ETV Bharat / state

ಅಧಿಕಾರಿ ವರ್ಗಾವಣೆ ವಿಚಾರ ಗದ್ದಲ: ಪರಿಶೀಲನೆ ನಡೆಸುವ ಸಚಿವರ ಭರವಸೆಯೊಂದಿಗೆ ಸುಖಾಂತ್ಯ

author img

By

Published : Jul 11, 2023, 4:04 PM IST

ಸಭಾಧ್ಯಕ್ಷ ಯು ಟಿ ಖಾದರ್ ಅವರು ಇಂದು ತಮ್ಮ ಕಚೇರಿಯಲ್ಲಿ ಯತ್ನಾಳ್ ಹಾಗೂ ಬೈರತಿ ಸುರೇಶ್​ ನಡುವಣ ಜಟಾಪಟಿ ವಿಚಾರವಾಗಿ ಸಂಧಾನ ಸಭೆ ನಡೆಸಿದರು.

ಯತ್ನಾಳ್ ವರ್ಸಸ್ ಬೈರತಿ ಸುರೇಶ್
ಯತ್ನಾಳ್ ವರ್ಸಸ್ ಬೈರತಿ ಸುರೇಶ್

ಅಧಿಕಾರಿ ವರ್ಗಾವಣೆ ವಿಚಾರ ಗದ್ದಲ

ಬೆಂಗಳೂರು: ಯತ್ನಾಳ್ ವರ್ಸಸ್ ಬೈರತಿ ಸುರೇಶ್ ಜಟಾಪಟಿ ವಿಚಾರ ಸಭಾಧ್ಯಕ್ಷ ಯು. ಟಿ ಖಾದರ್‌ ತಮ್ಮ ಕಚೇರಿಯಲ್ಲಿ ಸಂಧಾನ ಸಭೆ ನಡೆಸಿದರು. ಸ್ಪೀಕರ್ ಕರೆದ ಸಂಧಾನ ಸಭೆಯಲ್ಲಿ ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್‌ ಯತ್ನಾಳ್‌, ಆರ್‌ ಅಶೋಕ್‌, ಸಿ ಕೆ ರಾಮಮೂರ್ತಿ ಮತ್ತಿತರರು ಭಾಗಿಯಾಗಿದ್ದರು. ಇದಾದ ಬಳಿಕ ಸದನ ಪುನರ್‌ ಆರಂಭವಾಯಿತು.

ವಿಧಾನಸಭೆಗೆ ಆಗಮಿಸಿದ ಸದಸ್ಯರು ಕಲಾಪದಲ್ಲಿ ಪಾಲ್ಗೊಂಡರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನಮಗೆ ಸಚಿವರಿಂದ ಉತ್ತರ ಬಂದ್ರೆ ಸಾಕು. ನಮ್ಮದು ಬೇರೆ ಯಾವುದೇ ತಕಾರರು ಇಲ್ಲ. ಮೊದಲು ಸಚಿವರು ಉತ್ತರ ಕೊಡಲಿ. ಬಳಿಕ ಯತ್ನಾಳ್ ಮಾತನಾಡ್ತಾರೆ ಎಂದರು. ಬಸವರಾಜ ರಾಯರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ನನ್ನ ಪಾಯಿಂಟ್ ಆಫ್ ಆರ್ಡರ್​ಗೆ ಆದೇಶ ನೀಡಿ. ಯತ್ನಾಳ್ ಎತ್ತಿರುವ ಪ್ರಶ್ನೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಸಚಿವರು ಉತ್ತರ ಕೊಡುವ ಅಗತ್ಯ ಇಲ್ಲ. ರೂಲ್ಸ್ ಮೇಲೆ ಸದನ ನಡೆಸಿ ಎಂದು ಒತ್ತಾಯಿಸಿದರು.

ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸಿ, ಯತ್ನಾಳ್‌ ವಿಚಾರವಾಗಿಯೇ ಅವರು ಪಾಯಿಂಟ್‌ ಆಫ್‌ ಆರ್ಡರ್‌ ಎತ್ತಿದ್ದಾರೆ. ಆದ್ದರಿಂದ ಅದಕ್ಕೆ ಅವಕಾಶ ನೀಡುವ ಅಗತ್ಯವಿಲ್ಲ. ಕಡತದಿಂದ ಶಬ್ದ ತೆಗೆಯುವ ವಿಚಾರ ಮಾತನಾಡಿದ್ದಾರೆ. ಹಾಗಾಗಿ ಅವಕಾಶ ಬೇಡ ಎಂದರು. ಆದರೆ, ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಪಾಯಿಂಟ್‌ ಆಫ್‌ ಆರ್ಡರ್‌ ಮೇಲೆ ಮಾತನಾಡಲು ಬಿಡಿ ಇಲ್ಲವೇ ರದ್ದುಪಡಿಸಿ ಎಂದರು.

ಕಲಾಪ ನಡೆಯಲು ಅವಕಾಶ ಮಾಡಿಕೊಡಿ: ಇದಾದ ಬಳಿಕ ಸ್ಪೀಕರ್‌ ಬಸವರಾಜ ರಾಯರೆಡ್ಡಿ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಇವರ ಮಾತಿಗೆ ಬೆಂಬಲಿಸಿದ ಹಿರಿಯ ಸದಸ್ಯ ಟಿ ಬಿ ಜಯಚಂದ್ರ ಸಹ ಮಾತನಾಡಿದರು. ಗದ್ದಲ ಆರಂಭವಾದಾಗ ಸಿಎಂ ಮತ್ತೆ ಪ್ರವೇಶಿಸಿ, ನೀವು ನಿಮ್ಮ ಕಚೇರಿಯಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದೀರಿ. ಅಲ್ಲಿನ ನಿರ್ಣಯದಂತೆ ಒಂದು ನಿರ್ಧಾರ ಪ್ರಕಟಿಸಿ, ಸದನದ ಕಲಾಪ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಿ ಎಂದರು.

ಬಿಜೆಪಿ ಸದಸ್ಯರಿಗೆ ಸ್ಥಾನಕ್ಕೆ ಮರಳುವಂತೆ ಸ್ಪೀಕರ್‌ ಮನವಿ ಮಾಡಿದರು. ಬಿಜೆಪಿ ಸದಸ್ಯರು ಸ್ಥಳಕ್ಕೆ ತೆರಳಿದ ಬಳಿಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಮತ್ತೆ ಆಹ್ವಾನಿಸಿದ ಯು. ಟಿ ಖಾದರ್‌, ಮತ್ತೊಮ್ಮೆ ಶೂನ್ಯ ವೇಳೆಯ ವಿಚಾರ ಪ್ರಸ್ತಾಪಿಸಿ ಎಂದರು. ಯತ್ನಾಳ್‌ ಮತ್ತೆ ಹಿಂದಿನ ವಿಚಾರವನ್ನು ಮಂಡಿಸಿದರು. ಹೈಕೋರ್ಟ್‌ ಹಾಗೂ ಕೆಎಟಿ ಆದೇಶವನ್ನು ಸೂಚಿಸಿ, ಸದ್ಯ ನೇಮಕಗೊಂಡಿರುವ ಅಧಿಕಾರಿ ಸರಿಯಿಲ್ಲ, ನೇಮಕಕ್ಕೆ ಅರ್ಹತೆ ಇಲ್ಲ ಎಂದಿದ್ದೇನೆ. ಆದರೆ, ಸಚಿವ ಬೈರತಿ ಸುರೇಶ್‌ ಅನಗತ್ಯವಾಗಿ ಆಕ್ರೋಶ ವ್ಯಕ್ತಪಡಿಸಿದರು. ನಿನ್ನನ್ನು ನೋಡಿಕೊಳ್ತೀನಿ ಅಂದರು. ಇದೆಲ್ಲಾ ಸರಿಯೇ? ಎಂದು ಪ್ರಶ್ನಿಸಿದರು. ಮತ್ತೆ ಮಧ್ಯಪ್ರವೇಶಿಸಿದ ಟಿ. ಬಿ ಜಯಚಂದ್ರ ಹಾಗೂ ಬಸವರಾಜ ರಾಯರೆಡ್ಡಿ, ಡಾ. ರಂಗನಾಥ್‌ ಎದ್ದು ನಿಂತು ಗದ್ದಲ ಮಾಡಲು ಮುಂದಾದರು. ಆಗ ಸ್ಪೀಕರ್‌ ಮಧ್ಯ ಪ್ರವೇಶಿಸಿ, ಸದನವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಿ. ಸಮಸ್ಯೆ ಪರಿಹರಿಸಲು ಯತ್ನಿಸಬೇಕಿರುವ ನೀವೇ, ಸಮಸ್ಯೆ ಸೃಷ್ಟಿಸಿದರೆ ಹೇಗೆ? ಎಂದು ಪ್ರಶ್ನಿಸಿದರು.

