ಬೆಂಗಳೂರು: 2020ರಲ್ಲಿ ವಿಶ್ವ ಕೌಶಲ್ಯ ಸ್ಪರ್ಧೆ ನಡೆಯಲಿದೆ. 22 ವರ್ಷದವರು ಈ ಸ್ಪರ್ಧೆಗಾಗಿ ಹೆಸರು ನೋಂದಾಯಿಸಬಹುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಜನವರಿ 15 ರೊಳಗೆ ಸ್ಪರ್ಧಾಳುಗಳು ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಹೇಳಿದರು.
ಒಂದೊಂದು ಕೌಶಲ್ಯದಲ್ಲಿ ಇಬ್ಬರನ್ನು ಆಯ್ಕೆ ಮಾಡುತ್ತೇವೆ. ಅಲ್ಲಿಂದ ಜೋನಲ್ ಮತ್ತು ರಾಜ್ಯ ಮಟ್ಟದ ಸ್ಪರ್ಧಾರ್ಥಿಗಳನ್ನು ಸರ್ಕಾರ ಆಯ್ಕೆ ಮಾಡಲಿದ್ದು, ಆಯ್ಕೆಗೊಂಡ ರಾಜ್ಯ ಚಾಂಪಿಯನ್ರು ಪ್ರಾದೇಶಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಪ್ರಾದೇಶಿಕ ಹಂತದಲ್ಲಿ ಗೆದ್ದವರು ವರ್ಲ್ಡ್ ಸ್ಕಿಲ್ಸ್ 2020 ಭಾಗವಹಿಸಲಿದ್ದು, ರಾಜ್ಯ ಮಟ್ಟದ ಸ್ಪರ್ಧೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಿದರು. ಈ ಸ್ಪರ್ಧೆಯಲ್ಲಿ ಸುಮಾರು 54 ಕೌಶಲ್ಯಗಳ ಸಂಬಂಧ ಸ್ಪರ್ಧೆ ನಡೆಯಲಿದ್ದು, ಈ ಪೈಕಿ ಕರ್ನಾಟಕದಲ್ಲಿ 38 ಕೌಶಲ್ಯಗಳನ್ನು ಸ್ಪರ್ಧೆಗಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕುಶಲ ಕಾರ್ಮಿಕರಿಗೆ ಐಎಂಸಿ ಕರ್ನಾಟಕ
ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವ ಕುಮಾರ್ ಮಾತನಾಡಿ, ಕುಶಲ ಕಾರ್ಮಿಕರಿಗೆ ವಿದೇಶಗಳಲ್ಲಿ ಉದ್ಯೋಗ ಕಲ್ಪಿಸಿ ಕೊಡಲು ಇಂಟರ್ ನ್ಯಾಷನಲ್ ಮೈಗ್ರೇಷನ್ ಸೆಂಟರ್(ಐಎಂಸಿ) ಕರ್ನಾಟಕ ಕಾರ್ಯಾರಂಭಗೊಂಡಿದೆ ಎಂದರು. ವಿದೇಶಾಂಗ ಸಚಿವಾಲಯದ ಕಾರ್ಯವ್ಯಾಪ್ತಿಗೆ ಬರುವ ಪ್ರೊಟೆಕ್ಟರೇಟ್ ಜನರಲ್ ಆಫ್ ಇಮಿಗ್ರೇಷನ್ ಕೇಂದ್ರದಲ್ಲಿ, ರಾಜ್ಯ ಸರ್ಕಾರ ನೋಂದಯಿಸಿಕೊಂಡಿದೆ. ಆ ಮೂಲಕ ನಾವು ಕೌಶಲ್ಯ ಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸಿ ಕೊಡುತ್ತೇವೆ. ಈವರೆಗೆ ಖಾಸಗಿಯವರು ಇದನ್ನು ಮಾಡುತ್ತಿದ್ದರು ಎಂದು ವಿವರಿಸಿದರು.
ಸರ್ಕಾರವೇ ಹೊರ ದೇಶದಲ್ಲಿನ ಕಂಪನಿಗಳೊಂದಿಗೆ ಹಾಗೂ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡು, ಅಲ್ಲಿರುವ ಬೇಡಿಕೆಗೆ ಅನುಗುಣವಾಗಿ ಕಾರ್ಮಿಕರಿಗೆ ತರಬೇತಿ ನೀಡಿ, ಅವರನ್ನು ಹೊರ ದೇಶಕ್ಕೆ ಕಳುಹಿಸಿಕೊಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಎರಡು ತಿಂಗಳಲ್ಲಿ ಈ ಕೇಂದ್ರ ಸಂಪೂರ್ಣವಾಗಿ ಕೆಲಸ ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಕೇಂದ್ರವನ್ನು ಮಂಗಳೂರಿನಲ್ಲಿ ತೆರದಿದ್ದೇವೆ. ಮಧ್ಯವರ್ತಿಗಳು ವಂಚನೆ ಮಾಡುತವುದನ್ನು ತಡೆಗಟ್ಟಲು ಸರ್ಕಾರವೇ ನೇರವಾಗಿ ವಿದೇಶದಲ್ಲಿರುವ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಲಿದೆ ಎಂದು ತಿಳಿಸಿದರು.
ಕ್ಯುಬಾ ದೇಶದವರು ಈಗಾಗಲೇ ಕುಶಲ ಕಾರ್ಮಿಕರಿಗಾಗಿ ನಮ್ಮನ್ನು ಸಂಪರ್ಕಿಸಿದ್ದಾರೆ. ಮೊದಲ ಬ್ಯಾಚ್ ಹೋಗಲು ಇನ್ನು ಸ್ವಲ್ಪ ಸಮಯ ಬೇಕು. ಅರೇಬಿಯನ್ ಕಂಪನಿಗಳೂ ಈ ಸಂಬಂಧ ಸಂಪರ್ಕಿಸಿದ್ದಾರೆ. ಆ ಕಂಪನಿಗಳ ಹಿನ್ನೆಲೆ ಪರಿಶೀಲನೆ ಮಾಡಿ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.