ETV Bharat / state

ಚಿತ್ರಕಲಾ ಪರಿಷತ್ ಪ್ರಖ್ಯಾತಿ ರಾಷ್ಟ್ರಮಟ್ಟದಲ್ಲೂ ಬೆಳಗಲಿ : ಸಿಎಂ ಬಸವರಾಜ ಬೊಮ್ಮಾಯಿ

author img

By

Published : Jan 8, 2023, 4:07 PM IST

Updated : Jan 8, 2023, 5:34 PM IST

ಬೆಂಗಳೂರಿನಲ್ಲಿ ಚಿತ್ರಸಂತೆ - 20ನೇ ಚಿತ್ರಸಂತೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ - ಕಲಾವಿದರ ಪ್ರತಿಭೆ ಅನಾವರಣ

CM bommai inaugurates 20th chitrasanth
20ನೇ ಚಿತ್ರಸಂತೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಬೆಂಗಳೂರಿನಲ್ಲಿ ಚಿತ್ರಸಂತೆ ನಡೆಯಿತು

ಬೆಂಗಳೂರು: ಚಿತ್ರಕಲಾ ಪರಿಷತ್ ಅತ್ಯಂತ ವಿಶಿಷ್ಟವಾಗಿರುವ ಸಂಸ್ಥೆ ಆಗಿದ್ದು, ಅದು ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕರ್ನಾಟಕ ಚಿತ್ರಕಲಾ ಪರಿಷತ್ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ 20ನೇ ಚಿತ್ರಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎನ್ಎಸ್​​ಡಿ ದೆಹಲಿಯಲ್ಲಿ ಅತ್ಯಂತ ಉನ್ನತ ಸ್ಥಾನ ಪಡೆದಿದೆ. ಬೆಂಗಳೂರಿಗೆ ಸೀಮಿತವಾಗದೇ ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆಯನ್ನು ಬೃಹತ್ತಾಗಿ ಬೆಳೆಸಲು ಅಗತ್ಯ ನೆರವು, ಸಹಕಾರ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಬ್ರಾಂಡ್ ಬೆಂಗಳೂರನ್ನು ರಾಷ್ಟಮಟ್ಟಕ್ಕೆ ಕೊಂಡೊಯ್ಯಬಲ್ಲ ಸಂಸ್ಥೆಗಳಲ್ಲಿ ಚಿತ್ರಕಲಾ ಪರಿಷತ್ ಕೂಡ ಒಂದು. ಐಐಟಿ, ಐಐಎಂ, ಎನ್ಎಸ್ಎಲ್​ಯು ಮಟ್ಟಕ್ಕೆ ಬೆಳೆಯಬೇಕು. ಚಿತ್ರಸಂತೆಯಿಂದ ಭಾರತದ ಸಂಸ್ಕೃತಿ ಬಿಂಬಿಸುವ ಕೆಲಸವಾಗುತ್ತಿದೆ. ಈ ರೀತಿಯ ಕೆಲಸ ಬೇರೆಲ್ಲೂ ಆಗುತ್ತಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ಚಿತ್ರಕಲಾ ಪರಿಷತ್ತಿಗೂ ಈಗ ರೆಕ್ಕೆಗಳು ಬಂದಿವೆ. ಸರಸ್ವತಿಯ ವಾಹನ ಪರಮಹಂಸದಂತೆ ಚಿತ್ರಸಂತೆ ಚಿತ್ರಕಲೆಯ ಪರಮಹಂಸ. ಇದು ಬೆಳೆದಿದ್ದು, ಗಟ್ಟಿಮುಟ್ಟಾದ ರೆಕ್ಕೆಗಳು ಮೂಡಿವೆ. ಇನ್ನೂ ಎತ್ತರಕ್ಕೆ ಹಾರಬೇಕು ಎನ್ನುವುದು ನನ್ನ ಉದ್ದೇಶ. ಹಿಮಾಲಯದ ಎತ್ತರಕ್ಕೆ ಹಾರಬೇಕು ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಪ್ರಾದೇಶಿಕ ಕೇಂದ್ರಗಳಲ್ಲಿ ಚಿತ್ರಸಂತೆ ಆಗ್ಬೇಕು: ಬೆಂಗಳೂರಿಗೆ ಸೀಮಿತವಾಗಿರದೆ, ಕಲ್ಯಾಣ ಕರ್ನಾಟಕ, ದಕ್ಷಿಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿಯೂ ಒಳ್ಳೆಯ ಕಲಾವಿದರಿದ್ದಾರೆ. ಅವರಿಗೆ ಯಾವುದೇ ವೇದಿಕೆ ಇಲ್ಲ. ಈ ವರ್ಷ ನಾಲ್ಕೈದು ಚಿತ್ರಸಂತೆಗಳನ್ನು ಪ್ರಾದೇಶಿಕ ಕೇಂದ್ರ ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡಗಳಲ್ಲಿ ಏರ್ಪಡಿಸಬೇಕು. ಅದಕ್ಕೆ ಸರ್ಕಾರ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದರು.

