ETV Bharat / state

ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳನ್ನು ಖಾಸಗೀಕರಣಗೊಳಿಸಿದ್ದೇ ಬಿಜೆಪಿಯ ಸಾಧನೆ: ಸಚಿನ್ ಪೈಲಟ್

author img

By

Published : Sep 1, 2021, 4:16 PM IST

Updated : Sep 1, 2021, 4:43 PM IST

Sachin Pilot in Bengaluru: ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವಲ್ಲಿ ಹಿನ್ನಡೆ ಅನುಭವಿಸಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯ ಮಾಡಿಲ್ಲ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಟೀಕಿಸಿದರು.

sachin-pilot-outrage-against-bjp-govt
ಸಚಿನ್ ಪೈಲಟ್

ಬೆಂಗಳೂರು: ಇಂದಿನ ಬಿಜೆಪಿ ಸರ್ಕಾರ ಆರ್ಥಿಕತೆಯನ್ನು ಬೆಳೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತಂದಿರುವ ವಿವಿಧ ಯೋಜನೆಯನ್ನು ಖಾಸಗೀಕರಣಗೊಳಿಸುವ ಕಾರ್ಯವನ್ನಷ್ಟೇ ಮಾಡುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದರು.

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎನ್‌ಎಂಪಿ ದೇಶಕ್ಕೆ ಆದಾಯ ಹರಿದು ಬರಲಿದೆ ಎಂದು ಹೇಳಿದ್ದಾರೆ. ಆರು ದಶಕಗಳಿಂದ ದೇಶದಲ್ಲಿ ರೂಪುಗೊಳ್ಳುತ್ತಿದ್ದ ವಿವಿಧ ಆರ್ಥಿಕ ಮೂಲಗಳನ್ನು ಖಾಸಗೀಕರಣಗೊಳಿಸಲು ಅವರು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಖಾಸಗೀಕರಣ, ಜಾಗತೀಕರಣದ ಭಾಗವಾಗಿ ಈ ಕಾರ್ಯಕ್ಕೆ ಮುಂದಾಗಿದೆ ಎಂದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮಾತನಾಡಿದರು.

'ಕೇಂದ್ರದ ಖಾಸಗೀಕರಣ ನೀತಿ ಪಾರದರ್ಶಕತೆ ಕಳೆದುಕೊಳ್ಳುತ್ತಿದೆ'

1991ರಲ್ಲಿ ಕಾಂಗ್ರೆಸ್ ಪಕ್ಷ ಜಾಗತೀಕರಣವನ್ನು ಆರಂಭಿಸಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿತ್ತು. ಆಗ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದರು. ಇಂದು ಕೇಂದ್ರದ ಖಾಸಗೀಕರಣ ನೀತಿ ಪಾರದರ್ಶಕತೆಯನ್ನು ಕಳೆದುಕೊಳ್ಳುತ್ತಿದೆ. ಉತ್ತಮ ಹಾಗೂ ಪಾರದರ್ಶಕ ಸ್ಪರ್ಧೆಯಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆದರೆ, ಇಂದಿನ ಸರ್ಕಾರ ಎಲ್ಲವನ್ನೂ ಮುಚ್ಚುಮರೆ ಮಾಡಿ ಮಾಹಿತಿ ನೀಡದೆ ಕಾರ್ಯನಿರ್ವಹಿಸುತ್ತಿದೆ. ತಳಮಟ್ಟದ ಹಾಗೂ ಬಡ ಸಮುದಾಯದವರಿಗೆ ಸೌಲಭ್ಯದ ಲಾಭ ಸಿಗಬೇಕೆಂಬ ಕಾಂಗ್ರೆಸ್ ಕನಸಿಗೆ ಇಂದು ಹಿನ್ನಡೆಯಾಗಿದೆ ಎಂದು ಪೈಲಟ್ ವಿವರಿಸಿದರು.

'ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯ ಮಾಡಿಲ್ಲ'

ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವಲ್ಲಿ ಹಿಂದೆ ಬಿದ್ದಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯ ಮಾಡಿಲ್ಲ. ಸರ್ಕಾರ ಅನ್ನೋದು ಬಿಜೆಪಿಯ ಖಾಸಗಿ ಸ್ವತ್ತಲ್ಲ. ಫಲಾನುಭವಿಗಳಿಗೆ ಅನ್ಯಾಯವಾಗದ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ ಎಂದರು.