ಸಿಎಂ ಹೇಳಿದ್ದನ್ನು ನಾನು ಸ್ವಾಗತಿಸುತ್ತೇನೆ: ಯತ್ನಾಳ್‌ ಅವರನ್ನು ಉದ್ದೇಶಿಸಿ ಸ್ಪೀಕರ್‌ ಮಾತನಾಡಿ, ನಿಮ್ಮ ವಿಚಾರ ಬಿಟ್ಟು ಬೇರೆಡೆ ಹೋಗಬೇಡಿ. ನಿಮ್ಮ ವಿಚಾರವನ್ನಷ್ಟೇ ತಿಳಿಸಿ ಎಂದರು. ಯತ್ನಾಳ್‌ ಮಾತನಾಡಿ, ಕೇಡರ್‌ ಕಾಪಾಡಿಕೊಂಡು ಹೋಗುವುದು ಎಲ್ಲರ ಕರ್ತವ್ಯ. ಅವರು ಹೇಳಬೇಕಾಗಿರುವುದನ್ನು ಹೇಳಿದರು. ಸಿಎಂ ಹೇಳಿದ್ದನ್ನು ನಾನು ಸ್ವಾಗತಿಸುತ್ತೇನೆ. ತಕರಾರಿಲ್ಲ. ನನ್ನನ್ನು ಉಚ್ಛಾಟಿಸುವ ವಿಚಾರ ಎಲ್ಲಾ ಏಕೆ ಪ್ರಸ್ತಾಪ ಆಗಬೇಕಿತ್ತು ಎಂದು ಪ್ರಶ್ನಿಸಿದರು.

ಗದ್ದಲದ ನಡುವೆಯೇ ಸ್ಪೀಕರ್‌ ಸಚಿವ ಬೈರತಿ ಸುರೇಶ್‌ ಅವರನ್ನು ಮಾತಿಗೆ ಆಹ್ವಾನಿಸಿದರು. ಜಯಚಂದ್ರ ಮತ್ತಿತರ ಕಾಂಗ್ರೆಸ್‌ ಸದಸ್ಯರು ಉತ್ತರ ಕೊಡಿಸುವ ಅಗತ್ಯ ಇಲ್ಲ ಎಂದು ಹೇಳಿದರು. ಬೈರತಿ ಸುರೇಶ್‌ ಮಾತನಾಡಿ, ಯತ್ನಾಳ್‌ ಅವರು ಕಿರಿಯ ಅಧಿಕಾರಿಯನ್ನು ಹಾಕಲಾಗಿದೆ. ಅದು ಕಾನೂನು ಬಾಹಿರ ಎಂದು ಹೇಳಿದ್ದಾರೆ. ಆದರೆ, ಈ ಹಿಂದೆ ನಿಯೋಜಿತರಾದವರಲ್ಲಿ ಹೆಚ್ಚಿನವರು ಕಿರಿಯ ಅಧಿಕಾರಿಗಳು. ಅವರೆಲ್ಲಾ ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇದ್ದವರೆಲ್ಲಾ ಕೆಎಂಎಸ್‌ ಅಧಿಕಾರಿಗಳು. ಗ್ರೇಡ್‌ 1 ಇಲ್ಲವೇ ಗ್ರೇಡ್‌ 2 ಅಧಿಕಾರಿಗಳನ್ನು ನಿಯೋಜಿಸಿದ್ದೇವೆ. ಇದರಲ್ಲಿ ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತೇವೆ. ನಮ್ಮ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯ ಇಲ್ಲ. ಈ ವಿಚಾರವಾಗಿ ನಾನು ಸಂಬಂಧಿಸಿದ ಶಾಸಕರಿಗೆ ಪತ್ರ ಬರೆದು ಮಾಹಿತಿ ಒದಗಿಸುತ್ತೇನೆ ಎಂದರು.

ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ.. ಸ್ಥಳೀಯ ಶಾಸಕರಿಗೆ ಮಾಹಿತಿ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕರ ಆಕ್ಷೇಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.