ETV Bharat / state

ಲೋಕಸಭೆ ಚುನಾವಣೆ: ಮಕ್ಕಳು, ಪತ್ನಿ, ಸಹೋದರರ ಕಣಕ್ಕಿಳಿಸಲು 'ಕೈ' ಕಲಿಗಳ ಕಸರತ್ತು

author img

By

Published : Aug 19, 2023, 11:20 PM IST

Lok Sabha election: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಸಿದ್ಧತೆ ಆರಂಭಿಸಿದೆ. ಕೆಲ ಸಚಿವರು ಹಾಗೂ ಹಿರಿಯ ಶಾಕರು ತಮ್ಮ ಕುಟುಂಬಸ್ಥರಿಗೆ ಪಕ್ಷದ ಟಿಕೆಟ್​ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.

congress-leaders-asking-ticket-to-family-members-for-contesting-lok-sabha-election
Lok Sabha election: ಲೋಕಸಭೆ ಚುನಾವಣೆಯ ಅಖಾಡಕ್ಕೆ ತಮ್ಮ ಕುಟುಂಬಸ್ಥರನ್ನು ಕಣಕ್ಕಿಳಿಸಲು 'ಕೈ' ಕಲಿಗಳ ಕಸರತ್ತು

ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಒತ್ತಡಕ್ಕೆ ಸಿಲುಕಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಕುಟುಂಬಸ್ಥರನ್ನೇ ಕಣಕ್ಕಿಳಿಸಲು ಕಸರತ್ತು ನಡೆಸಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವುದರಿಂದ ಅತ್ಯಧಿಕ ಸಂಸದರನ್ನು ಗೆಲ್ಲಿಸಿಕೊಡುವ ಟಾರ್ಗೆಟ್ ಅನ್ನು ಪಕ್ಷದ ಹೈಕಮಾಂಡ್ ಕೆಪಿಸಿಸಿಗೆ ನೀಡಿದೆ. ಬಿಜೆಪಿ ವಿರುದ್ಧ ಹೆಚ್ಚಿನ ಕ್ಷೇತ್ರಗಳನ್ನು ಜಯಿಸುವ ಸಲುವಾಗಿ ಕೆಲವು ಕಡೆ ಸಚಿವರನ್ನೇ ಕಣಕ್ಕಿಳಿಸಲು ಹೈಕಮಾಂಡ್ ಯೋಚಿಸುತ್ತಿದೆ. ಇದರ ಸುಳಿವು ಅರಿತ ಸಚಿವರು ಚುನಾವಣೆಗೆ ತಾವು ಕಣಕ್ಕಿಳಿಯುವ ಬದಲು ತಮ್ಮ ಕುಟುಂಬಸ್ಥರನ್ನು ನಿಲ್ಲಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತಮ್ಮ ಪತ್ನಿ ಮೀನಾಕ್ಷಿ ಅವರನ್ನು, ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ದಾವಣಗೆರೆ ಕ್ಷೇತ್ರದಲ್ಲಿ ತಮ್ಮ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ತಮ್ಮ ಪತ್ನಿ ಟಬು ರಾವ್ ಅವರನ್ನು ಚುನಾವಣೆಗೆ ನಿಲ್ಲಿಸಲು ಆಸಕ್ತಿ ವಹಿಸಿದ್ದಾರೆಂದು ಹೇಳಲಾಗಿದೆ. ​ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪತ್ನಿ ವೀಣಾ ಕಾಶಪ್ಪನವರ್ ಅವರನ್ನು ಚುನಾವಣೆಗೆ ನಿಲ್ಲಿಸಲು ಒಲವು ಹೊಂದಿದ್ದು, ಪಕ್ಷದ ಟಿಕೆಟ್ ಪಡೆಯಲು ಯತ್ನ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು - ಕೊಡಗು ಕ್ಷೇತ್ರದಲ್ಲಿ ತಮ್ಮ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಹೆಚ್​ಸಿ ಮಹದೇವಪ್ಪ ಚಾಮರಾಜನಗರ ಕ್ಷೇತ್ರದಲ್ಲಿ ತಮ್ಮ ಪುತ್ರ ಸುನೀಲ್ ಬೋಸ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಪುತ್ರಿ ಸೌಮ್ಯ ರೆಡ್ಡಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ಕ್ಷೇತ್ರದಲ್ಲಿ ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಚುನಾವಣೆಗೆ ನಿಲ್ಲಿಸಲು ಮುಂದಾಗಿದ್ದಾರೆ. ಅದೇ ರೀತಿಯಾಗಿ ಹಿರಿಯ ಶಾಸಕ ಎನ್​ಎ ಹ್ಯಾರೀಸ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ತಮ್ಮ ಪುತ್ರ ಮಹ್ಮದ್ ನಲಪಾಡ್ ಅವರಿಗೆ ಟಿಕೆಟ್ ಪಡೆಯುವುದಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆಂದು ತಿಳಿದುಬಂದಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಹೋದರ ಡಿ.ಕೆ ಸುರೇಶ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ, ಮಾಜಿ ಸಚಿವರಾದ ಎಂ.ಆರ್ ಸೀತಾರಾಮ್ ಅವರು ತಮ್ಮ ಪುತ್ರ ರಕ್ಷಾ ರಾಮಯ್ಯ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ, ಮಾಜಿ ಸಚಿವ, ಹಿರಿಯ ನಾಯಕ ಆರ್​ವಿ ದೇಶಪಾಂಡೆ ಅವರು ತಮ್ಮ ಪುತ್ರ ಪ್ರಶಾಂತ ದೇಶಪಾಂಡೆ ಅವರನ್ನು ಉತ್ತರ ಕನ್ನಡ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಲು ಉತ್ಸುಕರಾಗಿದ್ದಾರೆಂದು ಹೇಳಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಸಹೋದರಿಯಾದ ಹಾಗೂ ನಟ ಶಿವರಾಜ ಕುಮಾರ್ ಅವರ ಪತ್ನಿ ಗೀತಾ ಶಿವರಾಜ ಕುಮಾರ್ ಅವರಿಗೆ ಶಿವಮೊಗ್ಗ ಕ್ಷೇತ್ರದ ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ.

