ETV Bharat / state

ಈ ಬಾರಿ ಬಜೆಟ್​​​ನಲ್ಲಿ ವಿವಿಧ ಇಲಾಖೆಗಳ ಅನುದಾನಕ್ಕೆ ಕತ್ತರಿ ಭಾಗ್ಯ!: ಏಕೆ ಗೊತ್ತಾ?

author img

By

Published : Feb 5, 2020, 11:32 PM IST

ಸಿಎಂ ಯಡಿಯೂರಪ್ಪ ಬಜೆಟ್ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸುತ್ತಿದ್ದು, ಈ ಬಾರಿ ಬಜೆಟ್​​ನಲ್ಲಿ ಕೆಲ ಇಲಾಖೆಗಳ ಅನುದಾನ ಕಡಿತಗೊಳಿಸಲು ಚಿಂತನೆ ನಡೆಸಿದ್ದಾರೆ.

cm bsy decided to cut down some department fund in budget
ಸಿಎಂ ಯಡಿಯೂರಪ್ಪ ಬಜೆಟ್ ಪೂರ್ವ ಸಿದ್ಧತಾ ಸಭೆ

ಬೆಂಗಳೂರು: ಈಗಾಗಲೇ ಬಜೆಟ್ ಪೂರ್ವ ಸಿದ್ಧತಾ ಸಭೆಗಳನ್ನು ಸಿಎಂ ನಡೆಸುತ್ತಿದ್ದಾರೆ. ಆದರೆ ಸಂಪನ್ಮೂಲ ಕೊರತೆ ಹಿನ್ನೆಲೆ ಕೆಲ ಇಲಾಖೆಗಳ ಅನುದಾನಕ್ಕೆ ಈ ಬಾರಿ ಬಜೆಟ್​ನಲ್ಲಿ ಕತ್ತರಿ ಹಾಕಲು ಸಿಎಂ ಚಿಂತನೆ ನಡೆಸಿದ್ದಾರೆ.

ಮಾರ್ಚ್ 5ಕ್ಕೆ ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಪೂರ್ವ ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ಎಲ್ಲಾ ಇಲಾಖೆಗಳ ಜೊತೆ ಸಿಎಂ ಬಜೆಟ್ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಬಾರಿ ಸಂಪನ್ಮೂಲ ಕ್ರೋಢೀಕರಣವೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದೆಡೆ ಆರ್ಥಿಕ ಹಿಂಜರಿಕೆ, ಇನ್ನೊಂದೆಡೆ ಕೇಂದ್ರ ಸರ್ಕಾರದಿಂದ ಬರುವ ರಾಜ್ಯದ ಪಾಲಿನ ತೆರಿಗೆ ಕಡಿತ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಏಟು ನೀಡಿದೆ. ಇತ್ತ ತೆರಿಗೆ ಸಂಗ್ರಹದಲ್ಲಿನ ಹಿನ್ನಡೆಯೂ ರಾಜ್ಯ ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಆದಾಯ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೆಲ ಇಲಾಖೆಗಳ ಅನುದಾನ ಕಡಿತಗೊಳಿಸಲು ಉದ್ದೇಶಿಸಲಾಗಿದೆ.

ಸಿಎಂ ಯಡಿಯೂರಪ್ಪ ಬಜೆಟ್ ಪೂರ್ವ ಸಿದ್ಧತಾ ಸಭೆ

ಅನುದಾನ ಕಡಿತಕ್ಕೆ ಆರ್ಥಿಕ ಇಲಾಖೆ ಸೂಚನೆ:

ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿನ್ನಡೆಯಾಗಿರುವ ಕಾರಣ ಬಜೆಟ್ ಮಂಡನೆ ಸಿಎಂ ಯಡಿಯೂರಪ್ಪಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಹೀಗಾಗಿ ಈ ಬಾರಿ ಹಲವು ಇಲಾಖೆಗಳ ಅನುದಾನ ಕಡಿತಗೊಳಿಸಲು ಸಿಎಂ ಉದ್ದೇಶಿಸಿದ್ದಾರೆ. ಪ್ರಮುಖ ಇಲಾಖೆಗಳನ್ನು ಹೊರತು ಪಡಿಸಿ ಇತರ ಇಲಾಖೆಗಳ ಅನುದಾನ ಕಡಿತಗೊಳಿಸುವಂತೆ ಆರ್ಥಿಕ ಇಲಾಖೆ ಸೂಚನೆ ನೀಡಿದೆ. ಆ ಮೂಲಕ ಆದಾಯ ಕೊರತೆಯನ್ನು ಸರಿದೂಗಿಸಿ, ಅದನ್ನು ಪ್ರಮುಖ ಖಾತೆಗಳಿಗೆ ಹೊಂದಾಣಿಕೆ ಮಾಡಿ ಕೊಡಲು ಹಣಕಾಸು ಇಲಾಖೆ ಸಲಹೆ ನೀಡಿದೆ. ಕೇಂದ್ರದ ಅನುದಾನವು ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ರಾಜ್ಯದ ಆದಾಯವೂ ಕಡಿಮೆಯಾಗಿದೆ. ಹಾಗಾಗಿ ವಿವಿಧ ಇಲಾಖೆಗಳ ಅನುದಾನ ಕಡಿತಗೊಳಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಕೆಲ ಇಲಾಖೆಗಳಿಗೆ ಸುಮಾರು 20-30ಶೇ. ದಷ್ಟು ಅನುದಾನ ಕಡಿತಗೊಳಿಸುವಂತೆ ಹಣಕಾಸು ಇಲಾಖೆ ಸೂಚನೆ ನೀಡಿದೆ. ಅದರಂತೆ ಕೆಲ ಇಲಾಖೆಗಳಿಗೆ ಅನುದಾನ ಕಡಿತದ ಬಗ್ಗೆ ಆರ್ಥಿಕ ಇಲಾಖೆ ಈಗಾಗಲೇ ಸೂಚನೆ ನೀಡಿದೆ ಎಂದು ಕೆಲ ಇಲಾಖೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಅನುದಾನಕ್ಕೆ ಕತ್ತರಿ ಬೀಳುವ ಇಲಾಖೆಗಳಾವುವು?:

ಕನ್ನಡ ಮತ್ತ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಸಕ್ಕರೆ ಇಲಾಖೆ, ಪಶುಸಂಗೋಪನೆ ಇಲಾಖೆಗಳ ಅನುದಾನಕ್ಕೆ ಈ ಬಾರಿಯ ಬಜೆಟ್​​​ನಲ್ಲಿ ಕತ್ತರಿ ಬೀಳುವ ಸಾಧ್ಯತೆ ಇದೆ. ಅದರ‌ ಜೊತೆಗೆ ಮುಜರಾಯಿ, ಪೌರಾಡಳಿತ ಇಲಾಖೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅನುದಾನಕ್ಕೂ ಈ ಬಾರಿಯ ಬಜೆಟ್​ನಲ್ಲಿ ಕತ್ತರಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಇಲಾಖೆಗಳ ಅನುದಾನ ಕಡಿತಗೊಳಿಸಿ, ಪ್ರಮುಖ ಇಲಾಖೆಗಳಿಗೆ ಹೊಂದಾಣಿಕೆ ಮಾಡಲು ಉದ್ದೇಶಿಸಲಾಗಿದೆ. ಅದರಂತೆ ಅನುದಾನದ ತೀವ್ರ ಕೊರತೆ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆಗೆ ಹೆಚ್ಚುವರಿ ಅನುದಾನ ನೀಡಲು ಆರ್ಥಿಕ ಇಲಾಖೆ ಚಿಂತನೆ ನಡೆಸಿದೆ. ಉಳಿದಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಸಾರಿಗೆ ಇಲಾಖೆ, ಸಹಕಾರ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಮತ್ತು ವಸತಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಲು ಉದ್ದೇಶಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.