ETV Bharat / state

'ಸಾರ್ವಜನಿಕರ ಹಣ ಲೂಟಿ ಮಾಡಿ ಬಿಜೆಪಿಯವರು ಹೇಗೆ ರಾತ್ರಿ ನಿದ್ದೆ ಮಾಡ್ತಾರೆ?'

author img

By

Published : May 27, 2022, 6:58 AM IST

ಕಟೀಲ್ ಅವರು ದೊಡ್ಡ ಭಾಷಣ ಮಾಡುತ್ತಾರೆ. ಆದರೆ, ಬಿಟ್ ಕಾಯಿನ್, ಪಿಎಸ್​​ಐ ಹಗರಣ, ಗಂಗಾ ಕಲ್ಯಾಣ ಹಗರಣದ ಬಗ್ಗೆ ಮಾತನಾಡಿದರೆ ಮೌನವಾಗುತ್ತಾರೆ ಎಂದು ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಲೇವಡಿ ಮಾಡಿದರು.

Priyank Kharge slams bjp over scam
ಪ್ರಿಯಾಂಕ್​ ಖರ್ಗೆ ಸುದ್ದಿಗೋಷ್ಠಿ

ಬೆಂಗಳೂರು: ರಾಜ್ಯ ಸರ್ಕಾರ ನಮ್ಮ ಆರೋಪಗಳನ್ನು ತನಿಖೆಗೆ ಒಳಪಡಿಸುವುದನ್ನು ಗಮನಿಸಿದರೆ ನಾವು ಹಿಟ್ ಆ್ಯಂಡ್ ರನ್ ಮಾಡುತ್ತಿಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗಂಗಾಕಲ್ಯಾಣ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕಾಂಗ್ರೆಸ್​​ನವರು ಯಾವುದೇ ಸಾಕ್ಷಿ, ದಾಖಲೆಗಳು ಇಲ್ಲದೇ ಕೇವಲ ಹಿಟ್ ಆ್ಯಂಡ್ ರನ್ ಮಾಡುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ನಾವು ಹಿಟ್ ಆ್ಯಂಡ್ ರನ್ ಮಾಡುತ್ತಿರುವುದಾದರೆ ನಾವು ಮಾಡಿದ ಆರೋಪಕ್ಕೆ ನೀವು ತನಿಖಾ ತಂಡ ರಚಿಸುತ್ತಿರುವುದೇಕೆ? ಎಂದರು.


ಅಲ್ಲಿ ಲಕ್ಷ್ಮಿ ಮಿತ್ತಲ್ ಅವರು ನಿಮ್ಮ ಸರ್ಕಾರಕ್ಕೆ ಬಹುಮತ ಇದೆಯೇ? ಎಂದು ಕೇಳಿದಾಗ ಸಿಎಂ ಬೊಮ್ಮಾಯಿ ಸರಳ ಬಹುಮತ ಇದೆ ಎಂದಿದ್ದಾರೆ. ಅದು ನಿಮಗೆ ತೊಂದರೆ ಆಗುವುದಿಲ್ಲವೇ ಎಂದು ಕೇಳಿದಾಗ, ಇಲ್ಲ ವಿರೋಧ ಪಕ್ಷದವರು ರಾಜೀನಾಮೆ ನೀಡಿ ಬಂದಿದ್ದಾರೆ ಎಂದು ಹೇಳುತ್ತಾರೆ. ಆಗ ನನಗೆ ಗೊತ್ತಾಯಿತು. ಬಿಜೆಪಿಯ ಹಿಂದಿನ ಹಾಗೂ ಈಗಿನ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಭ್ರಷ್ಟಾಚಾರ ಮಾಡಲು ಮುಕ್ತ ಅವಕಾಶ ನೀಡಿದ್ದಾರೆ. ಇವರು ಸಾರ್ವಜನಿಕರ ಹಣ ಲೂಟಿ ಮಾಡಿ ರಾತ್ರಿ ಹೇಗೆ ನಿದ್ದೆ ಮಾಡುತ್ತಾರೆ? ಎಂದು ಕೇಳಿದರು.

ತನಿಖಾ ವರದಿ ಸಲ್ಲಿಕೆ: ಸರ್ಕಾರ ನಿರಂತರವಾಗಿ ಹಗರಣ ನಡೆದಿಲ್ಲ ಎಂದು ಹೇಳುತ್ತಿದೆ. ಮೇ 20ರಂದು ಕೋಟಾ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್​​ನವರಿಗೆ ಕೆಲಸ ಇಲ್ಲ, ಕಾಂಗ್ರೆಸ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮೇ 11ರಂದು ಈ ಪ್ರಕರಣದಲ್ಲಿನ ತನಿಖಾಧಿಕಾರಿಗಳು ಮುಖ್ಯಕಾರ್ಯಾಚರಣೆ ಅಧಿಕಾರಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಪ್ರಾಥಮಿಕ ವರದಿ ಸಲ್ಲಿಸಿದ್ದು, ಅದರಲ್ಲಿ ಭ್ರಷ್ಟಾಚಾರ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗಾದರೆ ಮಂತ್ರಿಗಳಿಗೆ ತಮ್ಮ ಇಲಾಖೆಯಲ್ಲಿ ಏನಾಗುತ್ತಿದೆ ಎಂಬ ಅರಿವಿಲ್ಲವೇ? ಅಥವಾ ಅರಿವಿದ್ದರೂ ಬೇಕಂತಲೇ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರಾ? ಎಂದು ಹೇಳಿದರು.

ಇದನ್ನೂ ಓದಿ: ಇ.ಡಿ ಚಾರ್ಜ್​ಶೀಟ್​ನಲ್ಲಿ ಹೊಸದಾಗಿ ಏನು ಸೇರಿಸಲು ಸಾಧ್ಯ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.