'ಕೇಂದ್ರದಿಂದ ಕೋವಿಡ್‌ ಲಸಿಕೆ ಮಾರಾಟ ಅವ್ಯವಸ್ಥೆ'

ಪೋಲಿಯೋ ಲಸಿಕೆ ನೀಡಿಕೆಯನ್ನು ಅತ್ಯಂತ ಯಶಸ್ವಿಯಾಗಿ ದೇಶದಲ್ಲಿ ಮಾಡಲಾಗಿದೆ. ಆದರೆ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರವೇ ನೇರವಾಗಿ ಮಾರಾಟಕ್ಕೆ ಮುಂದಾಗಿ ಅವ್ಯವಸ್ಥೆ ಉಂಟುಮಾಡಿದೆ. ವ್ಯವಸ್ಥಿತವಾದ ಹಂಚಿಕೆ ಮಾಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಇತ್ತೀಚಿಗೆ ನಡೆದ ಲೋಕಸಭೆ ಅಧಿವೇಶನವೂ ಸಹ ಯಾವುದೇ ಚರ್ಚೆಗೆ ಒಳಗಾಗದೆ ಮುಕ್ತಾಯವಾಗಿದೆ ಎಂದು ಆರೋಪಿಸಿದರು.

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್

ನಾವು ಸರ್ಕಾರಕ್ಕೆ ಕೇಳಬೇಕೆಂದುಕೊಂಡಿದ್ದ ಹಲವು ಪ್ರಶ್ನೆಗಳು ಹಾಗೆಯೇ ಉಳಿದವು. ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ನ್ಯಾಯ ಸಿಕ್ಕಿಲ್ಲ. ಅಧಿಕಾರದಲ್ಲಿರುವ ಜನರ ಅನುಕೂಲಕ್ಕೆ ಕಾರ್ಯನಿರ್ವಹಿಸಬೇಕು. ನಾಗರಿಕರ ಕಲ್ಯಾಣಕ್ಕೆ ತಮ್ಮ ಸಮಯವನ್ನು ವಿನಿಯೋಗಿಸಬೇಕು. ಯೋಜನೆಗಳು, ಸರ್ಕಾರದ ಕಾರ್ಯನಿರ್ವಹಣೆ ಹಾಗೂ ಕೈಗೊಳ್ಳುವ ನಿರ್ಧಾರಗಳು ಜನರಿಗೆ ಹಾಗೂ ಅವರ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಎನ್​ಎಂಪಿ ಪಾಲಿಸಿ ಕುರಿತು ಆದಷ್ಟು ಬೇಗ ಒಂದು ಪಾರದರ್ಶಕ ವಿವರಣೆ ನೀಡಬೇಕು. ಇದರಿಂದಾಗಿ ಸರ್ಕಾರದ ನಿಲುವೇನು ಎಂಬುದು ಅರ್ಥವಾಗಲಿದೆ. ಖಾಸಗೀಕರಣದಿಂದ ದೇಶಕ್ಕೆ ಯಾವ ರೀತಿಯ ಅನುಕೂಲ ಆಗಲಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

'ಅನಿವಾರ್ಯವಾಗಿ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ'

ಸಾಕಷ್ಟು ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನದಲ್ಲಿದೆ. ಪಕ್ಷ ಎಲ್ಲೆಡೆ ತನ್ನ ಅಸ್ತಿತ್ವವನ್ನು ತೋರಿಸುತ್ತದೆ. ಹಲವು ರಾಜ್ಯಗಳಲ್ಲಿ ಅನಿವಾರ್ಯವಾಗಿ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಇಂಥ ಸಂದರ್ಭದಲ್ಲಿ ಗೊಂದಲ ಉಂಟಾದಾಗ ಪರಸ್ಪರ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕಾಗುತ್ತದೆ. ನಾನು ಪಕ್ಷದ ಅಧ್ಯಕ್ಷನಾಗಿ ರಾಜಸ್ಥಾನದಲ್ಲಿ ಕಳೆದ ಏಳು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದೇನೆ.

ರಾಜಸ್ಥಾನ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ ವಿಸ್ತೃತ ವಿವರಣೆ ನೀಡಲು ನಿರಾಕರಿಸಿದ ಸಚಿನ್ ಪೈಲಟ್, ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಹಾಗೂ ರಾಜಸ್ಥಾನ ಮುಖ್ಯಮಂತ್ರಿಗಳು ಸೇರಿ ಈ ಸಂಬಂಧ ಆದಷ್ಟು ಬೇಗ ತೀರ್ಮಾನ ಕೈಗೊಳ್ಳುತ್ತಾರೆ. ಪಕ್ಷದ ಅಧ್ಯಕ್ಷನಾಗಿ ನಾನು ಮಧ್ಯಪ್ರವೇಶ ಮಾಡಲ್ಲ. ಆದಷ್ಟು ತ್ವರಿತವಾಗಿ ಎಲ್ಲಾ ನಿರ್ಧಾರವಾಗಲಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಶಿವರಾಜ್ ತಂಗಡಗಿ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್.ಶಂಕರ್ ಮತ್ತಿತರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಮಂಡ್ಯದ ಬಾಲಮಂದಿರದಲ್ಲಿದ್ದ ಬಾಲಕಿ ಆತ್ಮಹತ್ಯೆ; ಜೈಲಿನಿಂದ ಬಂದು ಮಗಳ ಅಂತ್ಯಕ್ರಿಯೆ ನಡೆಸಿದ ಪೋಷಕರು

Last Updated : Sep 1, 2021, 4:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.