ಚ ಆಗಿದೆ‌ ಎಂದು ಇದೇ ವೇಳೆ ತಿಳಿಸಿದರು. ಸಿದ್ದರಾಮಯ್ಯ ಅವರು ರಿ-ಡೂ ಪ್ರಕರಣದಲ್ಲಿ ಬಚಾವಾಗಿರಬೇಕು. ಆದರೆ ಎರಡು ಡಿ ನೋಟಿಫಿಕೇಷನ್ ನಲ್ಲಿ ಆಗಿರುವ ಹಗರಣದ ಬಗ್ಗೆ ನಾನು ಸದ್ಯದಲ್ಲೇ ದಾಖಲೆ ಮುಂದೆ ಇಡುತ್ತೇನೆ. ಕೆ.ಕೆ. ಗೆಸ್ಟ್ ಹೌಸ್, ಕಾರು ಸೇರಿ ಅದರಲ್ಲಾಗಿರುವ ದುಂದು ವೆಚ್ಚದ ಹಗರಣ ಇದರ ಮೂರು ಪಟ್ಟು ಇದೆ. ಈ ಹಗರಣವನ್ನೂ ಮುಂದೆ ಬಯಲಿಗೆ ಎಳೆಯುತ್ತೇನೆ ಎಂದರು.

ಇದನ್ನೂ ಓದಿ : ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ 'ಮೆಂಟಲ್ ಕೇಸ್' ಎಂದ ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.