ETV Bharat / state

CM Siddaramaiah: ಕುಮಾರಸ್ವಾಮಿ ಹತಾಶರಾಗಿ, ದ್ವೇಷದಿಂದ ಮಾತನಾಡುತ್ತಾರೆ: ಸಿಎಂ‌ ಸಿದ್ದರಾಮಯ್ಯ ಟೀಕೆ

author img

By

Published : Jul 6, 2023, 1:12 PM IST

ವರ್ಗಾವಣೆ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಿಎಂ‌ ಸಿದ್ದರಾಮಯ್ಯ
ಸಿಎಂ‌ ಸಿದ್ದರಾಮಯ್ಯ

ಬೆಂಗಳೂರು: ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ, ದ್ವೇಷದಿಂದ ಮಾತನಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಬಳಿ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್‍ರಾಮ್ ಅವರ 37ನೇ ಪುಣ್ಯತಿಥಿಯ ಅಂಗವಾಗಿ ಬಾಬೂಜಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಬಳಿಕ ಅವರು ಮಾತನಾಡಿದರು. ಹೊಸ ಸರ್ಕಾರ ಬಂದಿದೆ. ಸಾರ್ವಜನಿಕ ವರ್ಗಾವಣೆ ನಡೆಯುತ್ತಿದೆ. ಲಂಚ, ದಂಧೆ ನಡೆದಿದೆ ಎಂಬುದು ಸುಳ್ಳು ಆರೋಪ. ಅವರ ಸರ್ಕಾರ ಇದ್ದಾಗ ಹಣ ತೆಗೆದುಕೊಂಡಿದ್ದಾರಾ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಯಾವಾಗಲೂ ಹಿಟ್ ಅಂಡ್ ರನ್ ಮಾಡ್ತಾರೆ. ಯಾವ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದರು? ಯತೀಂದ್ರ ಮನೆಯಲ್ಲಿ ಇರ್ತಾರೆ, ಅವರು ಮಾಜಿ ಶಾಸಕರು. ಕುಮಾರಸ್ವಾಮಿ ಅವರ ಮನೆಯಲ್ಲಿ ಅವರ ಮಗ ಇರ್ತಾನೆ, ಅವರ ಪತ್ನಿ ಶಾಸಕಿ ಆಗಿದ್ದರು. ಅವರಣ್ಣ ಸಚಿವರು ಆಗಿದ್ದರು, ಅವರ ತಂದೆ ಪಿಎಂ ಆಗಿದ್ದವರು. ಇದಕ್ಕೆ ಏನಂತ ಕರೆಯಬೇಕು. ನಾನು ಇದಕ್ಕೆಲ್ಲಾ ಅಸೆಂಬ್ಲಿಯಲ್ಲಿ ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.

ರಾಜಕೀಯ ಇರಬಹುದು: ನಾಗಮಂಗಲದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕೆಎಸ್​​ಆರ್​​ಟಿಸಿ ಡ್ರೈವರ್ ಡೆತ್ ನೋಟ್​​ನಲ್ಲಿ ಸಚಿವರೊಬ್ಬರ ಹೆಸರು ಪ್ರಸ್ತಾಪದ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನನಗೆ ಗೊತ್ತಿಲ್ಲ, ವಿಚಾರ‌ ಮಾಡುತ್ತೇನೆ. ಅವರ ಹೆಂಡತಿ ಪಂಚಾಯತ್ ಸದಸ್ಯೆಯಾಗಿದ್ದು, ಅಧ್ಯಕ್ಷರಾಗಲು ಪ್ರಯತ್ನ ಮಾಡ್ತಾ ಇದ್ದಾರೆ. ಇದು ರಾಜಕೀಯ ಇರಬಹುದು ಎಂಬುದು ನನಗೆ ಅನಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇಲಾಖೆಯವರು ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಆಯಿತು ಎಂದು ವಿಷ ಕುಡಿದಿದ್ದಾರೆ ಎಂಬುದು ಸುದ್ದಿ. ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ. ಆದರೂ ವರದಿ ತರಿಸಿಕೊಳ್ಳುತ್ತೇನೆ. ವರ್ಗಾವಣೆ ಮಾಡಿದ್ದಕ್ಕೆ ಸಚಿವರು ಯಾಕೆ ಕಾರಣರಾಗ್ತಾರೆ. ಅದು ಇಲಾಖೆಯಲ್ಲಿ ಮಾಡಲಾಗಿರುತ್ತೆ. ವರ್ಗಾವಣೆ ಆದ್ರೂ ಅನ್ನೋ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಇದಕ್ಕೆ ಸಚಿವರು ಕಾರಣ ಅಂತ ಕುಮಾರಸ್ವಾಮಿ ಆರೋಪ ಮಾಡ್ತಿದ್ದಾರೆ. ಆರೋಪದಲ್ಲಿ ಹುರುಳಿಲ್ಲ. ನಾನು ವರದಿ ತೆಗೆದುಕೊಳ್ಳುತ್ತೇನೆ ಎಂದರು.