ಬೆಂಗಳೂರು ಕಲೆ ಸಂಸ್ಕೃತಿ ಆಧ್ಯಾತ್ಮಿಕ ಬೀಡು:ಬೆಂಗಳೂರು ನಾನಾ ರೀತಿಯಲ್ಲಿ ವಿಶಿಷ್ಟ ನಗರ. ಪ್ರಾಚೀನ, ತಂತ್ರಜ್ಞಾನ, ಐಟಿ ಬಿಟಿ, ಹೊಸ ವಿಜ್ಞಾನ, ಸ್ಟಾರ್ಟ್ ಅಪ್ ಗಳ ತವರು ಬೆಂಗಳೂರು. ಅದರೊಂದಿಗೆ ಉತ್ತಮವಾದ ಕಲೆ, ಸಂಸ್ಕೃತಿ, ಆಧ್ಯಾತ್ಮಿಕ ಬೀಡಾಗಿದೆ. ಇಸ್ಕಾನ್, ಆರ್ಟ್ ಆಫ್ ಲಿವಿಂಗ್, ಈಶಾ ಆಧ್ಯಾತ್ಮಿಕ ಕೇಂದ್ರಗಳಲ್ಲಿ ನೆಲೆಯಾಗಿವೆ. ಇವೆಲ್ಲವನ್ನೂ ಬಿಂಬಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಚಿತ್ರಸಂತೆ ಎರಡು ದಿನ ಆಯೋಜಿಸಿ:ಎನ್​​ಜಿಇಎಫ್ ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಂಗಳೂರಿನಲ್ಲಿ ಬೆಳೆದ ಬಗೆಯನ್ನು ಬಿಂಬಿಸುವ ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಅಂತೆಯೇ ವಿಭಿನ್ನ ಕಲೆಗಳು ಹೇಗೆ ಅಭಿವೃದ್ಧಿಯಾಗಿವೆ ಎಂದು ಬಿಂಬಿಸಲು ಸ್ಥಳ ಸೇರಿಸಂತೆ ಅನುಕೂಲ ನೀಡಲಾಗುವುದು. ಮುಂದಿನ ವರ್ಷ 2 ದಿನ ಚಿತ್ರ ಸಂತೆ ಹಮ್ಮಿಕೊಳ್ಳಬೇಕು ಎಂದ ಅವರು, ಎಲ್ಲರೂ ಚಿತ್ರಕಲೆಯನ್ನು ಖರೀದಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಚಿತ್ರಕಲೆಗೆ ವಿಶ್ವದಲ್ಲಿ ಬಹು ಬೇಡಿಕೆ : ಚಿತ್ರಕಲೆ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ. ಮೆದುಳಿನ ಯೋಚನೆ ಹಾಗೂ ಹೃದಯಾಂತರಾಳದ ಭಾವನೆಗಳಿವೆ. ಯೋಚನೆಗಳಿಗೆ ತಂತ್ರಜ್ಞಾನದಂಥ ಹಲವಾರು ಮಾಧ್ಯಮಗಳಿವೆ. ಆದರೆ, ಕಲೆಯನ್ನು ಉತ್ತಮಗೊಳಿಸಲು ಬಳಕೆಯಾಗಬಹುದು. ಮನದಾಳದ ಭಾವನೆಗಳು ಚಿತ್ರಕಲೆಯ ಮೂಲಕ ತಿಳಿಯುತ್ತದೆ. ಹಾಗಾಗಿ ಚಿತ್ರಕಲೆಗೆ ವಿಶ್ವದಲ್ಲಿ ಬಹಳಷ್ಟು ಬೆಲೆಯಿದೆ ಎಂದು ಶ್ಲಾಘಿಸಿದರು.