ಸ್ಪರ್ಧೆಗೆ ಸಚಿವರ ನಿರಾಸಕ್ತಿ: ಲೋಕಸಭೆ ಚುನಾವಣೆಯಲ್ಲಿ ಪ್ರಬಲವಾಗಿರುವ ಬಿಜೆಪಿಗೆ ಸ್ಪರ್ಧೆಯೊಡ್ಡಲು ನಾಲ್ಕೈದು ಸಚಿವರನ್ನು ಚುನಾವಣೆ ಅಖಾಡಕ್ಕೆ ಇಳಿಸಬೇಕೆನ್ನುವುದು ಹೈಕಮಾಂಡ್​ನ ಆಲೋಚನೆಯಾಗಿದೆ. ಆದರೆ ಈ ಬಾರಿ ಸಚಿವರಾದವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ತಾವು ಸ್ಪರ್ಧೆ ಮಾಡಲೇಬೇಕೆಂದು ಪಕ್ಷದಿಂದ ಒತ್ತಡವುಂಟಾದರೆ ತಮ್ಮ ಬದಲಿಗೆ ಪತ್ನಿಯರು ಅಥವಾ ಕುಟುಂಬಸ್ಥರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ಸಂದೇಶವನ್ನು ಸಚಿವರು ಪಕ್ಷದ ಹೈಕಮಾಂಡ್​ಗೆ ನೀಡುತ್ತಿದ್ದಾರೆ.

ಪ್ರಮುಖವಾಗಿ ಬೆಳಗಾವಿಯಲ್ಲಿ ಸತೀಶ್​ ಜಾರಕಿಹೊಳಿ, ಕೋಲಾರದಲ್ಲಿ ಕೆ.ಹೆಚ್. ಮುನಿಯಪ್ಪ, ಬೆಂಗಳೂರು ಉತ್ತರದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ, ದಾವಣಗೆರೆಯಲ್ಲಿ ತೋಟಗಾರಿಕೆ ಸಚಿವ ಎಸ್​.ಎಸ್ ಮಲ್ಲಿಕಾರ್ಜುನ ಅವರಿಗೆ ಚುನಾವಣೆಗೆ ನಿಲ್ಲಿಸಲು ಕಾಂಗ್ರೆಸ್ ಹೈಕಮಾಂಡ್ ಆಸಕ್ತಿವಹಿಸಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಆದರೆ, ಇವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧರಿಲ್ಲವೆಂದು ಹೇಳಲಾಗಿದೆ.

ಇದನ್ನೂ ಓದಿ: ಎರಡುವರೆ ವರ್ಷದಲ್ಲಿ ಇಡೀ ಟೀಂ ಬದಲಾಗಲಿದೆ, ಉಳಿದವರಿಗೆ ಸಚಿವ ಸ್ಥಾನದ ಭಾಗ್ಯ: ಶಾಸಕ ವಿನಯ​ ಕುಲಕರ್ಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.