ಕೊಟ್ಟ ಭರವಸೆ ಈಡೇರಿಸುತ್ತೇವೆ: ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಈ ಅಧಿವೇಶನದಲ್ಲಿ ಪರಿಷತ್​​ಗೆ ಮೊದಲ ಬಾರಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ, ಜೆಡಿಎಸ್ ಮರಿತಿಬ್ಬೇಗೌಡ, ಸಭಾಪತಿ ಬಸವರಾಜ ಹೊರಟ್ಟಿ ಶುಭ ಕೋರಿ ಸ್ವಾಗತಿಸಿದರು. ಸದಸ್ಯರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿಎಂ, ಚುನಾವಣೆ ವೇಳೆ ಜನರಿಗೆ ನಾವು ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತೇವೆ, ನಾಡಿನ ಜನತೆ ಹಾಗೂ ಪ್ರತಿಪಕ್ಷಗಳ ಅಪೇಕ್ಷೆಗೆ ತಕ್ಕಂತೆ ಸರ್ಕಾರ ನಡೆದುಕೊಳ್ಳಲಿದೆ. ಹಾಗಾಗಿ ಆರಂಭದಲ್ಲೇ ನಮ್ಮ ಮೇಲೆ ಅನುಮಾನ ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಪ್ರಜಾಪ್ರಭುತ್ವದ ಆಶಯದಂತೆ ನಿಮ್ಮೆಲ್ಲರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಅಧಿವೇಶನ ಸೋಮವಾರ ಆರಂಭ ಆದರೂ ನಾನು ಪರಿಷತ್ತಿಗೆ ಬರಲು ಸಾಧ್ಯವಾಗಿರಲಿಲ್ಲ, ಇಂದು ನನ್ನ ಇಲಾಖೆಯ ಪ್ರಶ್ನೆ ಇದೆ. ಅದಕ್ಕೆ ಉತ್ತರ ನೀಡಲು ನಾನು ಬಂದಿದ್ದೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ 2 ನೇ ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ. ನೀವೆಲ್ಲ ನನಗೆ ಅಭಿನಂಧಿಸಿ, ಸ್ವಾಗತ ಕೋರಿದ್ದಕ್ಕೆ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆಡಳಿತ ಮತ್ತು ಪ್ರತಿಪಕ್ಷ ರಥದ ಎರಡು ಗಾಲಿ ಇದ್ದಂತೆ, ಇಬ್ಬರು ಚುನಾವಣೆಗೆ ಹೋಗುತ್ತೇವೆ, ನಾವ್ಯಾರು ವೈರಿಗಳಲ್ಲ. ನಮ್ಮ ನಮ್ಮ ಸಿದ್ಧಾಂತಗಳು ಬೇರೆ ಬೇರೆ, ನೀತಿ ನಿಯಮ ಬೇರೆ ಬೇರೆ ಇರಲಿವೆ. ಹಾಗೆಂದು ವೈಯಕ್ತಿಕ ಟೀಕೆ ಮಾಡಬಾರದು, ಪ್ರಜಾಪ್ರಭುತ್ವದಲ್ಲಿ ಜನರೇನು ಮಾಡುತ್ತಾರೋ ಅದೇ ಅಂತಿಮ. ಅವರು ಕೊಟ್ಟ ತೀರ್ಮಾನಕ್ಕೆ ತಲೆ ಬಾಗಬೇಕು, ಜನ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಪ್ರತಿಪಕ್ಷಗಳ ನಡೆಯನ್ನು ಟೀಕಿಸಿದರು.

224 ಸ್ಥಾನಗಳಲ್ಲಿ 113 ಸ್ಥಾನ ಬಂದವರಿಗೆ ಆಡಳಿತ ಮಾಡಲು ಅವಕಾಶ ಸಿಗಲಿದೆ, 112 ಬಂದರೂ ಅಧಿಕಾರಕ್ಕೆ ಬರಲು ಆಗಲ್ಲ ಇದು ಪ್ರಜಾಪ್ರಭುತ್ವ, ಆದ್ದರಿಂದ ಈ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರಬಲವಾದ ವಿರೋಧ ಪಕ್ಷ ಇರಬೇಕು. ಆಗ ಮಾತ್ರ ಆಡಳಿತ ಪಕ್ಷ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯ. ರಾಜಕೀಯಕ್ಕೋಸ್ಕರ ರಾಜಕಾರಣ, ವಿರೋಧ ಮಾಡಬಾರದು, ತಪ್ಪು, ದೋಷ ಇದ್ದರೆ ಹೇಳಬೇಕು. ಎಡವದಂತೆ ನಾವು ಎಚ್ಚರವಿರಬೇಕು. ಅದಕ್ಕೆ ನೀವು ನಮಗೆ ಎಚ್ಚರಿಕೆ ಕೊಡುತ್ತಿರಬೇಕು ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡಿದರು.

ನಿಮ್ಮ ನಿರೀಕ್ಷೆಗೆ ತಕ್ಕ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ, ಇದರಲ್ಲಿ ತಪ್ಪುಗಳು ಆಗಬಹುದು. ಆದರೆ ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಮಾಡಲ್ಲ, ಅಂತಹ ವೇಳೆ ನೀವು ಎಚ್ಚರಿಕೆ ಕೊಟ್ಟರೆ ತಪ್ಪು ತಿದ್ದಿಕೊಂಡು ಹೋಗುತ್ತೇವೆ, ಇದರಲ್ಲಿ ಮೊಂಡುತನ ಮಾಡಿಕೊಂಡು ಹೋಗುವುದು ಸಾಧ್ಯವಿಲ್ಲ. ನಿಮ್ಮ ನಿರೀಕ್ಷೆ, ಜನರ ಅಪೇಕ್ಷೆಗೆ ತಕ್ಕಂತೆ ನಡೆದುಕೊಳ್ಳುತ್ತೇವೆ. ಜನರ ಮತ್ತು ನಿಮ್ಮ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಪೆನ್​ಡ್ರೈವ್ ರಹಸ್ಯ ಹೊರಬಂದರೆ ಒಬ್ಬ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ: ಹೆಚ್.ಡಿ.ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.