ಸಾರ್ವಜನಿಕರು ಚಿತ್ರಕಲೆ ಪ್ರೋತ್ಸಾಹಿಸಲಿ:ಚಿತ್ರಕಲೆ ಎಂದರೆ ವಜ್ರವಿದ್ದಂತೆ. ತಿಳಿಯದಿದ್ದವರಿಗೆ ಅದೊಂದು ಕಲ್ಲು. ತಿಳಿದವರು ಅದರ ಮೌಲ್ಯ ಗೊತ್ತಿರುತ್ತದೆ. ಚಿತ್ರಕಲೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಹೆಚ್ಚು ಸಾರ್ವಜನಿಕರು ಮಾಡಿದರೆ ಹೆಚ್ಚು ಉಪಯುಕ್ತವಾಗುತ್ತದೆ. ಅಂಥ ಸಮಾಜದ ಚಿಂತನೆಯನ್ನು ನಿರ್ಮಿಸುವ ಕೆಲಸವನ್ನು ಕೇಂದ್ರ ಚಿತ್ರಕಲಾ ಪರಿಷತ್ತು ಮಾಡಬೇಕು. ಚಿತ್ರಕಲಾ ಪರಿಷತ್ತು ಕಲಾವಿದರಿಗೆ ವೇದಿಕೆ ನೀಡಿ ಅವರ ಕಲೆಯನ್ನು ಅಭಿವ್ಯಕ್ತಗೊಳಿಸಲು ಶಿಸ್ತುಬದ್ಧವಾದ ವ್ಯವಸ್ಥೆ ಹಾಗೂ ಸಾಮಾನ್ಯ ಜನರಲ್ಲಿ ಈ ಬಗ್ಗೆ ಆಸಕ್ತಿ ಹಾಗೂ ಭಾವನೆಗಳನ್ನು ತಿಳಿದುಕೊಳ್ಳುವ ವಿಧಾನ ಎರಡನ್ನೂ ಪ್ರಮುಖವಾಗಿ ಮಾಡಬೇಕು. ಚಿತ್ರಕಲಾ ಪರಿಷತ್ತಿನಂಥ ಸಂಸ್ಥೆ ಇಡೀ ದೇಶದಲ್ಲಿ ಮತ್ತೊಂದಿಲ್ಲ ಎನ್ನುವುದು ನಮಗೆ ಹೆಮ್ಮೆ ಎಂದು ಪ್ರಶಂಸಿದರು.

ಉಲ್ಲಾಸದ ವಾತಾವರಣ: ಕಷ್ಟದ ಕೆಲಸವಾದರೂ ಚಿತ್ರಸಂತೆ ಮೂಲಕ ಜನಸಾಮಾನ್ಯರನ್ನು ಚಿತ್ರಕಲೆ ವೀಕ್ಷಣೆಗೆ ಎಳೆದುತರಲಾಗಿದೆ. ಇಲ್ಲಿರುವ ಯಾವುದೇ ಚಿತ್ರಕಲೆಯನ್ನು ಕೊಂಡು ಮನೆಗೆ ಹೋದಾಗ ಅದರ ಬಗ್ಗೆ ಚರ್ಚೆ, ವಿಮರ್ಶೆಯಾಗಿ ಕಲೆ ಬೆಳೆಯಲು ಅವಕಾಶವಾಗುತ್ತದೆ. ಚಿತ್ರಸಂತೆ ಅವಶ್ಯಕ, ಚಿತ್ರಸಂತೆ ಮನಸ್ಸಿಗೆ ಸಂತೋಷ ಉಲ್ಲಾಸ ನೀಡುವ ಒಂದು ವಾತಾವರಣ ಕಲ್ಪಿಸುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು. ಪರಿಷತ್ತಿನ ಅಧ್ಯಕ್ಷ ಬಿ ಎಲ್ ಶಂಕರ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್, ಸಂಸದ ಪಿ.ಸಿ. ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಚಿತ್ರ ಕಲಾವಿದ ಲಕ್ಷ್ಮಣ ಗೌಡ ಉಪಸ್ಥಿತರಿದ್ದರು.

ಇದನ್ನೂಓದಿ:ಖುಷಿ ಸುದ್ದಿ: ಈಗ ವಿಶ್ವದ 3ನೇ ಅತಿದೊಡ್ಡ ವಾಹನ ತಯಾರಕ ದೇಶ ಭಾರತ

Last Updated :Jan 8, 2023, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.